ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಬಗ್ಗೆ ಅಮ್ಮಣ್ಣಾಯ ಜ್ಯೋತಿಷ್ಯ ವಿಶ್ಲೇಷಣೆ
Recommended Video
"ನನಗೆ ಇಂಥ ಪ್ರಶ್ನೆಗಳಿಗೆ ಉತ್ತರ ಹೇಳುವುದು ಬಹಳ ಮುಜುಗರ ತರುತ್ತದೆ. ನಾವು ಇರೋದು ಸಾಮಾನ್ಯ ಜನರ ಕಷ್ಟಗಳಿಗೆ ಸರಳ ಪರಿಹಾರ ಹಾಗೂ ಮಾರ್ಗದರ್ಶನ ನೀಡುವುದಕ್ಕೆ ಮಾತ್ರ. ಕೆಲವು ಅನಿವಾರ್ಯ ಸಂದರ್ಭದಲ್ಲಿ ರಾಜಕೀಯ, ದೇಶದ ಆಗು- ಹೋಗು, ರಾಜಕಾರಣಿಗಳ ಭವಿಷ್ಯ ಹೇಳ್ತೇನೆ. ಇದೊಂದು ವಿಷಯ ಕೇಳಬೇಡಿ" ಅಂತಲೇ ಮೊದಲಿಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದರು.
ಒನ್ ಇಂಡಿಯಾ ಕನ್ನಡದಿಂದ ಅವರನ್ನು ಮಾತನಾಡಿಸಿ, ಗುರುವಾರ ನಡೆಯುವ ವಿಶ್ವಾಸ ಮತ ಯಾಚನೆ ಏನಾಗಬಹುದು ಎಂದು ಕೇಳಿದ್ದಕ್ಕೆ ಮೇಲಿನಂತೆ ಉತ್ತರಿಸಿದರು. ಚಂದ್ರ ಗ್ರಹಣದ ಪೂಜೆ- ಪುನಸ್ಕಾರ ಮುಗಿಸಿ, ಯಾವುದೋ ಅಧ್ಯಯನದಲ್ಲಿ ತೊಡಗಿದ್ದ ಅವರನ್ನು ಮತ್ತೆ ಕರ್ನಾಟಕದ ರಾಜಕಾರಣದ ಬಗ್ಗೆ ಮಾತನಾಡುವಂತೆ ಮಾಡಲು ಸ್ವಲ್ಪ ಶ್ರಮ ಪಡಬೇಕಾಯಿತು.
ಸದ್ಯ ಭವಿಷ್ಯದಲ್ಲೇ ಕರ್ನಾಟಕಕ್ಕೆ ದಲಿತ ಸಿಎಂ: ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ
"ನಾಳೆ ಮಕರ ರಾಶಿಯಲ್ಲಿ ಚಂದ್ರ, ಧನುವಿನಲ್ಲಿ ಶನಿ ಹಾಗೂ ಕೇತು, ವೃಶ್ಚಿಕದಲ್ಲಿ ಗುರು, ಮಿಥುನದಲ್ಲೇ ರಾಹು ಹೀಗೆ ಗ್ರಹ ಸ್ಥಿತಿ ಇದೆ. ಮಾಧ್ಯಮಗಳಲ್ಲಿ ಏನೋ ಪದ ಬಳಸುತ್ತಾರಲ್ಲಾ 'ಹೈಡ್ರಾಮಾ' ಆಂತ. ಅಂಥದ್ದೊಂದು ವಿಧಾನಸೌಧದಲ್ಲಿ ಕಾಣಲಿಕ್ಕೆ ಸಿಗುತ್ತದೆ. ಈವರೆಗೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿರದ ರೀತಿಯಲ್ಲಿ ಕುಮಾರಸ್ವಾಮಿ ಕಾಣಿಸಿಕೊಳ್ಳುತ್ತಾರೆ. ಕುಮಾರಸ್ವಾಮಿ ವಿಪರೀತ ಹತಾಶರಾದರೆ ಹೇಗಿರುತ್ತಾರೆ ಎಂಬುದನ್ನು ನೋಡಬೇಕಾಗುತ್ತದೆ" ಎಂದರು ಅಮ್ಮಣ್ಣಾಯ.
ವಿಶ್ವಾಸಮತ ಯಾಚನೆ ದಿನ ಷಷ್ಟಾಷ್ಟಮ ಆಗುತ್ತದೆ
ಗುರುವಾರ ವಿಶ್ವಾಸ ಮತ ಯಾಚನೆಗೆ ದಿನ ನಿಗದಿ ಆಗಿದ್ದು, ಆ ದಿನದ ನಕ್ಷತ್ರ ಇರುವ ರಾಶಿಯು ಕುಮಾರಸ್ವಾಮಿ ಅವರಿಗೆ ಷಷ್ಟಾಷ್ಟಮ ಆಗುತ್ತದೆ. ಅಂದರೆ ಚಂದ್ರನು ಇರುವ ರಾಶಿಯಿಂದ ಕುಮಾರಸ್ವಾಮಿ ಅವರ ಜನ್ಮ ರಾಶಿಯಾದ ಮಿಥುನವು ಆರನೇ ರಾಶಿಯಾದರೆ, ಮಿಥುನ ರಾಶಿಯಿಂದ ಮಕರ ರಾಶಿಯು ಎಂಟನೇ ಸ್ಥಾನ ಆಗುತ್ತದೆ. ಅಂದರೆ ಇದು ಅನುಕೂಲಕರ ಅಂಶ ಅಲ್ಲ. ಪ್ರಾಯಶಃ ಚಂದ್ರ ಗ್ರಹಣ ಕಳೆದ ನಂತರ ವಿಶ್ವಾಸ ಮತ ಯಾಚನೆ ಮಾಡಿದರೆ ಅನುಕೂಲ ಸ್ಥಿತಿ ಆಗಬಹುದು ಎಂದು ಯಾರಾದರೂ ಸಲಹೆ ನೀಡಿರಬಹುದು. ಅಥವಾ ವಿಶ್ವಾಸಮತ ಯಾಚನೆ ಅನಿವಾರ್ಯ ಆಗಿರುವುದರಿಂದ ಈ ದಿನ ಆಯ್ಕೆ ಮಾಡಿಕೊಂಡಿರಬಹುದು. ಪ್ರಜಾತಂತ್ರ ವ್ಯವಸ್ಥೆಗೆ ಗೌರವ ನೀಡುವುದು ಮುಖ್ಯ. ಆ ನಂತರದಲ್ಲಿ, ಆ ದಿನಕ್ಕೆ ಗ್ರಹ ಸ್ಥಿತಿಗಳ ಬಲ ಲೆಕ್ಕ ಹಾಕಬಹುದು, ಅಷ್ಟೆ.
ಕಳತ್ರ ಹಾಗೂ ಆಯುಷ್ಯ ಭಾವವನ್ನು ಸೂಚಿಸುತ್ತದೆ
ಇನ್ನು ಚಂದ್ರ ಗ್ರಹಣ ಈಗಷ್ಟೇ ಮುಗಿದಿದೆ. ಚಂದ್ರನು ಮನಸ್ಸಿನ ಕಾರಕ. ಈಗ ಮುಗಿದ ಖಂಡಗ್ರಾಸ ಚಂದ್ರ ಗ್ರಹಣವು ಕುಮಾರಸ್ವಾಮಿ ಅವರ ಜನ್ಮ ರಾಶಿಯಾದ ಮಿಥುನದಿಂದ ಏಳು ಹಾಗೂ ಎಂಟನೇ ಮನೆಯಲ್ಲಿ ಸಂಭವಿಸಿದೆ. ಅಂದರೆ, ಕಳತ್ರ ಭಾವ ಹಾಗೂ ಆಯುಷ್ಯ ಭಾವದ ಸೂಚನೆಯನ್ನು ನೀಡುತ್ತದೆ. ಕಳತ್ರ ಅಂದರೆ ಗಂಡ- ಹೆಂಡತಿ ಅಂತಲೇ ನೋಡಬೇಕೆಂದಿಲ್ಲ. ಪಾರ್ಟನರ್ ಷಿಪ್ ಕೂಡ ಇಲ್ಲಿ ಬಹಳ ಮುಖ್ಯವಾಗಿ ಸೂಚಿಸುತ್ತದೆ. ಪಾಲುದಾರಿಕೆ ಹಾಗೂ ಆಯುಷ್ಯ (ಇಲ್ಲಿ ಆಯುಷ್ಯ ಅಂದರೆ ಮರಣಕ್ಕೆ ಸಮಾನವಾದ ಅವಮಾನ, ಒತ್ತಡ, ಉದ್ವೇಗಗಳು)ವನ್ನು ಪ್ರತಿನಿಧಿಸುತ್ತದೆ. ಆ ಕಾರಕತ್ವಗಳಿಗೆ ಹಿನ್ನಡೆ ಆಗುತ್ತದೆ.
ನಲವತ್ತೆಂಟು ದಿನಗಳ ಕಾಲ ಗ್ರಹಣದ ಪ್ರಭಾವ
ಈ ಹಿಂದೆಯೂ ನಾನು ಹೇಳಿದಂತೆ, ಚಂದ್ರ ಗ್ರಹಣ ಹಾಗೂ ನಂತರದ ನಲವತ್ತೆಂಟು ದಿನಗಳ ಕಾಲ ಆ ಪ್ರಭಾವ ಇರುತ್ತದೆ. ಯಾವುದೇ ವ್ಯಕ್ತಿಯ ಮನಸ್ಥಿತಿಯನ್ನು, ಅಂದರೆ ಅದು ಸಕಾರಾತ್ಮಕವಾಗಿ ಇದ್ದರೆ ಅದರಂತೆ ಹಾಗೂ ನಕಾರಾತ್ಮಕವಾಗಿ ಇದ್ದರೆ ಅದರಂತೆ ಉದ್ದೀಪಿಸುವ ಸಮಯ ಇದು. ಆ ಪ್ರಕಾರ ಕುಮಾರಸ್ವಾಮಿ ಅವರೂ ಸೇರಿದಂತೆ ಹಲವು ನಾಯಕರ ಮನಸ್ಸಿನಲ್ಲಿ ಇರುವ ಕಹಿ- ಸಿಹಿ ಏನಿದ್ದರೂ ಅವೆಲ್ಲವೂ ಹೊರಗೆ ಬರುತ್ತವೆ. ಗ್ರಹಣ ಮುಗಿದ ಮರುದಿನವೇ (ಬುಧವಾರ ರಾತ್ರಿ) ವಿಶ್ವಾಸ ಮತ ಯಾಚನೆ ಆಗುತ್ತಿರುವುದು ಕಾಕತಾಳೀಯ ಇರಬಹುದು. ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವುದನ್ನು ತಪ್ಪಿಸಿದರೆ ಅದು ಪವಾಡವೇ.
ಸಿದ್ದರಾಮಯ್ಯ ಜಾತಕ ಪ್ರಬಲವಾಗಿದೆ
ಕುಮಾರಸ್ವಾಮಿ ರಾಜೀನಾಮೆ ನೀಡುವುದು ಖಾತ್ರಿ ಎಂಬಂತೆ ಗ್ರಹಸ್ಥಿತಿಗಳು ಗೋಚರಿಸುತ್ತಿವೆ. ಆದರೆ ಈ ಸಂದರ್ಭದಲ್ಲಿ ಜೆಡಿಎಸ್- ಕಾಂಗ್ರೆಸ್ ನಿಂದಲೇ ಮತ್ತೆ ಮುಖ್ಯಮಂತ್ರಿ ಬದಲಾವಣೆ ಪ್ರಯತ್ನ ನಡೆಯುವ ಸಾಧ್ಯತೆ ಹೆಚ್ಚಿದ್ದು, ಸಿದ್ದರಾಮಯ್ಯ ಅವರ ಜಾತಕ ಪ್ರಬಲವಾಗಿ ಇರುವುದರಿಂದ ಆ ಹೆಸರು ರಾಜಕೀಯ ಪಡಸಾಲೆಯಲ್ಲಿ ಜೋರಾಗಿ ಓಡಾಡುತ್ತದೆ. ಅಷ್ಟೇ ಏಕೆ, ಅದಕ್ಕೂ ಮುಂದಿನ ಹಂತವನ್ನು ತಲುಪಬಹುದು. ಆಗ ಮತ್ತೊಂದು ಅರಾಜಕತೆ ಕಾಂಗ್ರೆಸ್- ಜೆಡಿಎಸ್ ನಲ್ಲಿ ಸೃಷ್ಟಿಯಾಗಿ ಇನ್ನೊಂದು ಸುತ್ತಿನ ಬೃಹನ್ನಾಟಕ ನೋಡಬೇಕಾಗಿ ಬರಬಹುದು. ಆಗ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಹುತೇಕ ಖಚಿತ.
ನಿಮ್ನ ವರ್ಗದವರೊಬ್ಬರು ಸಿಎಂ ಆಗುವ ಯೋಗ
ಈ ತನಕ ಹೇಳಿದ್ದು ಆಗುವ ಸಾಧ್ಯತೆಯೇ ಹೆಚ್ಚು. ಇನ್ನು ಬಿಜೆಪಿಯಿಂದ ಯಡಿಯೂರಪ್ಪ ಅವರು ಪ್ರಬಲವಾಗಿ ಪ್ರಯತ್ನಿಸಿದರೆ ಕೆಲ ಸವಾಲು, ಅವಮಾನ ಎದುರಿಸಬೇಕಾಗುತ್ತದೆ. ಮುಂದಿನ ಜನವರಿ ತನಕ ಅವರ ಜಾತಕದಲ್ಲಿ ಇದೇ ಫಲ ಇದೆ. ಆದರೆ ಆ ನಂತರದ್ದು ಈ ಸಂದರ್ಭದಲ್ಲಿ ಹೇಳಬಾರದು. ಇನ್ನೂ ಒಂದು ಸಾಧ್ಯತೆ ಏನೆಂದರೆ, ನಿಮ್ನ ವರ್ಗದವರೊಬ್ಬರು (ದಲಿತರು) ಕರ್ನಾಟಕದ ಮುಖ್ಯಮಂತ್ರಿ ಆಗುವ ಸಾಧ್ಯತೆ ಬಹಳ ಹೆಚ್ಚಿದೆ. ಆ ಸಂದರ್ಭದಲ್ಲಿ ಕರ್ನಾಟಕದ ಅಭಿವೃದ್ಧಿ, ರಾಜಕೀಯ ಸ್ಥಿರತೆ ಎರಡೂ ಸಾಧ್ಯವಾಗುತ್ತದೆ. ಮಕರ ರಾಶಿ ಅಥವಾ ಕುಂಭ ರಾಶಿಯಲ್ಲಿ ಶನಿಯು ಸಂಚರಿಸುವಾಗ ಹಾಗೂ ಶನಿಯ ಜತೆಗೆ ಗುರು ಗ್ರಹವೂ ಸೇರಿದಾಗ ಆ ವಿದ್ಯಮಾನಕ್ಕೆ ನಾವೆಲ್ಲ ಸಾಕ್ಷಿ ಆಗಲಿದ್ದೇವೆ ಎಂದು ಹೇಳಿದ ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷ್ಯ ಎಂಬುದು ಲಭ್ಯ ಮಾಹಿತಿಗಳ ಆಧಾರದಲ್ಲಿ ನುಡಿಯುವ ಭವಿಷ್ಯ. ಮಾಹಿತಿಯೇ ತಪ್ಪಿದರೆ ಅದಕ್ಕೆ ಯಾರನ್ನು ಹೊಣೆ ಮಾಡಲು ಸಾಧ್ಯ ಎನ್ನುತ್ತಾ ಮಾತು ಮುಗಿಸಿದರು.