ಪ್ಲವನಾಮ ಸಂವತ್ಸರದ ಭವಿಷ್ಯ: ಕೊರೊನಾ, ಯುದ್ದಭೀತಿ, ಮೋದಿಗೆ ಕಂಟಕ
ಏಪ್ರಿಲ್ ಹದಿಮೂರು ಚಾಂದ್ರಮಾನ ಯುಗಾದಿಯ ದಿನದಿಂದ ಶಾರ್ವರಿ ನಾಮ ಸಂವತ್ಸರ ಮುಗಿದು ಪ್ಲವನಾಮ ಸಂವತ್ಸರ ಆರಂಭವಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯ ದಿನದಿಂದ ಸಂವತ್ಸರಗಳು ಬದಲಾಗುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವಂತಹ ಪದ್ದತಿ.
ಕಳೆದ ಯುಗಾದಿಯ ಸಂದರ್ಭದಲ್ಲಿ ಕೊರೊನಾ ಕಾಟ ಆರಂಭವಾಗಿತ್ತು. ಆಗ, ಲಸಿಕೆ ಇಲ್ಲದಿದ್ದ ಕಾರಣಕ್ಕಾಗಿ ಲಾಕ್ ಡೌನ್ ಹೇರಲಾಗಿತ್ತು. ಈಗ, ಮತ್ತದೇ ವೈರಸ್ ಕಾಟ ಹೆಚ್ಚಾಗುತ್ತಿರುವುದರಿಂದ ಲಾಕ್ ಡೌನ್ ಭೀತಿಯಿಂದ ಯುಗಾದಿ ಆಚರಿಸಿದ್ದಾಗಿದೆ.
ಸಾಮಾನ್ಯವಾಗಿ, ಯುಗಾದಿಯಿಂದ ಯುಗಾದಿಗೆ ಭವಿಷ್ಯ ನುಡಿಯುವ ಪದ್ದತಿಯಿದೆ. ಹಲವು ಜ್ಯೋತಿಷಿಗಳು ಪ್ಲವ ನಾಮ ಸಂವತ್ಸರದಲ್ಲಿ ಅನಿಷ್ಟಗಳು ಹೆಚ್ಚಾಗಲಿದೆ ಎನ್ನುವ ಭವಿಷ್ಯವನ್ನು ನುಡಿದಿದ್ದಾರೆ.
ಬೆಂಗಳೂರು ರಾಗೀಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ವಿದ್ವಾನ್ ಶ್ರೀ.ನಾರಾಯಣ ಭಟ್ ಅವರು ಪ್ಲವನಾಮ ಸಂವತ್ಸರದಲ್ಲಿ ದೇಶ ಯಾವ ಯಾವ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು, ಕೊರೊನಾ ಕಾಟ ಯಾವಾಗ ಕಮ್ಮಿಯಾಗಬಹುದು ಎನ್ನುವ ವಿಚಾರದಲ್ಲಿ 'ಒನ್ಇಂಡಿಯಾ'ಜೊತೆ ಮಾತನಾಡಿದ್ದಾರೆ.
ದೇಶ, ರಾಜ, ಜನಸಾಮಾನ್ಯನಿಗೆ ಹಲವು ಕಂಟಕಗಳು ಎದುರಾಗಲಿವೆ
ಶಾರ್ವರಿ ಸಂವತ್ಸರದಲ್ಲೇ ಹಲವು ಕಷ್ಟಕಾರ್ಪಣ್ಯವನ್ನು ಎದುರಿಸಿದ ಜನತೆ, ಪ್ಲವ ನಾಮ ಸಂವತ್ಸರದಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು. ಕುಜನು ಈ ಸಂವತ್ಸರದಲ್ಲಿ ಪ್ರಭಾವಿ ಆಗಿರುವುದರಿಂದ ದೇಶ, ರಾಜ, ಜನಸಾಮಾನ್ಯನಿಗೆ ಹಲವು ಕಂಟಕಗಳು ಎದುರಾಗಲಿವೆ. ದೇವ ಸ್ಮರಣೆ ಒಂದೇ ಎಲ್ಲಾ ಕಷ್ಟಕ್ಕೂ ಪರಿಹಾರ ಎಂದು ನಾರಾಯಣ ಭಟ್ ಹೇಳಿದ್ದಾರೆ. (ಚಿತ್ರದಲ್ಲಿ ನಾರಾಯಣ ಭಟ್)
ರಾಜನಿಗೂ (ಪ್ರಧಾನಮಂತ್ರಿ) ಆರೋಗ್ಯಾದಿಯಾಗಿ ಹಲವು ಕಂಟಕಗಳು
ಮಳೆ, ಗಾಳಿ, ಅಗ್ನಿಯಿಂದ ಹೆಚ್ಚಿನ ತೊಂದರೆ ಸಂಭವಿಸಲಿದೆ. ಅತಿವೃಷ್ಟಿ, ಅನಾವೃಷ್ಟಿ ಎದುರಾಗಲಿದೆ. ಭರತ ರಾಷ್ಟ್ರ ವಿವಿಧ ದೇಶಗಳಿಂದ ಕಿರಿಕಿರಿ ಎದುರಿಸಬೇಕಾಗಿ ಬರಬಹುದು, ಜೊತೆಗೆ, ಯುದ್ದದ ಭೀತಿಯೂ ಇರಲಿದೆ. ರಾಜನಿಗೂ (ಪ್ರಧಾನಮಂತ್ರಿ) ಆರೋಗ್ಯಾದಿಯಾಗಿ ಹಲವು ಕಿಕಿರಿಗಳು ಉಂಟಾಗಬಹುದು. ಅತಿ ಎಚ್ಚರದಿಂದ ಇರಬೇಕಾದ ಸಂವತ್ಸರವಿದು ಎಂದು ನಾರಾಯಣ ಭಟ್ ಹೇಳಿದ್ದಾರೆ.
ಜೂನ್ ಎರಡನೇ ವಾರದಿಂದ ಕೊರೊನಾ ಪ್ರಭಾವ ಕಮ್ಮಿ
ಕೊರೊನಾ ವೈರಸ್ ಮೇ ಮಾಸಾಂತ್ಯದವರೆಗೆ ಅತೀಹೆಚ್ಚು ತೊಂದರೆಯನ್ನು ನೀಡುವ ಸಾಧ್ಯತೆಯಿದೆ. ಆದರೆ, ಜೂನ್ ಎರಡನೇ ವಾರದಿಂದ ಇದರ ಪ್ರಭಾವ ಕಮ್ಮಿಯಾಗುತ್ತಾ ಸಾಗುತ್ತದೆ. ಸರಕಾರದ ಮಾರ್ಗಸೂಚಿಯನ್ನು ಪಾಲಿಸಿದರೆ ಉತ್ತಮ. ಇನ್ನು ಈ ಸಂವತ್ಸರದಲ್ಲಿ ಕರ್ಪೂರ, ಬಟ್ಟೆ ಸೇರಿದಂತೆ ಹಲವು ವಸ್ತುಗಳ ಬೆಲೆಗಳು ಜಾಸ್ತಿಯಾಗಲಿವೆ. ಹುರುಳಿ, ಜೇನುತುಪ್ಪ ಮುಂತಾದ ಪದಾರ್ಥಗಳ ಬೆಲೆ ಕಮ್ಮಿಯಾಗಲಿದೆ.
Recommended Video
ಹಲವು ರಾಶಿಗಳಿಗೆ ಉತ್ತಮ, ಮಧ್ಯಮ, ಅನಿಷ್ಟ
ಮೇಶ, ಮಿಥುನ, ತುಲಾ ರಾಶಿಯವರಿಗೆ ಈ ಸಂವತ್ಸರ ಉತ್ತಮ ಫಲವನ್ನು ನೀಡಲಿದೆ. ವೃಷಭ, ಧನು , ಸಿಂಹ, ಮೀನ ರಾಶಿಯವರಿಗೆ ಮಧ್ಯಮ ಫಲ ಸಿಗಲಿದೆ. ಇನ್ನು, ಕಟಕ, ಕನ್ಯಾ, ಕುಂಭ ರಾಶಿಯವರಿಗೆ ಅನಿಷ್ಟ ಫಲ ನೀಡಲಿದೆ. ಗುರುಗಳಿಗೆ ಮತ್ತು ಭಗವಂತನಿಗೆ ಶರಣಾಗುವ ಮೂಲಕ ಬರಬಹುದಾದ ಕಷ್ಟಗಳಿಗೆ ಪರಿಹಾರ ಸಿಗಬಹುದು ಎಂದು ನಾರಾಯಣ ಭಟ್ ಅಭಿಪ್ರಾಯ ಪಟ್ಟಿದ್ದಾರೆ.