2020ರಲ್ಲಿ ಕೋಡಿ ಶ್ರೀಗಳು ನುಡಿದ ಭವಿಷ್ಯ ಮತ್ತು ಅದರ ಸತ್ಯಾಸತ್ಯತೆ
2020 ಮುಗಿಯಲು ಇನ್ನೇನು ಹದಿನೈದು ದಿನಗಳು ಬಾಕಿಯಿವೆ. ಈ ವರ್ಷ ವಿಶ್ವಕ್ಕೆ ಇಷ್ಟು ಅನಿಷ್ಠವಾಗಿ ಕಾಡಲಿದೆ ಎನ್ನುವ ಯಾವ ಮುನ್ಸೂಚನೆಯೂ ಇಲ್ಲದಂತೆ, ಕೊರೊನಾ ವೈರಸ್ ಬಹುತೇಕ ಇಡೀ ವರ್ಷವನ್ನು ನುಂಗಿಹಾಕಿದೆ. ಮಾರ್ಚ್ ತಿಂಗಳಲ್ಲಿ ಆರಂಭವಾದ ಇದರ ಹಾವಳಿ ಇನ್ನೂ ಮುಗಿದಿಲ್ಲ.
ಲಾಕ್ ಡೌನ್ ಆದ ನಂತರ ಊರು ಸೇರಿಕೊಂಡವರಲ್ಲಿ ಬಹುತೇಕರು ಇನ್ನೂ ಹಿಂದಿರುಗಲಿಲ್ಲ. ಅದೆಷ್ಟೋ ಮಂದಿ ಕೆಲಸವನ್ನು ಕಳೆದುಕೊಂಡರು, ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಇಳಿಯಿತು. ಈ ವರ್ಷದಲ್ಲಿ ಹಲವು ಸ್ವಾಮೀಜಿಗಳು, ಜ್ಯೋತಿಷಿಗಳು ಭವಿಷ್ಯವನ್ನು ನುಡಿದಿದ್ದರು.
2020ರ ಭವಿಷ್ಯ: ನಿಗೂಢ ಮಹಿಳೆ ಬಾಬಾ ವಂಗಾ ನುಡಿದ ಭವಿಷ್ಯವೇನು, ಆಗಿದ್ದೇನು!
ಅದರಲ್ಲಿ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯವೂ ಒಂದು. ಮದ್ದಿಲ್ಲದ ಕಾಯಿಗೆ ಮನುಕುಲಕ್ಕೆ ತೊಂದರೆ ಕೊಡಲಿದೆ ಎನ್ನುವ ಭವಿಷ್ಯವನ್ನು ಕೋಡಿಮಠದ ಶ್ರೀಗಳು ನುಡಿದಿದ್ದರು.
2020: ಅಸಲಿಗೆ ಕೊರೊನಾ ಬಗ್ಗೆ ನುಡಿಯಲಾಗಿದ್ದ ಭವಿಷ್ಯ ನಿಜವಾಗಿದ್ದು ಈ ಮೂವರದ್ದು ಮಾತ್ರ
ಕೊರೊನಾ, ದೇಶ, ವಿಶ್ವ,ಅಮೆರಿಕ ಚುನಾವಣೆ ಮತ್ತು ಪ್ರಾಕೃತಿಕ ವಿಕೋಪದ ವಿಚಾರದಲ್ಲಿ ಹಲವರ ಭವಿಷ್ಯ ಪೊಳ್ಳಾಗಿದೆ. ಸಂಕ್ರಾಂತಿ, ಯುಗಾದಿ, ದಸರಾ ಜೊತೆಗೆ, ಇತರ ಸಂದರ್ಭದಲ್ಲಿ ಕೋಡಿಶ್ರೀಗಳು ಈ ವರ್ಷ ಹಲವು ಭವಿಷ್ಯವನ್ನು ನುಡಿದ್ದಿದರು. ಇದರಲ್ಲಿ ಸತ್ಯವಾಗಿ ಹೊರಹೊಮ್ಮಿದ್ದು ಯಾವುದು? ಮುಂದೆ ಓದಿ..
ಯಡಿಯೂರಪ್ಪ ಸರಕಾರ ಸುಭದ್ರವಾಗಿರಲಿದೆ
"ರಾಜ್ಯದ ರಾಜಕಾರಣದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆಗಳಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತನ್ನ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸುತ್ತದೆ. ಯಡಿಯೂರಪ್ಪ ಅವರ ಸರ್ಕಾರ ಸುಭದ್ರವಾಗಿರಲಿದೆ. ಸದ್ಯಕ್ಕೆ ಯಾವುದೇ ತೊಡಕು ಕಂಡುಬಂದಿಲ್ಲ. ಸಚಿವ ಸಂಪುಟ ವಿಸ್ತರಣೆಗೆ, ಸಚಿವ ಸ್ಥಾನಕ್ಕೆ ಎಲ್ಲೆಡೆಯಿಂದ ಒತ್ತಾಯ, ಗೊಂದಲ ಉಂಟಾಗುತ್ತಿದ್ದರೂ ಸರ್ಕಾರಕ್ಕೆ ಇದರಿಂದ ಏನೂ ತೊಂದರೆಯಾಗುವುದಿಲ್ಲ" ಎಂದು ಕೋಡಿಶ್ರೀಗಳು ಹುಬ್ಬಳ್ಳಿಯಲ್ಲಿ ಭವಿಷ್ಯ ನುಡಿದಿದ್ದರು. ಸದ್ಯದ ಮಟ್ಟಿಗೆ ಯಡಿಯೂರಪ್ಪ ಸರಕಾರಕ್ಕೆ ಏನೂ ತೊಂದರೆ ಕಾಣುತ್ತಿಲ್ಲ.
ಮದ್ದಿಲ್ಲದ ಕಾಯಿಲೆಗೆ ಸಾವಿರಾರು ಜನರು ಸಾವನ್ನಪ್ಪುತಾರೆ
"ಮದ್ದಿಲ್ಲದ ಕಾಯಿಲೆಗೆ ಸಾವಿರಾರು ಜನರು ಸಾವನ್ನಪ್ಪುತಾರೆ ಎಂದು ಹೇಳಿದ್ದೆ. ಜನರಲ್ಲಿ ಭಕ್ತಿಭಾವಗಳು, ದೈವ ನಂಬಿಕೆ ಮತ್ತು ವಿಶ್ವಾಸಗಳು ಕಡಿಮೆಯಾಗುತ್ತಿವೆ. ಹೀಗಾಗಿ ಪ್ರಕೃತಿಯೇ ಈ ರೀತಿ ಜನರನ್ನು ಎಚ್ಚರಿಸುತ್ತಿದೆ. ಧರ್ಮದ ದಾರಿ ತಪ್ಪುವ ಮನುಷ್ಯನಿಗೆ ದೈವವು ಒಂದೊಂದೇ ಸೂಚನೆ ನೀಡುತ್ತಿದೆ. ಹಾಗೆಯೇ, ಮುಂದಿನ ದಿನಗಳಲ್ಲಿ ವಿಶ್ವಕ್ಕೆ ಭಾರೀ ಗಂಡಾಂತರ ಎದುರಾಗಲಿದೆ. ಆ ಮೂಲಕ, ಪ್ರಕೃತಿಯ ಮುಂದೆ ಎಲ್ಲರೂ ಹುಲು ಮಾನವರು ಎನ್ನುವುದು ಸಾಬೀತಾಗುತ್ತದೆ"ಎಂದು ಕೋಡಿಶ್ರೀಗಳು ಏಪ್ರಿಲ್ ತಿಂಗಳಲ್ಲಿ ಅರಸೀಕೆರೆಯಲ್ಲಿ ಭವಿಷ್ಯ ನುಡಿದಿದ್ದರು. ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ ಕೊರೊನಾ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿತ್ತು.
ಸುಳ್ಳಾದ ಕೋಡಿಶ್ರೀಗಳ ಯುಗಾದಿ ಭವಿಷ್ಯ
''ಕೊರೊನಾ ವೈರಸ್ ಗೆ ಮದ್ದು ಸಿಗಲಿದೆ'' ಅಂತ ಹೇಳಿರುವ ಕೋಡಿಶ್ರೀಗಳು, ''ಕೊರೊನಾ ಮೇ ತಿಂಗಳಲ್ಲಿ ನಿರ್ನಾಮವಾಗಲಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವರ್ಷಪೂರ್ತಿ ಇರಲಿದೆ. ಜಗತ್ತಿನ ಭೂ ಪಟದಲ್ಲಿ ಒಂದು ದೇಶ ಸಂಪೂರ್ಣ ನಾಶವಾಗಲಿದೆ'' ಎಂದು ಕೋಡಿ ಶ್ರೀಗಳು ಯುಗಾದಿ ಭವಿಷ್ಯವನ್ನು ನುಡಿದಿದ್ದರು. ಆದರೆ, ಆ ರೀತಿ ಯಾವ ದೇಶವೂ ನಿರ್ನಾಮವಾಗಲಿಲ್ಲ.
ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ
"ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ. ಹಳ್ಳಿಹಳ್ಳಿಗಳಲ್ಲೂ ಕೊರೊನಾ ಸೋಂಕು ಹರಡಲಿದೆ. ಜನರು ಎಚ್ಚರಿಕೆಯಿಂದ ಇರಬೇಕು, ಸರಕಾರದ ಮಾರ್ಗಸೂಚಿ ಪಾಲಿಸುವುದನ್ನು ಜನರು ಮರೆಯಬಾರದು. ಭರತಖಂಡ, ಖುಷಿಮುನಿಗಳು ತಪಸ್ಸು ಮಾಡಿದ ಪುಣ್ಯಭೂಮಿ. ನಮ್ಮ ದೇಶಕ್ಕೆ ಅಂತಹ ಗಂಢಾಂತರ ಎದುರಾಗುವುದಿಲ್ಲ" ಎಂದು ಶ್ರಾವಣ ಮಾಸಾರಂಭದಲ್ಲಿ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಆದರೆ, ಕಾರ್ತಿಕ ಮಾಸದಿಂದ ದೇಶದ ಕೆಲವು ಭಾಗದಲ್ಲಿ ಮಾತ್ರ ಕೊರೊನಾ ಹೆಚ್ಚಾಗುತ್ತಿದ್ದರೆ, ಮಿಕ್ಕ ಕಡೆ ಹತೋಟಿಯಲ್ಲಿದೆ.
ಅಮೆರಿಕ ಯುದ್ದವಿಲ್ಲದೇ ಆ ದೇಶ ಹಾಳಾದೀತು
"ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ, ಯುದ್ದವಿಲ್ಲದ ಮಡಿಯೇ, ಪುರವಿಲ್ಲದೇ ಕೂಳಾದೀತು ಎಂದು ಹಿಂದೆ ನುಡಿದಿದ್ದೆ. ಮುನಿಪುರ ಎಂದರೆ ಅದು ಅಮೆರಿಕ, ವಿಷ್ಣು ವಾಮನಾವತಾರದಲ್ಲಿ ಅಲ್ಲಿಯೇ ಭೂಮಿ ತುಳಿದಿದ್ದು. ಅದು ಸಂಪದ್ಬರಿತ ರಾಜ್ಯ, ಸನ್ಯಾಸಿ ದಾನ ಕೊಟ್ಟಿದ ರಾಜ್ಯವೆಂದರೆ ಅದು ಅಮೆರಿಕ. ಯುದ್ದವಿಲ್ಲದೇ ಆ ದೇಶ ಹಾಳಾದೀತು" ಎನ್ನುವ ಭವಿಷ್ಯವನ್ನು ಶ್ರೀಗಳು ನವೆಂಬರ್ ನಲ್ಲಿ ನುಡಿದಿದ್ದರು.
ಮಳೆ ಹೆಚ್ಚಾಗುವ ಆ ಮೂಲಕ ಜನರಲ್ಲಿ ಅಶಾಂತಿ ಹೆಚ್ಚಾಗುವ ಘಟನೆಗಳು ಸಂಭವಿಸಲಿವೆ
"ಜನರು ಮಾನಸಿಕವಾಗಿ ಕುಗ್ಗುವ ಸಾಧ್ಯತೆಯೂ ಇದೆ. ಜನರು ಎಚ್ಚರದಿಂದ ಇದ್ದು, ಆರೋಗ್ಯ ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಂಡು ಬರಬೇಕು. ಗ್ರಹಣ ಸಂಭವಿಸಿದ್ದರಿಂದ ಜಗತ್ತಿನಾದ್ಯಂತ ರಾಜಕೀಯ ವಿಪ್ಲವ ಆಗುತ್ತದೆ. ಹಿಂದೆಯೂ ಹೇಳಿದ್ದೆ, ಕಾರ್ತಿಕ ಮತ್ತು ಅಶ್ವಯುಜ ಮಾಸದಲ್ಲಿ ಕೊರೊನಾ ಜಾಸ್ತಿಯಾಗುತ್ತದೆ ಎಂದು. ಜನವರಿ, ಫೆಬ್ರವರಿಯಲ್ಲಿ ಇದು ಹೇಳುವುದಕ್ಕೆ ಬರುವುದಿಲ್ಲ. ಯುಗಾದಿಯವರೆಗೆ ಸಾರ್ವಜನಿಕರು ಎಚ್ಚರದಿಂದ ಇರುವುದು ಸೂಕ್ತ. ಇನ್ನೂ ಮಳೆ ಹೆಚ್ಚಾಗುವ ಆ ಮೂಲಕ ಜನರಲ್ಲಿ ಅಶಾಂತಿ ಹೆಚ್ಚಾಗುವ ಘಟನೆಗಳು ಸಂಭವಿಸಲಿವೆ" ಎಂದು ಶ್ರೀಗಳು ದಾವಣಗೆರೆಯಲ್ಲಿ ನವೆಂಬರ್ ತಿಂಗಳಲ್ಲಿ ಭವಿಷ್ಯ ನುಡಿದಿದ್ದರು.