ಭೂಪಟದಿಂದ ದೇಶವೊಂದು ಮಾಯ ಎನ್ನುವ ಕೋಡಿಶ್ರೀ ಭವಿಷ್ಯ ಮತ್ತು ಉಕ್ರೇನ್ ಸಮರ
ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನಿನ ಚೆರ್ನೋಬೆಲ್ ಅಣುಸ್ಥಾವರ ವಶಕ್ಕೆ ಪಡೆದುಕೊಂಡ ನಂತರ, ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ನಗರವನ್ನು ಪ್ರವೇಶಿಸಿದೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ.
ರಷ್ಯಾ ತನ್ನ ಸೇನಾ ತುಕುಡಿಯನ್ನು ಉಕ್ರೇನ್ ಗಡಿಭಾಗದಲ್ಲಿ ಜಮಾಯಿಸುತ್ತಿದೆ ಎಂದು ಅಮೆರಿಕಾ ಈ ಹಿಂದೆನೇ ಎಚ್ಚರಿಸಿತ್ತು. ಮೊದಲನೇ ದಿನ ರಷ್ಯಾದ ಐದು ಫೈಟರ್ ಜೆಟ್ ಗಳನ್ನು ಹೊಡೆದುರುಳಿಸಿದ್ದೇವೆ ಮತ್ತು ಐವತ್ತು ಯೋಧರನ್ನು ಸಾಯಿಸಿದ್ದೇವೆ ಎಂದು ಉಕ್ರೇನ್ ಹೇಳಿದೆ.
ಗಾಳಿಯ ಗಂಢಾಂತರ: ವರ್ಷದ ಮೊದಲ ಭವಿಷ್ಯ ನುಡಿದ ಕೋಡಿಮಠದ ಶ್ರೀ
ಅಫ್ಘಾನಿಸ್ತಾನದ ಸರಕಾರವನ್ನು ಪತನಗೊಳಿಸಿ ತಾಲಿಬಾಲ್ ಸಾಮ್ರಾಜ್ಯ ಅಲ್ಲಿ ಆರಂಭವಾದ ವೇಳೆ, ಕೋಡಿಶ್ರೀಗಳ ಭವಿಷ್ಯವನ್ನು ಅದಕ್ಕೆ ತಾಳೆ ಹಾಕಲಾಗುತ್ತಿತ್ತು. ಈಗ, ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳ ಅಂದಿನ ಭವಿಷ್ಯವನ್ನು ಉಕ್ರೇನ್-ರಷ್ಯಾ ಸಮರಕ್ಕೆ ತಾಳೆ ಹಾಕಲಾಗುತ್ತಿದೆ.
ಖುದ್ದು ಕೋಡಿಶ್ರೀಗಳೇ ಈ ಬಗ್ಗೆ ತಾಲಿಬಾನ್ ಹಾವಳಿಯ ವೇಳೆ ಸ್ಪಷ್ಟನೆಯನ್ನು ಶಿವಮೊಗ್ಗ ಜಿಲ್ಲೆ ಸೊರಬದಲ್ಲಿ ನೀಡಿದ್ದರು. ಜೊತೆಗೆ, ದೇಶದಲ್ಲಿ ಅವಘಡವೊಂದು ಸಂಭವಿಸಲಿದೆ ಎಂದೂ, ಸಾಂಕ್ರಾಮಿಕ ರೋಗದ ಬಗ್ಗೆಯೂ ಕೋಡಿಶ್ರೀಗಳು ಹೇಳಿದ್ದರು.
ಬಲಾಢ್ಯ ಅಮೆರಿಕಾ ನಂಬಿ ಕೆಟ್ಟು ಬಲಹೀನವಾದ ಉಕ್ರೇನ್
ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ
2020ರ ಯುಗಾದಿ ಭವಿಷ್ಯವನ್ನು ನುಡಿದಿದ್ದ ಕೋಡಿಮಠದ ಶ್ರೀಗಳು, ''ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ, ಭಾರತ ದೇಶಕ್ಕೆ ಇದರಿಂದ ಅಪಾಯವಿಲ್ಲ, ಜಗತ್ತಿನಾದ್ಯಂತ ಕೊರೊನಾ ಉಲ್ಬಣಗೊಳ್ಳಲಿದೆ, ಈ ವ್ಯಾಧಿ ಮನುಷ್ಯರ ಪ್ರಾಣದ ಜೊತೆ ತಾಂಡವವಾಡುತ್ತದೆ, ಭಾರತ ಪುಣ್ಯಭೂಮಿ, ಹಾಗಾಗಿ ಇಲ್ಲಿ ಹೆಚ್ಚಿನ ತೊಂದರೆಯಾಗುವುದಿಲ್ಲ'' ಎಂದಿದ್ದರು. ನಾಶವಾಗಲಿರುವ ದೇಶ ಯಾವುದು ಎನ್ನುವುದರ ಬಗ್ಗೆ ಸ್ಪಷ್ಟನೆಯನ್ನು ಶ್ರೀಗಳು ನೀಡಿರಲಿಲ್ಲ.
ರಕ್ತಸಿಕ್ತ ಅಧ್ಯಾಯವನ್ನು ಹೊಂದಿರುವ ತಾಲಿಬಾನಿಗಳಿಂದ ರಕ್ಷಣೆ
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಅಫ್ಘನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾಗಿತ್ತು. ರಕ್ತಸಿಕ್ತ ಅಧ್ಯಾಯವನ್ನು ಹೊಂದಿರುವ ತಾಲಿಬಾನಿಗಳಿಂದ ರಕ್ಷಣೆ ಪಡೆದುಕೊಳ್ಳಲು ಅಲ್ಲಿನ ನಾಗರೀಕರು ದೇಶ ಬಿಟ್ಟು ಹೋಗುವ ಕೆಲಸಕ್ಕೂ ಮುಂದಾಗಿದ್ದರು. ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶ ಎನ್ನುವ ಕೋಡಿಶ್ರೀಗಳ ಭವಿಷ್ಯವನ್ನು ಇದಕ್ಕೆ ತಾಳೆ ಹಾಕಲಾಗುತ್ತಿತ್ತು.
"ಜಗತ್ತಿನ ಭೂಪಟದಲ್ಲಿ ದೇಶವೊಂದು ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಹೇಳಿದ್ದೆ. ಅದರಂತೇ, ಅಫ್ಘನಿಸ್ತಾನ ತಾಲಿಬಾನ್ ಗಳಿಂದ ನಲಗುತ್ತಿದೆ"ಎಂದು ಶ್ರೀಗಳು ನುಡಿದಿದ್ದರು.ಭವಿಷ್ಯ ಉಕ್ರೇನ್-ರಷ್ಯಾ ಯುದ್ದದ ಬಗ್ಗೆ ಎಂದು ಹಲವರ ವ್ಯಾಖ್ಯಾನ
ಆದರೆ, ಕೋಡಿಶ್ರೀಗಳು ನಿಜವಾಗಿ ನುಡಿದದ್ದು ಉಕ್ರೇನ್-ರಷ್ಯಾ ಯುದ್ದದ ಬಗ್ಗೆ ಎಂದು ಹಲವರು ಈಗ ವ್ಯಾಖ್ಯಾನಿಸಲಾರಂಭಿಸಿದ್ದಾರೆ. "ಸಂಶಯ, ಅಸಹನೆ, ದ್ವೇಷ ಹಾಗೂ ಕಲಹಗಳು ಹೆಚ್ಚಾಗಲಿವೆ"ಎಂದೂ ಕೋಡಿಶ್ರೀಗಳು ಭವಿಷ್ಯವನ್ನು ನುಡಿದಿದ್ದರು. ಎರಡು ದೇಶಗಳ ನಡುವಿನ ಯುದ್ದದಲ್ಲಿ ಈಗಾಗಲೇ ಸಾಕಷ್ಟು ಸಾವುನೋವು, ಆಸ್ತಿಪಾಸ್ತಿಗಳ ನಷ್ಟವಾಗಿದೆ. ಎರಡು ದೇಶಗಳ ನಡುವಿನ ಯುದ್ದ ವಿಶ್ವದ ಇತರ ರಾಷ್ಟ್ರಗಳಿಗೂ ಹರಡಲಿದೆಯೇ ಎನ್ನುವ ಆತಂಕವೂ ಎದುರಾಗಿದೆ.
ಸಂಕಟ ಬಂದಾಗ ಜನರು ವೆಂಕಟರಮಣ ಎನ್ನುತ್ತಾರೆ
"ಸಂಕಟ ಬಂದಾಗ ಜನರು ವೆಂಕಟರಮಣ ಎನ್ನುತ್ತಾರೆ. ಹಿಂದೆಯೇ ಹೇಳಿದ್ದೆ, ಜನರಿಗೆ ದ್ವೇಷ, ಅಸೂಯೆ, ವ್ಯಾಮೋಹ ಹೆಚ್ಚಾಗಿರುವುದರಿಂದಲೇ ಜನರಿಗೆ ಪಾಠ ಕಲಿಸಲು ದೇವರು ತನ್ನ ಆಟವನ್ನು ತೋರಿಸುತ್ತಾನೆ. ಕೊರೊನಾ ದೇವರನ್ನು ಹಿಡಿದುಕೊಂಡು ಭೂಮಿಗೆ ಬಂತು ಎಂಬುದನ್ನು ಜನ ಅರ್ಥ ಮಾಡಿಕೊಳ್ಳಬೇಕು. ಸದ್ಯ ಕೊರೊನಾ ಮಹಾಮಾರಿಯ ಶಕ್ತಿ ಕುಂದಿದ್ದು ಎಲ್ಲವೂ ಸರಿ ಹೋಗಲಿದೆ. ಆದರೆ ಮುಂದಿನ ದಿನಗಳಲ್ಲಿ ಗಾಳಿ ಗಂಡಾಂತರದಿಂದ ಜನತೆ ತಿನ್ನಲು ಅನ್ನವಿಲ್ಲದೆ, ಕುಡಿಯಲು ನೀರಿಲ್ಲದೆ ನರಳುತ್ತಾರೆ"ಎನ್ನುವ ಎಚ್ಚರಿಕೆಯ ಭವಿಷ್ಯವನ್ನು ಕೋಡಿಶ್ರಿಗಳು ಚಿಕ್ಕಬಳ್ಳಾಪುರದಲ್ಲಿ ಕೆಲವು ದಿನಗಳ ಹಿಂದೆ ನುಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಲಬಹುದಾಗಿದೆ.