2019ರ ಲೋಕಸಭೆ ಚುನಾವಣೆ ಸಮೀಕ್ಷೆಗಳೆಲ್ಲವನ್ನೂ ಉಲ್ಟಾ ಮಾಡಲಿದೆಯೇ ಮೋದಿ ಜಾತಕ ಫಲ?
Recommended Video
ಮೊನ್ನೆ ಅಂದರೆ ಗುರುವಾರ ಸಂಜೆಯಿಂದ ಒಂದೇ ಸಮನೆ ನನ್ನ ಫೋನ್ ಗೆ ಕರೆ ಬರುತ್ತಿದೆ. ಎರಡು ಬಗೆಯಲ್ಲಿ ಮಾತನಾಡುತ್ತಿದ್ದಾರೆ. ಏನೋ ನೀವು ಈ ಹಿಂದೆ ಹೇಳಿದಿರಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗುತ್ತಾರೆ ಅಂತ. ಈಗ ಸಮೀಕ್ಷೆ ಬಂದಿದೆ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲಂತೆ.
ಉಳಿದ ಕಡೆಯೆಲ್ಲ ಒಟ್ಟಾರೆ ನೋಡಿದರೆ ಬಿಜೆಪಿಗೆ ಬಹುಮತ ಬರಲ್ಲವಂತೆ ಎಂದು ಸಮೀಕ್ಷೆಯೇ ಬಂದಿದೆ ಎನ್ನುವವರು ಒಂದು ಕಡೆ. ಅವರಿಗೆ ನಾನು ನುಡಿದ ಭವಿಷ್ಯ ಸುಳ್ಳು ಆಗಿಯೇಹೋಯಿತು ಎಂಬ ಭಾವ. ಇನ್ನೂ ಕೆಲವರಿಗೆ, ಅವರು ಪ್ರಾಯಶಃ ನರೇಂದ್ರ ಮೋದಿ ಬೆಂಬಲಿಗರು ಇರಬಹುದು. ಆದ್ದರಿಂದ ಈ ರೀತಿ ನಿಜಕ್ಕೂ ಆಗಿಬಿಡುತ್ತದಾ ಎಂಬ ಆತಂಕ.
ಇಂಡಿಯಾ ಟುಡೇ ಸಮೀಕ್ಷೆ: ಯಾರೇ ಕೂಗಾಡಲಿ ವೋಟ್ ಶೇರಿಂಗ್ ನಲ್ಲಿ ಬಿಜೆಪಿಯೇ ನಂಬರ್ 1
ಎರಡೂ ರೀತಿಯ ಜನರಿಗೆ ನನ್ನ ಉತ್ತರ ಹೀಗಿತ್ತು: ಮೊದಲನೆಯದಾಗಿ ನಾನು ನುಡಿದ ಭವಿಷ್ಯ ಜ್ಯೋತಿಷ್ಯ ಆಧಾರಿತವಾದದ್ದು. ಅದು ಸುಳ್ಳಾದಲ್ಲಿ ಜ್ಯೋತಿಷ್ಯ ಸುಳ್ಳು ಅಂತಲ್ಲ. ಅದನ್ನು ಸರಿಯಾಗಿ ಗ್ರಹಿಸುವುದರಲ್ಲಿ ನಾನು ಎಡವಿದ್ದೇನೆ ಅಂತಷ್ಟೇ. ಇನ್ನು ಸಮೀಕ್ಷೆಯೇ ಚುನಾವಣೆ ಫಲಿತಾಂಶ ಅನ್ನೋದಾದರೆ ನನ್ನ ಉತ್ತರಕ್ಕೋ -ಭವಿಷ್ಯ ನುಡಿಯುವುಕ್ಕೋ ಯಾಕೆ ಕಾಯುತ್ತೀರಿ?
ಇಂಡಿಯಾ ಟುಡೇ ಸಮೀಕ್ಷೆ: ಅತಂತ್ರ ಪರಿಸ್ಥಿತಿ ನಿರ್ಮಾಣ, ಎನ್ಡಿಎಗೆ 99 ಸ್ಥಾನ ಕಮ್ಮಿ
ಅಂತಿಮವಾಗಿ ನಿರ್ಧರಿಸಬೇಕಾದದ್ದು ಭಾರತದ ಮತದಾರರು. ನಮ್ಮ ಹಿತವನ್ನು ಭಗವಂತ ಕೂಡ ಕಾಯುವುದು ನಾವೊಂದು ಪ್ರಯತ್ನ ಹಾಕಿದ ನಂತರವೇ. ಈ ಲೇಖನದಲ್ಲಿ ಮತ್ತೊಮ್ಮೆ ಈ ಬಾರಿಯ ಲೋಕಸಭಾ ಚುನಾವಣೆ ಬಗ್ಗೆ ತಿಳಿಸುತ್ತಿದ್ದೇನೆ. ಇದೇ ಅಂತಿಮ ಎಂಬ ಅತಿವಿಶ್ವಾಸವೂ ನನ್ನದಲ್ಲ. ಆ ಭಗವಂತನ ನೆನೆದು, ಗ್ರಹಸ್ಥಿತಿಗಳು ಸೂಚಿಸುವುದನ್ನು ನಿಮ್ಮೆದುರು ಇಡುತ್ತಿದ್ದೇನೆ.
ಇಷ್ಟೆಲ್ಲ ಮಹಾ ಯೋಗಗಳಿರುವ ಜಾತಕ ವಿರಳ
ಪ್ರಧಾನಿ ನರೇಂದ್ರ ಮೋದಿ ಅವರದು ವೃಶ್ಚಿಕ ರಾಶಿ. 2019ರ ಫೆಬ್ರವರಿವರೆಗೆ ಅವರಿಗೆ ಬುಧ ಭುಕ್ತಿ ನಡೆಯುತ್ತದೆ. ಆ ನಂತರ 2019ರ ಸೆಪ್ಟೆಂಬರ್ ವರೆಗೆ ಕೇತು ಭಕ್ತಿ ನಡೆಯುತ್ತದೆ. ಈ ಎರಡೂ ಭುಕ್ತಿಗಳು ಪ್ರತ್ಯರ ತಾರಾ ಭುಕ್ತಿಗಳು. ಇದು ಅನನುಕೂಲತೆಯ ಲಕ್ಷಣ. ಆದರೆ ಬುಧ ಭುಕ್ತಿಯಿಂದ ಕೇತು ಭುಕ್ತಿಯು ಇವರಿಗೆ ಉತ್ತಮ ಫಲದಾಯಕ. ದಶಾಭುಕ್ತಿಗಳು ಅನನುಕೂಲ ಆದರೂ ಜಾತಕದ ಯೋಗಗಳು ಉತ್ತಮ ಇದ್ದರೆ ದಶಾಭುಕ್ತಿ ದೋಷಗಳು ಹರಣವಾಗುತ್ತವೆ ಎಂದು ಶಾಸ್ತ್ರ ಗ್ರಂಥಗಳಲ್ಲೇ ಉಲ್ಲೇಖವಾಗಿದೆ. ಇನ್ನು ಮೋದಿಯವರ ಜಾತಕದಲ್ಲಿ ಇರುವ ಪರ್ವತ ಯೋಗ, ಅಖಂಡ ಸಾಮ್ರಾಜ್ಯ ಯೋಗ, ಚಂದ್ರನು ರವಿಯಿಂದ (ಮೂರು) ಅಪೋಕ್ಲಿಮದಲ್ಲಿ ಇರುವುದರಿಂದ ಹಾಗೂ ಶತ್ರುನಾಶ ರಾಜಯೋಗ, ಕೇದಾರ ಯೋಗ ಇತ್ಯಾದಿ ಅನೇಕ ಉತ್ತಮ ಯೋಗಗಳು ಈ ಬುಧ ಮತ್ತು ಕೇತು ಭುಕ್ತಿಯ ದೋಷಗಳನ್ನು ಹರಣ ಮಾಡುತ್ತವೆ. ಶನಿ- ಶುಕ್ರ ಯುತಿಯು 10ರಲ್ಲಿ ವಿಶ್ವವಿಖ್ಯಾತ ಯೋಗ, ಲಾಭದಲ್ಲಿ ನಿಪುಣ ಯೋಗ, ಲಗ್ನಾಧಿಪತಿಯ ಭಾಗ್ಯಾಧಿಪತಿಯ ಯುತಿ ರಾಜಯೋಗ ಇಷ್ಟೆಲ್ಲ ಮಹಾ ಯೋಗಗಳಿರುವ ಜಾತಕವು ಬಹಳ ವಿರಳ.
ಪ್ರಧಾನಿ ಅಭ್ಯರ್ಥಿ ಎನ್ನುತ್ತಿರುವ ಇತರರಲ್ಲಿ ಯೋಗಗಳಿಲ್ಲ
ಇನ್ನೊಂದು ಮಾತು. ಈ ರೀತಿಯ ಜಾತಕವನ್ನು ಹೇಳಿ ಬರೆಸಿಕೊಳ್ಳಬೇಕು ಅಷ್ಟೇ. ಅಂಥ ಅದ್ಭುತ ಜಾತಕ ಮೋದಿ ಅವರದು. ಈ ಅಭಿಪ್ರಾಯಕ್ಕೆ ಬೇರೆ ಯಾರಾದರೂ ಜ್ಯೋತಿಷಿಗಳು ಭೇದ ವ್ಯಕ್ತಪಡಿಸಿ, ಇದು ಹಾಗಲ್ಲ ಹೀಗೆ ಎಂದು ಮತ್ತೂ ವಿವರಣೆ ನೀಡಿದರೆ ಅದಕ್ಕೂ ಸ್ವಾಗತ. ಒಂದು ಮರಕ್ಕಿಂತ ಮತ್ತೊಂದು ಮರ ದೊಡ್ಡದಿರುತ್ತದೆ. ಇನ್ನು ಚಂದ್ರ ದ್ವಿರ್ದ್ವಾದಶದಲ್ಲಿ ಗ್ರಹರಿಲ್ಲದ ಕಾರಣ ಸಣ್ಣ ಮಟ್ಟಿನ ಖಿನ್ನತೆಯೂ ಇದೆ. ಇಷ್ಟೆಲ್ಲ ಶಾಶ್ವತ ಯೋಗಗಳಿಂದಾಗಿಯೇ ಮೋದಿಯವರು ಹೆಸರುವಾಸಿಯಾದದ್ದು. ಇಂತಹ ಬಲಿಷ್ಠರನ್ನು ಅಷ್ಟು ಸುಲಭದಲ್ಲಿ ಪತನಗೊಳಿಸಲು ಸಾಧ್ಯವಿಲ್ಲ. ಇನ್ನು ಸದ್ಯದ ಸನ್ನಿವೇಶದಲ್ಲಿ ಪ್ರಧಾನ ಮಂತ್ರಿ ಪೀಠದ ಮೇಲೆ ಕಣ್ಣಿಟ್ಟಿರುವ ಯಾರ ಜಾತಕದಲ್ಲೂ ಇಂತಹ ಯೋಗ ಇಲ್ಲ. ಆದ್ದರಿಂದ ಮೋದಿಯವರಿಗೆ ಪರ್ಯಾಯ ನಾಯಕತ್ವ ಇಲ್ಲ.
ರವಿ ಗ್ರಹದ ಬೆಂಬಲ ಆಡಳಿತ ಪಕ್ಷಕ್ಕೆ ಇರುತ್ತದೆ
ಗೋಚಾರದಲ್ಲಿ ಜಾತಕಕ್ಕೆ ಫಲ ಹೇಗಿರಬಹುದು ಅಂತ ನೋಡುವುದಾದರೆ, ಸಾಮಾನ್ಯವಾಗಿ ಚುನಾವಣೆಯು ಏಪ್ರಿಲ್- ಮೇ ಒಳಗೆ ಚುನಾವಣೆ ನಡೆಯುತ್ತದೆ. ಪ್ರಸ್ತುತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಸೂಚಕ ರವಿಯು ಆ ಸಮಯದಲ್ಲಿ (ಏಪ್ರಿಲ್-ಮೇ) ಮೀನ ಮತ್ತು ಮೇಷದಲ್ಲಿ ಸಂಚಾರ ಮಾಡುತ್ತಾನೆ. ಈ ಎರಡೂ ಕ್ಷೇತ್ರಗಳೂ ರವಿಗೆ ಬಲ ನೀಡುವಂಥದ್ದು. ಕಾರಕನೂ, ಉಚ್ಚ ಕ್ಷೇತ್ರ ಸ್ಥಿತಿವಂತನೂ ಆಗಿರುವ ರವಿಯ ಪ್ರಭಾವವು ಈಗಿರುವ ಬಿಜೆಪಿಗೇ ಬಲ ನೀಡುತ್ತದೆ. ಮೇ ಹದಿನೈದರವರೆಗೆ ಈ ಸ್ಥಿತಿಯು ಇರುತ್ತದೆ. ಹಾಗಾಗಿ ಇದು ಬಿಜೆಪಿ ಗೆಲುವಿಗೆ ಒಂದು ಪೂರಕ.
ಈ ಹಿಂದೆ ಯುಪಿಎಗೆ ಯಾಕೆ ಆ ಅನುಕೂಲ ಸಿಗಲಿಲ್ಲ?
ಇಲ್ಲಿ ಒಂದು ಪ್ರಶ್ನೆ ಕೇಳಬಹುದು. ಕಾಂಗ್ರೆಸ್ ನೇತೃತ್ವದ UPA ಕೂಡ ಕೇಂದ್ರ ಸರಕಾರ ಮಾಡಿದ್ದಾಗ ಅಲ್ಲಿಯೂ ಇಂಥದ್ದೇ ಸ್ಥಿತಿ ಇತ್ತಲ್ವಾ, ಯಾಕೆ ಗೆಲುವು ಬರಲಿಲ್ಲ? ಅಲ್ಲಿ ರವಿಯ ಶತ್ರು ಶನಿಯು ಉಚ್ಚನಾಗಿ ರವಿಯನ್ನು ದೃಷ್ಟಿಸುತ್ತಿದ್ದ. ಇನ್ನೊಂದೆಡೆ ಪಾರಮಾರ್ಥಿಕವಾಗಿ ರವಿಯು ರಘುವಂಶದ ಶ್ರೀರಾಮನ ಆರಾಧ್ಯ ದೇವರು. ರಾಮಮಂದಿರ ನಿರ್ಮಾಣದ ಪರವಾಗಿರುವ ಪಕ್ಷ ಹಾಗೂ ಅದನ್ನು ಬೆಂಬಲಿಸುವ ಸಹವರ್ತಿಗಳಿಗೆ ಪೂರಕವಾದ ವಾತಾವರಣ ಸೃಷ್ಟಿ ಆಗುತ್ತದೆ. ಇಷ್ಟೆಲ್ಲ ಹೇಳಿದ ಮೇಲೂ ಅದೇನು ಹೇಳುತ್ತೀರೋ ಸ್ಪಷ್ಟವಾಗಿ ಹೇಳಿ ಅನ್ನೋದಾದರೆ, ಮೋದಿಯವರ ಜಾತಕದ ಸಿಂಹಸ್ತ ಶನಿ( 29°) ಸವಾಲಿನ ಸಮಯದಲ್ಲೇ ಹೆಚ್ಚು ಶಕ್ತಿ ತುಂಬುತ್ತಾ ಎಂಬುದು ಉಲ್ಲೇಖಾರ್ಹ ಅಂಶ. 2019ರ ಲೋಕಸಭಾ ಚುನಾವಣೆ ನಂತರವೂ ಪ್ರಧಾನಿ ಪೀಠವು ಮೋದಿಯವರಿಗೇ ಮೀಸಲು.