ರಾಹು-ಕೇತು ಗ್ರಹಗಳ ಸ್ಥಾನ ಬದಲಾವಣೆ; ಯಾವ ರಾಶಿಗೆ ಏನು ಫಲ?
ರಾಹು-ಕೇತು ಗ್ರಹಗಳು ಸ್ಥಾನ ಬದಲಾವಣೆ ಮಾಡಲಿವೆ. ಇಷ್ಟು ಕಾಲ ಕರ್ಕಾಟಕ ರಾಶಿಯಲ್ಲಿದ್ದ ರಾಹು ಮಿಥುನಕ್ಕೆ ಪ್ರವೇಶ ಹಾಗೂ ಮಕರದಿಂದ ಧನುಸ್ಸು ರಾಶಿಗೆ ಕೇತು ಗ್ರಹ ಪ್ರವೇಶ ಆಗುತ್ತದೆ. ಮಾರ್ಚ್ 7ನೇ ತಾರೀಕು 2019ನೇ ಇಸವಿಯಲ್ಲಿ ಬದಲಾಗುವ ರಾಹು-ಕೇತು ಗ್ರಹಗಳು ಸೆಪ್ಟೆಂಬರ್ 23, 2020ರ ತನಕ ಅಲ್ಲೇ ಇರುತ್ತವೆ.
ಶನಿ ಗ್ರಹ ಒಂದು ರಾಶಿಯಲ್ಲಿ ಎರಡೂವರೆ ವರ್ಷ (ವಕ್ರ ಹೊರತುಪಡಿಸಿ) ಇರುತ್ತದೆ. ಆ ನಂತರ ಒಂದು ರಾಶಿಯಲ್ಲಿ ಹದಿನೆಂಟು ತಿಂಗಳ ಕಾಲ ಇರುವ ಗ್ರಹಗಳು ರಾಹು-ಕೇತು. ಈ ಎರಡೂ ಗ್ರಹಗಳನ್ನು ಸಮ ಸಪ್ತಕಗಳು ಎಂದು ಕೂಡ ಕರೆಯಲಾಗುತ್ತದೆ. ಇವು ಅಪ್ರದಕ್ಷಿಣೆಯಾಗಿ ಸುತ್ತುತ್ತವೆ. ಅಂದರೆ ಗಡಿಯಾರದ ಮುಳ್ಳುಗಳು ಹಿಂಬದಿ ಚಲಿಸಿದಂತೆ.
2019ರ ವರ್ಷ ಭವಿಷ್ಯ; ತುಲಾ ರಾಶಿಯಿಂದ ಮೀನ ರಾಶಿವರೆಗೆ
ಇನ್ನು ಗುರು ಗ್ರಹಕ್ಕಿಂತ (ಒಂದು ರಾಶಿಯಲ್ಲಿ ಒಂದು ವರ್ಷ) ಹೆಚ್ಚು ಸಮಯ ಒಂದು ರಾಶಿಯಲ್ಲಿ ಇರುವ ಈ ಎರಡು ಗ್ರಹಗಳು ಛಾಯಾ ಗ್ರಹಗಳು ಅಂತಲೂ ಅನಿಸಿಕೊಳ್ಳುತ್ತವೆ. ರಾಹು-ಕೇತುಗಳು ಗೋಚಾರದಲ್ಲಿ ಕೆಟ್ಟ ಸ್ಥಿತಿಯಲ್ಲಿದ್ದಾಗ, ಅದೇ ರೀತಿ ಜನ್ಮ ಜಾತಕದಲ್ಲೂ ಕ್ರೂರವಾಗಿದ್ದರೆ ಸೂಕ್ತ ಶಾಂತಿ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
ಇಲ್ಲದಿದ್ದಲ್ಲಿ ವಿವಾಹ ಸಮಸ್ಯೆ, ಸಂತಾನ ತೊಂದರೆ, ಉದ್ಯೋಗ, ಚರ್ಮಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ, ವಿದ್ಯಾ ಭಂಗ, ವ್ಯಾಪಾರದಲ್ಲಿ ನಷ್ಟ ಇತ್ಯಾದಿ ದುಷ್ಪ್ರಭಾವ ಬೀರುತ್ತದೆ. ಇನ್ನೇಕೆ ತಡ, ನಿಮ್ಮ ರಾಶಿಗೆ ರಾಹು-ಕೇತುಗಳ ಪ್ರಭಾವ ಹೇಗಿದೆ ಓದಿಕೊಳ್ಳಿ.
ಮೇಷ: ವ್ಯವಹಾರಸ್ಥರು, ವೃತ್ತಿಪರರಿಗೆ ಬೆಂಬಲ
ನಿಮ್ಮ ಜನ್ಮ ರಾಶಿಯಿಂದ ಮೂರನೇ ಮನೆಯಾದ ಮಿಥುನ ರಾಶಿಯಲ್ಲಿ ರಾಹು ಸಂಚಾರ ಮಾಡಲಿದೆ. ಅಲ್ಪ ಪ್ರಯಾಣ, ಸಂಪತ್ತು ವಿಸ್ತರಣೆಗಾಗಿ ಸ್ವಲ್ಪ ಮಟ್ಟಿಗಾದರೂ ಅಪಾಯ ಮೈ ಮೇಲೆ ಎಳೆದುಕೊಳ್ಳುವುದು, ಸೋದರರು- ಸಂಬಂಧಿಕರೊಂದಿಗೆ ಸಂಬಂಧ ಹಾಗೂ ಬರವಣಿಗೆಯನ್ನು ಇದು ಸೂಚಿಸುತ್ತದೆ. ವ್ಯವಹಾರಸ್ಥರು- ವೃತ್ತಿಪರರಿಗೆ ಬೆಂಬಲ ದೊರೆಯುತ್ತದೆ. ಮಾರಾಟ ಹೆಚ್ಚಾಗುತ್ತದೆ. ಉದ್ಯೋಗಸ್ಥರಿಗೆ ಮುಖ್ಯವಾದ ಕೆಲಸ ವಹಿಸಲಾಗುತ್ತದೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ಬಗ್ಗೆ ಗಮನ ಇರಲಿ.
ಕೇತು ಗ್ರಹವು ಅಗ್ನಿ ತತ್ವದ ಧನುಸ್ಸು ರಾಶಿಯಲ್ಲಿ ಶನಿಯೊಂದಿಗೆ ಇರುತ್ತದೆ. ನಿಮ್ಮ ರಾಶಿಗೆ ಒಂಬತ್ತನೇ ಮನೆಯಲ್ಲಿ ಶನಿಯ ಜತೆಗೆ ಕೇತು ಸಂಚಾರ ಆಗುತ್ತದೆ. ವೃತ್ತಿ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರೋತ್ಸಾಹದಾಯಕವಾದ ಅವಕಾಶ ಸಿಗುವುದು ತಡ ಆಗುತ್ತದೆ. ಇದರಿಂದ ಯೋಜನೆಗಳು ಮುಂದಕ್ಕೆ ಹೋಗುತ್ತವೆ. ಮುಜುಗರ ಅನುಭವಿಸುವಂತಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಸ್ಥಿರತೆ ಇರುತ್ತದೆ. ಆದರೂ ಸಣ್ಣ-ಪುಟ್ಟ ಹಣಕಾಸಿನ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಈ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಿ.
ಮೇಷ ರಾಶಿಯವರ ಗುಣ-ಸ್ವಭಾವ, ಅದೃಷ್ಟ ರತ್ನ, ದಿನಾಂಕ, ದೇವತೆಗಳು
ವೃಷಭ: ಉದ್ಯೋಗದ ಒತ್ತಡ ಜಾಸ್ತಿ ಆಗುತ್ತದೆ
ನಿಮ್ಮ ರಾಶಿಯಿಂದ ಎರಡನೇ ಸ್ಥಾನದಲ್ಲಿ ರಾಹು ಸಂಚಾರ ಮಾಡಲಿದೆ. ಮುಖ್ಯವಾಗಿ ಆರ್ಥಿಕ ಸ್ಥಿತಿ ಹಾಗೂ ಕುಟುಂಬದ ಬಗ್ಗೆ ಇದು ತಿಳಿಸುತ್ತದೆ. ಬೇರೆಯವರು ಸಹಾಯ ಮಾಡುತ್ತಾರೆ, ಬೆಂಬಲಕ್ಕೆ ನಿಲ್ಲುತ್ತಾರೆ ಅಂದರೆ ಮಾತ್ರ ನಿಮ್ಮ ಹಣಕಾಸಿನ ಹರಿವು ಹೆಚ್ಚಿಸಿಕೊಳ್ಳಲು ಯತ್ನಿಸಿ. ಕುಟುಂಬಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ, ನಾಜೂಕಾಗಿ ಪರಿಹರಿಸಿಕೊಳ್ಳಬೇಕು. ಕುಟುಂಬದ ಸಲುವಾಗಿ ಸ್ವಲ್ಪ ಹಣ ಎತ್ತಿಡಬೇಕು. ಯಾರೊಂದಿಗೂ ಬಿರುಸಿನ ಮಾತನಾಡಬೇಡಿ. ಉದ್ಯೋಗಸ್ಥರಿಗೆ ಒತ್ತಡ ಜಾಸ್ತಿ. ವ್ಯಾಪಾರಸ್ಥರಿಗೆ ಜನ್ಮ ಜಾತಕದಲ್ಲಿ ಉತ್ತಮ ಸ್ಥಿತಿಯಲ್ಲಿ ರಾಹು ಇದ್ದರೆ ಮಾತ್ರ ಅನುಕೂಲ.
ಕೇತು ಗ್ರಹವು ಶನಿಯೊಂದಿಗೆ ಧನುಸ್ಸು ರಾಶಿಯಲ್ಲಿ ಎಂಟನೇ ಮನೆಯಲ್ಲಿ ಸಂಚರಿಸುತ್ತದೆ. ಕೇತು ಹಾಗೂ ಶನಿ ಒಟ್ಟೊಟ್ಟಿಗೆ ಸಂಚಾರ ಮಾಡುವುದು ಒಳ್ಳೆ ಫಲಗಳನ್ನು ನೀಡುವುದಿಲ್ಲ. ವ್ಯಾಪಾರಸ್ಥರು ದೊಡ್ಡ ಮಟ್ಟದ ವ್ಯವಹಾರಗಳನ್ನು ಪಡೆಯಲು ವಿಪರೀತ ಶ್ರಮ ಪಡಬೇಕು. ಹಳೇ ಗ್ರಾಹಕರು ಕೂಡ ದೂರ ಆಗುವ ಸಾಧ್ಯತೆ ಇರುತ್ತದೆ. ಒಂದು ಬಗೆಯ ಅಸಮಾಧಾನ ಉದ್ಭವ ಆಗುತ್ತದೆ. ಇದರಿಂದ ವಿಚಲಿತರಾಗಬೇಡಿ. ನಿಮ್ಮ ಆರೋಗ್ಯ ವಿಚಾರದಲ್ಲಿ ಹೆಚ್ಚಿನ ಗಮನ ನೀಡುವುದು ತುಂಬ ಮುಖ್ಯವಾಗುತ್ತದೆ.
ವೃಷಭ ರಾಶಿಯವರ ಗುಣ, ಸ್ವಭಾವ, ಕಡ್ಡಾಯವಾಗಿ ಮಾಡಿಸಬೇಕಾದ ಶಾಂತಿಗಳು
ಮಿಥುನ: ಹೊಂದಾಣಿಕೆ ಸ್ವಭಾವ ಬೆಳೆಸಿಕೊಂಡು ಹೋಗಬೇಕು
ನಿಮ್ಮದೇ ಜನ್ಮ ರಾಶಿಯಲ್ಲಿ ರಾಹು ಸಂಚಾರ ಆಗುತ್ತದೆ. ನಿಮಗೆ ಎರಡು ಆಯ್ಕೆ ಇರುತ್ತದೆ. ಒಂದೋ ಕೂಗಾಡಿ ಕಿರುಚಾಡಿಯಾದರೂ ನಿಮ್ಮ ಧ್ವನಿ ಎತ್ತರಿಸಿ, ನೀವೇ ಸರಿ ಎಂದು ಸಾಬೀತುಪಡಿಸಬೇಕು. ಅಥವಾ ಸುಮ್ಮನಿದ್ದು, ಇತರರ ಜತೆಗಿನ ಹೊಂದಾಣಿಕೆ ಸ್ವಭಾವ ಬೆಳೆಸಿಕೊಂಡು ಹೋಗಬೇಕು. ಇದರಿಂದ ನಿಮಗೆ ಭವಿಷ್ಯದಲ್ಲಿ ಅನುಕೂಲವಿದೆ. ಉದ್ಯೋಗ ಕ್ಷೇತ್ರದಲ್ಲಿನ ಪ್ರಗತಿಗೆ ಹೆಚ್ಚಿನ ಶ್ರಮ ಹಾಕಬೇಕು. ದೊಡ್ಡ ವ್ಯವಹಾರಗಳನ್ನು ಕುದುರಿಸಬೇಕಿದ್ದಲ್ಲಿ ವ್ಯಾಪಾರಿಗಳು ಹೆಚ್ಚು ಶ್ರಮ ಹಾಕಬೇಕು. ಉದ್ಯೋಗದಲ್ಲಿ ಮುಂದಿನ ಬೆಳವಣಿಗೆ ಬಗ್ಗೆ ಆತಂಕ ಕಾಡುತ್ತದೆ. ನಿತ್ಯದ ಕೆಲಸಗಳನ್ನೇ ಪರಿಣಾಮಕಾರಿಯಾಗಿ ಮಾಡುವುದು ಸವಾಲಾಗಿ ಪರಿಣಮಿಸುತ್ತದೆ.
ಕೇತು ಗ್ರಹವು ಏಳನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಜತೆಗೆ ಶನಿ ಕೂಡ ಇರುತ್ತದೆ. ಈಗಾಗಲೇ ಗಟ್ಟಿ ಆಗಿರುವ ಸಂಬಂಧಗಳಿಗೆ ತೊಡಕಾಗುತ್ತದೆ. ಸಂಗಾತಿ ಜತೆಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳಲು ಹರಸಾಹಸ ಪಡಬೇಕು. ಉದ್ಯೋಗಸ್ಥರು ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಕಷ್ಟವಾಗುತ್ತದೆ. ಶ್ವಾಸಕೋಶ-ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿಗೆ ಸರಿಯಾದ ಚಿಕಿತ್ಸೆ ಪಡೆಯಿರಿ. ಮಧ್ಯ ವಯಸ್ಸಿನ ಮೇಲ್ಪಟ್ಟವರಿಗೆ ಸಂಧಿ ವಾತ ಕಾಡಬಹುದು. ಆದ್ದರಿಂದ ಈ ಬಗ್ಗೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.
ಕರ್ಕಾಟಕ: ಅನಿರೀಕ್ಷಿತ ಖರ್ಚನ್ನು ನಿಭಾಯಿಸಬೇಕು
ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ರಾಹುವಿನ ಸಂಚಾರ ಆಗುತ್ತದೆ. ಒಂದೋ ನಿಮ್ಮ ಸಂಪತ್ತು ವೃದ್ಧಿ ಆಗಬಹುದು ಅಥವಾ ಕುಸಿತ ಕಾಣಬಹುದು. ಈ ಹಿಂದೆ ನೀವು ಹೇಗೆ ನಡೆದುಕೊಂಡಿದ್ದಿರಿ ಎಂಬ ಆಧಾರದ ಮೇಲೆ ಫಲಿತಾಂಶ ಇರುತ್ತದೆ. ವಿನಯವಂತರಾಗಿ ವರ್ತಿಸಿದರೆ, ಮೃದುವಾಗಿ ಮಾತನಾಡಿದರೆ ಉತ್ತಮ ಆರ್ಥಿಕ ಅನುಕೂಲ ನಿರೀಕ್ಷಿಸಬಹುದು. ಅನಿರೀಕ್ಷಿತ ಖರ್ಚು ನಿಭಾಯಿಸಬೇಕಾಗುತ್ತದೆ. ದೀರ್ಘಾವಧಿ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಖರ್ಚನ್ನು ನಿರ್ವಹಿಸಿ. ಅಗತ್ಯಕ್ಕೆ ಬೇಕಾದಷ್ಟು ಹಣ ಇಟ್ಟುಕೊಳ್ಳಿ. ವೈಯಕ್ತಿಕ ಖರ್ಚಿನ ಬಗ್ಗೆ ಗಮನ ಅಗತ್ಯ. ಹಣ ಉಳಿತಾಯದ ಬಗ್ಗೆ ಎಚ್ಚರಿಕೆ ಅಗತ್ಯ. ವ್ಯಾಪಾರಿಗಳಿಗೆ ಮಾರಾಟ ಕುಸಿತ ಇದೆ. ಉದ್ಯೋಗಿಗಳು ಹೆಚ್ಚಿನ ಸಮಯ ಕೆಲಸದಲ್ಲೇ ಕಳೆಯಬೇಕಾಗುತ್ತದೆ.
ಆರನೇ ಮನೆಯಲ್ಲಿ ಶನಿಯ ಜತೆಗೆ ಕೇತುವಿನ ಸಂಚಾರ ಆಗುತ್ತದೆ. ಉದ್ಯೋಗ ಬದಲಾವಣೆ ಮಾಡುವ ಆಲೋಚನೆ ಇರುವವರಿಗೆ ಅಂಥ ಅನುಕೂಲ ಆಗುವುದಿಲ್ಲ. ಸ್ಪರ್ಧಿಗಳ ವಿರುದ್ಧ ಮೇಲುಗೈ ಸಾಧಿಸಲು ವ್ಯಾಪಾರಸ್ಥರು ಹೆಚ್ಚು ಶ್ರಮ ಹಾಕವೇಕಾಗುತ್ತದೆ. ದಿಢೀರನೇ ಉದ್ಭವ ಆಗುವ ಖರ್ಚುಗಳಿಗೆ ಹಣ ಹೊಂದಿಸಲು ಶ್ರಮ ಹಾಕಬೇಕಾಗುತ್ತದೆ. ಹಣದ ಒಳ ಹರಿವಿನಲ್ಲಿ ಏರುಪೇರಾಗುತ್ತದೆ. ಕೆಲವು ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಆದ್ದರಿಂದ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಕುಜ ದೋಷ ಎಂದರೇನು? ಪರಿಹಾರ ಮಾರ್ಗಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಸಿಂಹ: ಹೊಸ ಸಂಬಂಧಗಳ ಬಗ್ಗೆ ಎಚ್ಚರಿಕೆ ಇರಲಿ
ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ರಾಹುವಿನ ಸಂಚಾರ ಆಗಲಿದೆ. ಆರ್ಥಿಕವಾಗಿ ಅನುಕೂಲ ತರುವ ಅವಕಾಶಗಳ ಬಗ್ಗೆ ಹೆಚ್ಚು ಯೋಚನೆ, ಕೆಲಸ ಮಾಡುತ್ತೀರಿ. ಆದರೆ ನಿಮ್ಮ ನಿರೀಕ್ಷೆ ಜಾಸ್ತಿ ಮಾಡಬೇಡಿ. ಕೆಲವು ಭ್ರಮಾಧೀನ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ಹೊಸ ಸಂಬಂಧಗಳ ಬಗ್ಗೆ ಎಚ್ಚರವಿರಲಿ. ಆ ವ್ಯಕ್ತಿಗೆ ವಿಪರೀತ ಮೆತ್ತಿಕೊಳ್ಳಬೇಡಿ. ವ್ಯಾಪಾರಸ್ಥರು ಯಶಸ್ಸು ಪಡೆಯಲು ವಿಪರೀತ ಶ್ರಮ ಹಾಕಬೇಕಾಗುತ್ತದೆ. ಉದ್ಯೋಗಸ್ಥರು ತಪ್ಪುಗಳಾಗದಂತೆ ಬಹಳ ಎಚ್ಚರಿಕೆ ವಹಿಸಬೇಕು. ಆರೋಗ್ಯ ವಿಚಾರದಲ್ಲಿ, ಅದರಲ್ಲೂ ಶ್ವಾಸಕೋಶ ಸಮಸ್ಯೆ ಬಗ್ಗೆ ಎಚ್ಚರಿಕೆ ಇರಲಿ. ಹಣದ ಆಸೆಗೆ ಬಿದ್ದು, ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.
ಐದನೇ ಮನೆಯಲ್ಲಿ ಶನಿಯ ಜತೆಗೂಡಿ ಕೇತುವಿನ ಸಂಚಾರ ಆಗುತ್ತದೆ. ಆರೋಗ್ಯದ ವಿಚಾರದಲ್ಲಿ ಇದು ಸೂಕ್ತ ಅಲ್ಲ. ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹಳ ಎಚ್ಚರಿಕೆಯಿಂದ ಇರಬೇಕು. ಮಧ್ಯಮ ವಯಸ್ಸನ್ನು ದಾಟಿದವರು ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಯಮಿತವಾದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಹಣಕಾಸು ವಿಚಾರಗಳನ್ನು ಸರಿಯಾಗಿ ನಿರ್ವಹಿಸಬೇಕು. ಎಚ್ಚರಿಕೆ ವಹಿಸಬೇಕು. ವೈಯಕ್ತಿಕ ಹಾಗೂ ಅನಗತ್ಯ ಖರ್ಚುಗಳ ಬಗ್ಗೆ ಬಹಳ ಹುಷಾರಾಗಿರಬೇಕು. ಈ ಎಲ್ಲ ಎಚ್ಚರಿಕೆಯನ್ನು ಮನಸಿಗೆ ತೆಗೆದುಕೊಂಡು, ಮುಂದಿನ ಹೆಜ್ಜೆಗಳನ್ನು ಇಡಿ.
ಕನ್ಯಾ: ವೇತನ ಹೆಚ್ಚಳ ನಿರೀಕ್ಷೆ ಮಾಡಬಹುದು
ಮಿಥುನ ರಾಶಿಯಲ್ಲಿ ರಾಹು ಸಂಚರಿಸುತ್ತಿದೆ ಅಂದರೆ ಅದು ನಿಮ್ಮ ಪಾಲಿಗೆ ಹತ್ತನೇ ಸ್ಥಾನ ಆಗುತ್ತದೆ. ಉದ್ಯೋಗಸ್ಥರು ಕೆಲಸದ ಸ್ಥಳದಲ್ಲಿ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳಬೇಕು. ಅಗತ್ಯ ಕಂಡುಬಂದಲ್ಲಿ ಹೆಚ್ಚು ಸಮಯ ಕೆಲಸಕ್ಕಾಗಿ ಮೀಸಲಿಡಬೇಕು. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಅನುಕೂಲವಿದೆ. ನಿಮ್ಮ ಸ್ಥಾನ ಭದ್ರ ಮಾಡಿಕೊಳ್ಳುವ ಸಲುವಾಗಿ ಶ್ರಮಪಟ್ಟು ಕಾರ್ಯ ನಿರ್ವಹಿಸಲು ಸಿದ್ಧರಾಗಿ. ವೇತನದಲ್ಲಿ ಹೆಚ್ಚಳ ನಿರೀಕ್ಷಿಸಬಹುದು. ವ್ಯಾಪಾರಸ್ಥರಿಗೆ ದೊಡ್ಡ ಅವಕಾಶ ಲಭಿಸಲಿದೆ. ಹಣಕಾಸಿನ ಸ್ಥಿತಿ ಉತ್ತಮ ಆಗಿರಲಿದೆ. ಯಾವುದೇ ಮುಖ್ಯ ಆರೋಗ್ಯ ಸಮಸ್ಯೆ ಏನೂ ಕಾಡುವುದಿಲ್ಲ. ಸಾಮಾನ್ಯವಾಗಿ ಆರೋಗ್ಯ ಚೆನ್ನಾಗಿರುತ್ತದೆ.
ಕೇತುವು ಶನಿಯೊಟ್ಟಿಗೆ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಸಾಮಾನ್ಯವಾಗಿ ಈ ಸ್ಥಾನವು ಶುಭ ಫಲವನ್ನು ನೀಡುವುದಿಲ್ಲ. ಉದ್ಯೋಗಕ್ಕೆ ಸಂಬಂಧಿಸಿದ ಬೆಳವಣಿಗೆಗೆ ಈ ಸಮಯ ಪೂರಕ ಆಗಿರುವುದಿಲ್ಲ. ವೈಯಕ್ತಿಕ ಬದುಕು ಕೂಡ ಸಮಾಧಾನಕರವಾಗಿ ಇರುವುದಿಲ್ಲ. ಸಮಾಧಾನವಾಗಿ ಇದ್ದು, ವೈಯಕ್ತಿಕ ಬದುಕಿನಲ್ಲಿ ಒಂದಿಷ್ಟು ತಾಳ್ಮೆಯನ್ನು ರೂಢಿಸಿಕೊಳ್ಳಿ. ಇಲ್ಲದಿದ್ದರೆ ಸಮಸ್ಯೆ ಭಾರ ಒತ್ತಡ ಎನಿಸುತ್ತದೆ.
ಗುರೂಜಿ ಹರಿ ಶಾಸ್ತ್ರಿ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಂಪರ್ಕ ಸಂಖ್ಯೆ 7996729783.
(ಮುಂದುವರಿಯುವುದು)