ಜ್ಯೋತಿಷ್ಯ: ದುಡ್ಡು ಕೈ ಹತ್ತುತ್ತಿಲ್ಲವೆ, ವ್ಯಾಪಾರ ಶುರು ಮಾಡಬೇಕೆ?
ಮಾನವರಾದ ಮೇಲೆ ಉದ್ಯೋಗ, ವ್ಯಾಪಾರ- ವ್ಯವಹಾರ ಏನೇ ಮಾಡಿದರೂ ಬಹುಪಾಲು ಪ್ರಾಮುಖ್ಯತೆ ಧನ ಸಂಪಾದನೆಗೆ ಇರುತ್ತದೆ. 'ಧನಮೂಲಂ ಇದಂ ಜಗತ್' ಎಂಬುದು ಇಂದಿನ ಜನಾಂಗವೇ ಅರಿತುಕೊಂಡಿರುವ ಪಾಠ. ಆದ್ದರಿಂದ ಸಂಪಾದನೆಗಾಗಿ ನಾನಾ ಮಾರ್ಗಗಳನ್ನು ಆಯ್ದುಕೊಳ್ಳುತ್ತಾರೆ. ಬಹಳ ಮಂದಿಗೆ ಅದೆಷ್ಟೇ ಮಾರ್ಗದಲ್ಲಿ ಸಾಗಿದರೂ ಸಂಪಾದನೆ ಅಷ್ಟಕ್ಕೆ ಅಷ್ಟೇ, ಅಲ್ಲಿಂದ ಅಲ್ಲಿಗೆ ಆಗುತ್ತದೆ.
ಧನ ಲಾಭ ಚೆನ್ನಾಗಿ ಆಗಬೇಕು ಎಂದಾದಲ್ಲಿ ಅದಕ್ಕೆ ಜಾತಕದಲ್ಲಿನ ಗ್ರಹ ಬಲ ಹಾಗೂ ದೈವ ಬಲ ಎರಡೂ ಅವಶ್ಯ. ಯಾವುದೇ ವ್ಯಾಪಾರ ಮಾಡಿ, ಅದರಲ್ಲಿ ಯಶಸ್ಸು ಪಡೆಯಬೇಕು ಅಂದರೆ ಜಾತಕದಲ್ಲಿ ಶುಕ್ರನ ಸ್ಥಾನ ಚೆನ್ನಾಗಿರಬೇಕು. ಯಾರ ಜಾತಕದಲ್ಲಿ ಶುಕ್ರನು ಕನ್ಯಾ ರಾಶಿಯಲ್ಲಿ ಇರುತ್ತಾನೋ ಅಂಥವರು ವ್ಯಾಪಾರ ಮಾಡಿ ಧನ ಲಾಭ ಪಡೆಯುವುದು ಕಷ್ಟಕರ.
ಉದ್ಯೋಗ ಬದಲಾವಣೆಗೆ ಸೂಕ್ತ ಕಾಲವೆ?: ಇಲ್ಲಿದೆ ಜ್ಯೋತಿಷ್ಯ ಸಲಹೆ
ಜಾತಕದಲ್ಲಿ ಕರ್ಮಾಧಿಪತಿಯ ಬಲಾಬಲ ಹಾಗೂ ಧನಾಧಿಪತಿಯ ದೃಷ್ಟಿ ಹಾಗೂ ದಶಾಕಾರಕನ ಅನುಕೂಲದಿಂದ ವ್ಯಾಪಾರದಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕಬಹುದು. ಕರ್ಮಾಧಿಪತಿ ಅಂದರೆ ಜಾತಕದಲ್ಲಿ ಲಗ್ನ ಎಂದಿರುತ್ತದೆ. ಅದು ಒಂದನೇ ಮನೆ ಆಗುತ್ತದೆ. ಅಲ್ಲಿಂದ ಮುಂದಕ್ಕೆ ಲೆಕ್ಕ ಹಾಕುತ್ತಾ ಹೋದರೆ ಹತ್ತನೇ ಮನೆ ಯಾವ ರಾಶಿ ಬರುತ್ತದೋ ಆ ರಾಶಿಯ ಅಧಿಪತಿ ಕರ್ಮಾಧಿಪತಿ ಆಗುತ್ತದೆ.
ಎರಡನೇ ಮನೆ ಧನ ಸ್ಥಾನ
ಇನ್ನು ಲಗ್ನದಿಂದ ಎರಡನೇ ಸ್ಥಾನ ಧನವನ್ನು ಸೂಚಿಸುತ್ತದೆ. ಎರಡನೇ ಮನೆಯು ಯಾವ ರಾಶಿಯೋ ಆ ರಾಶಿಯ ಅಧಿಪತಿಯು ಧನಾಧಿಪತಿ ಆಗುತ್ತದೆ. ಇನ್ನು ಎಲ್ಲರಿಗೂ ಆಯಾ ಕಾಲಕ್ಕೆ ಇಂಥಿಂಥ ಗ್ರಹದ ದಶೆ ಎಂದು ನಡೆಯುತ್ತದೆ. ಆ ಗ್ರಹದ ದಶೆಯು ಜಾತಕರಿಗೆ ಅನುಕೂಲವೋ ಅನಾನುಕೂಲವೋ ಎಂಬುದರ ಚಿಂತನೆ ಮಾಡಬೇಕಾಗುತ್ತದೆ.
ಕರ್ಮಾಧಿಪತಿ ಬಹಳ ಮುಖ್ಯ
ಆದ್ದರಿಂದ ತಮ್ಮ ಜಾತಕದಲ್ಲಿ ಕರ್ಮಾಧಿಪತಿ ಯಾರು, ಆ ಗ್ರಹದ ಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಬೇಕು. ಆ ನಂತರ ಆ ಗ್ರಹದ ಮೂಲಕ ಸೂಚಿಸುವ ವ್ಯಾಪಾರ ಆರಿಸಿಕೊಂಡರೆ ಉತ್ತಮ. ಲಗ್ನದಿಂದ ಹತ್ತನೇ ಮನೆಯ ಅಧಿಪತಿ ರವಿ ಆಗಿದ್ದರೆ ಅಥವಾ ಜಾತಕದಲ್ಲಿ ಚಂದ್ರ ಅಥವಾ ಲಗ್ನದಿಂದ ಹತ್ತನೇ ಮನೆಯಲ್ಲಿ ರವಿ ಇದ್ದರೆ ಅಥವಾ ಹತ್ತನೆ ಮನೆಗೆ ರವಿಯ ಪೂರ್ಣ ದೃಷ್ಟಿ ಇದ್ದರೆ ಅಂಥವರು ಉದ್ಯೋಗ ಮಾಡುವುದೇ ಲೇಸು. ವ್ಯಾಪಾರ ಮಾಡುವ ಸಾಹಸ ಬೇಡ.
ರವಿ ದಶೆ ಆರಂಭದಲ್ಲಿ ವ್ಯಾಪಾರ ಉತ್ತಮವಲ್ಲ
ಶುಕ್ರ ದಶೆ ಮುಗಿದು ರವಿ ದಶೆ ಆರಂಭ ಆಗುವಾಗ ಕೂಡ ವ್ಯಾಪಾರ ಮಾಡದಿರುವುದು ಉತ್ತಮ. ಒಂದು ವೇಳೆ ವ್ಯಾಪಾರ ಮಾಡುವುದು ಅನಿವಾರ್ಯ ಎಂದಾದ ಪಕ್ಷದಲ್ಲಿ ಮನೆಯಲ್ಲಿ ಯಾರ ಜಾತಕದಲ್ಲಿ ಶುಕ್ರ ಅಥವಾ ಧನ ಲಾಭಾಧಿಪತಿ ಬಲಾಢ್ಯನೋ ಅವರ ಹೆಸರಿನಲ್ಲಿ ವ್ಯವಹಾರ ಮುಂದುವರಿಸುವುದು ಉತ್ತಮ.
ಮಂಗಳವಾರ- ಶುಕ್ರವಾರ ಹಣ ಸಂದಾಯ ಬೇಡ
ವ್ಯಾಪಾರ ಉತ್ತಮವಾಗಿಯೇ ನಡೆಯುತ್ತಿರುವಾಗ ಶುಕ್ರವಾರ ಹಾಗೂ ಮಂಗಳವಾರಂದು ಬೇರೆಯವರಿಗೆ ಹಣ ಸಂದಾಯ (ಪೇಮೆಂಟ್) ಮಾಡುತ್ತಾ ಬಂದರೆ ಕ್ರಮೇಣ ವ್ಯಾಪಾರವು ಕ್ಷೀಣಿಸಿ, ನಷ್ಟ ಅನುಭವಿಸಬೇಕಾಗುತ್ತದೆ. ಇನ್ನು ವ್ಯಾಪಾರ ಸ್ಥಳದಲ್ಲಿ ದೃಷ್ಟಿ ದೋಷ, ಮಾಟ-ಮಂತ್ರ ಪ್ರಯೋಗ, ನಾಗ ಸಂಚಾರ, ಪ್ರೇತ ಬಾಧೆ ಇಂಥ ಸಮಸ್ಯೆಗಳಿದ್ದಲ್ಲಿ ಸಹ ಧನಾಗಮಕ್ಕೆ ತಡೆ ಉಂಟಾಗುತ್ತದೆ.
ಪ್ರಶ್ನಾ ಶಾಸ್ತ್ರದಲ್ಲಿ ಉತ್ತರ
ಯಾವ ರೀತಿಯ ಸಮಸ್ಯೆ ಇದೆ ಎಂಬುದನ್ನು ತಿಳಿಯಲು ಪ್ರಶ್ನಾ ಶಾಸ್ತ್ರದಲ್ಲಿ ಮಾತ್ರ ಸಾಧ್ಯ. ಜಾತಕ ಇದೆಯೋ ಇಲ್ಲವೋ ಬೇರೆ ಮಾತು. ಯಾವುದೇ ವ್ಯಾಪಾರ ಮಾಡಲು ಬಯಸಿದರೆ ಪ್ರಶ್ನಾ ಶಾಸ್ತ್ರದ ಮೂಲಕ ಸ್ಥಳ ಶುದ್ಧಿಯ ಬಗ್ಗೆ ತಿಳಿದುಕೊಂಡು, ಆ ನಂತರ ವ್ಯಾಪಾರ ಮಾಡುವುದು ಉತ್ತಮ.