ಮತ್ತೆ ನಿಜವಾಯಿತು ಬೆಂಕಿ ಬಬಲಾದಿ ಸಿದ್ದು ಮುತ್ಯಾ ಕಾಲಜ್ಞಾನ
ಕೊರೊನಾ ಹಾವಳಿ ಕಮ್ಮಿಯಾಗುತ್ತಾ ಬಂದರೂ ಗಾಳಿಯ ಗಂಢಾಂತರ ಕಾಡಲಿದೆ ಎಂದು ಕೆಲವು ದಿನಗಳ ಹಿಂದೆ ಚಿಕ್ಕಬಳ್ಳಾಪುರದಲ್ಲಿ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು ಹೇಳಿದ್ದರು.
ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ವಿಜಯಪುರ ಜಿಲ್ಲೆಯ ಬಬಲಾದಿ ಮಠದ ಸಿದ್ದು ಮುತ್ಯಾ ನುಡಿದಿದ್ದ 2021ರ ಕಾಲಜ್ಞಾನದಲ್ಲಿನ ಅಂಶಗಳು ರಾಜ್ಯದ ಪ್ರಸಕ್ತ ಆಗುಹೋಗುಗಳಿಗೆ ತಾಳೆಯಾಗುತ್ತಿದೆ.
ಸುಮಾರು 500 ವರ್ಷಗಳ ಹಿಂದೆ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನವನ್ನು, ಪ್ರತಿ ವರ್ಷ ಓದಲಾಗುತ್ತದೆ. ವಿಶಿಷ್ಟವಾದ ಸಂಪ್ರದಾಯವನ್ನು ಹೊಂದಿರುವ ಬಬಲಾದಿ ಮಠಕ್ಕೆ ಬರುವ ಭಕ್ತರಿಗೆ ಮದ್ಯವನ್ನು ಪ್ರಸಾದ ರೂಪದಲ್ಲಿ ನೀಡಲಾಗುವುದು ಒಂದು ಕಡೆಯಾದರೆ, ಭಕ್ತರು ಸಹ ಮದ್ಯವನ್ನೇ ನೈವೇದ್ಯವಾಗಿ ತರುತ್ತಾರೆ.
"ರಾಜಕೀಯ ಏರಿಳಿತವಾಗಿದೆ, ಪಕ್ಷಪಕ್ಷದೊಳಗೆ ಅಸೂಹೆ ಮೂಡಲಿದೆ, ಗಾಳಿ ಹೆಚ್ಚಾಗಲಿದೆ, ಮಹಾವ್ಯಾಧಿ ಹುಟ್ಟುತ್ತದೆ, ಆಂಧ್ರ ತೆಲುಗು ರಾಜ್ಯಕ್ಕೆ ಕೇಡಾಗುತ್ತದೆ. ಯುದ್ದದ ಭಯವೂ ಇದೆ, ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನ ಎಂದಿಗೂ ಸುಳ್ಳಾಗುವುದಿಲ್ಲ ಮಕ್ಕಳ್ರಾ"ಎಂದು ಸಿದ್ದು ಮುತ್ಯಾ ಭವಿಷ್ಯ ನುಡಿದಿದ್ದರು. ಮುಂದೆ ಓದಿ..
ಗುರು ಚಕ್ರವರ್ತಿ, ಸದಾಶಿವ ಮೂಲಮಹಾ ಸಂಸ್ಥಾನ ಮಠ, ಶಿವಯೋಗಿ ಪ್ರಸನ್ನ ಬಬಲಾದಿ
"ಗುರು ಚಕ್ರವರ್ತಿ, ಸದಾಶಿವ ಮೂಲಮಹಾ ಸಂಸ್ಥಾನ ಮಠ, ಶಿವಯೋಗಿ ಪ್ರಸನ್ನ ಬಬಲಾದಿಯ ಈ ಬಾರಿಯ ಕಾಲಜ್ಞಾನ ಏನಂದರೆ, ಹಿಂಗಾರಿ ಕಂಡುಮಂಡಲ, ಒಂದು ಕಡೆ ಮಳೆಯಾದರೆ, ಇನ್ನೊಂದು ಕಡೆ ಮಳೆಯಿಲ್ಲ. ಕೋಮು ದಂಗೆಗಳು ಹೆಚ್ಚಾಗುತ್ತದೆ, ಅಗ್ನಿ ಅವಘಡ ಜಾಸ್ತಿಯಾಗುತ್ತದೆ. ಭೂಮಿ ಕುಪ್ಪಳಿಸುತ್ತದೆ, ಭೂಕಂಪನವಾಗಲಿದೆ"ಎಂದೂ ಕಳೆದ ವರ್ಷ ಭವಿಷ್ಯವನ್ನು ನುಡಿಯಲಾಗಿತ್ತು.
ಇನ್ನು ಮುಂದೆ ಅನ್ಯ ಕೋಮಿನ ದಂಗೆಗಳು ಏಳುತ್ತವೆ
ಕಳೆದ ವರ್ಷದ ಶಿವರಾತ್ರಿಯ ಸಂದರ್ಭದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕಾಲಜ್ಞಾನ ನುಡಿದಿದ್ದ ಸಿದ್ದು ಮುತ್ಯಾ ಕರಿಕಲ್ಲಿನ ಮೇಲೆ ಬಿಳಿರೇಖೆಯಂತೆ ಗೂಡಾರ್ಥದ ಭವಿಷ್ಯವನ್ನು ನುಡಿದಿದ್ದರು. "ಇನ್ನು ಮುಂದೆ ಅನ್ಯ ಕೋಮಿನ ದಂಗೆಗಳು ಏಳುತ್ತವೆ" ಎನ್ನುವ ಭವಿಷ್ಯವನ್ನು ನುಡಿಯಲಾಗಿತ್ತು. ಇದು, ರಾಜ್ಯಾದ್ಯಂತ ಕಿಚ್ಜು ಹಚ್ಚಿಸಿರುವ ಹಿಜಾಬ್ ವಿಚಾರದ ಬಗ್ಗೆ ನುಡಿಯಲಾಗಿರುವ ಭವಿಷ್ಯ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿಚಾರ
ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿಚಾರ ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಕೆಲವೊಂದು ಕಡೆ ಹಿಜಾಬ್ ಮೊದಲು ಪರೀಕ್ಷೆ ನಂತರ ಎನ್ನುವ ರೀತಿಯಲ್ಲಿ ವಿದ್ಯಾರ್ಥಿನಿಗಳು ತರಗತಿಯನ್ನು ಬಹಿಷ್ಕರಿಸಿದ್ದಾರೆ. ಜೊತೆಗೆ, ಮತ್ತೆ ಹಿಂದೂ ಮತ್ತು ಮುಸ್ಲಿಂ ದ್ವೇಷದ ವಾತಾವರಣಕ್ಕೆ ನಾಂದಿ ಹಾಡುತ್ತಿರುವಂತಿದೆ. ಹಿಜಾಬ್ ಮತ್ತು ಕೇಸರಿ ಶಲ್ಯ ಎಂದು ಆಯಾಯ ಕೋಮಿನವರು ತರಗತಿಗೆ ಹೋಗುವಂತೆ ಎತ್ತಿ ಕಟ್ಟಲಾಗುತ್ತಿದೆ. ಈ ವಿಚಾರ ಈಗ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಮಹಾಮಳೆಗೆ ದೇವರ ನಗರ ತಿರುಪತಿ ಅಕ್ಷರಶಃ ತತ್ತರಿಸಿ ಹೋಗಿತ್ತು
ತೆಲುಗು ರಾಜ್ಯಕ್ಕೆ ಜಲ ಕಂಟಕ ಎನ್ನುವ ಭವಿಷ್ಯವನ್ನೂ ನುಡಿಯಲಾಗಿತ್ತು. ಅದರಂತೆಯೆ ಕಂಡು ಕೇಳರಿಯದ ಮಹಾಮಳೆಗೆ ದೇವರ ನಗರ ತಿರುಪತಿ ಅಕ್ಷರಸಃ ತತ್ತರಿಸಿ ಹೋಗಿತ್ತು. ಗುಡ್ಡಗಳು ಜರಿದು, ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು, ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಕಳೆದ ವರ್ಷದ ಮಹಾಶಿವರಾತ್ರಿಯ ದಿನವಾದ ಗುರುವಾರ, 11 ಮಾರ್ಚ್, 2021ರಂದು ನುಡಿಯಲಾಗಿದ್ದ ಭವಿಷ್ಯದ ಸತ್ಯಾಸತ್ಯೆಯ ಚರ್ಚೆ ಮತ್ತೆ ಜೋರಾಗಿ ನಡೆಯಲಾರಂಭಿಸಿದೆ.