ಅನಿಲ್ ಅಂಬಾನಿ ಇಂದಿನ ಸ್ಥಿತಿಗೆ ಕುಜ-ಕೇತು-ಶನಿ ಹೇಗೆ ಕಾರಣ?
Recommended Video
ಈ ದಿನ ರಿಲಯನ್ಸ್ ಕಮ್ಯೂನಿಕೇಷನ್ ನ ಅನಿಲ್ ಅಂಬಾನಿ ಅವರ ಜಾತಕ ವಿಶ್ಲೇಷಣೆ ಮಾಡಲಾಗುತ್ತಿದೆ. ಆ ಕಂಪೆನಿಯ ನಲವತ್ತೈದು ಸಾವಿರ ಕೋಟಿ ರುಪಾಯಿ ಸಾಲವನ್ನು ಆರು ಸಾವಿರ ಕೋಟಿಗೆ ಇಳಿಸಿಕೊಳ್ಳುತ್ತಾರೆ. ಕಂಪೆನಿಯ ಸಾಲವನ್ನು ತೀರಿಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಅವರ ಕಂಪೆನಿಯ ಷೇರುಗಳಿಗೆ ಜೀವ ತುಂಬಿದೆ.
ತಮ್ಮ ಆಸ್ತಿಯನ್ನು ಮಾರಿ, ಮುಂದಿನ ಮಾರ್ಚ್ ನೊಳಗೆ ಇಪ್ಪತ್ತೈದು ಸಾವಿರ ಕೋಟಿ ತೀರಿಸುವುದಾಗಿ ಹೇಳಿದ್ದಾರೆ. ಇನ್ನು ಚೀನಾ ಕಂಪೆನಿಯೊಂದು ಕೊಟ್ಟಿರುವ ಹತ್ತು- ಹನ್ನೊಂದು ಸಾವಿರ ಕೋಟಿ ರುಪಾಯಿ ಸಾಲವನ್ನು ಕೋರ್ಟ್ ನ ಹೊರಗೆ ಇತ್ಯರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇವೆಲ್ಲ ಸಕಾರಾತ್ಮಕ ಬೆಳವಣಿಗೆ ಎಂಬಂತೆ ಷೇರುದಾರರು ನೋಡುತ್ತಿದ್ದಾರೆ.
ಆದರೆ, ಜನರಲ್ಲಂತೂ ಸಣ್ಣ ಅನುಮಾನವಿತ್ತು. ಅನಿಲ್ ಅಂಬಾನಿ ಕೂಡ ವಿಜಯ್ ಮಲ್ಯ ಅವರ ರೀತಿ ಏನಾದರೂ ಮಾಡಿಬಿಡ್ತಾರಾ ಎಂಬ ಗುಮಾನಿಯದು. ಆದರೆ ಯಾವಾಗ ಇಷ್ಟು ದೊಡ್ಡ ಪ್ರಮಾಣದ ಸಾಲ ತೀರಿಸಲು ಮುಂದಾದರೋ ಆಗ ಅವರ ಮೇಲಿನ ನಂಬಿಕೆಯನ್ನು ಮತ್ತೆ ತೋರಿಸುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಅನಿಲ್ ಅಂಬಾನಿ ಜಾತಕ ವಿಶ್ಲೇಷಣೆ ಮಾಡುತ್ತಿದ್ದೇನೆ.
ಕೃತ್ತಿಕಾ ನಕ್ಷತ್ರ, ವೃಷಭ ರಾಶಿ
ಅನಿಲ್ ಅಂಬಾನಿ ಜನಿಸಿದ್ದು 4 ಜೂನ್, 1959ರ ಗುರುವಾರ ರಾತ್ರಿ. ಅವರ ನಕ್ಷತ್ರ ಕೃತ್ತಿಕಾ ಎರಡನೇ ಪಾದ, ವೃಷಭ ರಾಶಿ, ಮಕರ ಲಗ್ನ. ಅವರ ಲಗ್ನಕ್ಕೆ ಕರ್ಮಾಧಿಪತಿ ಆಗುವ ಶುಕ್ರ ಸಪ್ತಮದಲ್ಲಿದ್ದಾನೆ. ಅವರು ಮಾಡುತ್ತಿರುವ ವ್ಯವಹಾರದ ಕರ್ಮಸ್ಥಾನದಲ್ಲೂ ಶುಕ್ರ ಇದ್ದಾನೆ. ಚಂದ್ರನಿಂದ ಲೆಕ್ಕ ಹಾಕುವಾಗ ಕರ್ಮಾಧಿಪತಿ ಶನಿ ಅಷ್ಟಮದಲ್ಲಿದ್ದಾನೆ. ಅದು ಒಳ್ಳೆ ಸ್ಥಾನವಲ್ಲ.
ಗಜ ಕೇಸರಿ ಯೋಗವಿದೆ
ಇನ್ನು ಇವರ ಜಾತಕದಲ್ಲಿ ಗಜ ಕೇಸರಿ ಯೋಗವಿದೆ. ಭಾಗ್ಯ ಸ್ಥಾನದಲ್ಲಿ ರಾಹು ಇದ್ದಾನೆ. ಸದ್ಯಕ್ಕೆ ಶನಿ ದಶೆ ನಡೆಯುತ್ತಿದೆ. ವೃಷಭ ರಾಶಿಯಾದ್ದರಿಂದ ಅಷ್ಟಮ ಶನಿ ಪ್ರಭಾವ ಅನುಭವಿಸಬೇಕು. ಈ ಹಿಂದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಗ್ಗೆ ಹೇಳುವಾಗ ಅಷ್ಟಮ ಶನಿಯ ಪ್ರಭಾವ ಅನುಭವಿಸುತ್ತಿರುವ ಬಗ್ಗೆ ಹೇಳಿದ್ದೆ. ಈಗ ಅನಿಲ್ ಅಂಬಾನಿ ಜಾತಕದಲ್ಲೂ ಅದೇ ಅಷ್ಟಮ ಶನಿಯ ಪ್ರಭಾವ ಇದೆ.
ಎಲ್ಲವನ್ನೂ ಕಳೆದುಕೊಳ್ಳುವ ಯೋಗ
ಇವರಿಗೆ ಎಲ್ಲವನ್ನೂ ಕಳೆದುಕೊಳ್ಳುವ ಯೋಗ ಇದೆ. ಕಳೆದ ಸೆಪ್ಟೆಂಬರ್ ವರೆಗೆ ಶನಿ ದಶಾ ಶನಿ ಭುಕ್ತಿ ಇದ್ದದ್ದು, ಆ ನಂತರ ಶನಿ ದಶಾ ಬುಧ ಭುಕ್ತಿ ನಡೆಯುತ್ತಿದೆ. ಬುಧನು ಇವರಿಗೆ ಭಾಗ್ಯಾಧಿಪತಿ ಪಂಚಮಾಧಿಪತಿಯೂ ಹೌದು, ಅವನು ಉತ್ತಮವಾದದ್ದನ್ನೇ ಕೊಡಬೇಕು. ಆದರೆ ಆರನೇ ಮನೆ ಅಧಿಪತಿಯೂ ಅವನೇ.
ಅನಿಲ್- ಮುಖೇಶ್ ಮಧ್ಯೆ ಏಕೆ ಜಗಳ?
ಯಾಕೆ ಅನಿಲ್ ಹಾಗೂ ಮುಖೇಶ್ ಮಧ್ಯೆ ಜಗಳ ಅಂತ ಅನುಮಾನ ಇರುತ್ತದೆ. ಲಗ್ನಕ್ಕೆ ಮೂರನೇ ಮನೆಯ ಅಧಿಪತಿ ಗುರು. ಅಲ್ಲಿ ಕೇತು ಇದ್ದಾನೆ. ಭ್ರಾತೃ ಸ್ಥಾನದಲ್ಲಿ ಕೇತು ಇರುವುದರಿಂದ ಹೇಳಿಕೆ ಮಾತು ಕೇಳಿ ಅಣ್ಣ- ತಮ್ಮಂದಿರ ಮಧ್ಯೆ ಜಗಳವಾಗಿದೆ. ಲಗ್ನ ತೃತೀಯಾಧಿಪತಿ ಗುರು ಆದ್ದರಿಂದ ಅಣ್ಣನಿಂದ ಸಹಾಯ ಲಭಿಸುತ್ತದೆ.
ಅನಿಲ್ ಅಂಬಾನಿಗೆ ಸಿಟ್ಟು ಹೆಚ್ಚು
ಅನಿಲ್ ಅಂಬಾನಿ ನಕ್ಷತ್ರ ಕೃತ್ತಿಕಾ. ಭರಣಿ ಹಾಗೂ ಕೃತ್ತಿಕಾ ಅಗ್ನಿ ನಕ್ಷತ್ರ. ಇವರಿಗೆ ಸಿಟ್ಟು ಹೆಚ್ಚಿರುತ್ತದೆ. ಟೆಲಿಕಾಂ- ಕಮ್ಯುನಿಕೇಷನ್ ವ್ಯವಹಾರದಲ್ಲಿ ನಷ್ಟ ಆಗಿರುವುದುಕ್ಕೆ ಕಾರಣ ನೀಚ ಕುಜ. ಇವರಿಗೆ ಸಿನಿಮಾ ನಿರ್ಮಾಣ ಕೂಡ ಆಗಿಬರುವುದಿಲ್ಲ. ಚಂದ್ರನ ಮನೆಯಲ್ಲಿ ಶುಕ್ರ, ಶುಕ್ರನ ಮನೆಯಲ್ಲಿ ಚಂದ್ರ ಇರುವುದರಿಂದ ಪರಿವರ್ತನಾ ಯೋಗವಿದೆ.
ಸಂಪೂರ್ಣ ನೆಲ ಕಚ್ಚುವುದಿಲ್ಲ
ಆದರೆ, ಇವರ ಜಾತಕದಲ್ಲಿ ಗಜ ಕೇಸರಿ ಯೋಗ ಹಾಗೂ ಶುಕ್ರ- ಚಂದ್ರ ಪರಿವರ್ತನಾ ಯೋಗ ಇರುವುದರಿಂದ ಸಂಪೂರ್ಣ ನೆಲ ಕಚ್ಚುವುದಿಲ್ಲ. ಹಾಗಂತ ಸಂಪೂರ್ಣ ಸರಿಹೋಗುತ್ತದಾ ಎಂದರೆ 2020ರ ಜನವರಿವರೆಗೆ ಶನಿ ಅಷ್ಟಮದಲ್ಲೇ ಇರುತ್ತಾನೆ. ಇನ್ನು ಆ ನಂತರ ಶನಿ ದಶಾ ಕೇತು ಭುಕ್ತಿ ಆರಂಭವಾಗುವುದರಿಂದ ಮತ್ತೆ ಅಣ್ಣ-ತಮ್ಮಂದಿರ ಮಧ್ಯೆ ಸಂಬಂಧ ಹಾಳಾಗುತ್ತದೆ. ಅನಿಲ್ ಅಂಬಾನಿಗೆ ಶುಭ ಸಮಯ ಬರಬೇಕೆಂದರೆ 2021 ಕಳೆಯಬೇಕು. ಆ ವರ್ಷದ ಜುಲೈವರೆಗೆ ಯಾವುದೇ ಗ್ರಹಗಳ ಅನುಗ್ರಹವಿಲ್ಲ.
ಕುಜನ ಪ್ರಭಾವದ ವ್ಯವಹಾರದಿಂದ ಹಿಂದೆ ಸರಿಯಬೇಕು
ಅನಿಲ್ ಅಂಬಾನಿ ಅವರು ಕುಜನ ಪ್ರಭಾವ ಇರುವ ವ್ಯವಹಾರವನ್ನು ಮಾಡುವುದನ್ನು ನಿಲ್ಲಿಸುವುದು ಉತ್ತಮ. ವಾಸ್ತವವಾಗಿ ಅದು ಸಾಧ್ಯವಿಲ್ಲ ಅಂತಾದರೆ, ತಮ್ಮ ಹೊಣೆಗಾರಿಕೆಯನ್ನು ಬೇರೆಯವರಿಗೆ ವಹಿಸಿಕೊಟ್ಟು, ಆಚೆ ಬರಬೇಕು. ಅವರ ಲಗ್ನಕ್ಕೆ ಅನುಕೂಲವಾದ ಶುಕ್ರನಿಗೆ ಸಂಬಂಧಪಟ್ಟ ವ್ಯವಹಾರಗಳನ್ನು ಮಾಡಲು ಯತ್ನಿಸಬೇಕು.
ಶನಿಯು ವ್ಯಯಾಧಿಪತಿ
ಅನಿಲ್ ಅಂಬಾನಿ ಅವರದು ಮಕರ ಲಗ್ನ. ಲಗ್ನಾಧಿಪತಿ ಶನಿ ವ್ಯಯ ಸ್ಥಾನದಲ್ಲಿ ಇರುವುದರಿಂದ ವ್ಯವಹಾರದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗುವುದು ಕಷ್ಟ. ಈ ವಿಚಾರದಲ್ಲಿ ಮುಖೇಶ್ ಯಶಸ್ಸಿಗೆ ಹತ್ತಿರದಲ್ಲಿ ಕೂಡ ಅನಿಲ್ ಬರಲು ಸಾಧ್ಯವಿಲ್ಲ. ಲಗ್ನದಿಂದ ಗುರು, ಪಂಚಮ ಪರಮೋಚ್ಚ ಸ್ಥಿತಿಯಲ್ಲಿ ಚಂದ್ರ, ರವಿ ಹಾಗೂ ಬುಧ ಸಹ ಇದ್ದಾನೆ. ಇಂಥ ಗ್ರಹ ಸ್ಥಿತಿ ಇರುವುದರಿಂದ ಪೂರ್ಣ ನೆಲ ಕಚ್ಚುವುದಿಲ್ಲ. ಆದರೆ ಇದ್ದ ಸ್ಥಾನದಲ್ಲೇ ಒದ್ದಾಡುತ್ತಾರೆ.
ಯುದ್ಧ ಕಾಲೇ ಶಸ್ತ್ರಾಭ್ಯಾಸ ಧೋರಣೆ ಬಿಡಬೇಕು
ಚುರುಕು ಗತಿಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು. ನಿಧಾನ ಗತಿಯನ್ನು ಬಿಡಬೇಕು. ಇವರು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬ ಧೋರಣೆ ಬಿಡಬೇಕು. ಮುಂಚಿತವಾಗಿಯೇ ಯೋಜನೆಗಳನ್ನು ಮಾಡಿಕೊಳ್ಳಲ್ಲ. ಆದ್ದರಿಂದ ನಷ್ಟವಾಗುತ್ತಿದೆ. ತೃತೀಯ ಕೇತುವಿನಿಂದ ಪ್ರೇತ ಬಾಧೆ ಇದೆ. ಅದರ ಶಾಂತಿಯಾಗಬೇಕು. ಇನು ಲಗ್ನಾಧಿಪತಿಯೇ ವ್ಯಯಕಾರಕನಾಗಿ, ದಶಾ ಕಾರಕನಾಗಿ, ಅಷ್ಟಮ ಶನಿಯೂ ಇರುವುದರಿಂದ ಇವರು ಶನಿ ಆರಾಧನೆ ಮಾಡಬೇಕು.
ಕಾಯಿಲೆ-ಆರೋಗ್ಯ ಬಾಧೆ ಕಾಣಿಸಿಕೊಳ್ಳುತ್ತದೆ
ಅನಿಲ್ ಅಂಬಾನಿ ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು. ಜತೆಗೆ ಲಗ್ನಕ್ಕೆ ಸಪ್ತಮದಲ್ಲಿ ಕುಜ ನೀಚ ಸ್ಥಿತಿಯಲ್ಲಿ ಇರುವುದರಿಂದ ಕಾಯಿಲೆ, ಆರೋಗ್ಯ ಬಾಧೆಗಳು ಕಾಣಿಸಿಕೊಳ್ಳುತ್ತವೆ. ಆರೋಗ್ಯದ ಬಗ್ಗೆ ಜಾಸ್ತಿ ಗಮನ ಕೊಡಬೇಕು. ಇನ್ನು ಯಾರಿಗಾದರೂ ಮಾತು ಕೊಡುವ ಮುನ್ನ ಹುಷಾರಾಗಿರಬೇಕು. ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಹೇಳಿದಂತೆ ನಡೆದುಕೊಳ್ಳುವುದು ಸಾಧ್ಯವಿಲ್ಲ. ಇವರ ಒಡೆತನ ಷೇರಿನ ಮೇಲೆ ಹಣ ಹಾಕುವವರಿಗೆ ತಾತ್ಕಾಲಿಕ ಜಯವಿದೆ ಹೊರತು ದೀರ್ಘಕಾಲದಲ್ಲಿ ಲಾಭವಿಲ್ಲ, ಎಚ್ಚರ.
ಒಂದು ವರ್ಷ ಗುರು ಗ್ರಹದ ಅನುಗ್ರಹವಿದೆ
2018ರ ಅಕ್ಟೋಬರ್ ನಂತರ ಗುರು ಬಲ ಬರುತ್ತದೆ. ಆ ನಂತರ ಒಂದು ವರ್ಷ ಸಮಯ ಚೆನ್ನಾಗಿರುವುದರಿಂದ ಸಾಲ ತೀರಿಸುವ ಸಾಧ್ಯತೆ ಇದೆ. ಆದರೆ ಅದು ಒಂದು ವರ್ಷದ ತಾತ್ಕಾಲಿಕ ಜಯ ಅಷ್ಟೇ. ಆ ನಂತರ ಮತ್ತೆ ಇವರ ಪರಿಸ್ಥಿತಿ ಬಿಗಡಾಯಿಸುತ್ತದೆ. ಆದರೆ ಇವರಿಗೆ ಎಲ್ಲ ರೀತಿ ಅನುಕೂಲ ಆಗಬೇಕು ಅಂದರೆ 2021ನೇ ಜುಲೈ ತಿಂಗಳು ಕಳೆದು, 2022ನೇ ಇಸವಿ ಬರಬೇಕು.