ಶನಿಯಿಂದ ಆಗುವ ತೊಂದರೆಗೆ ಮಾಡಿಸಬೇಕಾದ ಶಾಂತಿ, ಪರಿಹಾರ ಮಾರ್ಗ
ಅಕ್ಟೋಬರ್ 26ಕ್ಕೆ ಶನಿಯು ಧನು ರಾಶಿಗೆ ಪ್ರವೇಶ ಮಾಡಿಯಾಗಿದೆ. ಇದು ನಿಮ್ಮ ಗಮನಕ್ಕೂ ಬಂದಿರುತ್ತದೆ. ಶನಿ ಗ್ರಹ ಒಂದು ರಾಶಿಗೆ ಬಂದರೆ ಸುದೀರ್ಘ ಕಾಲ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ, ಎರಡೂವರೆ ವರ್ಷಗಳ ಕಾಲ ಶನೈಶ್ಚರ ವೃಶ್ಚಿಕದಲ್ಲಿ ಇದ್ದ ನಂತರ ಈ ವರ್ಷದ ಜನವರಿಯಲ್ಲಿ ಧನು ಪ್ರವೇಶವಾಗಿತ್ತು.
ಆ ನಂತರ ಇದೇ ವರ್ಷದ ಜೂನ್ ಇಪ್ಪತ್ತಾರರಂದು ವಕ್ರಿಯಾಗಿ ವೃಶ್ಚಿಕ ರಾಶಿ ಪ್ರವೇಶ ಮಾಡಿತು. ಅಲ್ಲಿ ನಾಲ್ಕು ತಿಂಗಳ ಕಾಲ ಇದ್ದು, ಅಕ್ಟೋಬರ್ 26ಕ್ಕೆ ಮತ್ತೆ ಧನು ರಾಶಿಯನ್ನು ಪ್ರವೇಶ ಮಾಡಿದೆ. ಆದ್ದರಿಂದ ಹನ್ನೆರಡು ರಾಶಿಯವರೂ ಕೆಲ ಮುಖ್ಯ ಪೂಜೆ ಅಥವಾ ಆರಾಧನೆ ಮಾಡಲೇಬೇಕು.
ಅಕ್ಟೋಬರ್ 26ಕ್ಕೆ ಧನು ರಾಶಿ ಶನಿ ಸಂಚಾರ, ಏನಿದೆ ಹೊಸ ವಿಚಾರ
ಈ ಲೇಖನದ ಉದ್ದೇಶ ಏನೆಂದರೆ, ಶನೈಶ್ಚರನ ಆರಾಧನೆ ಮಾಡುವ ಮೂಲಕ ಸಮಸ್ಯೆಯನ್ನು ದಾಟಲು ಅನುವು ಮಾಡಿಕೊಟ್ಟವನಿಗೆ ಕೃತಜ್ಞತೆ ಹೇಳುವುದು ಒಂದು ಕಡೆಯಲ್ಲಾದರೆ, ಇನ್ನು ಮುಂದೆ ಅನನುಕೂಲ ತಂದೊಡ್ಡುವುದಾದರೆ ಅದನ್ನು ಎದುರಿಸುವ, ಸಹಿಸುವ ಹಾಗೂ ಸಂಭಾಳಿಸುವ ಶಕ್ತಿಯನ್ನು ದಯಪಾಲಿಸು ಎಂದು ಬೇಡಿಕೊಳ್ಳಿ.
ಹಾಗಿದ್ದರೆ ಶನೈಶ್ಚರನ ಸಂಚಾರಕ್ಕೆ ಸಂಬಂಧಿಸಿದಂತೆ ಮಾಡಿಸಿಕೊಳ್ಳಬೇಕಾದ ಶಾಂತಿ- ಪೂಜೆ ಎಂದು ತಿಳಿಯುವುದಕ್ಕೆ ಮುಂದೆ ಓದಿ.
ಮೇಷ
ಮನೆಯಲ್ಲಿ ಮದುವೆ ಸಂಬಂಧಿ ವಿಚಾರಗಳು ಚರ್ಚೆಯಲ್ಲಿದ್ದರೆ ಸ್ವಲ್ಪ ಮುಂದೂಡುವುದು ಉತ್ತಮ. ಇಷ್ಟು ಕಾಲ ಅಷ್ಟಮ ಶನಿಯ ಪ್ರಭಾವ ಅನುಭವಿಸಿದ್ದೀರಿ. ಇನ್ನು ಮುಂದೆ ಒಂಬತ್ತನೇ ಮನೆಗೆ ಪ್ರವೇಶ ಆಗುತ್ತದೆ. ಆದ್ದರಿಂದ ಶನೈಶ್ಚರ ಗುಡಿಯಲ್ಲಿ ಪಂಚಾಮೃತ ಅಭಿಷೇಕ ಮಾಡಿಸಿಕೊಳ್ಳಿ.
ವೃಷಭ
ಬಹಳ-ಬಹಳ ಎಚ್ಚರಕೆಯಿಂದ ಇರಬೇಕು. ಇನ್ನು ಮುಂದೆ ಅಷ್ಟಮ ಶನಿಯ ಪ್ರಭಾವ ಇರುವುದರಿಂದ ನೀವೇ ಖುದ್ದಾಗಿ ಶನೈಶ್ಚರ ದೇಗುಲಕ್ಕೆ ಹೋಗಿ ಎಳ್ಳೆಣ್ಣೆ ಕೊಟ್ಟು, ದೀಪ ಹಚ್ಚುವಂತೆ ಕೇಳಿಕೊಳ್ಳಿ. ಎರಡೂವರೆ ವರ್ಷ ಯಾವುದೇ ತೊಂದರೆ ಆಗದಂತೆ ಪ್ರಾರ್ಥಿಸಿ. ಒಂದು ವೇಳೆ ನೀವಿನ್ನೂ ಶನಿ ಶಾಂತಿ ಮಾಡಿಸಿಕೊಂಡಿಲ್ಲ ಅಂದರೆ, ಜಾತಕವನ್ನು ತೋರಿಸಿ. ಆ ನಂತರ ಶನೈಶರ ಜಪ ಹಾಗೂ ಶಾಂತಿ ಮಾಡಿಸಿದರೆ ಉತ್ತಮ.
ಮಿಥುನ
ಏಳನೇ ಮನೆಯಲ್ಲಿ ಶನಿ ಸಂಚಾರ ಆಗುವುದರಿಂದ ಬಾಳ ಸಂಗಾತಿ ಹಾಗೂ ಸ್ನೇಹಿತರ ಜತೆಗೆ ಜಗಳ ಮಾಡಿಕೊಳ್ಳಬೇಡಿ. ಮಾತಿಗೆ ಮಾತು ಬೆಳೆಸಬೇಡಿ. ಆಂಜನೇಯ ಗುಡಿಗೆ ತೆರಳಿ ವಸ್ತ್ರ ಸಮರ್ಪಣೆ ಮಾಡಿ.
ಕರ್ಕಾಟಕ
ಆರನೆ ಮನೆಯಲ್ಲಿ ಶನಿ ಸಂಚಾರ ಆಗುವುದರಿಂದ ಇಷ್ಟು ಕಾಲ ಪಂಚಮ ಶನಿಯ ಪ್ರಭಾವ ಅನುಭವಿಸಿದ್ದೀರಿ. ಇನ್ನು ಒಳ್ಳೆ ದಿನಗಳು ಎದುರಿಗಿವೆ. ಆದ್ದರಿಂದ ಎಂಟು ಮಣ್ಣಿನ ಹಣತೆಯನ್ನು ತೆಗೆದುಕೊಳ್ಳಿ. ಅದಕ್ಕೆ ತುಪ್ಪವನ್ನು ಹಾಕಿ, ಅದರ ದೀಪವನ್ನು ಶನೈಶ್ಚರ ದೇಗುಲದಲ್ಲಿ ಹಚ್ಚಿ. ಆ ನಂತರ ಒಳಿತಾಗಲಿ ಎಂದು ಪ್ರಾರ್ಥನೆ ಮಾಡಿ.
ಸಿಂಹ
ಪಂಚಮದಲ್ಲಿ ಶನೈಶ್ಚರ ಸಂಚಾರ ಮಾಡುವುದರಿಂದ ಸಾಲ ಮಾಡಬೇಡಿ- ಸಾಲ ಕೊಡಬೇಡಿ. ಶ್ಯೂರಿಟಿಯಾಗಿ ಯಾರಿಗೂ ಸಹಿ ಮಾಡಬೇಡಿ. ಶನೈಶ್ಚರ ದೇಗುಲದಲ್ಲಿ ಎಳ್ಳೆಣ್ಣೆ ಅಭಿಷೇಕವನ್ನು ಕಡ್ಡಾಯವಾಗಿ ಮಾಡಿಸಬೇಕು. ಶುದ್ಧವಾದ ಎಳ್ಳೆಣ್ಣೆಯಲ್ಲೇ (ಅಡುಗೆಗೆ ಬಳಸುವ ಎಳ್ಳೆಣ್ಣೆ) ಅಭಿಷೇಕ ಮಾಡಿಸಬೇಕು.
ಕನ್ಯಾ
ನಿಮಗೆ ನಾಲ್ಕನೇ ಮನೆಯಲ್ಲಿ ಶನಿ ಸಂಚರಿಸುತ್ತದೆ. ಶನಿ ದೇವಾಲಯದಲ್ಲಿ ಅನ್ನ ದಾನ ಮಾಡಬೇಕು. ಒಂದು ವೇಳೆ ಅನ್ನ ದಾನ ಆಗಲಿಲ್ಲ ಅಂದರೆ ಚಿತ್ರಾನ್ನ-ಮೊಸರನ್ನವಾದರೂ ಹಂಚಬೇಕು. ಇಲ್ಲದಿದ್ದರೆ ಎಳ್ಳೆಣ್ಣೆಯಲ್ಲಿ ತಯಾರು ಮಾಡಿದ ಪುಳಿಯೋಗರೆ ಆದರೂ ಹಂಚಬೇಕು. ಇದ್ಯಾವುದೂ ಆಗದ ಪಕ್ಷದಲ್ಲಿ ಶನೈಶ್ಚರ ದೇಗುಲದಲ್ಲಿ ಅನ್ನದಾನ ಮಾಡುತ್ತಿದ್ದರೆ ನಿಮ್ಮ ಕೈಲಾದಷ್ಟು ಹಣವನ್ನಾದರೂ ಕೊಡಿ.
ತುಲಾ
ಏಳೂವರೆ ವರ್ಷಗಳ ಕಾಲದ ಸಾಡೇ ಸಾತ್ ಪ್ರಭಾವವು ನಿಮಗೆ ಮುಗಿದಿದೆ. ಆದ್ದರಿಂದ ಶನೈಶ್ಚರನಿಗೆ ಇಪ್ಪತ್ತೆಂಟು ಪ್ರದಕ್ಷಿಣೆ ಮಾಡಿ ಬರಬೇಕು.
ವೃಶ್ಚಿಕ
ಕುಟುಂಬ ಸ್ಥಾನದಲ್ಲಿ ಶನಿ ಬರುತ್ತಿರುವುದರಿಂದ ಕುಟುಂಬಸ್ಥರೊಂದಿಗೆ ಜಗಳ ಆಗದಂತೆ ಎಚ್ಚರ ವಹಿಸಿ. ದೊಡ್ಡದೋ ಸಣ್ಣದೋ ಒಟ್ಟಿನಲ್ಲಿ ಎಷ್ಟೇ ಮೊತ್ತದ ಹಣ ಇದ್ದರೂ ಮನೆಯಲ್ಲಿ ತಂದಿಡುತ್ತಿದ್ದರೆ ಹುಷಾರಾಗಿರಿ. ಆರೋಗ್ಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ನರಸಿಂಹ ದೇವರ ದೇವಾಲಯದಲ್ಲಿ ಅಭಿಷೇಕ ಮಾಡಿಸಿ.
ಧನು
ನಿಮಗೆ ಜನ್ಮ ರಾಶಿಗೆ ಶನಿ ಬರುತ್ತದೆ. ಶನೈಶ್ಚರ ದೇವಾಲಯದಲ್ಲಿ ದೀಪ ಹಚ್ಚುವುದಕ್ಕೆ ದೀಪದ ಕಂಬವೋ ಏನು ಅಗತ್ಯ ಇರುತ್ತದೋ ಅಂಥದ್ದೊಂದು ವಸ್ತುವನ್ನು ದಾನವಾಗಿ ಕೊಡಿ. ಆಲಸ್ಯ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹಾಗಾಗದಂತೆ ನೋಡಿಕೊಳ್ಳಲು ಹಾಗೂ ಆರೋಗ್ಯ ಸಮಸ್ಯೆಯಾಗದಂತೆ ಸ್ವಾಮಿಯನ್ನು ಪ್ರಾರ್ಥನೆ ಮಾಡಿ.
ಮಕರ
ಈ ರಾಶಿಯವರಿಗೆ ಸಾಡೇ ಸಾತ್ ಆರಂಭದ ಕಾಲ. ನೀಲಿ ಅಥವಾ ಕಪ್ಪು ವಸ್ತ್ರವನ್ನು ಈ ಪೈಕಿ ನೀಲ ವಸ್ತ್ರ ಶ್ರೇಷ್ಠ. ಅದನ್ನು ಶನೈಶ್ಚರ ದೇವಾಲಯದಲ್ಲಿ ದಾನ ಮಾಡಿ. ಶನೈಶ್ಚರ ವಿಗ್ರಹಕ್ಕೆ ಉಡಿಸುವುದಕ್ಕೆ ವಸ್ತ್ರ ನೀಡಿದರೆ ಒಳಿತು.
ಕುಂಭ
ಹನ್ನೊಂದನೇ ಮನೆಯ ಶನಿ ಕ್ರಮೇಣ ಅನುಕೂಲ ಮಾಡಿಕೊಡುತ್ತದೆ. ಶನೈಶ್ಚರ ದೇಗುಲದಲ್ಲಿ ಎಳ್ಳು- ಬೆಲ್ಲ ಸೇರಿ ನೈವೇದ್ಯ ಮಾಡಿಸಿ ಅಥವಾ ಎಳ್ಳುಂಡೆ ಮಾಡಿ, ಅದನ್ನು ನೈವೇದ್ಯಕ್ಕೆ ಕೊಡಬೇಕು. ಅದು ಮನೆಯಲ್ಲಿ ತಯಾರು ಮಾಡಬೇಕು. ಆ ನಂತರ ಅದನ್ನು ದೇವಾಲಯಕ್ಕೆ ಬರುವ ಭಕ್ತರಿಗೆ ಹಂಚಬೇಕು.
ಮೀನ
ಹತ್ತನೇ ಮನೆಯ ಶನಿ ಸಂಚಾರವಾದ್ದರಿಂದ ಉದ್ಯೋಗ ವಿಚಾರದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಕೆಲಸದಲ್ಲಿ ಯಾರ ಹತ್ತಿರವೂ ಜಗಳ ಆಗದಂತೆ ಎಚ್ಚರವಾಗಿರಿ. ಶನೈಶ್ಚರ ದೇಗುಲಕ್ಕೆ ಹೋಗಿ ಬಿಲ್ವ ಅಥವಾ ತುಳಸಿ ಅಥವಾ ಎರಡರಲ್ಲೂ ಸೇರಿ ಅಷ್ಟೋತ್ತರ ಮಾಡಿಸಿ.
ಶನಿ ಜಪ, ಶಾಂತಿ ಆಗಬೇಕು
ಅಷ್ಟಮದಲ್ಲಿ ಶನಿ ಸಂಚರಿಸುವ ವೃಷಭ, ಪಂಚಮ ಸಂಚಾರದ ಸಿಂಹ, ಚತುರ್ಥ ಸಂಚಾರದ ಕನ್ಯಾ, ಸಾಡೇ ಸಾತ್ ಸಂಚಾರದ ವೃಶ್ಚಿಕ, ಧನು ಹಾಗೂ ಮಕರ ರಾಶಿಯವರು ಶನಿ ಜಪ ಹಾಗೂ ಶಾಂತಿಯನ್ನು ಮಾಡಿಸಿಕೊಳ್ಳುವುದು ಉತ್ತಮ.