ಸೀನಿಯರ್ ಸಿಟಿಜನ್ ಮೇಲೆ ಶನಿರಾಯರ ಪ್ರಭಾವ
50ನೇ ವಯಸ್ಸಿನಿಂದ 70 ವಯಸ್ಸಿನೊಳಗಿನವರ ಜೀವನದಲ್ಲಿ ಶನಿದೇವನ ಏಳರಾಟದ ಪ್ರಭಾವ ತುಂಬಾ ಕ್ಲಿಷ್ಟಕರವಾಗಿರುತ್ತದೆ. ಈ ವಯಸ್ಸಿನ ಕೆಲವರಿಗೆ ಎರಡನೇ, ಮತ್ತೊಂದಿಷ್ಟು ಜನರಿಗೆ ಮೂರನೇ ಹಂತದಲ್ಲಿ ಏಳರಾಟ ಶುರುವಾಗಿರುತ್ತದೆ.
ಏಳರಾಟದ ಹಂತಗಳನ್ನು ದಾಟಿ ಒಮ್ಮೆ ಶನಿದೇವನ ಸುಳಿಯಲ್ಲಿ ಸಿಲುಕಿ ಅದರ ಅನುಭವ ಪಡೆದಿರುತ್ತಾರೆ ಇವರು. ಆದರೂ ಕೆಲವರು ಬುದ್ಧಿ ಕಲಿಯದೆ ಇರುವುದರಿಂದ ಎರಡು, ಮೂರನೇ ಹಂತದಲ್ಲಿ ಸಿಕ್ಕಾಪಟ್ಟೆ ನೋವು ಉಂಡು ಮುಖ ಮರೆಸಿಕೊಂಡು ಓಡಾಡುವಂಗಾಗಿರುತ್ತಾರೆ.
"ಸೀನಿಯರ್ ಸಿಟಿಜನ್" ಆಗುವ ಈ ಹಂತದಲ್ಲಿ ದುಡಿಯದೇ ಹೊಟ್ಟೆ ತುಂಬುವುದಿಲ್ಲ ಕೆಲವರಿಗೆ. ಅಂತಹ ಪರಿಸ್ಥಿತಿಯನ್ನು ತಾವೇ ತಂದುಕೊಂಡಿರುತ್ತಾರೆ. ಏಕೆಂದರೆ ಹಿಂದಿನ ಹಂತದ ಏಳರಾಟದಲ್ಲಿ ಎಲ್ಲವನ್ನೂ ಕಲಿಸಿದ ಶನಿದೇವನು, ಎರಡನೇ, ಮೂರನೇ ಹಂತದಲ್ಲಿ ಬಂದಾಗ ಮಾಡಿದ ತಪ್ಪೆಲ್ಲವುಗಳನ್ನು ಮತ್ತೊಮ್ಮೆ ಲೆಕ್ಕ ಸಮೇತ ಚುಕ್ತಾ ಮಾಡಲು ಶುರು ಮಾಡುತ್ತಾನೆ. ಮೊದಲನೇ ಹಂತದಲ್ಲಿ ಬಂದಂತೆಯೇ ಮತ್ತೊಮ್ಮೆ ಬಂದೇ ಬರುತ್ತಾನೆ ಶನಿದೇವನು. [ಶನಿದೇವರಿಗೇಕೆ ಎಳ್ಳೆಣ್ಣೆ ಅಭಿಷೇಕ?]
ನೀವು ನೋಡಿರಬಹುದು. ಕೆಲ ಮನೆಗಳಲ್ಲಿ ವಯಸ್ಸಾದ ತಂದೆ-ತಾಯಿಗಳನ್ನು ಬೇಜವಾಬ್ದಾರಿ ಮಕ್ಕಳು ಬೀದಿಪಾಲು ಮಾಡಿರುತ್ತಾರೆ. ಮನೇಲಿದ್ದ ಹಿರಿಯರಿಗೆ ಊಟವನ್ನೂ ಕೂಡ ಸರಿಯಾಗಿ ಹಾಕದಿರುವಂತಹ ಬುದ್ಧಿಜೀವಿ ಮನುಷ್ಯರು ಇಂದಿಗೂ ನಮ್ಮಲ್ಲೇ ಇದ್ದಾರೆ. ಆದರೆ, ಇದೂ ಕೂಡ ಶನಿಪ್ರಭಾವ ಎಂಬುದನ್ನು ಮನೆಯವರು ತಿಳಿದುಕೊಂಡಿರುವುದಿಲ್ಲ.
ಇನ್ನು ಕೆಲ ಮಕ್ಕಳು ತಮ್ಮ ಹಿರಿಯರ ಹಠಮಾರಿತನದಿಂದ ಬೇಸತ್ತು ಅವರನ್ನು ಮನೆಯಿಂದಲೇ ಓಡಿಸಿರುತ್ತಾರೆ. ಅಥವಾ ಅವರೆ ಓಡಿ ಹೋಗುವಂಗೆ ಮಾಡಿರುತ್ತಾರೆ. ರಿಟಾರ್ಯ್ಡ ಆದ ವಯಸ್ಸಾದ ಕೆಲವರು ತಮಗೆ ಬರುವ ಕಿಂಚಿತ್ ಪಿಂಚಣಿ ಹಣವನ್ನು ನಂಬಿಕೊಂಡಿರುತ್ತಾರೆ. ಆದರೆ ಊರೆಲ್ಲಾ ಹಿರಿತನ ಮಾಡುವುದನ್ನು ಇವರು ಬಿಟ್ಟಿರುವುದಿಲ್ಲ. ಹೀಗಾಗಿ ಇವರ ಮಕ್ಕಳು ಇವರನ್ನು ದೂರ ಮಾಡಿ ತಾವು ಅನಾಥರಂತಿದ್ದರೂ ಚಿಂತೆಯಿಲ್ಲ ಎನ್ನುತ್ತಿರುತ್ತಾರೆ. [ಗೋಸುಂಬೆ ತರಹ ಆಡಿದರೆ...]
ಇದಕ್ಕೆಲ್ಲಾ ಕಾರಣ ವಯಸ್ಸಾದ ಇವರು ಮಾಡುವ ಹಠಮಾರಿತನ. ಹೀಗಾಗಿ ಬಂದ ಪಿಂಚಣಿ ಹಣದಲ್ಲೇ ಒಂದೊಂದು ರೂಪಾಯಿ ಎಣಿಸಿಕೊಂಡು ಹುಷಾರಾಗಿ ಖರ್ಚು ಮಾಡುತ್ತ ಜೀವನದ ಕೊನೆಯ ದಿನಕ್ಕಾಗಿ ಕಾಯುತ್ತಿರುತ್ತಾರೆ ಇಂತಹ ವಯಸ್ಸಾದವರು. ಇರಲಿ, ದೇವರು ಯಾರಿಗೆಲ್ಲಿ ಇಡಬೇಕೋ ಅಲ್ಲೇ ಇಟ್ಟಿದ್ದಾನೆ ಎಂಬುದು ನಮಗೆ ಗೊತ್ತಿರುವುದರಿಂದ ಇಂಥವರಿಗಾಗಿ ಮರುಗಬೇಕಾಗುವ ಅವಶ್ಯಕತೆಯಿಲ್ಲ. ಮಾಡಿದ ಕರ್ಮ ಉಣ್ಣಬೇಕು. "ಏಕೆಂದರೆ ವಯಸ್ಸಾದ ಮೇಲೆ ನಾವು ಬಾಗುವುದಿಲ್ಲ ಎಂದರೂ ಕೂಡ, ದೇವರೆ ದೇಹ ಹಣ್ಣಾಗಿಸಿ ಬೆನ್ನನ್ನು ಬಾಗಿಸಿಯೇ ನಡೆಯುವಂಗಾಗಿಸಿರುತ್ತಾನೆ.
ನೀವು ನೋಡಿರಬಹುದು, ಸಾಕಷ್ಟು ಭಿಕ್ಷುಕರು ವಯಸ್ಸಾದವರೇ ಇರುತ್ತಾರೆ. ದುಡಿಯದೇ ಆರಾಮಾಗಿ ಜೀವನ ಕಳೆಯಬೇಕಾದ ಇಳಿ ವಯಸ್ಸಿನಲ್ಲಿ ಮತ್ತೊಬ್ಬರ ಮುಂದೆ ಕೈಯೊಡ್ಡದೆ ಬದುಕಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಕೆಲವರಿಗೆ ಬಂದಿರುತ್ತದೆ. ಆದ್ದರಿಂದ ನಮ್ಮ ದೇಹ ಗಟ್ಟಿಯಿದ್ದಾಗ ಯಾರಿಗೂ ಒಂದಿನಿತೂ ತೊಂದರೆ ಮಾಡಬಾರದು ಎನ್ನುವುದು. "ಅದ್ಯಾಕೆ ಸಾಮಿ, ನಾಳೆ ಯಾರ ನೋಡಿದಾರೋ" ಎನ್ನುತ್ತಾರೆ ಕೆಲವರು. ಅಂಥವರನ್ನು ನೋಡಿದರೆ "ಇವರು ಮುದಿ ವಯಸ್ಸಿನಲ್ಲಿ ನಮ್ಮಂಥವರ ಮುಂದೆ ಸಪ್ಪೆ ಮುಖ ಮಾಡಿಕೊಂಡು ಕೈ ಮುಂದೆ ಮಾಡಿ ಗೇಣು ಹೊಟ್ಟೆಗೆ ಏನಾದ್ರೂ ಕೊಡಿ ಸಾಮಿ" ಎನ್ನಲು ಸಿದ್ಧರಾಗಿಯೇ ಇದ್ದಾರಲ್ಲಾ ಎಂದು ನಮ್ಮಷ್ಟಕ್ಕೆ ನಾವೇ ಗೊಣಗಿಕೊಳ್ಳಬೇಕಾಗುತ್ತದೆ.
ಇನ್ನು ಕುಡಿತ ಮತ್ತು ಧೂಮಪಾನ ಚಟವಿದ್ದವರಂತೂ ಎರಡನೇ ಹಂತದ ಏಳರಾಟದಲ್ಲಿ ತಮ್ಮಾಟ ಮುಗಿಸಲು ಸಜ್ಜಾಗಿರುತ್ತಾರೆ. ಮನೆಯವರು ಕೂಡ ಅವರನ್ನು ಮರೆಯಲು ಮನಸ್ಸನ್ನು ಗಟ್ಟಿ ಮಾಡಿಕೊಂಡಿರುತ್ತಾರೆ. ಎಲ್ಲಾ ದೈವೇಚ್ಛೆ ಎಂದು ಸ್ವತಃ ಅಧಃಪತನಕ್ಕೆ ಕಾರಣರಾಗುತ್ತಾರೆ ಕೆಲ ಚಟವಂತರು. ಆದರೆ ಚಟ ಹಿಡಿಯುವುದು ಕೂಡ ಶನಿಕಾಟ ಎಂಬುದು ಇವರಿಗೆ ಗೊತ್ತಿರುವುದಿಲ್ಲ.
ಇನ್ನು ಮಕ್ಕಳಿದ್ದಾಗಲೇ ಹಣದ ಉಳಿತಾಯ ತಿಳಿದುಕೊಂಡಿರಬೇಕು. ಮುಂದಿನ ಮಧ್ಯ ವಯಸ್ಸಿನಲ್ಲಿ ಕನಿಷ್ಠ ಆರೋಗ್ಯ ಕಾಪಾಡಿಕೊಳ್ಳಲಾದರೂ ಹಣ ಬೇಕು ಎಂದು ಈಗಿನ ಹರೆಯದವರು ತಿಳಿದುಕೊಂಡರೆ ಸಾಕು. ಯಾಕೆಂದರೆ ಜೀವನದಲ್ಲಿ "ಏಳು-ಬೀಳು" ಇದ್ದದ್ದೇ. ಆದರೆ ಮುಠಾಳತನದಿಂದ ಶನಿದೇವನ ಪ್ರಭಾವವನ್ನು ಹೀಯಾಳಿಸಿ ಜೀವನದುದ್ದಕ್ಕೂ ಬೀಳುವುದನ್ನು ಮಾಡುವವರು ಶತಮೂರ್ಖರು ಎನ್ನಲಡ್ಡಿಯಿಲ್ಲ.
ವಯಸ್ಸಾದ ಮೇಲೆ ಎಲ್ಲರಿಗೂ ಕಣ್ಣಿನ ಪೊರೆ ಬರಲೇಬೇಕು. ಹೀಗಾಗಿ ಈ ವಯಸ್ಸಿನವರು ದೇಹದ ಆರೋಗ್ಯ ಕಾಪಾಡಿಕೊಳ್ಳುವುದನ್ನೇ ಉದ್ಯೋಗ ಮಾಡಿಕೊಂಡರೆ ಸಾಕು. ಇಲ್ಲಾಂದ್ರೆ ಕೈಗೊಂದು, ಕಾಲಿಗೊಂದು ಆಳು ಬೇಕಾಗುತ್ತದೆ. ಚಿಕಿತ್ಸೆಯಿಲ್ಲದೆ ಜೀವನದಾಟ ಮುಗಿಸುವವರು ಇಂದು ಕೈ ಬೆರಳೆಣಿಕೆಯಷ್ಟಿದ್ದಾರೆ. ಆದ್ದರಿಂದ ಹರೆಯದಲ್ಲಿದ್ದಾಗಲೇ ಮುದಿ ವಯಸ್ಸಿನಲ್ಲಿ ಬರುವಂತಹ ರೋಗ-ರುಜಿನಗಳ ಬಗ್ಗೆ ಮುನ್ಸೂಚನೆ ತಿಳಿದುಕೊಂಡು ಈಗಿನಿಂದಲೇ ಜಾಗೃತೆ ಮತ್ತು ಎಚ್ಚರಿಕೆ ವಹಿಸಿಕೊಳ್ಳಬೇಕು ಎಲ್ಲ ರಾಶಿಗಳವರು. ಶನಿದೇವನು ಕೊನೆಯ ಹಂತದಲ್ಲಿ ಮುಕ್ತಿಯನ್ನೂ ನೀಡುವುದರಿಂದ ಸ್ವಲ್ಪ ಹುಷಾರಾಗಿಯೇ ಎಲ್ಲರೊಂದಿಗೆ ವ್ಯವಹರಿಸಬೇಕು.
ನಿಮಗೆ ಗೊತ್ತಿರಬಹುದು, ವಯಸ್ಸಾದವರಿಗೆ ಯಾರೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ಕೂಡ ಕೊಡುವುದಿಲ್ಲ. ಇದೇ ರೀತಿ ಶನಿದೇವನು ವಯಸ್ಸಾದ ಮೇಲೆ ಕಣ್ಣಿಡುವುದೇ ಆರೋಗ್ಯದ ಮೇಲೆ. ಸುಖಾಸುಮ್ಮನೇ ಶನಿದೇವನು ಯಾರಿಗೂ ಶಿಕ್ಷೆ ಕೊಡುವುದಿಲ್ಲ. ಆದರೆ ಮಾಡಿದ ತಪ್ಪಿಗೆ ಶಿಕ್ಷೆಯಂತೂ ಕೊಡಲೇ ಬೇಕಲ್ಲ ಮಹಾತ್ಮನು. ಆದ್ದರಿಂದ ಶನಿಪ್ರಭಾವದಲ್ಲಿರುವ ಈ ವಯಸ್ಸಿನವರು ಮೊದಲು ಶನಿ ಕಾಡಾಟಕ್ಕೆ ಸಂಬಂಧಿಸಿದ ಸೂಕ್ತ ಪರಿಹಾರೋಕ್ತಿಗಳನ್ನು ಜನ್ಮ ಜಾತಕ ಪರಿಶೀಲನೆ ಮಾಡಿಸಿಕೊಂಡು ಜೀವನದ ಕೊನೆಯ ಅಧ್ಯಾಯದಲ್ಲಿ ನೆಮ್ಮದಿ ಕಂಡುಕೊಳ್ಳಬೇಕು.
ಜನ್ಮಜಾತಕ ಪರಿಶೀಲಿಸುವ ನಮ್ಮನ್ನು ಏನೂ ಅರ್ಥವಾಗದ ಕೆಲವರು ವಿಸ್ಮಯದಂತೆ ದಿಟ್ಟಿಸಿ ನೋಡುತ್ತಿರುತ್ತಾರೆ. ಏನಿದು ಎಲ್ಲವನ್ನೂ ನಿಖರವಾಗಿಯೇ ಇವರು ಹೇಳುತ್ತಾರಲ್ಲ ಎಂದು ನಮಗೆ ಮನದಲ್ಲೇ ನಮಸ್ಕರಿಸುತ್ತಿರುತ್ತಾರೆ. ಆದರೆ ನಾವೇನೂ ದೈವಾಂಶ ಸಂಭೂತ ಪವಾಡ ಪುರುಷರಲ್ಲ.
ಗಿಟಾರ್, ವಯೋಲಿನ್, ತಬಲಾ ನುಡಿಸುವವರು, ಕಂಪ್ಯೂಟರ್ನ ಇಂಗ್ಲಿಷ್ ಕೀ ಬೋರ್ಡ್ನಲ್ಲಿ ಸಿಕ್ಕಾಪಟ್ಟೆ ಸ್ಪೀಡ್ ಆಗಿ ಕನ್ನಡ ಟೈಪ್ ಮಾಡುವ ವ್ಯಕ್ತಿಯನ್ನು ನೋಡಿ ಏನು ಪ್ರತಿಭೆನಪ್ಪಾ ಇವರದು ಎಂದು ಮನದುಂಬಿ ಹೊಗಳುತ್ತಾರೆ. ಆದರೆ ಕಂಪ್ಯೂಟರ್ನಲ್ಲಿ ಟೈಪಿಂಗ್ ಮಾಡುವುದು ಕೂಡ ಸಂಗೀತ ನುಡಿಸಿದಂತೆಯೇ ಎಂಬ ಅದ್ಭುತ ವಿಷಯ ಅವರ ಮನದಲ್ಲಿ ಹೊಳೆದಿರುವುದಿಲ್ಲ. ಇದೇ ರೀತಿ ನಮ್ಮಲ್ಲಿರುವ ಈ ಜಾತಿಯಿಂದ ಬಂದ ವಿದ್ಯೆಯೆನ್ನಬಹುದು. ಇದಕ್ಕೇನೂ ಆಶ್ಚರ್ಯಪಡಬೇಕಿಲ್ಲ.
"70ರಿಂದ 90 ವಯಸ್ಸಿನವರಿಗೆ ಶನಿ ಪ್ರಭಾವ" ಎಂಬುದು ಮುಂದಿನ ಲೇಖನದಲ್ಲಿ (ಒನ್ಇಂಡಿಯಾ)
ವಾಸ್ತು ಟಿಪ್ಸ್ : ಮನೆಯಲ್ಲಿ ನಾಸ್ತಿಕರನ್ನು ಸೇರಿಸಬೇಡಿ.
ಶನಿಕೃಪೆಗೆ : ಹರಿದ ಮತ್ತು ಹೊಲಸಾದ ಬಟ್ಟೆಗಳನ್ನು ಧರಿಸಬಾರದು. ಧರಿಸುತ್ತೇನೆ ಎಂದು ಮೊಂಡುತನ ಮಾಡಿದರೆ ದರಿದ್ರತನ ಶುರುವಾಗಿದೆ ಎಂದರ್ಥ.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)