ಪ್ರೀತಿ, ದಯೆಗೆ ಮತ್ತೊಂದು ಹೆಸರೇ ಸಂಖ್ಯೆ 2ರ ವ್ಯಕ್ತಿಗಳು
ಸಂಖ್ಯಾಶಾಸ್ತ್ರ, ಟಾರೋ ಕಾರ್ಡ್ ರೀಡಿಂಗ್, ಹೀಲಿಂಗ್ ಹೀಗೆ ನಾನಾ ಬಗೆಯ ವಿದ್ಯೆಯಲ್ಲಿ ಶೀಲಾ ಬಜಾಜ್ ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದೆ. ಅಷ್ಟೇ ಅಲ್ಲ, ಕಂಪೆನಿ, ವೆಬ್ ಸೈಟ್, ವ್ಯಾಪಾರ- ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಸೂಕ್ತ ಹೆಸರು ಕೂಡ ಸೂಚಿಸುತ್ತಾರೆ ಶೀಲಾ.
ಜತೆಗೆ ಚಿತ್ರರಂಗದಲ್ಲೂ ನಿರ್ದೇಶಕರು- ನಿರ್ಮಾಪಕರು ತಮ್ಮ ಸಿನಿಮಾಗಳಿಗೆ ಹೆಸರಿಡುವ ಮುಂಚೆ ಇವರ ಬಳಿ ಸಲಹೆ ಕೇಳುವುದು ಉಂಟು. ಮೂಲತಃ ಬೆಂಗಳೂರಿನವರೇ ಆದ ಶೀಲಾ ಬಜಾಜ್ ರ ಪರಿಚಯ ಒನ್ಇಂಡಿಯಾ ಕನ್ನಡ ಓದುಗರಿಗೆ ಇದೆ. ಇದೀಗ ಸಂಖ್ಯಾಶಾಸ್ತ್ರದಲ್ಲಿ 1ರಿಂದ 9ರ ವರೆಗಿನ ಸಂಖ್ಯೆಯ ಮಹತ್ವ ಮತ್ತಿತರ ವಿಚಾರಗಳ ಬಗ್ಗೆ ಸರಣಿ ಆರಂಭಿಸಿದ್ದಾರೆ ಶೀಲಾ ಬಜಾಜ್.
ಶುಕ್ರನ ಅನುಗ್ರಹ ಇದ್ದರೆ ಇವರ್ಯಾಕೆ ಪದೇ ಪದೇ ಲವ್ ನಲ್ಲಿ ಬೀಳ್ತಾರೆ?
ಜೂನ್ ಹದಿನೈದನೇ ತಾರೀಕಿನಿಂದ ಆ ಸರಣಿಯು ಸಂಖ್ಯೆ 1ರಿಂದ ಆರಂಭವಾಗಿದೆ. ಶೀಲಾ ಬಜಾಜ್ ರಿಗೆ ಅಭಿಮಾನಿಗಳು ಹೆಚ್ಚು. ಹಾಗೂ ಅವರು ನೀಡುವ ಸಲಹೆ- ಸೂಚನೆ ಪಾಲಿಸುವವರ ಸಂಖ್ಯೆಯೂ ಹೆಚ್ಚು. ಒನ್ಇಂಡಿಯಾ ಕನ್ನಡದಲ್ಲಿ ಶುರುವಾಗಿರುವ ಈ ಸರಣಿ ಬಗ್ಗೆ ಇತರರಿಗೆ ಕೂಡ ತಿಳಿಸಿ. ನೀವು ಯಾವ ಸಂಖ್ಯೆಯವರು?
Mನಿಂದ Yಅಕ್ಷರದವರೆಗೆ ನಿಮ್ಮ ಹೆಸರು ಏನನ್ನು ಸೂಚಿಸುತ್ತದೆ?
ಇಂದಿನ ಸಂಖ್ಯಾಶಾಸ್ತ್ರವು 2ರ ವಿಚಾರವಾಗಿರುತ್ತದೆ. ಅಂದಹಾಗೆ ಇಲ್ಲಿರುವ ವಿಚಾರ ನಿಮಗೆ ತಾಳೆಯಾಗುತ್ತದಾ ಎಂಬುದರ ಬಗ್ಗೆ ಇಲ್ಲಿನ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ಹಾಕಿ.
ಕೆಲಸವನ್ನು ಉತ್ಕಟವಾದ ಪ್ರೀತಿ- ಆಸ್ಥೆಯಿಂದ ಮಾಡುತ್ತಾರೆ
ಬಹಳ ಸೂಕ್ಷ್ಮ ಸ್ವಭಾವದವರಾದ ಈ ಸಂಖ್ಯೆಯವರು ಯಾವುದೇ ಕೆಲಸವನ್ನು ಉತ್ಕಟವಾದ ಪ್ರೀತಿ- ಆಸ್ಥೆಯಿಂದ ಮಾಡುತ್ತಾರೆ. ನಾಯಕರಾಗಿ ಅಥವಾ ನಾಯಕಿಯಾಗಿ ಇವರು ಮಿಂಚುವ ಪೈಕಿ ಅಲ್ಲ. ಆದರೆ ಸಾಧಕರ ಹಿಂದೆ ನಿಂತು, ಅವರಿಗೆ ಬೀಳಬೇಕಾದ ಪೆಟ್ಟನ್ನೆಲ್ಲ ಗುರಾಣಿಯಂತೆ ತಾವು ತಿಂದಿರುತ್ತಾರೆ. ಆದರೆ A, J ಹಾಗೂ Sನಿಂದ ಹೆಸರು ಆರಂಭ ಆಗಿರುವಂಥವರಾದರೆ ಅಥವಾ ಅಕ್ಟೋಬರ್ ಮತ್ತು ಜನವರಿ ಮಧ್ಯೆ ಜನಿಸಿದಂಥ ಸಂಖ್ಯೆ 2ರ ವ್ಯಕ್ತಿಗಳಲ್ಲಿ ದಿನಕ್ಕಿಂತ ಹೆಚ್ಚಾಗಿ, ಸ್ವಭಾವತಃ ನಾಯಕತ್ವದ ಗುಣಗಳು ಇರುತ್ತವೆ. ಈ ಸಂಖ್ಯೆಯವರು ಸ್ವಭಾವತಃ ಶಾಂತಿ- ಸಮಾಧಾನವನ್ನು ಬಯಸುವಂಥವರು. ತುಂಬು ಪ್ರೀತಿಯನ್ನು ನೀಡುವಂಥವರು. ಎದುರಿನವರು ನಿರೀಕ್ಷೆ ಮಾಡುವುದಕ್ಕಿಂತ ಹೆಚ್ಚು ಪ್ರೀತಿಯನ್ನು ಇವರು ನೀಡುತ್ತಾರೆ.
ಚತುರಮತಿಗಳು, ಕಲಾವಿದ ಮನಸಿನವರು
ಈ ಸಂಖ್ಯೆಯವರು ತುಂಬ ಮೃದು ಸ್ವಭಾವಿಗಳು. ಜತೆಗೆ ಪ್ರಣಯದ ವಿಚಾರದಲ್ಲಿ ಎತ್ತಿದ ಕೈ. ಆದರೆ ಒಮ್ಮೆ ಸಂಬಂಧ ಹಾಳಾದರೆ ಅಲ್ಲಿ ಮತ್ತೆ ತಲೆಹಾಕುವ ಪೈಕಿ ಅಲ್ಲ. ಬಹಳ ಚತುರಮತಿಗಳು. ಕಲಾವಿದ ಮನಸ್ಸಿರುತ್ತದೆ. ಊಹಾ ಶಕ್ತಿಯೂ ಹೆಚ್ಚು. ಇವರ ಮನಸ್ಸೇ ದೊಡ್ಡ ಶಕ್ತಿ. ಜೀವನದಲ್ಲಿ ಆಧ್ಯಾತ್ಮಿಕ ವಿಚಾರಗಳತ್ತ ಇವರಿಗೆ ಒಲವು ಹೆಚ್ಚಿರುತ್ತದೆ. ತಮ್ಮದೇ ಆಲೋಚನೆಯ ಬಗ್ಗೆ ಸದಾ ಕನಸು ಕಾಣುತ್ತಾರೆ. ಈ ಪೈಕಿ ಕೆಲವರಂತೂ ವಾಸ್ತವ ಜಗತ್ತಿನಿಂದ ಮಾರುದ್ದ ದೂರ ಹೋಗಿ ಬದುಕು ಸಾಗಿಸಿಯೂ ಬಿಡುತ್ತಾರೆ. ದುಡ್ಡು- ಕಾಸು, ಸಮಾಜದ ಸ್ಥಾನ-ಮಾನ ಇವುಗಳು ಯಾವುದರ ಹಿಂದೆಯೂ ಬೆನ್ನಟ್ಟಿ ಹೋಗುವ ಜಾಯಮಾನ ಇವರದಲ್ಲ.
ಕನಸನ್ನು ಸಾಕಾರ ಮಾಡುವುದು ತಿಳಿಯಬೇಕು
ಈ ವ್ಯಕ್ತಿಗಳಲ್ಲಿ ತಪ್ಪನ್ನು ಕ್ಷಮಿಸುವ ಗುಣವಿರುತ್ತದೆ. ಜೀವನದಲ್ಲಿ ಯಶಸ್ವಿ ಆಗಲೇಬೇಕು ಅನ್ನೋ ಕಾರಣಕ್ಕೆ ಆಕ್ರಮಣಕಾರಿ ಧೋರಣೆ ಅನುಸರಿಸುವ ಮಂದಿ ಇವರಲ್ಲ. ತಮ್ಮ ಸಂಗಾತಿಯೊಂದಿಗೆ ಕೂಡ ಆಧ್ಯಾತ್ಮಿಕವಾದಂಥ ಜೀವನ ಎದುರು ನೋಡುವುದೇ ಹೆಚ್ಚು. ಇದು ಯಾವುದೋ ಜನ್ಮದ ಬಂಧ ಎಂದು ಬಲವಾಗಿ ನಂಬದ ಹೊರತು ದೈಹಿಕ ಆಕರ್ಷಣೆಗೆ ಒಳಗಾಗಿ, ಸಂಬಂಧ ಬೆಳೆಸುವಂಥವರು ಇವರಲ್ಲ. ಸದಾ ಕನಸು ಕಾಣುತ್ತಲೇ ಇರುತ್ತಾರೆ. ಅಗಾಧ ಬುದ್ಧಿಶಕ್ತಿ ಹಾಗೂ ಅಪಾರ ಊಹಾಶಕ್ತಿ ಬೆಳೆಸಿಕೊಂಡು, ಅದರ ಮೂಲಕ ಜಗತ್ತಿನ ಎದುರು ಕಾಣಿಸಿಕೊಳ್ಳಲಿಲ್ಲ ಅಂದರೆ ಇವರ ಮಾತನ್ನು ಯಾರೂ ವಾಸ್ತವ ಆಗಬಹುದು ಎಂದು ಕೂಡ ನಂಬುವುದಿಲ್ಲ. ತಮ್ಮ ಕನಸನ್ನು ಸಾಕಾರಗೊಳಿಸುವುದು ಹೇಗೆ ಅನ್ನೋದನ್ನು ಇವರು ಮೊದಲು ತಿಳಿದುಕೊಳ್ಳಬೇಕು.
ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ
ಸಂಖ್ಯೆ 2ರ ವ್ಯಕ್ತಿಗಳು ತಮ್ಮ ಮನಸ್ಸಿನ ಬಗ್ಗೆ ಮಾತ್ರ ತಿಳಿದುಕೊಳ್ಳುವುದಲ್ಲ, ದೈಹಿಕ ಆರೋಗ್ಯದ ಬಗ್ಗೆ ಕೂಡ ಕಾಳಜಿ ಮಾಡಬೇಕು. ಇದರಿಂದ ಜೀವನದಲ್ಲಿ ಮುನ್ನಡೆ ಕಾಣಬಹುದು ಮತ್ತು ಕಂಡ ಕನಸಿನ ಸಾಕಾರಕ್ಕೆ ಪ್ರಯತ್ನಿಸಬಹುದು. ಇವರು ತಮ್ಮ ಗುರಿ ತಲುಪುವುದಕ್ಕೆ ಕೆಲಸ ಆರಂಭಿಸಿದರೆ ಯಾವುದೇ ಅಡೆತಡೆ ಇವರನ್ನು ನಿಲ್ಲಿಸಲು ಸಾಧ್ಯವಿಲ್ಲ. ತಮ್ಮ ಮನಶ್ಶಕ್ತಿ ಮೂಲಕ ತರ್ಕಬದ್ಧ ಆಲೋಚನೆಯನ್ನು ಮಾಡುವುದು ರೂಢಿಸಿಕೊಳ್ಳಬೇಕು. ಎಲ್ಲ ವಸ್ತು-ವಿಷಯ- ವ್ಯಕ್ತಿಗಳನ್ನೂ ಅರ್ಥ ಮಾಡಿಕೊಳ್ಳಲು ಸಂಖ್ಯೆ 2ರ ವ್ಯಕ್ತಿಗಳು ಪ್ರಯತ್ನಿಸುತ್ತಲೇ ಇರುತ್ತಾರೆ. ಅದರಲ್ಲೂ ಅದರ ನಿಜ ಸ್ವರೂಪದಲ್ಲೇ ಅರಿಯುವ ಪ್ರಯತ್ನ ಅವರದು. ಇದು ನಿಜಕ್ಕೂ ಸಾಧ್ಯವಾಗಿಬಿಟ್ಟರೆ ಇವರನ್ನು ಹಿಡಿಯೋರಿಲ್ಲ.