ಸಾಡೇಸಾತಿ : ಕುಂಭ ರಾಶಿಗೆ ರಾಜಯೋಗದ ಸಮಯ
ಅಷ್ಟಮಶನಿ ಪ್ರಭಾವವನ್ನು ಅರಿಯಬೇಕೆಂದವರು ಕುಂಭ ರಾಶಿಯವರನ್ನು ಕೇಳಬಹುದು ಶನಿಪ್ರಭಾವ ಹೇಗಿತ್ತು ಅಂತ. ಕುಂಭ ರಾಶಿಯವರಿಗೆ ಈಗ ಅಂಥಾದ್ದೇನೂ ತೊಂದರೆಯಿರುವುದಿಲ್ಲ. ಶುಭ ಫಲಗಳೇ ಹೆಚ್ಚು ಈಗ. ಕುಂಭ ರಾಶಿಗೆ ಒಂಥರಾ ರಾಜಯೋಗದ ಸಮಯವೇ ಇದು ಎನ್ನಬಹುದು. ಈ ರಾಶಿಗಳವರ ಗುಣಗಳ ಬಗ್ಗೆ ಈಗಾಗಲೆ ನಿಮಗೆ ಗೊತ್ತಿದೆ.
ಶತಭಿಷಾ, ಪೂರ್ವಭಾದ್ರ 1, 2, 3 ಹಾಗೂ ಧನಿಷ್ಠಾ ನಕ್ಷತ್ರದ 3, 4ನೇ ಚರಣಗಳಲ್ಲಿ ಜನಿಸಿದವರು ಕುಂಭ ರಾಶಿಯವರಾಗುತ್ತಾರೆ. ಈಗ ಭಾಗ್ಯೋದಯದಂತಿರುವ ಈ ಸಮಯವನ್ನು ಕುಂಭ ರಾಶಿಯವರು ಉಪಯೋಗಿಸಿಕೊಳ್ಳಬೇಕು. ಆದರೆ ಕೆಲವರು ನಮಗೆ ರಾಜಯೋಗವಿದ್ದು, ಭಾಗ್ಯದ ಬಾಗಿಲು ತೆರೆದಿದೆ, ತಾನೇ ಎಲ್ಲವೂ ಬರಲಿ ಎಂದು ಮೂರ್ಖರಂತೆ ಕುಳಿತುಕೊಂಡು ಬಿಡುತ್ತಾರೆ. ಉತ್ತಮ ಸಮಯದಲ್ಲಿ ಮೈ ಮುರಿದು ದುಡಿಯುವ ಬದಲು ಮೈಗಳ್ಳರಾಗಿ ಶನಿದೇವನ ಪ್ರಭಾವ ಸುಳ್ಳು ಎನ್ನುತ್ತಾರೆ ಕೆಲವರು.
ಉತ್ತಮ ಸಮಯದಲ್ಲಿ ಒಂದ್ನಿಮಿಷವನ್ನೂ ಅನವಶ್ಯಕವಾಗಿ ಕಳೆಯದೆ ಪ್ರತಿಯೊಂದು ಕ್ಷಣವನ್ನು ಲಾಭಕರವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಏಕೆಂದರೆ ಬುದ್ಧಿ ಯಾವಾಗಲೂ ಉಪಯೋಗಿಸಿದಂತೆ ಹೆಚ್ಚು ತೀಕ್ಷ್ಣವಾಗುತ್ತದೆ. ಆದರೆ, ದೇಹ ಮಿತಿ ಮೀರಿ ದುಡಿದರೆ ವಿಶ್ರಾಂತಿ ಬಯಸುತ್ತದೆ. ನಮ್ಮ ಬುದ್ಧಿ ಮಾತ್ರ ಹಾಗಲ್ಲ. ಎಷ್ಟು ಖರ್ಚು ಮಾಡಿದರೂ ಮತ್ತೆ ಮತ್ತೆ ಬುದ್ಧಿವಂತನಾಗುತ್ತ ಹೋಗುತ್ತದೆ.
ವಿದ್ಯಾವಂತರು ತಮ್ಮ ಬುದ್ಧಿವಂತಿಕೆಯಿಂದಲೇ ಇಂದು ತಾಂತ್ರಿಕವಾಗಿ ಬಹಳಷ್ಟನ್ನು ಸಾಧನೆ ಮಾಡಿದ್ದಾರೆ. ಆದ್ದರಿಂದ ಕುಂಭ ರಾಶಿಯವರು ಮಿಲ್ಟ್ರಿಯವರ ತರಹ ಶಿಸ್ತಿನಿಂದ ಅಚ್ಚುಕಟ್ಟಾಗಿ ಎಲ್ಲ ಕೆಲಸಗಳನ್ನು ಮಾಡಬೇಕು. ಯಶಸ್ಸು ಬೆನ್ನು ಹತ್ತುತ್ತದೆ ತಾನೇ ತಾನಾಗಿ. ಆದರೆ ಕೆಲಸದಲ್ಲಿ ಪ್ರಾಮಾಣಿಕತೆ, ನ್ಯಾಯ, ಧರ್ಮ ಅಳವಡಿಸಿಕೊಳ್ಳಬೇಕು. ಇಲ್ಲಾಂದ್ರೆ ಬೀದಿಪಾಲಾಗೋ ದಿನ ದೂರವಿಲ್ಲ ಎಂದು ತಿಳಿದುಕೊಳ್ಳಿ.
ನೀವು ನೋಡಿರಬಹುದು ನಿಮ್ಮ ಸುತ್ತಮುತ್ತಲಿನ ಕೆಲವರನ್ನು. ಯಾರು ಅಸತ್ಯ, ಅನೀತಿ, ಅನ್ಯಾಯದಿಂದ ಜೀವಿಸುತ್ತಿರುತ್ತಾರೋ ಅವರು ಯಾವಾಗಲೂ ಇದ್ದಂಗೇನೆ ಇರುತ್ತಾರೆ. ಮತ್ತೆ ಅವರು ಮೋಸ, ವಂಚನೆ ಮಾಡಲಿಲ್ಲಾಂದ್ರೆ ಅವರ ಜೀವನ ಸಾಗುವುದೇ ಇಲ್ಲ. ಆದರೆ ಸತ್ಯವಂತರಾಗಿ ಜೀವಿಸುವವರು ಜೀವನದ ಮೆಟ್ಟಿಲುಗಳನ್ನು ಏರುತ್ತಲೇ ಹೋಗುತ್ತಾರೆ. ಎಲ್ಲರೂ ತಲೆ ಎತ್ತಿ ಅವರನ್ನು ನೋಡಬೇಕು ಹಾಗೆ ಬಾಳುತ್ತಿರುತ್ತಾರೆ.
ನಿಮ್ಮ ಯಶಸ್ಸಿನ ಗುಟ್ಟೇನು ಎಂದು ಅವರನ್ನು ಕೇಳಿದರೆ. ತುಂಬಾ ಕಷ್ಟಪಟ್ಟಿದ್ದೇನೆ ಈ ಲೆವೆಲ್ಗೆ ಬರಬೇಕಾದ್ರೆ ಅಂತಾರೆ. ಆದರೆ ಕೆಲವರು ಕಷ್ಟಪಡದೇ ಮೇಲೆ ಬಂದಿರುತ್ತಾರೆ. ಆಮೇಲೆ ದಬಕ್ಕನೇ ಕೆಳಗೆ ಬೀಳುತ್ತಾರೆ. ಎಲ್ಲರೂ ಇದೇ ಸಮಯಕ್ಕೆ ಕಾಯುತ್ತಿರುತ್ತಾರೆ. ಇಂಥವರ ಅಂತ್ಯಕ್ಕೆ. ಆದ್ದರಿಂದ ಕಷ್ಟಪಟ್ಟು ಶಾಶ್ವತವಾಗಿ ಮೇಲೆ ಬರಬೇಕೋ ಅಥವಾ ಅಡ್ಡದಾರಿಯಿಂದ ಮೇಲೇರಿ ಹಂಗೇನೇ ಮೇಲೆ ಹೋಗಬೇಕೊ ಎಂಬುದು ನಿಮಗೆ ಬಿಟ್ಟಿದ್ದು.
ಜಾತಕ ಚೆಕಪ್ ಮಾಡಿಸಿ : ನಮ್ಮ ಸಮಾಜದಲ್ಲಿ ದೊಡ್ಡ ಹೆಸರು ಮಾಡುವುದು ಏನೂ ದೊಡ್ಡ ವಿಷಯವಲ್ಲ. ಆದರೆ ಯಾವ ರೀತಿ ಹೆಸರಾಗಿದೆ ಎಂದು ನೋಡಿಕೊಳ್ಳಬೇಕಷ್ಟೆ. ಇಲ್ಲಾಂದ್ರೆ ಹೇಳ ಹೆಸರಿಲ್ಲದಂತಾಗಬೇಕಾಗುತ್ತದೆ. ವಯಸ್ಸು ಮೂವತ್ತಾದ ಮೇಲೆ ಹೇಗೆ ಹೆಲ್ತ್ ಚೆಕ್ ಅಪ್ ಮಾಡಿಸಿಕೊಂಡಿರುತ್ತೇವೆಯೋ ಹಾಗೆಯೇ. ಮಕ್ಕಳು ಹುಟ್ಟುತ್ತಲೇ ಅವರ ಜಾತಕ ಚೆಕ್ ಅಪ್ ಮಾಡಿಸಿಟ್ಟುಕೊಳ್ಳಬೇಕು. ಯಾವತ್ತೂ ನಮ್ಮ ಜಾತಕವೇ ನಮ್ಮೆಲ್ಲ ಜೀವನದ ಲಕ್ಷಣಗಳನ್ನು ತಿಳಿಸುವುದರಿಂದ ಮುಂಜಾಗ್ರತೆ ವಹಿಸುವುದು ಧರ್ಮ. ಇಲ್ಲಾಂದ್ರೆ ಕರ್ಮ ಎಂದುಕೊಳ್ಳಬೇಕು ಅಷ್ಟೆ.
ಜಾತಕ ಮಾಹಿತಿಯು ಪರ್ಸನಲ್ ವಿಷಯವಾಗಿರುವದರಿಂದ ಹೆಚ್ಚಿನ ಜನರು ಈ ಬಗ್ಗೆ ಮಾತನಾಡುವುದಿಲ್ಲ. ಆದ್ದರಿಂದ ಎಷ್ಟೋ ಜನರು ಜಾತಕದಿಂದ ಜೀವನದ ಗುಟ್ಟು ತಿಳಿದುಕೊಂಡು ಬುದ್ಧಿವಂತರಾಗುತ್ತಾರೆ. ಆದರೆ ಇತರರಿಗೆ ನಿಮ್ಮ ಜಾತಕ ತಿಳಿದುಕೊಂಡು ಉತ್ತಮವಾಗಿ ಜೀವನ ಸಾಗಿಸಿ ಎಂದು ಹೇಳುವಷ್ಟು ದೊಡ್ಡ ಬುದ್ಧಿ ಇರುವುದಿಲ್ಲ ಕೆಲವರಿಗೆ. ನೀಚ ಬುದ್ಧಿನೇ ಹೆಚ್ಚಿರುತ್ತದೆ. ಆದರೆ ನೀಚ ಬುದ್ಧಿಯವರಿಗೆ ಅವರ ಜಾತಕ ಎಷ್ಟೇ ಚೆನ್ನಾಗಿರಲಿ ಶನಿ ಮಾತ್ರ ಅವರಿಗೆ ನೀಚನಾಗುತ್ತಾನೆ.
ಇನ್ನು ಶನಿಕಾಟದ ಬಗ್ಗೆ ಹೇಳಿದರೆ ಮೂಢನಂಬಿಕೆ ಎನ್ನುತ್ತಾರೆ ಕೆಲವರು. ಅಂಥವರಿಗೆ ಸತ್ಯವಂತ, ನ್ಯಾಯವಂತರಾಗಿ ಜೀವನ ಮಾಡಿ ಇಲ್ಲಾಂದ್ರೆ ಶನಿದೇವನು ನಿಮ್ಮನ್ನು ಬಿಡಲ್ಲ ಎಂದು ಹೇಳಿದರೆ ಅವರೆದೆಗೆ ಒದ್ದಂಗಾಗುತ್ತಿರಬಹುದು. ಶನಿಕಾಟದ ಬಗ್ಗೆ ಮೂಢನಂಬಿಕೆ ಎನ್ನುವವರು ಗುಂಡಿಗೆ ಗಟ್ಟಿ ಇದ್ದರೆ ಮಹಾರಾಷ್ಟ್ರದ ಶನಿ ಶಿಂಗನಾಪೂರಕ್ಕೆ ಹೋಗಿ ಒಂದು ಚಿಕ್ಕದಾದ ವಸ್ತುವನ್ನು ಕಳ್ಳತನ ಮಾಡಿಕೊಂಡು ತಮ್ಮೂರಿಗೆ ಬಂದು ತೋರಿಸಲಿ!
ಯಾಕೆಂದ್ರೆ ಶನಿಕಾಟವನ್ನು ನಾನ್ಸೆನ್ಸ್ ಎಂದವರು ಸೆನ್ಸ್ಲೆಸ್ ಆಗಿ ಸ್ಟಾಪ್ ಸ್ಟಾಪ್ಗಳಲ್ಲಿ ಕೈಯೊಡ್ಡುತ್ತ ಅವರಿವರಿಂದ "ಹೆಂಗೈತೆ ಮೈಗೆ" ದುಡಕೊಂಡು ತಿನ್ನೋಗೋ ಎನ್ನಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಏನಂತೀರಿ?
ಮೀನ ರಾಶಿಗೆ ಶನಿಪ್ರಭಾವ ಹೇಗೆ? ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಈಶಾನ್ಯ ದಿಕ್ಕಿನಲ್ಲಿ ಶೌಚಾಲಯ ನಿರ್ಮಿಸಬಾರದು.
ಶನಿದೇವನ ಕೃಪೆಗೆ : ಶನಿಕಾಟವಿರುವವರು ಶನಿ ಪ್ರದೋಷ ಸಮಯದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿಸಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)