19ರಿಂದ 30 ವರ್ಷದವರ ಸಾಡೇಸಾತಿ ಹೀಗೆ
"ಹಣ್ಣೆಲೆ ಉದುರೋವಾಗ, ಹಸಿರೆಲೆ ನಗುತ್ತಿತ್ತಂತೆ" ಎಂಬ ಗಾದೆಮಾತು ಸಾಡೇಸಾತಿಯಲ್ಲಿ ಕಷ್ಟಪಡುವವರಿಗೆ ಅನ್ವಯಿಸುತ್ತದೆ. ಹೇಗೆಂದರೆ ಯಾರು ಶನಿದೇವನಿಂದ ತೊಂದರೆಯಲ್ಲಿ ಸಿಕ್ಕಿಕೊಂಡು ವಿಲವಿಲ ಒದ್ದಾಡುತ್ತಿರುತ್ತಾರೋ, ಅಂಥವರನ್ನು ನೋಡಿ ಕೆಲ ಕೆಟ್ಟ ಬುದ್ಧಿಯವರು ಮುಸಿ ಮುಸಿ ನಗುತ್ತಿರುತ್ತಾರೆ. ಆದರೆ ತಮಗೂ ಒಂದಿನ ಶನಿದೇವನ ಸಾಡೇಸಾತಿ ಕಾದಿದೆ ಎಂಬ ಅರಿವು ಆ ದುಷ್ಟ ಬುದ್ಧಿಯವರಿಗಿರಲ್ಲ. ತಮಗೂ ಶನಿರಾಯನ ಸಾಡೇಸಾತಿ ಬಂದಾಗ ಎಲ್ಲವೂ ಅರ್ಥವಾಗುತ್ತದೆ. ದುರ್ಬುದ್ಧಿಯಿಂದ ಏನೇನು ಮಾಡಿದ್ದರೋ ಅವೆಲ್ಲವೂ ದುಪ್ಪಟ್ಟಾಗಿ ಅವರಿಗೇನೆ ವಕ್ಕರಿಸಿಕೊಳ್ಳುತ್ತವೆ.
ಇನ್ನು, 19ರಿಂದ 30 ವಯಸ್ಸಿನವರಿಗೆ ಸಾಡೇಸಾತಿಯಲ್ಲಿ ಮೊದಲು ಶುರುವಾಗುವುದೇ ಬಿಪಿ (ಬ್ಲಡ್ ಪ್ರೆಶರ್) ಮತ್ತು ಶುಗರ್ (ಡಯಾಬಿಟಿಸ್) ರೋಗ ಲಕ್ಷಣಗಳು. ಏಕೆಂದರೆ ಈ ಹಿಂದೆ ಜೀವನದ ಹಾಗೂ ದೇಹದ ಮಹತ್ವ ಅರಿಯದೆ ಹೆಂಗೆಂಗೋ ಜೀವನಶೈಲಿ ಅಳವಡಿಸಿಕೊಂಡಿದ್ದಕ್ಕೆ ಈ ರೋಗಗಳು ಹುಡುಕಿಕೊಂಡು ಬರುತ್ತವೆ. ಮುಪ್ಪಿನ ದಿನಗಳಲ್ಲಿ ದುಡಿಯದೆ ಆರಾಮವಾಗಿ ನಮ್ಮಷ್ಟಕ್ಕೆ ನಾವಿರುತ್ತೇವೆ ಎಂದರೂ ಬಿಡುವುದಿಲ್ಲ. ಕಡೇಪಕ್ಷ ಪ್ರತಿ ತಿಂಗಳು ವೈದ್ಯಕೀಯ ವೆಚ್ಚ ಭರಿಸುವುದಕ್ಕೋಸ್ಕರವಾದರೂ ಮೈಬಗ್ಗಿಸಿ ಕಷ್ಟಪಟ್ಟು ದುಡಿಯಬೇಕಾಗುತ್ತದೆ. ಆದ್ದರಿಂದ ಮೊದಲು ಇದನ್ನು ತಿಳಿದುಕೊಂಡು ಅಚ್ಚುಕಟ್ಟಾದ ವಿಶ್ರಾಂತಿ ಸಹಿತ ಜೀವನಶೈಲಿ ನಡೆಸುತ್ತಿರಬೇಕು. "ನಾ ಸಾಡೇಸಾತಿಯಲ್ಲೇ ಇದ್ದೀ, ಎಲ್ಲಾ ಟೆಸ್ಟ್ ಮಾಡ್ತೀ, ಇನ್ನೂ ಯಾ ರೋಗ ಬಂದಿಲ್ಲ ನಂಗೆ" ಎಂದು ಮಾತು ಆಡಬೇಡಿ. ಏಕೆಂದರೆ ಸಾಡೇಸಾತಿ ಮುಗಿಯುವವರೆಗೂ ತುಂಬಾ ಜಾಗೃತೆಯಿಂದಲೇ ಇರಬೇಕು. ನಿರ್ಲಕ್ಷ್ಯದಿಂದ ರೋಗಗಳು ಯಾವಾಗ ಬೇಕಾದರೂ ದೇಹದಲ್ಲಿ ಮನೆ ಮಾಡಬಹುದು.
ಆದ್ದರಿಂದ ಮೊದಲೇ ಯಾವುದೇ ರೋಗಗಳು ಬರದಿರುವಂಗೆ ಮುಂಜಾಗೃತೆ ವಹಿಸಿಕೊಂಡು ಜೀವನ ಮಾಡಲು ಕಲಿಯಬೇಕು. ಸಿಕ್ಕಾಪಟ್ಟೆ ಹೊಟ್ಟೆಬಾಕತನವಿದ್ದರೆ ಡಯಾಬಿಟಿಸ್ ತನ್ನಿಂತಾನೆ ದೇಹದಲ್ಲಿ ಪೀಠಿಕೆ ಹಾಕುತ್ತದೆ. ಕೆಟ್ಟ ಚಟಗಳಿದ್ದರೆ (ಕುಡಿತ, ಸಿಗರೇಟ್, ತಂಬಾಕು ಇತ್ಯಾದಿ) ಕೂಡಲೆ ಬಿಡಬೇಕು. ವರ್ಷಾನುಗಟ್ಟಲೆ ಇಟ್ಟುಕೊಂಡ ಚಟ ಬಿಟ್ಟವರು ಇದುವರೆಗೂ ಯಾರೂ ಸತ್ತಿರುವ ನಿದರ್ಶನಗಳಿಲ್ಲ. ಆದರೆ, ಚಟ ಮಾಡಿಯೇ ಸತ್ತಿರುವ ಜನರ ಬಗ್ಗೆ ಸಾಕಷ್ಟು ನಿದರ್ಶನಗಳಿವೆ. ಆದ್ದರಿಂದ ಬದುಕಬೇಕೆಂದರೆ ಚಟ ಬಿಡಲು ಮುಂದಾಗಬೇಕು. ಇದಕ್ಕಾಗಿ ಮಾನಸಿಕವಾಗಿ ಪೂರ್ವ ತಯಾರಿ ಮಾಡಿಕೊಳ್ಳಲು ಒಮ್ಮೆ ಮನದಲ್ಲಿ ಸಂಕಲ್ಪಿಸಬೇಕು. ಯಾಕೆಂದರೆ ಚಟಗಳಿಂದಲೇ ದರಿದ್ರತನ, ಸೋಮಾರಿತನದ ಲಕ್ಷಣಗಳು ಬರುತ್ತವೆ ಎಂಬುದು ಇಂದಿಗೂ ಎಷ್ಟೋ ಜನರಿಗೆ ಗೊತ್ತಿಲ್ಲ. ಬೆವರು ಸುರಿಸಿ, ಹಗಲು-ರಾತ್ರಿಯೆನ್ನದೆ ದುಡಿದು ದುಡ್ಡು ಮಾಡಿಕೊಳ್ಳುವ ವಯಸ್ಸು ಇದಾಗಿರುವುದರಿಂದ ಚಟಗಳೇ ಜೀವಕ್ಕೆ ಎರವಾಗಬಾರದೆಂದರೆ ಹೀಗೆ ಮಾಡಬೇಕು. [ಧೂಮಪಾನಿಗಳೆ ನಿಮಗಿದು ತಿಳಿದಿರಲಿ]
ಯಾವುದೇ ದೈಹಿಕ ವ್ಯಾಯಾಮ ಮಾಡದೇ ಇದ್ದರೆ, ತಿಂದದ್ದು ಕರಗಲ್ಲ. ಹೀಗಾಗಿ ಮೈ ತೂಕ ಹೆಚ್ಚಲಾರಂಭಿಸುತ್ತದೆ. ಇದನ್ನು ನೋಡಿದವರು "ಏನೋ ತುಂಬಾ ಸುಖದಿಂದ ಇರೋ ಹಾಗಿದೆ" ಎನ್ನುತ್ತಿರುತ್ತಾರೆ. ಈ ಮಾತಿನಿಂದ ಮೈ ಉಬ್ಬಿಸಿಕೊಳ್ಳುವವರು ಮುಂದೆ ತಮ್ಮ ದೇಹ ಚಿಕಿತ್ಸೆಯಿಲ್ಲದೇ ಸೊರಗುವಂತಾಗುತ್ತದೆ ಎಂಬುದನ್ನು ಮನಸ್ಸಿನಲ್ಲಿ ಯೋಚಿಸಿಕೊಳ್ಳಬೇಕು. ಏಕೆಂದರೆ ಮನಸ್ಸಿನ ವೇಗಕ್ಕೆ ತಕ್ಕಂತೆ ನಮ್ಮ ದೇಹವೂ ಸ್ಪಂದಿಸಬೇಕು. ಅದಕ್ಕಾಗಿ ದೇಹ ಕೂಡ ಗಟ್ಟಿಮುಟ್ಟಾಗಿ ಇಟ್ಟುಕೊಳ್ಳಬೇಕು. ಹೀಗಿದ್ದರೆ ಮಾತ್ರ ಜೀವನದ ಮಜಾ ಸವಿಯಲು ಸಾಧ್ಯವಾಗುವುದು. ಆದ್ದರಿಂದ ಪ್ರತಿದಿನ ಕನಿಷ್ಠ ಪಕ್ಷ 10 ನಿಮಿಷವಾದರೂ ವ್ಯಾಯಾಮಕ್ಕಾಗಿ ಮೀಸಲಿಡಬೇಕು. "ಆಗಾಕಿಲ್ಲಾ ಸಾಮೇರೆ" ಎಂದರೆ ಅದೇ 10 ನಿಮಿಷ ಔಷಧ ತೆಗೆದುಕೊಳ್ಳಲು ಉಪಯೋಗಿಸಬೇಕಾಗುತ್ತದೆ ನೆನಪಿರಲಿ.
ಸಾಮಾನ್ಯವಾಗಿ, ಈ ವಯಸ್ಸಿನಲ್ಲಿ ಮದುವೆ ಯೋಗ, ಉದ್ಯೋಗ ಹಾಗೂ ಸ್ವಂತ ಮನೆ ಹಾಗೂ ವಾಹನ ಹೊಂದಿಕೊಳ್ಳುವ ಕನಸು ಎಲ್ಲರದು. ಈ ವಯಸ್ಸಿನಲ್ಲಿ ಎಲ್ಲರೂ ಜೀವನದಲ್ಲಿ ಸೆಟ್ಲ್ ಆಗಿರುತ್ತಾರೆ. ಆದರೆ ಶನಿದೇವನ ಸಾಡೇಸಾತಿ ಕಾಡಾಟ ಶುರುವಾಯಿತೆಂದರೆ ಎಲ್ಲ ಎಕ್ಕುಟ್ಟು ಹೋಗುತ್ತದೆ. ಜೀವನ ನಿರ್ವಹಣೆಗೂ ಹಣದ ಕೊರತೆ ಕಾಡಲಾರಂಭಿಸುತ್ತದೆ. ಕೆಲವರಿಗೆ ಮದುವೆ ಯೋಗ ಕನಸಾಗುತ್ತದೆ. ಮದುವೆಯಾದವರಿಗೆ ಮಕ್ಕಳ ಭಾಗ್ಯ ಮರೀಚಿಕೆಯೆನಿಸುತ್ತದೆ. ಕೆಲವರಂತೂ ಇದ್ದಬದ್ದ ಆಸ್ತಿಯನ್ನು ಮಾರಬೇಕಾಗುತ್ತದೆ. ಕೆಲಸ ಕಳೆದುಕೊಂಡವರು ಒಪ್ಪತ್ತುಂಡು ಹೊಸ ಕೆಲಸ ಹುಡುಕುವ "ಕೆಲಸ" ಮಾಡಬೇಕಾಗುತ್ತದೆ. ಯಾವುದರಲ್ಲೂ ಸಂತೃಪ್ತಿಯಿರಲ್ಲ. ಆದ್ದರಿಂದ ಧೃತಿಗೆಡದೆ ಜೀವನವನ್ನು ಸವಾಲಾಗಿ ಸ್ವೀಕರಿಸಬೇಕು. ಈ ಮೊದಲು ಮನಸ್ಸಿಗೆ ತಿಳಿದಿದ್ದನ್ನೇ ಮಾಡಿದ್ದರ ಫಲ ಅನುಭವಿಸುತ್ತಿದ್ದೇನೆ ಎಂದುಕೊಳ್ಳಬೇಕು. ಇನ್ಮುಂದಾದರೂ ಸರಿ ಯಾವುದು, ತಪ್ಪು ಯಾವುದು ಎಂಬುದನ್ನು ತಿಳಿದುಕೊಂಡು ಜೀವನ ಮಾಡುತ್ತೇನೆ ಎಂದು ಶನಿದೇವನಲ್ಲಿ ಬೇಡಿಕೊಳ್ಳಬೇಕು. ದೇವರ ಮುಂದೆ ತಲೆಬಾಗಿಸಲ್ಲ ಎಂದರೆ ಎಲ್ಲರೆದುರು ತಲೆಬಾಗಿಸಿಕೊಂಡು ಜೀವನ ಮಾಡುವುದಕ್ಕೆ ಒಗ್ಗಿಕೊಳ್ಳಬೇಕು.
ಈ ಸಮಯದಲ್ಲಿ ಸಂಸಾರದಲ್ಲಿ ವಿಪರೀತ ಕಲಹಗಳು ಹುಟ್ಟಿಕೊಳ್ಳುತ್ತಿರುತ್ತವೆ. ಒಮ್ಮೊಮ್ಮೆ ಸಹನೆ ಕಳೆದುಕೊಂಡು ಕಾನೂನು ಕೈಗೆತ್ತಿಕೊಂಡು ದೊಡ್ಡ ಅಪರಾಧ ಮಾಡಿ ಜೈಲು ಸೇರುವಂತಾಗುತ್ತದೆ. ನಮ್ಮ ಮಂಡ್ಯ ಕಡೆಗೆ "ಮುತ್ತಿಗಿಂತ ಹೊತ್ತು ಉತ್ತಮ" ಎಂಬ ಮಾತು ಚಾಲ್ತಿಯಲ್ಲಿದೆ. ಇದನ್ನು ತಿಳಿದುಕೊಂಡವರು ಜಾಣರು. ಏಕೆಂದರೆ ಮುಂಬರುವ ಹೊತ್ತು ಹೆಂಗಿರುತ್ತದೆ ಎಂಬುದನ್ನು ನಾವು ಮೊದಲೇ ಜಾತಕದಿಂದ ತಿಳಿದುಕೊಂಡಿದ್ದರೆ ಸ್ವಲ್ಪ ಎಚ್ಚರಿಕೆಯಿಂದಿರಬಹುದು. ಆದರೆ ಕೆಲವರು ಎಲ್ಲ ಹಾಳಾಗಿ ಹೋದ ಮೇಲೆ, ಯಾಕಿಂಗಾಯ್ತು ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುತ್ತಾರೆ.
ಸಾಡೇಸಾತಿಯಲ್ಲಿ ಅನಾಚಾರದ ಕೆಲಸ ಮಾಡಲೇಬಾರದು. ಏಕೆಂದರೆ "ಹೆಣ್ಣಿಂದ ರಾವಣ ಕೆಟ್ಟ, ಮಣ್ಣಿಂದ ಕೌರವ ಕೆಟ್ಟ" ಎಂಬುದರ ಮರ್ಮ ತಿಳಿದುಕೊಳ್ಳಬೇಕು. ನಮ್ಮ ಪಾಲಿಗೆಷ್ಟು ಬರುತ್ತದೋ ಅಷ್ಟರಲ್ಲೇ ಸಂತೃಪ್ತಿ ಪಟ್ಟುಕೊಳ್ಳಬೇಕು. "ಹೊರಗೆ ಭಕ್ತಿ ಒಳಗೆ ಕತ್ತಿ" ಎಂಬಂತೆ ಜೀವನ ಸಾಗಿಸಬಾರದು. ಮನೆಯಲ್ಲಿನ ಹಿರಿಯರು ಬೈಯ್ದರೂ ಅದನ್ನು ಆಶೀರ್ವಾದ ಎಂದುಕೊಳ್ಳಬೇಕು. ಅವರು ಬೈದಿದ್ದಕ್ಕೆ ಸಿಟ್ಟು ಮಾಡಿಕೊಂಡರೆ, ಅವರೋದಾಗ ಮೊಸಳೆ ಕಣ್ಣೀರು ಹಾಕಬಾರದು.
ಆದ್ದರಿಂದ, ಸಾಡೇಸಾತಿಯಲ್ಲಿರುವ ಈ ವಯಸ್ಸಿನವರು ಜೀವನದ ಮಹತ್ವದ ಘಟ್ಟದಲ್ಲಿರುವುದರಿಂದ ತುಂಬಾ ಎಚ್ಚರಿಕೆಯಿಂದ ಜೀವನದ ಪ್ರತಿಯೊಂದು ಕ್ಷಣಗಳನ್ನು ಕಳೆಯಬೇಕು. ಏಕೆಂದರೆ ಜೀವನದ ಈ ಹಂತದಲ್ಲಿ ಎಡವಿದರೆ ಮತ್ತೇ ಮೇಲೆಳುವುದು ತುಂಬಾ ಕಷ್ಟಕರವಾಗುತ್ತದೆ ಎಂಬ ಸಣ್ಣ ಸುಳಿವು ತಿಳಿದುಕೊಳ್ಳಬೇಕು. ಆದ್ದರಿಂದ ಜಾತಕದ ಮೂಲಕ ಗೋಚಾರ ಫಲ, ದಶಾ ಭುಕ್ತಿ ಹಾಗೂ ಸಾಡೇಸಾತಿ ಪ್ರಭಾವ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ತಿಳಿದುಕೊಂಡು ಜೀವನವನ್ನು ಸಂತಸಮಯವಾಗಿಸಿಕೊಳ್ಳಬೇಕು. "ಇದೆಲ್ಲಾ ಗೊತ್ತಿಲ್ಲಾ ನಮಗೆ ಸಾಮಿ, ನಾನಿದೆಲ್ಲಾ ನಂಬಾಕಿಲ್ಲಾ " ಎನ್ನುವವರಿಗೆ "ದಿನಾ ಸಾಯೋರೆಗೆ ಅಳೋರ್ಯಾರು" ಎನ್ನಬೇಕಾಗುತ್ತದೆ.
30 ರಿಂದ 50 ವರ್ಷದೊಳಗಿನವರ ಸಾಡೇಸಾತಿ" ಎಂಬುದು ಮುಂದಿನ ಲೇಖನದಲ್ಲಿ (ಒನ್ಇಂಡಿಯಾ)
ವಾಸ್ತು ಟಿಪ್ಸ್ : ಕೆಲಸ ಮಾಡುವ ಟೇಬಲ್ ಮೇಲೆ ದೇವರ ಫೋಟೋ ಹಾಕಬಾರದು. ದೇವರು ಮನದಲ್ಲಿದ್ದರೆ ಸಾಕು. ಯಾರಿಗೂ ತೋರಿಸಿಕೊಳ್ಳಬೇಕಾಗಿಲ್ಲ.
ಶನಿಕೃಪೆಗೆ : ವಿನಾಕಾರಣ ತೊಂದರೆ ಬರುತ್ತಿವೆ ಎಂದು ದೇವರನ್ನು ದೂಷಿಸಬೇಡಿ. ಪರೀಕ್ಷೆಯೆಂದುಕೊಂಡು ತಾಳ್ಮೆಯಿಂದ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು (ಲೇಖಕರ ಮೊಬೈಲ್ : 94815 22011)