ರಾಹು-ಕೇತು ಸಂಚಾರ ತುಲಾದಿಂದ ಮೀನದವರೆಗೆ ಹೇಗಿರಲಿದೆ ಪರಿಣಾಮ?
ರಾಹು-ಕೇತು ಗ್ರಹಗಳು ಸ್ಥಾನ ಬದಲಾವಣೆ ಮಾಡಲಿವೆ. ಇಷ್ಟು ಕಾಲ ಕರ್ಕಾಟಕ ರಾಶಿಯಲ್ಲಿದ್ದ ರಾಹು ಮಿಥುನಕ್ಕೆ ಪ್ರವೇಶ ಹಾಗೂ ಮಕರದಿಂದ ಧನುಸ್ಸು ರಾಶಿಗೆ ಕೇತು ಗ್ರಹ ಪ್ರವೇಶ ಆಗುತ್ತದೆ. ಮಾರ್ಚ್ 7ನೇ ತಾರೀಕು 2019ನೇ ಇಸವಿಯಲ್ಲಿ ಬದಲಾಗುವ ರಾಹು-ಕೇತು ಗ್ರಹಗಳು ಸೆಪ್ಟೆಂಬರ್ 23, 2020ರ ತನಕ ಅಲ್ಲೇ ಇರುತ್ತವೆ.
ಮೊದಲ ಕಂತಾಗಿ ಮೇಷದಿಂದ ಕನ್ಯಾ ರಾಶಿ ತನಕ ಏನು ಫಲ ನೀಡಲಿದೆ ಎಂಬುದನ್ನು ಈಗಾಗಲೇ ತಿಳಿಸಲಾಗಿದೆ. ಇಂದಿನ ಲೇಖನದಲ್ಲಿ ತುಲಾ ರಾಶಿಯಿಂದ ಮೀನದವರೆಗೆ ತಿಳಿದುಕೊಳ್ಳಿ.
ರಾಹು-ಕೇತು ಗ್ರಹಗಳ ಸ್ಥಾನ ಬದಲಾವಣೆ; ಯಾವ ರಾಶಿಗೆ ಏನು ಫಲ?
ಶನಿ ಗ್ರಹ ಒಂದು ರಾಶಿಯಲ್ಲಿ ಎರಡೂವರೆ ವರ್ಷ (ವಕ್ರ ಹೊರತುಪಡಿಸಿ) ಇರುತ್ತದೆ. ಆ ನಂತರ ಒಂದು ರಾಶಿಯಲ್ಲಿ ಹದಿನೆಂಟು ತಿಂಗಳ ಕಾಲ ಇರುವ ಗ್ರಹಗಳು ರಾಹು-ಕೇತು. ಈ ಎರಡೂ ಗ್ರಹಗಳನ್ನು ಸಮ ಸಪ್ತಕಗಳು ಎಂದು ಕೂಡ ಕರೆಯಲಾಗುತ್ತದೆ. ಇವು ಅಪ್ರದಕ್ಷಿಣೆಯಾಗಿ ಸುತ್ತುತ್ತವೆ. ಅಂದರೆ ಗಡಿಯಾರದ ಮುಳ್ಳುಗಳು ಹಿಂಬದಿ ಚಲಿಸಿದಂತೆ.
ಇನ್ನು ಗುರು ಗ್ರಹಕ್ಕಿಂತ (ಒಂದು ರಾಶಿಯಲ್ಲಿ ಒಂದು ವರ್ಷ) ಹೆಚ್ಚು ಸಮಯ ಒಂದು ರಾಶಿಯಲ್ಲಿ ಇರುವ ಈ ಎರಡು ಗ್ರಹಗಳು ಛಾಯಾ ಗ್ರಹಗಳು ಅಂತಲೂ ಅನಿಸಿಕೊಳ್ಳುತ್ತವೆ. ರಾಹು-ಕೇತುಗಳು ಗೋಚಾರದಲ್ಲಿ ಕೆಟ್ಟ ಸ್ಥಿತಿಯಲ್ಲಿದ್ದಾಗ, ಅದೇ ರೀತಿ ಜನ್ಮ ಜಾತಕದಲ್ಲೂ ಕ್ರೂರವಾಗಿದ್ದರೆ ಸೂಕ್ತ ಶಾಂತಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
ದೀರ್ಘಾಯುಷ್ಯ ಯೋಗದ ಬಗ್ಗೆ ಜ್ಯೋತಿಷ್ಯ ಏನು ಹೇಳುತ್ತದೆ?
ಇಲ್ಲದಿದ್ದಲ್ಲಿ ವಿವಾಹ ಸಮಸ್ಯೆ, ಸಂತಾನ ತೊಂದರೆ, ಉದ್ಯೋಗ, ಚರ್ಮಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ, ವಿದ್ಯಾ ಭಂಗ, ವ್ಯಾಪಾರದಲ್ಲಿ ನಷ್ಟ ಇತ್ಯಾದಿ ದುಷ್ಪ್ರಭಾವ ಬೀರುತ್ತದೆ. ಇನ್ನೇಕೆ ತಡ, ನಿಮ್ಮ ರಾಶಿಗೆ ರಾಹು-ಕೇತುಗಳ ಪ್ರಭಾವ ಹೇಗಿದೆ ಓದಿಕೊಳ್ಳಿ.
ತುಲಾ: ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ
ನಿಮ್ಮ ರಾಶಿಯಿಂದ ಒಂಬತ್ತನೇ ಮನೆಯಲ್ಲಿ ರಾಹುವಿನ ಸಂಚಾರ ಆಗುತ್ತದೆ. ನೀವು ವಿದೇಶ ಪ್ರಯಾಣ ಮಾಡುವಂಥ ಸಾಧ್ಯತೆ ಇದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ನಿರ್ದಿಷ್ಟ ಕೆಲಸದ ಮೇಲೆ ವಿದೇಶದಲ್ಲಿ ಕಾರ್ಯ ನಿರ್ವಹಿಸ ಬೇಕಾಗುತ್ತದೆ. ಇನ್ನು ಧಾರ್ಮಿಕ ಕ್ಷೇತ್ರಗಳಿಗೆ ಕೂಡ ದೂರ ಪ್ರಯಾಣ ಮಾಡುವ ಯೋಗ ನಿಮಗಿದೆ. ಇದರಿಂದ ಮಾನಸಿಕ ಶಾಂತಿ ಲಭಿಸಲಿದೆ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಸಾಗುವ ಸಮಯ ಇದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಉಸಿರಾಟದ ಅಥವಾ ಶ್ವಾಸಕೋಶ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಪಡೆಯಬೇಕು. ಹೀಗೆ ಮಾಡುವುದರಿಂದ ದೊಡ್ಡ ಸಮಸ್ಯೆಗಳಿಂದ ಪಾರಾಗಬಹುದು.
ಕೇತು ಗ್ರಹವು ಮೂರನೇ ಸ್ಥಾನದಲ್ಲಿ ಶನಿಯ ಜತೆಗೆ ಇರಲಿದೆ. ಈಗಿರುವ ಕೆಲಸಕ್ಕಿಂತ ಉತ್ತಮ ಸಂಬಳ ದೊರೆಯುವಂಥ ಉದ್ಯೋಗ ಸಿಗುವ ಅವಕಾಶಗಳಿವೆ. ಆರ್ಥಿಕವಾಗಿ ಬಹಳ ದೃಢವಾಗಿರುತ್ತೀರಿ. ಅನಗತ್ಯ ಖರ್ಚುಗಳು ಆಗದಿರುವ ರೀತಿಯಲ್ಲಿ ಎಚ್ಚರಿಕೆ ವಹಿಸಿ. ಭವಿಷ್ಯದ ಅಗತ್ಯಗಳಿಗಾಗಿ ಹಣಕಾಸು ಕೂಡಿಡುವ ಬಗ್ಗೆ ಆಲೋಚನೆ ಮಾಡಿ. ವಾಸಕ್ಕಾಗಿ ಮನೆ- ನಿವೇಶನ ಖರೀದಿಸುವ ಆಲೋಚನೆ ಇದ್ದರೆ ಈಗ ಬಹಳ ಸೂಕ್ತ ಕಾಲ. ನಿಮ್ಮ ಆಲೋಚನೆಯನ್ನು ಕಾರ್ಯರೂಪಕ್ಕೆ ತರಬಹುದು. ಅದಕ್ಕೆ ಪೂರಕ ವಾತಾವರಣ ನಿರ್ಮಾಣ ಆಗುತ್ತದೆ.
ವೃಶ್ಚಿಕ: ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ವಹಿಸಬೇಕು
ನಿಮ್ಮ ರಾಶಿಯಿಂದ ಎಂಟನೇ ಮನೆಯಲ್ಲಿ ರಾಹುವಿನ ಸಂಚಾರ ಆಗುತ್ತದೆ. ಈ ಅವಧಿಯು ಉದ್ಯೋಗ ವಿಚಾರದಲ್ಲಿ ನಿಮಗೆ ಬಹಳ ಸವಾಲಿನದಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಾಗುತ್ತವೆ. ಆರೋಗ್ಯದ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳ ಬಗ್ಗೆ ಕೂಡ ನಿರ್ಲಕ್ಷ್ಯ ಮಾಡಬಾರದು. ಆರೋಗ್ಯ ಸಮಸ್ಯೆ ವಿಪರೀತಕ್ಕೆ ಹೋಗುವ ಮುನ್ನವೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಿ. ಉದ್ಯೋಗ ಸ್ಥಳದಲ್ಲಿ ಒತ್ತಡ ಹೆಚ್ಚಾಗಿರುತ್ತದೆ. ಆದರೆ ವ್ಯಾಪಾರಸ್ಥರಿಗೆ ಅನುಕೂಲ ಇದೆ. ಹೆಚ್ಚಿನ ಮೌಲ್ಯದ ಅರ್ಡರ್ ಗಳು ದೊರೆಯುತ್ತವೆ.
ಕೇತು ಗ್ರಹವು ಶನಿಯ ಜತೆಗೆ ನಿಮ್ಮ ರಾಶಿಯಿಂದ ಎರಡನೇ ಮನೆಯಲ್ಲಿ ಸಂಚಾರ ಮಾಡಲಿದೆ. ಇದರಿಂದ ನಿಮ್ಮ ಹಣಕಾಸಿನ ಒಳಹರಿವಿಗೆ ತಡೆ ಒಡ್ಡಿದಂತೆ ಆಗುತ್ತದೆ. ಹಣಕಾಸಿಗೆ ಸಂಬಂಧಿಸಿದ ವಿಚಾರಗಳನ್ನು ಜಾಗರೂಕತೆಯಿಂದ ನಿರ್ವಹಿಸಬೇಕು. ತುಂಬ ಪ್ರಮುಖವಾದ ಅರ್ಥಿಕ ತೀರ್ಮಾನಗಳನ್ನು ಕೈಗೊಳ್ಳಬೇಡಿ. ಆರೋಗ್ಯದ ವಿಚಾರದಲ್ಲೂ ಅತಿಯಾದ ಜಾಗ್ರತೆ ಅಗತ್ಯ. ನೀವು ತಾಳ್ಮೆ ಹಾಗೂ ಸಂಯಮದಿಂದ ಇರಬೇಕು. ನಿಮಗಿಂತ ಮೇಲ್ ಸ್ತರದಲ್ಲಿ ಇರುವವರ ಜತೆ ಮಾತುಕತೆ ಆಡುವಾಗ ಪದ ಬಳಕೆ ಬಗ್ಗೆ ಎಚ್ಚರ ಇರಲಿ.
Astrology yogas: ಗಜಕೇಸರಿ ಯೋಗದ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿ
ಧನುಸ್ಸು: ಜಾಣತನದಿಂದ ಸನ್ನಿವೇಶಗಳನ್ನು ಎದುರಿಸಿ
ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನೇನು ಸಂಬಂಧಗಳು ನಿಶ್ಚಯ ಆಗಬೇಕು ಅನ್ನುವಷ್ಟರಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿ ರಾಹು ವಿವಿಧ ಸಮಸ್ಯೆಗಳನ್ನು ತಂದೊಡ್ಡುತ್ತಾನೆ. ಮೇಲಿಂದ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಾ ಅಸಮಾಧಾನ ಹೆಚ್ಚಾಗುತ್ತಲೇ ಹೋಗುತ್ತದೆ. ತುಂಬ ಸೂಕ್ಷ್ಮವಾಗಿ ಹಾಗೂ ಜಾಣತನದಿಂದ ಈ ಸನ್ನಿವೇಶವನ್ನು ಎದುರಿಸಬೇಕು. ಉದ್ಯೋಗ ಸ್ಥಳದಲ್ಲಿ ಅಂಥ ಸಮಸ್ಯೆಗಳು ಏನಿಲ್ಲ. ಆದರೆ ಯಾವುದೇ ದೊಡ್ಡ ಮಟ್ಟದ ಹಣಕಾಸು ಅನುಕೂಲಗಳು ಆಗುವುದಿಲ್ಲ. ನಿಮ್ಮ ಹಣಕಾಸಿನ ವ್ಯವಹಾರಗಳನ್ನು ಹುಷಾರಾಗಿ ನಿರ್ವಹಣೆ ಮಾಡಿ. ಹೆಚ್ಚಿನ ಹಣ ಸಂಪಾದಿಸಬೇಕು ಅನ್ನುವ ಕಾರಣಕ್ಕೆ ಮೈ ಮೇಲೆ ಅಪಾಯ ಎಳೆದುಕೊಳ್ಳಬೇಡಿ.
ಕೇತು ಗ್ರಹ ನಿಮ್ಮ ಜನ್ಮ ರಾಶಿಯಲ್ಲೇ ಇದ್ದು, ಶನಿ ಕೂಡ ಜತೆಯಾಗಿದೆ. ಗ್ರಹ ಸ್ಥಿತಿ ಹೀಗಿರುವಾಗ ಅಭಿವೃದ್ಧಿ ಕಾಣಲು ಕಷ್ಟವಾಗುತ್ತದೆ. ವ್ಯಾಪಾರಸ್ಥರು ಏಳ್ಗೆ ಅಥವಾ ಪ್ರಗತಿಗಾಗಿ ಬಹಳ ಶ್ರಮ ಪಡಬೇಕಾಗುತ್ತದೆ. ಮಧ್ಯಮ ವಯಸ್ಕರು ಹಾಗೂ ಅದರ ಮೇಲ್ಪಟ್ಟವರು ಸಂದಿ ನೋವುಗಳಿಂದ ಬಳಲುವ ಸಾಧ್ಯತೆ ಇದೆ. ಈ ಬಗ್ಗೆ ಬಹಳ ಹುಷಾರಾಗಿರಬೇಕು. ಹಣಕಾಸು ವ್ಯವಹಾರಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು. ಹುಚ್ಚು ಸಾಹಸಗಳನ್ನು ಮಾಡಬೇಡಿ. ಹಿರಿಯರ- ಅನುಭವಿಗಳ ಮಾತನ್ನು ಕೇಳಿಸಿಕೊಂಡು ಮುಂದುವರಿಯಿರಿ.
ಮಕರ: ಆರ್ಥಿಕವ ಸ್ಥಿತಿ ಉತ್ತಮ ಸ್ಥಿತಿಯಿರುತ್ತದೆ
ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ರಾಹು ಸಂಚಾರ ಮಾಡುವುದರಿಂದ ಇದು ಪ್ರಗತಿಗೆ ಉತ್ತಮ ಸಮಯ. ವ್ಯಾಪಾರಸ್ಥರು ಸ್ವಲ್ಪ ಮಟ್ಟಿಗೆ ಲಾಭಾಂಶವನ್ನು ಕಡಿಮೆ ಮಾಡಿಕೊಂಡು, ಸ್ಪರ್ಧಿಗಳ ವಿರುದ್ಧ ಮೇಲುಗೈ ಸಾಧಿಸುವ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು. ಉದ್ಯೋಗ ಸ್ಥಳದಲ್ಲಿ ಭದ್ರತೆಗೆ ಸಮಸ್ಯೆ ಇರುವುದಿಲ್ಲ. ಆದರೆ ನಿಮ್ಮ ಕೈಯಲ್ಲಿ ಇರುವ ಕೆಲಸದ ಬಗ್ಗೆ ಹೆಚ್ಚು ಶ್ರದ್ಧೆ-ಏಕಾಗ್ರತೆ ಇರಲಿ. ಆರ್ಥಿಕವಾಗಿ ನಿಮ್ಮ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯ ವಿಚಾರದಲ್ಲಿ ಮಾತ್ರ ಬಹಳ ಎಚ್ಚರಿಕೆಯಿಂದ ಇರಬೇಕು. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ವೈಯಕ್ತಿಕ ಬದುಕು ಸಮಾಧಾನಕರವಾಗಿರುತ್ತದೆ.
ಕೇತು ಗ್ರಹವು ಶನಿಯೊಟ್ಟಿಗೆ ನಿಮ್ಮ ರಾಶಿಗೆ ಹನ್ನೆರಡನೇ ಸ್ಥಾನದಲ್ಲಿದೆ. ನಿಮ್ಮ ವೈಯಕ್ತಿಕ ಖರ್ಚು ಹಾಗೂ ಅನಗತ್ಯ ಖರ್ಚುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಭವಿಷ್ಯದ ಅಗತ್ಯಗಳಿಗೆ ಹಣಕಾಸು ಕೂಡಿಡುವ ಬಗ್ಗೆ ಯೋಚಿಸಿ. ದೀರ್ಘಾವಧಿಗೆ ಬೇಕಾದಷ್ಟು ಹಣವನ್ನು, ಒಂದು ವೇಳೆ ಅನಿರೀಕ್ಷಿತ ಪರಿಸ್ಥಿತಿ ಉದ್ಭವಿಸಿದರೆ ಬೇಕಾದ ಹಣಕಾಸು ವ್ಯವಸ್ಥೆಗೆ ಯೋಜನೆ ರೂಪಿಸಿಟ್ಟುಕೊಳ್ಳಿ. ಅಧ್ಯಾತ್ಮ ವಿಚಾರಗಳತ್ತ ನಿಮ್ಮ ಮನಸ್ಸು ಆಕರ್ಷಿತವಾಗುತ್ತದೆ. ನಿಮ್ಮ ಆಸಕ್ತಿಗೆ ಅನುಗುಣವಾಗಿ ಮುಂದುವರಿಯಲು ಹಾಗೂ ಆ ಮೂಲಕ ಪ್ರಗತಿ ಸಾಧಿಸಲು ಇದು ಸೂಕ್ತ ಸಮಯ.
ಕುಂಭ: ಸಟ್ಟಾ- ಜೂಜು ವ್ಯವಹಾರಗಳಲ್ಲಿ ಪಾಲ್ಗೊಳ್ಳಬೇಡಿ
ರಾಹು ಗ್ರಹವು ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಸಂಚಾರ ಮಾಡುವುದರಿಂದ ಸಟ್ಟಾ ವ್ಯವಹಾರಗಳ ಕಡೆಗೆ ನಿಮ್ಮ ಮನಸು ವಾಲುತ್ತದೆ. ಯಾವುದೇ ಸಟ್ಟಾ- ಜೂಜು ವ್ಯವಹಾರಗಳಲ್ಲಿ ಪಾಲ್ಗೊಳ್ಳಬೇಡಿ. ಇದರಿಂದ ಆರ್ಥಿಕವಾಗಿ ಲಾಭ ಆಗುವುದಿಲ್ಲ. ವಿಜ್ಞಾನ ವಿಷಯದಲ್ಲಿ ಅಧ್ಯಯನ ಮಾಡುವವರಿಗೆ ಪ್ರೋತ್ಸಾಹಕರವಾದ ವಾತಾವರಣ ಇರುತ್ತದೆ. ಸಮಾನ ಮನಸ್ಕ ವ್ಯಕ್ತಿಯೊಬ್ಬರ ಜತೆಗೆ ಸಂಬಂಧ ಗಾಢವಾಗುವ ಅಥವಾ ದೃಢವಾಗುವ ಸಾಧ್ಯತೆಗಳಿವೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ, ಅದರಲ್ಲೂ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಅಧ್ಯಯನ ಮಾಡುತ್ತಿರುವವರಿಗೆ ಅದ್ಭುತವಾದ ಸಮಯವಿದು.
ಕೇತು ಗ್ರಹವು ಶನಿಯೊಂದಿಗೆ ಹನ್ನೊಂದನೇ ಸ್ಥಾನದಲ್ಲಿ ಸಂಚಾರ ಮಾಡಲಿದೆ. ಇದರಿಂದ ದಿಢೀರ್ ಧನಾಗಮ ಆಗಬಹುದು. ಈಗಾಗಲೇ ಇರುವ ಸಂಬಂಧವೊಂದರಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ. ಇಂಥ ಸನ್ನಿವೇಶವನ್ನು ಚಾಕಚಾಕ್ಯತೆಯಿಂದ ನಿರ್ವಹಿಸಿ. ಆ ವ್ಯಕ್ತಿ ಬಗ್ಗೆ ನಿಮಗೆ ಇರುವ ಪ್ರೀತಿ- ಗೌರವ ಹಾಗೂ ವಿಶ್ವಾಸವನ್ನು ತೋರ್ಪಡಿಸಿ. ಆಗ ಸಂಬಂಧ ಹದಗೆಡುವ ಅತಂಕ ಕಡಿಮೆ ಆಗುತ್ತದೆ. ಇನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ಸಮಸ್ಯೆಗಳು ಇಲ್ಲ. ಆದ್ದರಿಂದ ಚಿಂತೆ ಮಾಡುವ ಅಗತ್ಯವಿಲ್ಲ.
ಮೀನ: ನಿವೇಶನ, ವಾಹನ ಖರೀದಿಸುವ ಸಾಧ್ಯತೆ
ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ರಾಹು ಗ್ರಹದ ಸಂಚಾರ ಆಗಲಿದೆ. ನಿಮ್ಮ ಕುಟುಂಬದ ಜತೆಗೆ ನೆಮ್ಮದಿಯಾಗಿ ವಾಸಿಸಲು ನಿವೇಶನ ಅಥವಾ ಮನೆ ಖರೀದಿ ಮಾಡುವ ಸಾಧ್ಯತೆ ಇದೆ. ಇದರ ಜತೆಗೆ ಹೊಸ ವಾಹನವನ್ನು ಖರೀದಿ ಮಾಡುವ ಸಾಧ್ಯತೆ ಕೂಡ ಇದೆ. ಮನೆಗೆ ಸಂಬಂಧಿಸಿದ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಸರಿಯಾಗಿ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು. ಆರ್ಥಿಕವಾಗಿ ನಿಮ್ಮ ಸ್ಥಿತಿ ಸದೃಢವಾಗಿರುತ್ತದೆ. ಇನ್ನು ಆರೋಗ್ಯ ವಿಚಾರವಾಗಿ ಯಾವುದೇ ಪ್ರಮುಖ ಸಮಸ್ಯೆಗಳು ತಲೆದೋರುವುದಿಲ್ಲ. ಒಟ್ಟಾರೆಯಾಗಿ ಈ ಅವಧಿಯಲ್ಲಿ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ.
ಹತ್ತನೇ ಮನೆಯಲ್ಲಿ ಶನಿ ಗ್ರಹದ ಜತೆಗೆ ಕೇತುವಿನ ಸಂಚಾರ ಆಗುತ್ತದೆ. ಇದರಿಂದ ಉದ್ಯೋಗಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸಮಸ್ಯೆಗಳು ಎದುರಾಗುತ್ತವೆ. ವ್ಯಾಪಾರಸ್ಥರು ಇನ್ನೂ ಹೆಚ್ಚಿನ ಶ್ರಮ ಹಾಕಲೇ ಬೇಕಾಗುತ್ತದೆ. ಆದರೆ ಭವಿಷ್ಯದ ಬಗ್ಗೆ ಒಂದಿಷ್ಟು ಅವಕಾಶಗಳು ತೆರೆದುಕೊಳ್ಳುತ್ತವೆ. ಇದರಿಂದ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಮನೆಯಲ್ಲಿನ ಹಿರಿಯರ ಅನಾರೋಗ್ಯ ಸಮಸ್ಯೆಯಿಂದ ಮಾನಸಿಕವಾಗಿ ಚಿಂತೆಗೆ ಈಡಾಗುತ್ತೀರಿ. ಈ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮುಖ್ಯ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.
ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.