ವೃಶ್ಚಿಕ ರಾಶಿಯ ಬುದ್ಧಿ ಫಾರ್ಮ್ಯಾಟ್ ಮಾಡಲಿದ್ದಾನೆ ಶನಿ
ಸ್ವಲ್ಪ ಸೊಕ್ಕಿನ ಮನುಷ್ಯರೇ ಎನ್ನಿಸಿಕೊಳ್ಳುವ ವೃಶ್ಚಿಕ ರಾಶಿಯವರು ತಮಗೆ ತಿಳಿದಿದ್ದನ್ನೇ ಮಾಡುತ್ತಾರೆ. ಯಾರೇನೆ ಹೇಳಿದರೂ ಕೇಳಲ್ಲ, ಧಿಮಾಕು ಜಾಸ್ತಿ, ತಾವು ಹೇಳಿದ್ದೆ ಆಗಬೇಕು. ಇವರನ್ನು ನೋಡಿದರೆ ಎಲ್ಲರೂ ಹೆದರುತ್ತಾರೆ. ಅಷ್ಟೊಂದು ಗಾಂಭೀರ್ಯ ಇವರಲ್ಲಿರುತ್ತದೆ. ಶನಿಕಾಟದ ಬಗ್ಗೆ ಹೇಳಿದರೆ "ಇರ್ಲಿ ಬಿಡಿ ಮಾರಾಯಾ, ಎಂಥದ್ದು ಆಗಲ್ಲ, ಏನಾಗತ್ತೆ ನೋಡ್ತೇನೆ" ಎಂದು ಶನಿದೇವನಿಗೇನೆ ತೋಳೆರಿಸುವ ಸ್ವಭಾವ ಇವರದು. ಈ ರೀತಿ "ಎದರಾ ಬದರಾ ಮಾರಿಗ್ ಹೊಡೆದ್ಹಂಗೆ" ಮಾತೋಡೊ ಗುಣ ಕಮ್ಮಿ ಮಾಡಿಕೊಳ್ಳಬೇಕು. ಇಲ್ಲಾಂದ್ರೆ ಮುಖ ಊದಿಸಿಕೊಳ್ಳಬೇಕಾಗುತ್ತದೆ. ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ರೆ ಹೀಗೆ ಆಗುತ್ತದೆ.
ಒಂಥರಾ ಮೊಂಡು ಸ್ವಭಾವದ ವೃಶ್ಚಿಕ ರಾಶಿಯವರು ಶನಿದೇವನ ಕೃಪೆ ಪಡೆದುಕೊಳ್ಳದಿದ್ದರೆ ಮಣ್ಣುಮುಕ್ಕುವುದು ಗ್ಯಾರಂಟಿ. ಈಗಾಗಲೇ ವೃಶ್ಚಿಕ ರಾಶಿಯವರ ಜೀವನಶೈಲಿ ಹಾಗೂ ಬುದ್ಧಿಯನ್ನು ಮಹಾತ್ಮನು ಫಾರ್ಮ್ಯಾಟ್ ಮಾಡಿದ್ದಾನೆ. ಇನ್ನೂ ಮಾಡುತ್ತಾನೆ. ಆದಷ್ಟು ತಾಳ್ಮೆ, ಸಹನೆಯಿಂದಿರುವುದನ್ನು ಕರಗತ ಮಾಡಿಕೊಳ್ಳಬೇಕು. ಆಗಲ್ಲ ಅಂದ್ರೆ. ಇದ್ದೇ ಇದೆ ಶನಿದೇವನ "ಮಾರಿಹಬ್ಬ". ಅನುಭವಿಸಿ.
ಅನುರಾಧ, ಜ್ಯೇಷ್ಠಾ, ವಿಶಾಖ ನಕ್ಷತ್ರದ 4ನೇ ಪಾದದಲ್ಲಿ ಜನಿಸಿದವರು ವೃಶ್ಚಿಕ ರಾಶಿಯವರಾಗುತ್ತಾರೆ. ಶನಿರಾಜನು ಇವರಿಗೆ 12ನೇ ಸ್ಥಾನದಲ್ಲಿ ಬಂದು ಸಾಡೇಸಾತಿ ಮೊದಲನೇ ಹಂತದಲ್ಲಿದ್ದಾನೆ. (ಮುಂದಿನ ವರ್ಷ ಧನಸ್ಸು ರಾಶಿಯವರಿಗೆ 12ನೇ ಸ್ಥಾನದಲ್ಲಿ ಸಾಡೇಸಾತಿಯಾಗಿ ಶನಿ ತನ್ನಾಟ ಶುರು ಮಾಡುತ್ತಾನೆ.) ಮುಂದಿನ ಬಾರಿ ಶನಿದೇವನು ವೃಶ್ಚಿಕ ರಾಶಿಯವರಿಗೆ 2ನೇ ಹಂತದಲ್ಲಿರುತ್ತಾನೆ. (ಈಗ ತುಲಾ ರಾಶಿಯವರಿಗೆ 2ನೇ ಹಂತದ ಸಾಡೇಸಾತಿ ನಡೆಯುತ್ತಿದೆ).
ವೃಶ್ಚಿಕ ರಾಶಿಯವರೆ, ಸ್ವಲ್ಪ ಉಗ್ರವಾಗಿಯೇ ಕೆಲ ದಿನಗಳಲ್ಲಿ ಶನಿದೇವ ನಿಮ್ಮನ್ನು ಆಪೋಷನ ಮಾಡಿಕೊಳ್ಳಲಾರಂಭಿಸಲಿದ್ದಾನೆ. ನಿಮಗೆ ತಲೆಯಲ್ಲಿ ಏನೇನೋ ಯೋಚನೆಗಳು ಬರುತ್ತಿರುತ್ತವೆ. ಹಿಂದೆಂದೊ ಮಾಡಿದ ತಪ್ಪಿಗಾಗಿ ಶಿಕ್ಷೆ ಅನುಭವಿಸುವಂತಾಗುತ್ತದೆ ಈಗ. ಶತ್ರುಗಳು ಕತ್ತಿ ಮಸೆಯಲಾರಂಭಿಸುತ್ತಾರೆ. ಸಾಲ ಮರಳಿ ಕೊಡದಿದ್ದರೆ ಶೂಲಕ್ಕೇರಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ. ಉದಾ : ಐದು ಸಾವಿರ ರೂ. ಸಾಲ ತಗೊಂಡು ಕೊಡಲಾಗದೆ ಸತಾಯಿಸುತ್ತಿದ್ದರೆ, ದೊಡ್ಡ ಡಾನ್ನನ್ನು ಪೊಲೀಸರು ಹುಡುಕಿದಂಗೆ ನಿಮ್ಮನ್ನು ಹುಡುಕಲಾರಂಭಿಸುತ್ತಾರೆ.
ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿಕೊಳ್ಳಿ. ಒಂದಿಲ್ಲೊಂದು ಚಿಕ್ಕಪುಟ್ಟ ರೋಗಗಳು ಇದ್ದೇ ಇರುತ್ತವೆ ಸಾಯೋವರೆಗೆ. ಆರೋಗ್ಯವಂತರಾಗಿರಲು ಮತ್ತು ಹಣ ಉಳಿಸಿಕೊಳ್ಳಬೇಕೆಂದರೆ ಈ ಕೂಡಲೇ ಆರೋಗ್ಯ ವಿಮೆ ಮಾಡಿಸಿಟ್ಟುಕೊಳ್ಳಿ. ಬದುಕಬೇಕೆಂದರೆ ಚಟಗಳನ್ನು, ಕೆಟ್ಟ ಹವ್ಯಾಸಗಳನ್ನು ಬಿಡಿ. ಮನಸ್ಸು ಕೂಡ ಭಯಭೀತವಾಗುವುದರಿಂದ ಹುಚ್ಚು ಧೈರ್ಯ ಮಾಡದೆ ಮನೆ ಮಂದಿಯೊಂದಿಗೆ ಬೆರೆಯುತ್ತಿರಿ. ಒಂಟಿಯಾಗಿ ಇರಲೇಬೇಡಿ. ಮನಸ್ಸನ್ನು ಯಾವಾಗಲೂ ಉಲ್ಲಸಿತವಾಗಿಟ್ಟುಕೊಳ್ಳುವ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಯಾವಾಗಲೂ "ಟಿಪ್ಟಾಪ್" ಆಗಿರಬೇಕು. ಎಲ್ಲರಿಗೂ ಚೆನ್ನಾಗಿಯೇ ಕಾಣಿಸಬೇಕು ಎಂಬ ಕಾನ್ಸೆಪ್ಟ್ ನಿಮ್ಮ ಮನದಲ್ಲಿಟ್ಟುಕೊಳ್ಳಿ. ತೊಂದರೆಯಿದೆ ಎಂದು ಯಾರೂ ಕೂಡ ನಿಮ್ಮನ್ನು ನೋಡಿ ಹೇಳಬಾರದು. ಆ ರೀತಿ ಜೀವನಶೈಲಿಯಲ್ಲಿರಬೇಕು. ದರಿದ್ರತನ ಬಿಡಲೇಬೇಕು.
ಗಳಿಸಿದ್ದೆಲ್ಲವೂ ಹೆಂಗೆಂಗೋ ಆಗಿ ಖರ್ಚಾಗಿರುವುದರಿಂದ ಧೃತಿಗೆಡದೆ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ. ಏಕೆಂದರೆ ಸಾಡೇಸಾತಿ 2020 (ಇನ್ನೂ 7 ವರ್ಷ) ರವರೆಗೂ ನಿಮ್ಮನ್ನು ಬಿಡಲ್ಲ ಎಂಬುದು ನೆನಪಿಟ್ಟುಕೊಳ್ಳಿ. ದೊಡ್ಡವರ್ಯಾರೋ ಏನೂ ಆಗಲ್ಲ ಅಂತ ಹೇಳಿದ್ದಾರೆಂದು ದೊಡ್ಡಸ್ತಿಕೆ ಮಾಡಿ ಶನಿದೇವನ ಆಟ ಮರೆತರೆ ನಿಮ್ಮನ್ನು ನೀವು ಮರೆಯಬೇಕಾಗುತ್ತದೆ ಎಚ್ಚರ.
ಹಣವಿಲ್ಲವೆಂದು ಕೆಟ್ಟ ಹಾದಿಯಲ್ಲಿ ಹಣ ಗಳಿಸುವುದನ್ನು ಮಾಡಬೇಡಿ. ಇದ್ದುದರಲ್ಲಿಯೇ ಸುಖ ಕಾಣಲು ಪ್ರಯತ್ನಿಸಿ. ಬೇಕಾಬಿಟ್ಟಿ ಖರ್ಚು ಮಾಡಿದರೆ ಭಿಕ್ಷೆಗೆ ಹಚ್ಚುತ್ತಾನೆ ಮಹಾತ್ಮನು ಎಂಬುದನ್ನು ಮನದಲ್ಲಿಟ್ಟುಕೊಳ್ಳಿ. ಯಾರೋ "ದುಡ್ಡು ಮಾಡುವ ಟೆಕ್ನಿಕ್ ಹೇಳ್ತೇನೆ, ಇಲ್ಲಿ ಹಣ ಹೂಡಿಕೆ ಮಾಡಿ, ಕೆಟ್ಟ ಸಮಯ, ಒಳ್ಳೆಯ ಸಮಯ ಎಂದು ಯೋಚನೆ ಮಾಡಬೇಡಿ, ಅದೆಲ್ಲಾ ಬೊಗಳೆ" ಎಂದು ಹೇಳಿದರೆಂದು ಅವರ ಮಾತು ಕೇಳಿ, ಹಣ ಹೂಡಿಕೆ ಮಾಡಿದರೆಂದರೆ, "ಹೊಳೆಯಲ್ಲಿ ಹುಣಶಿಹಣ್ಣು ತೊಳೆದಂಗಾಯ್ತು" ಎಂದು ನಿಮ್ಮ ಹಣ ಮರೆತು ಬಿಡಿ. ಏಕೆಂದರೆ ಈಗ ಹಣದ ಮಹತ್ವ ಅರಿಯುವ ಸಮಯ ನಿಮಗೆ ತಿಳಿದುಕೊಳ್ಳಿ.
ಉದ್ಯೋಗದಲ್ಲಿ ಕೊಟ್ಟ ಕೆಲಸ ಅಚ್ಚುಕಟ್ಟಾಗಿ ಮಾಡಿಕೊಂಡು ಹೋದರೆ ಸಾಕು ನೀವು. "ನಾ ತುಂಬಾ ಬ್ರಿಲಿಯಂಟ್ ಇದ್ದಿ, ಎಂಥದಾದ್ರೂ ಮಾಡ್ತಿ" ಅಂದುಕೊಂಡು ಬೇರೆಯವರ ಕೆಲಸ ಮಾಡಲು ಹೋದ್ರೆ ಮನೆಗೆ ಹೋಗೋ ಹಾದಿ ನೀವೆ ಹುಡುಕಿಕೊಂಡಂಗೆ. ಜಾಗೃತೆಯಿಂದ ಇರಿ. ಎಂಥವರೊಂದಿಗೆ ಬೆರೆಯುತ್ತಿದ್ದೇನೆ ಎಂಬ ಖಬರು ಮೈಮೇಲೆ ಇರಬೇಕು. ಕೆಲಸದಲ್ಲಿ ಯಾವುದೇ ಬದಲಾವಣೆ ಬಾಸ್ ಬಯಸಿದರೆ ಕೂಡಲೇ ಒಪ್ಪಿಗೆ ಸೂಚಿಸಬೇಕು. ಆಗಲ್ಲ ಅಂದರೆ, ಅವರು ಬಿಡಲ್ಲ. ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಬೆನ್ನು ತಟ್ಟುವವರು ಯಾರೂ ಬರಲ್ಲ ಈಗ. ಹೀಗಾಗಿ ನಿಮ್ಮಷ್ಟಕ್ಕೆ ನೀವೆ ಬೆನ್ನು ತಟ್ಟಿಕೊಂಡು ಚೆನ್ನಾಗಿ ಕೆಲಸ ಮಾಡಿ ಪರಿಪಕ್ವವಾಗಬೇಕು.
ಮನೆಯಿಂದ ದೂರವಿರಬೇಕಾದ ಪರಿಸ್ಥಿತಿ ಬಂದರೆ ಚಿಂತಿಸದೆ, ಹೊಸದಾಗಿ ಜೀವನದ ಅನುಭವ ಪಡೆಯುವ ಯೋಗ ಅಂದುಕೊಳ್ಳಬೇಕು. ಶ್ರೀರಾಮನು ವನವಾಸಕ್ಕೆ ಹೋಗಿದ್ದು ಶನಿಕಾಟದಲ್ಲಿ ಎಂಬ ಕಥೆ ನೆನಪಿಸಿಕೊಳ್ಳಿ. ಮನೆಯಲ್ಲಿ ಸಣ್ಣ ವಿಷಯಕ್ಕೂ ಜಗಳಕ್ಕೆ ನಿಲ್ಲುವ ಸ್ವಭಾವ ಕಮ್ಮಿ ಮಾಡಿಕೊಳ್ಳಬೇಕು. ಸಾಡೇಸಾತಿ ಮುಗಿಯುವವರೆಗೂ ಸಂಬಂಧಿಕರಲ್ಲಿ ಹೆಚ್ಚು ಬೆರೆಯದೆ ಇದ್ದರೆ ಒಳ್ಳೆಯದು. ಏಕೆಂದರೆ ಅಲ್ಲೇನಾದರೂ ಕೆಟ್ಟದ್ದಾದರೆ ಅಪವಾದ ನಿಮ್ಮ ಮೇಲೆ ಅಂಟಿಕೊಳ್ಳುತ್ತದೆ. ತೊಂದರೆಯಿದೆ ಎಂದು ಇದ್ದಬದ್ದದ್ದನ್ನು ಮಾರದೆ, ಅತೀ ಅವಶ್ಯಕವಾದ ಖರ್ಚುಗಳನ್ನಷ್ಟೇ ಮಾಡಬೇಕು. ಎಲ್ಲರೂ ಖರ್ಚು ಮಾಡ್ತಾರೆ ಎಂದು ಮಾಡಿದರೆ ಜೋಳಿಗೆ ಹಾಕಬೇಕಾಗುತ್ತದೆ ಆಮೇಲೆ ಎಂಬುದನ್ನು ಅರಿತುಕೊಳ್ಳಬೇಕು.
ವಿದ್ಯಾರ್ಥಿಗಳಂತೂ ತುಂಬಾ ಅಲರ್ಟ್ ಆಗಿರಬೇಕು. ಚಟಗಳ ದಾಸರಾಗುವ ಸಮಯವಿದು. ಪಾಲಕರು ವೃಶ್ಚಿಕ ರಾಶಿಯವರ ತಮ್ಮ ಮಕ್ಕಳ ಬಗ್ಗೆ ತುಂಬಾ ಕಾಳಜಿ ವಹಿಸುತ್ತ, ಪ್ರೀತಿ ತೋರಿಸುತ್ತಿರಬೇಕು. ಇಲ್ಲವಾದರೆ ಪ್ರೀತಿಯನ್ನು ಅವರೇ ಹುಡುಕಿಕೊಳ್ಳುತ್ತಾರೆ ಹೊರಗಡೆ.
ದೊಡ್ಡವರೆನಿಸಿಕೊಂಡು ಅನ್ಯಾಯದ ಕೆಲಸ ಮಾಡುತ್ತ ಎಲ್ಲರಿಗೂ ಮಂಕುಬೂದಿ ಎರಚುತ್ತಿರುವವರು ವೃಶ್ಚಿಕ ರಾಶಿಯವರಾಗಿದ್ದರೆ, ಅವರಿಗೆ ಈಗ ಕಂಬಿಗಳನ್ನೆಣಿಸುವ ಕೆಲಸ ಹಚ್ಚುತ್ತಾನೆ ಶನಿಮಹಾತ್ಮ. "ಮಾಡಿದ್ದುಣ್ಣೊ ಮಾರಾಯ" ಎನ್ನುತ್ತಾರೆ ಹೊರತು ಯಾರೂ ಮರಗಲ್ಲ. ತಮಗೆ ಕೆಟ್ಟದ್ದನ್ನು ಮಾಡಿದವರಿಗೆ ಶನಿದೇವನು ಶಿಕ್ಷೆ ನೀಡಲಾರಂಭಿಸಿದ್ದು ಗೊತ್ತಾದಾಗ ಕೆಲವರು "ದೇವರು ಈಗ ಕಣ್ಣು ಬಿಟ್ಟ, ಹಾಲು ಕುಡಿದ್ಹಂಗೆ ಆಯ್ತು" ಎನ್ನುತ್ತಾರೆ. ಅದು ಆಗೋದು ಶನಿಕಾಟದಲ್ಲೇ. ನಿಷ್ಕಾಳಜಿ ಮಾಡದೆ ಶನಿದೇವನ ಕೃಪೆಗೆ ವೃಶ್ಚಿಕ ರಾಶಿಯವರು ಪ್ರಯತ್ನಿಸಬೇಕು. "ಆನೆಗೆ ಆನೆ ಹೋಗೈತಂತ, ಬಾಲಕ್ಕ ಯೋಚನೆ ಮಾಡಿದ್ರಂತ" ಎನ್ನಿಸಿಕೊಳ್ಳಬೇಡಿ.
ಉತ್ತರ ಭಾರತದ ಕಡೆಗೆ ಶನಿರಾಯನ ಕಾಡಾಟಕ್ಕೆ "ಪನೋತಿ" ಎಂದು ಕರೆಯುತ್ತಾರೆ. ವೃಶ್ಚಿಕ ರಾಶಿಯವರು ಜೀವನದಾಟದಲ್ಲಿ "ಟೈಮ್ಅಪ್" ಆಗಿದೆ ಎಂದುಕೊಂಡು ಈ ಕಾಡಾಟವನ್ನು ಕಲಿಕೆ ಸಮಯವನ್ನಾಗಿಸಿಕೊಳ್ಳಬೇಕು. ಜಾತಕ ಪರಿಶೀಲಿಸಿಕೊಂಡು ಶನಿದೇವನ ಆಟದಲ್ಲಿ ಗೆಲ್ಲುವ ಬಗೆ ತಿಳಿದುಕೊಂಡು ಜೀವನವನ್ನು ಆನಂದಿಸಿಕೊಳ್ಳಬೇಕು. ಇಲ್ಲಾಂದ್ರೆ ಪರಿಸ್ಥಿತಿ " ಆರಕ್ಕೇರಂಗಿಲ್ಲ, ಮೂರಕ್ಕಿಳಿಯಂಗಿಲ್ಲ". "ನಕ್ಕ ಹೇಳಿದ್ದು ಕೆಟ್ಟದ್ದಕ್ಕೆ, ಬೈಯ್ದ ಹೇಳಿದ್ದು ಒಳ್ಳೆದಕ್ಕೆ" ಎಂಬ ಮಾತು ನಿಮಗೆ ಗೊತ್ತಿದೆ ಅನ್ಸತ್ತೆ ನನಗೆ.
ಧನಸ್ಸು ರಾಶಿಗೆ ಶನಿಬಲ ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ದೇವರ ಮನೆಯಲ್ಲಿ ಬೆಳಗಿಸುವ ಧೂಪದ ಹೊಗೆ ಮನೆಯಲ್ಲೆಲ್ಲಾ ಪಸರಿಸಬೇಕು.
ಶನಿದೇವನ ಕೃಪೆಗೆ : ವಾಹನ ಪೂಜಿಸದೇ ಅಮವಾಸ್ಯೆಯಂದು ಚಲಾಯಿಸಬಾರದು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)