ಸಂಕ್ರಾಂತಿ 2021ರ ವಿಶೇಷ: ತುಲಾದಿಂದ ಮೀನದ ತನಕ ರಾಶಿ ಭವಿಷ್ಯ
ಸಂಕ್ರಾಂತಿ ಬಹಳ ವಿಶೇಷವಾದ ಪರ್ವ ಕಾಲ. ಜನವರಿ 14, 2021ರಂದು ಮಕರ ಸಂಕ್ರಮಣ. ಅಂದಿನ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಶುಭ ಕಾರ್ಯಗಳನ್ನು ಮಾಡುವವರು ಸಾಮಾನ್ಯವಾಗಿ ಸಂಕ್ರಾಂತಿಯ ನಂತರ ಶುರು ಮಾಡುತ್ತಾರೆ. ಮತ್ತು ಹಲವು ಶುಭ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ಈ ಸಮಯವನ್ನು ಎದುರು ನೋಡುತ್ತಾರೆ.
ರವಿ ಗ್ರಹವು ಮಕರ ರಾಶಿಯನ್ನು ಪ್ರವೇಶಿಸುವ ದಿನ ಮಕರ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ. ಅಲ್ಲಿಂದ ಮುಂದೆ ಕರ್ಕಾಟಕ ರಾಶಿಗೆ ರವಿ ಗ್ರಹ ಪ್ರವೇಶ ಮಾಡುವ ತನಕ ಮದುವೆ, ಉಪನಯನ ಮೊದಲಾದ ಶುಭ ಕಾರ್ಯಕ್ರಮಗಳನ್ನು ಮಾಡುವುದಕ್ಕೆ ಬಹಳ ಪ್ರಶಸ್ತವಾದ ಕಾಲ ಎಂಬುದು ಜ್ಯೋತಿಷ್ಯ ನಂಬಿಕೆ.
ಸಂಕ್ರಾಂತಿ 2021ರ ವಿಶೇಷ: ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ
ಇನ್ನು ಈ ಮಕರ ಸಂಕ್ರಾಂತಿಗೆ ತುಲಾದಿಂದ ಮೀನ ರಾಶಿ ತನಕ ಏನು ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸಿಕೊಡುವುದು ಈ ಲೇಖನ ಉದ್ದೇಶ. ಇಲ್ಲಿ ಹೇಳುವ ಎಚ್ಚರಿಕೆ ಮಾತುಗಳ ಕಡೆಗೂ ಸ್ವಲ್ಪ ಲಕ್ಷ್ಯ ನೀಡಿ. ಹಾಗೆ ಮಾಡುವುದರಿಂದ ಕಣ್ಣಿಗೆ ಬಂದ ಅಪಾಯ ರೆಪ್ಪೆಗೆ ತಾಗಿಹೋಯಿತು ಎಂದು ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಇರುತ್ತದೆ.
ತುಲಾ
ಸರ್ಕಾರಿ ಕಚೇರಿಗಳಿಗೆ ವಾಹನವನ್ನು ಬಿಟ್ಟಿದ್ದಲ್ಲಿ ಅದರಿಂದ ಅಂದುಕೊಂಡಷ್ಟು ಆದಾಯ ಬರುವುದಿಲ್ಲ. ತಂದೆಯ ಜತೆಗೆ ಸಣ್ಣ- ಪುಟ್ಟ ಮನಸ್ತಾಪ ಏರ್ಪಡಬಹುದು. ತಾಯಿಯ ಕಡೆಯಿಂದ ಬರಬೇಕಾದ ಆಸ್ತಿ- ಪಾಸ್ತಿ ನಿಮಗೆ ದೊರೆಯುವ ಸಾಧ್ಯತೆ ಇದೆ. ಆದರೆ ನೆನಪಿನಲ್ಲಿಡಿ, ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಬಾಕಿ ಇರುವ ಹಣವನ್ನು ಉಳಿಸಿಕೊಳ್ಳಬೇಡಿ. ಭಾರೀ ವಾಹನಗಳ ಖರೀದಿಗೆ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ನಾನಾ ವಿಧವಾದ ಅಡೆತಡೆಗಳು ಏರ್ಪಡಬಹುದು. ಆಪ್ತಮಿತ್ರರ ಜತೆಗಿನ ವ್ಯವಹಾರದಲ್ಲಿ ನಂಬಿಕೆ ಬಹಳ ಮುಖ್ಯ ಎಂಬುದು ನೆನಪಿನಲ್ಲಿರಲಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ಆಲೋಚಿಸುತ್ತಿರುವವರಿಗೆ ಮಾರ್ಗದರ್ಶನ, ಸಹಾಯ ದೊರೆಯಲಿದೆ.
ವೃಶ್ಚಿಕ
ಪ್ರಯಾಣದಲ್ಲಿ ಲಾಭವನ್ನು ಪಡೆಯುವಂಥ ಯೋಗ ಇದೆ. ಸೋದರ- ಸೋದರಿಯರಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಉದ್ಯೋಗದಲ್ಲಿ ಸ್ವಲ್ಪ ಮಟ್ಟಿಗಿನ ಒತ್ತಡ ಇರುತ್ತದೆ. ನಿಮ್ಮ ನಿರ್ಧಾರಗಳ ಬಗ್ಗೆ ಮೇಲಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ನಿಮ್ಮ ಮಾತಿನಲ್ಲಿ ಸಿಟ್ಟು ತೋರಗೊಡಬೇಡಿ. ದಾನ- ಧರ್ಮಾದಿ ಕಾರ್ಯಗಳಿಂದ ಮಾನಸಿಕ ನೆಮ್ಮದಿ ಸಿಗಲಿದೆ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಆಗುವ ಬದಲಾವಣೆಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲು ನೀವು ಅಥವಾ ನೀವು ಪ್ರತಿನಿಧಿಸುವ ತಂಡವನ್ನು ಆರಿಸಿಕೊಳ್ಳುವ ಸಾಧ್ಯತೆ ಇದೆ. ಒಂದಿಷ್ಟು ಒತ್ತಡದ ಕ್ಷಣಗಳು ಇರುತ್ತವೆ. ಆದರೆ ಧೃತಿಗೆಡಬೇಡಿ.
ಧನುಸ್ಸು
ಸರ್ಕಾರದಿಂದ ನಿಮಗೆ ಬರಬೇಕಾದ ಹಣ ಇದ್ದಲ್ಲಿ ಅದು ಬರುವ ಯೋಗ ಇದೆ. ಇನ್ನು ದೊಡ್ಡ ಸಂಸ್ಥೆಗಳ ಜತೆಗೆ ವ್ಯವಹಾರ ಒಪ್ಪಂದಗಳು ಏರ್ಪಡಬಹುದು. ಶಿಕ್ಷಣ ಸಂಸ್ಥೆಗಳನ್ನು ನಡೆಸಬೇಕು ಎಂದಿರುವವರು ಅಥವಾ ಬೇರೆ ಯಾವುದಕ್ಕಾದರೂ ಅನುಮತಿಗಾಗಿ ಪ್ರಯತ್ನಿಸುತ್ತಿದ್ದಲ್ಲಿ ಅದು ದೊರೆಯುವ ಅವಕಾಶಗಳಿವೆ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಕೋರ್ಟ್- ಕಚೇರಿಗಳಲ್ಲಿ ನಡೆಯುತ್ತಿದ್ದಲ್ಲಿ ತಾತ್ವಿಕ ಅಂತ್ಯ ಕಾಣುವಂಥ ಸಾಧ್ಯತೆ ಕೂಡ ಇದೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ಮಾತ್ರ ಸ್ವಲ್ಪ ಜೋಪಾನವಾಗಿರಿ. ಮಧ್ಯವರ್ತಿಗಳಿಂದ ನಿಮಗೆ ಮೋಸವಾಗಬಹುದು. ನಿಮ್ಮ ರಹಸ್ಯವನ್ನು ಯಾರಿಗೂ ಬಿಟ್ಟುಕೊಡದಿರಿ.
ಮಕರ
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಣ್ಣು, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಬಹುದು. ನಿಮ್ಮ ತಂದೆಯವರ ಆರೋಗ್ಯದ ಬಗ್ಗೆ ಕೂಡ ನಿಗಾ ಮಾಡಿ. ವೃಥಾ ಅಲೆದಾಡುವಂತಾಗುತ್ತದೆ. ಮೇಲಧಿಕಾರಿಗಳ ದೃಷ್ಟಿಯಲ್ಲಿ ಹೊರೆಯಂತೆ ಕಾಣುತ್ತೀರಿ. ಸರ್ಕಾರದ ಕೆಲಸಗಳು ಒಂದನ್ನೇ ನಾಲ್ಕಾರು ಸಲ ಮಾಡುವಂತಾಗುತ್ತದೆ. ಆದರೆ ನಿಮಲ್ಲೇ ತಿಳಿಯದಂತೆ ಅಹಂಕಾರ ಮೂಡುತ್ತದೆ. ಪಾರ್ಟನರ್ ಷಿಪ್ ವ್ಯವಹಾರಗಳ ಅವಕಾಶ ಹುಡುಕಿಕೊಂಡು ಬರಲಿದೆ. ಸ್ನೇಹಿತರು- ಹಿತೈಷಿಗಳ ಸಹಾಯದಿಂದ ಉದ್ಯೋಗದಲ್ಲಿ ಬದಲಾವಣೆ ಆಗಬಹುದು. ಆದರೆ ಮಾನಸಿಕ ಒತ್ತಡ ಕಡಿಮೆ ಆಗಲ್ಲ.
ಕುಂಭ
ಹಣ ನೀರಿನಂತೆ ಖರ್ಚಾಗುತ್ತದೆ. ಯಾರದೋ ಮೇಲಿನ ಜಿದ್ದಿಗೆ ಬಿದ್ದು, ಒಂದಕ್ಕೆ ನಾಲ್ಕರಷ್ಟು ಹಣ ಖರ್ಚು ಮಾಡಲಿದ್ದೀರಿ. ಭೂಮಿ ವ್ಯವಹಾರಗಳು ಅರ್ಧಕ್ಕೆ ನಿಲ್ಲುವಂಥ ಯೋಗ ಇದೆ. ಯಾವುದಾದರೂ ವ್ಯವಹಾರಕ್ಕಾಗಿ ನೀವು ನೇಮಿಸಿಕೊಂಡಂಥ ವಕೀಲರು ಸೇರಿದಂತೆ ಕಾನೂನು ಸಲಹೆಗಾರರು, ತಜ್ಞರನ್ನು ಕುರುಡಾಗಿ ನಂಬದಿರಿ. ಕ್ರೀಡಾಪಟುಗಳು ದೈಹಿಕ ಆರೋಗ್ಯದ ಕಡೆ ಹೆಚ್ಚಿನ ನಿಗಾ ವಹಿಸಬೇಕು. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಗಡುವಿನೊಳಗೆ ಕೆಲಸ ಮುಗಿಸುವ ಬಗ್ಗೆ ಗಮನ ನೀಡಿ. ಇತರರ ಚಾಡಿ ಮಾತುಗಳನ್ನು ಕೇಳಿಕೊಂಡು ಕೆಲಸ ಬಿಡಬೇಡಿ. ತಾಳ್ಮೆಯನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯ.
ಮೀನ
ವ್ಯಾಪಾರ ವಿಸ್ತರಣೆ ಮಾಡುವುದಕ್ಕೆ ಅವಕಾಶಗಳನ್ನು ಎದುರು ನೋಡುತ್ತಿರುವವರಿಗೆ ಅದು ಸಿಗುತ್ತದೆ. ವಿದೇಶದಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ವೀಸಾ ಪ್ರಕ್ರಿಯೆಗಳು ಸಲೀಸಾಗಿ ಮುಗಿಸುವುದಕ್ಕೆ ಸಾಧ್ಯವಾಗುತ್ತದೆ. ತಂದೆಯ ಕಡೆ ಸಂಬಂಧಿಕರಿಂದ ಅನುಕೂಲ ಒದಗಿ ಬರಲಿದೆ. ಈ ಹಿಂದೆ ನೀವು ಮಾಡಿದ್ದ ಹೂಡಿಕೆ ದೊಡ್ಡ ಮಟ್ಟದ ರಿಟರ್ನ್ ತಂದುಕೊಡಲಿದೆ. ಸಮಯದ ವಿಚಾರದಲ್ಲಿ ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಏಕೆಂದರೆ, ಆಗಬೇಕಾದ ಕೆಲಸಗಳು ವಿಳಂಬ ಆಗಲಿವೆ. ಇದರಿಂದ ಸಿಟ್ಟಿಗೆದ್ದು ಯಾರ ಮೇಲೂ ಕೂಗಾಟ ನಡೆಸದಿರಿ.