ಸಾಡೇಸಾತಿ : ಶನಿರಾಜನ ಪೂಜಿಸುವುದು ಹೀಗೆ
ಶನಿರಾಜನು ಬೀರುವ ಪ್ರಭಾವವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಶನಿದೇವನ ಪ್ರಕೋಪವನ್ನು ತಡೆದುಕೊಳ್ಳುವ ಶಕ್ತಿಯನ್ನು ನಾವು ಶನಿರಾಜನನ್ನು ಪೂಜಿಸುವುದರಿಂದ ಪಡೆದುಕೊಳ್ಳಬಹುದು. ಶನಿರಾಯನನ್ನು ಸಂಪ್ರೀತಿಗೊಳಿಸುವ ಪರಿಯನ್ನು ಪೇನ್ ಕಿಲ್ಲರ್ಗೆ ಹೋಲಿಸಬಹುದು. ದೇಹಕ್ಕೆ ನೋವಾದಾಗ ಪೇನ್ ಕಿಲ್ಲರ್ ತೆಗೆದುಕೊಂಡರೆ ನಮಗೆ ನೋವಿನ ಅನುಭವ ಗೊತ್ತಾಗಲ್ಲ. ಅದೇ ರೀತಿ ಮನಸಿಗೆ ನೋವಾಗಿದ್ದರೆ ಯಾವ ಪೇನ್ ಕಿಲ್ಲರ್ ತೆಗೆದುಕೊಳ್ಳಲು ಸಾಧ್ಯ? ಹೀಗಾಗಿ ಶನಿದೇವನ ಬಲವನ್ನು ಪಡೆದುಕೊಂಡಿದ್ದರೆ ಯಾವುದೇ ತರಹದ ನೋವಿದ್ದರೂ ಕಮ್ಮಿಯಾಗುತ್ತದೆ.
ಶನಿದೇವನನ್ನು ಸಂಪ್ರೀತಿ ಮಾಡಿಕೊಂಡಿರೆಂದರೆ, ದೊಡ್ಡ ಕಲ್ಲು ಮೈಮೇಲೆ ಬಿದ್ದರೂ ಹೂವು ಬಿದ್ದಂಗೆ ಭಾಸವಾಗುತ್ತದೆ! ಇದುವೇ ಶನಿ ಸಂಪ್ರೀತಿಯಿಂದಾಗುವ ಲಾಭ. ಅಷ್ಟಕ್ಕೂ ಜಾತಕದಲ್ಲಿನ ಭಾವ ಕುಂಡಲಿ ನೋಡಿದರೆ ಮಾತ್ರ ಶನಿದೇವನ ಸ್ಥಿತಿಗತಿ ಗೊತ್ತಾಗುತ್ತದೆ. ಜನ್ಮಜಾತಕದಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ. ಭಾವ ಕುಂಡಲಿ ಮಾತ್ರ ನಿಖರವಾದ ಫಲಿತಾಂಶ ತಿಳಿಸುತ್ತದೆ.
ಇನ್ನು ಶನಿವಾರದಂದು ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕ ಮತ್ತು ಎಳ್ಳೆಣ್ಣೆ ಬತ್ತಿ ಹಚ್ಚಬೇಕು. ಕೆಲವರು ತೆಂಗಿನಕಾಯಿ ಒಡೆಯುವುದು, ಊದಬತ್ತಿ ಹಚ್ಚುವುದು ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಇದ್ಯಾವುದು ಶನಿದೇವರಿಗೆ ಬೇಕಾಗಿಲ್ಲ. ಶನಿದೇವರ ದೇವಸ್ಥಾನಗಳು ಇಲ್ಲದಲ್ಲಿ ನವಗ್ರಹಗಳಲ್ಲಿರುವ ಶನಿದೇವರನ್ನು ಪೂಜಿಸಬೇಕು. ಕೆಲವರು ಶನಿದೇವರನ್ನು ಪೂಜಿಸಬಾರದು ಅಂತಾರೆ. ಹಾಗಾದರೆ ನವಗ್ರಹ ಪೂಜೆ ಮಾಡುವಾಗ ಕೂಡ ಅವರು ಶನಿದೇವರನ್ನು ಪೂಜಿಸಬಾರದು.
ಅಮವಾಸ್ಯೆ ದಿನದಂದು ಸಾಡೇಸಾತಿಯಲ್ಲಿನ ರಾಶಿಗಳವರು ತಪ್ಪಿಸದೇ ಈಶ್ವರನ ದೇವಸ್ಥಾನಕ್ಕೆ ಹೋಗಬೇಕು. ಏಕೆಂದರೆ ಶನಿದೇವನು ಈಶ್ವರನ ಪರಮ ಭಕ್ತ. ಜಗದೀಶ್ವರನ ದರ್ಶನದಿಂದ ಅಕಾಲಿಕ ಮರಣ, ಅಪಘಾತ ತಪ್ಪುತ್ತವೆ. ಈಶ್ವರನನ್ನೇ ಮರೆತರೆ ಶನೀಶ್ವರ ಗಂಟು ಬೀಳುತ್ತಾನೆ ಅಷ್ಟೆ.
ಶನೀಶ್ವರನನ್ನು ಸಾಮಾನ್ಯವಾಗಿ ಮನೆಯಲ್ಲಿ ಪೂಜಿಸುವುದಿಲ್ಲ. ಆದ್ದರಿಂದ ದೇವಸ್ಥಾನಗಳಲ್ಲಿಯೇ ಪೂಜಿಸಬೇಕಾಗುತ್ತದೆ. ಅಲ್ಲಿ ಪೂಜಿಸಲೆಂದೇ ಪಂಡಿತರು ಇರುತ್ತಾರೆ. ಆ ಸಮಯದಲ್ಲಿ ಎಳ್ಳೆಣ್ಣೆ ಅಭಿಷೇಕಕ್ಕೆ ಕೊಡಬೇಕು. ಅಭಿಷೇಕ ಮಾಡಿದ ಎಳ್ಳೆಣ್ಣೆಯನ್ನು ಪ್ರತಿ ಶನಿವಾರ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಬೇಕು. ಕೈ-ಕಾಲು ನೋವಿದ್ದರೆ ಅಲ್ಲಿಗೂ ಹಚ್ಚಬೇಕು. ಪವಾಡ ಸದೃಶ ರೀತಿಯಲ್ಲಿ ನೋವು ಮಾಯವಾಗುತ್ತದೆ.
ಇನ್ನು ಶನಿದೇವನ ಕಾಡಾಟಕ್ಕೆ ಸೂಕ್ತವಾದ ಪರಿಹಾರ ತಿಳಿದುಕೊಳ್ಳದೆ ತಮಗೆ ತಿಳಿದಿದ್ದನ್ನೇ ಕೆಲವರು ಮಾಡುತ್ತಿರುತ್ತಾರೆ. ಇದೂ ಕೂಡ ಶನಿದೇವನನ್ನು ಉಗ್ರಗೊಳಿಸುತ್ತದೆ. ಆದ್ದರಿಂದ ಶನಿ ಕಾಡಾಟದಲ್ಲಿ ಜಾತಕ ಮೂಲಕ ಕರೆಕ್ಟ್ ಆಗಿರುವ ಪರಿಹಾರಗಳನ್ನು ತಿಳಿದುಕೊಳ್ಳಬೇಕು. ಕೆಲವರಿಗೆ ಶನಿದೇವರ ದೇವಸ್ಥಾನಕ್ಕೆ ಹೋಗಲೂ ಕೂಡ ಭಯ. ಇಂಥವರು ಗಣೇಶ, ಹನುಮನ ದೇವಸ್ಥಾನಕ್ಕೆ ಹೋಗಬಹುದು. ಆದರೆ ದೇವರಿಗೆ ಬೇಡಿಕೊಳ್ಳುವ ಪದ್ಧತಿ ಇದೆ. ಅದೇ ರೀತಿ ಬೇಕಾದ್ದನ್ನು ಪ್ರಾಮಾಣಿಕವಾಗಿ ದೇವರಲ್ಲಿ ಕೇಳಿಕೊಳ್ಳಬೇಕು.
ತಾಯಿಯೊಂದಿಗೆ ಮಕ್ಕಳು ಹಠ ಮಾಡುವ ತರಹ, ದೇವರಲ್ಲಿ ನಾವು ಹಠ ಮಾಡಬೇಕು. ಸತ್ಯವಂತ, ನ್ಯಾಯವಂತನಾಗಿರುವ ನನ್ನ ಸಮಸ್ಯೆಗಳನ್ನು ಪರಿಹಾರ ಮಾಡಲೇಬೇಕು ಎಂದು ದೇವರಲ್ಲಿ ಕೇಳಿಕೊಳ್ಳಬೇಕು. ಸತ್ಯವಂತ, ನ್ಯಾಯವಂತರಾಗಿದ್ದರೆ ಮಾತ್ರ ನಮಗೆ ಲಾಭ. ಇಲ್ಲವಾದರೆ ದೇವರ ಶಿಕ್ಷೆಯನ್ನು ಅನುಭವಿಸದೇ ವಿಧಿಯಿಲ್ಲ!
"ನಕ್ಷತ್ರಗಳಿಂದ ನಮ್ಮ ಭವಿಷ್ಯ" ಎಂಬುದು ಮುಂದಿನ ಲೇಖನದಲ್ಲಿ. (ಒನ್ಇಂಡಿಯಾ ಕನ್ನಡ)
ವಾಸ್ತು ಟಿಪ್ಸ್ : ಮನೆಯ ಉತ್ತರ ಭಾಗಕ್ಕಿಂತ ದಕ್ಷಿಣದ ಭಾಗದಲ್ಲಿ ಸಸಿಗಳನ್ನು ನೆಡಬೇಕು.
ಶನಿದೇವನ ಕೃಪೆಗೆ : ಶನಿವಾರದಂದು ಬನ್ನಿ ಮರಕ್ಕೆ ಪೂಜೆ ಸಲ್ಲಿಸಬೇಕು.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)