ವೃಷಭ : ಆಲಸ್ಯ ಅಥವಾ ಅನಾರೋಗ್ಯ ಹೆಚ್ಚಾಗುತ್ತದೆ
ಪುರುಷರು: ಆಲಸ್ಯ ಅಥವಾ ಅನಾರೋಗ್ಯ ಹೆಚ್ಚಾಗಿ ಕೆಲಸ ಕಾರ್ಯಗಳು ಮಾಡಲು ಆಗುವುದಿಲ್ಲ. ಆದರೆ ಅಂಥ ಸಂದರ್ಭದಲ್ಲಿ ಮಕ್ಕಳ ಸಹಾಯ, ಸಹಕಾರ ಅದೃಷ್ಟದಂತೆ ಲಭಿಸುತ್ತದೆ. ನಿರುದ್ಯೋಗಿಗಳು ತಿಂಗಳ ಮಧ್ಯಭಾಗದ ನಂತರ ಪ್ರಯತ್ನಿಸಿದರೆ ಕೆಲಸ ಸಿಗಬಹುದು.
ಆದರೆ, ನಿರುತ್ಸಾಹ- ಆಲಸ್ಯದಿಂದ ಮನೆಯಲ್ಲಿಯೇ ಕುಳಿತರೆ ಕೆಲಸ ನಿಮ್ಮನ್ನು ಹುಡುಕುತ್ತ ನಿಮ್ಮ ಮನೆ ಬಾಗಿಲಿಗೆ ಬರುವುದಿಲ್ಲ. ನಿಮ್ಮಿಂದ ಸ್ನೇಹಿತರಿಗೂ ಸಹ ಧನ ಸಹಾಯ ಅಥವಾ ನಿಮ್ಮ ಹೆಸರನ್ನು ತಮ್ಮ ಕೆಲಸಗಳಿಗೆ ಅವರು ಬಳಸಿಕೊಳ್ಳುತ್ತಾರೆ. ಬಾಳಸಂಗಾತಿ ಬೇಸರ ಮಾಡಿಕೊಂಡಿದ್ದಲ್ಲಿ ತಿಂಗಳ ಮಧ್ಯಭಾಗದ ನಂತರ ಸರಿಹೋಗುತ್ತದೆ.
ದೂರ ಪ್ರಯಾಣಗಳು ಸಹ ಕಾಣಿಸುತ್ತಿವೆ. ಇಲ್ಲಿ ಕಾಣುವಂತೆ ನಿಮ್ಮ ದೊಡ್ಡ ಶತ್ರು ಅಂದರೆ ಹೆಚ್ಚಾಗುವ ಆಲಸ್ಯ. ಅದನ್ನು ಬಿಟ್ಟು ಮುನ್ನುಗ್ಗಿ, ಎಲ್ಲೆಡೆ ನಿಮಗೆ ಜಯ ಖಂಡಿತ. ಜ್ವರ ಬಾಧೆ ಬಿಟ್ಟೂ ಬಿಡದ ಹಾಗೆ ಕಾಡುವ ಸಾಧ್ಯತೆಗಳು ಹೆಚ್ಚಿವೆ. ಯಾರ ಮೇಲೂ ಅವಲಂಬಿತರಾಗಿರಲು ನಿಮಗೆ ಇಷ್ಟ ಇಲ್ಲ. ಆದರೆ ಅವಲಂಬನೆ ನಿಮಗೆ ಅನಿವಾರ್ಯ ಆಗಿಬಿಡುತ್ತದೆ.
ಸ್ತ್ರೀಯರು: ನಿಮ್ಮ ಹೆಸರಿನಲ್ಲಿ ಮಾಡಿದ ವ್ಯವಹಾರಗಳು ಹೆಚ್ಚಿನ ಲಾಭ ತರುವುದಿಲ್ಲ. ನಿಮ್ಮ ಮಕ್ಕಳ ಸಾಧನೆ ಈ ಹಿಂದೆ ತರುತ್ತಿದ್ದ ಪ್ರಮಾಣದಲ್ಲಿ ಹೆಮ್ಮೆ ತರುವುದಿಲ್ಲ. ವಸ್ತ್ರ ಖರೀದಿಗೆ ಹೆಚ್ಚಿನ ಖರ್ಚು ಮಾಡುತ್ತೀರಿ. ನಿಮ್ಮವರಿಂದ ಅಥವಾ ನೀವೇ ಹೊಸದೊಂದು ವಾಹನ ಖರೀದಿ ಮಾಡಿದರೂ ಆಶ್ಚರ್ಯವಿಲ್ಲ.
ಆದರೆ, ಅದರಿಂದ ಬಹಳ ದೊಡ್ಡ ಸಾಲದ ಹೊರೆ ಆಗುತ್ತಾ ಎಂಬುದು ತಿಳಿದುಕೊಳ್ಳಿ. ತಿಂಗಳ ಮಧ್ಯ ಭಾಗದಲ್ಲಿ ಮಾತ್ರ ಒಮ್ಮೆ ಗೆಳತಿಯರ ಚುಚ್ಚು ಮಾತು ಮನಸಿಗೆ ನೋವು ಉಂಟು ಮಾಡುತ್ತದೆ. ಪ್ರತಿಫಲಾಪೇಕ್ಷೆ ಇಲ್ಲದೇ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ ಅದರ ಹಲವು ಕಾರಣಗಳಲ್ಲಿ ಒಂದು ನಿಮ್ಮ ಸೌಂದರ್ಯ!
ಉದ್ಯೋಗದಲ್ಲಿ ಬದಲಾವಣೆ ಅಥವಾ ವರ್ಗಾವಣೆ ಅವಶ್ಯ ಇರುವವರು ಸಹ ಈ ತಿಂಗಳಿನಲ್ಲಿ ಹೆಚ್ಚು ಒತ್ತು ಕೊಟ್ಟು ಪ್ರಯತ್ನಿಸಿ, ಆಗುತ್ತದೆ. ಸಂಗೀತಾಸಕ್ತರಿಗೆ ಈ ತಿಂಗಳು ಉತ್ತಮ ಸುಶ್ರಾವ್ಯ ಸಂಗೀತ ಕೇಳುವ ಯೋಗವಿದೆ. ಮನರಂಜನೆಯಲ್ಲಿ ನಿಮ್ಮ ಅಮೂಲ್ಯವಾದ ಮಾಸವನ್ನು ಹಾಳು ಮಾಡಿಕೊಂಡರೆ ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ.
ವಿದ್ಯಾರ್ಥಿಗಳು: ನಿಮ್ಮ ನೈಜ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲಾಗದೆ ಯಾವುದೋ ರೋಗಕ್ಕೆ ಮಾತ್ತ್ಯಾವುದೋ ಮದ್ದು ಕೊಟ್ಟಂತೆ ನಿಮ್ಮ ಪರಿಸ್ಥಿತಿಯನ್ನು ಇನ್ನೂ ಹದಗೆಡಿಸಬಹುದು, ಎಚ್ಚರ.
ಪರಿಹಾರ: ಈ ತಿಂಗಳು ಸಾಧ್ಯವಾದಲ್ಲಿ ಒಮ್ಮೆ ಮಂತ್ರಾಲಯಕ್ಕೆ ಹೋಗಿ ರಾಯರ ದರ್ಶನ, ಪೂಜೆ ಸೇವೆ ಸಲ್ಲಿಸಿ ಬನ್ನಿ.