ಧನು : ಗುರು ಅನುಗ್ರಹ ಇನ್ನೇನು ಪ್ರಾರಂಭ
ಪುರುಷರು: ಗುರು ಅನುಗ್ರಹ ಇನ್ನೇನು ಪ್ರಾರಂಭ ಆಗಲಿದೆ. ಅದರಿಂದ ಪರಿಸ್ಥಿತಿ ಉತ್ತಮವಾಗಲಿದೆ. ಆದ ಕಾರಣ ಮಾನಸಿಕವಾಗಿ ಉತ್ಸಾಹದಿಂದ ಇರುತ್ತೀರಿ. ಸ್ವಲ್ಪ ಅಲೆದಾಟಗಳು ಕಾಣುತ್ತಿವೆ. ಆದರೂ ಅವು ಒಂದಿಲ್ಲೊಂದು ವಿಧದಲ್ಲಿ ನಿಮಗೆ ಸಹಕಾರಿ ಆಗುತ್ತವೆ.
ತೈಲ ವ್ಯಾಪಾರಿಗಳನ್ನು ಹೊರತುಪಡಿಸಿ ಉಳಿದ ವ್ಯಾಪಾರಿಗಳಿಗೆ ಲಾಭ ಇದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಗಾಗಿ ಯಾರ ಶಿಫಾರಸು ಅವಶ್ಯ ಇರುವುದಿಲ್ಲ. ಸಂತಾನ ಅಪೇಕ್ಷಿಗಳು ಸಿಹಿ ಸುದ್ದಿ ಕೇಳುವ ಸಾಧ್ಯತೆಗಳಿವೆ. ವಿದೇಶ ಪ್ರಯಾಣ ಮಾಡುವ ವಿಚಾರ ಇರುವವರಿಗೆ ಸ್ವಲ್ಪ ಅಡಚಣೆಗಳಾಗುತ್ತವೆ.
ಆದರೂ ಪರವಾಗಿಲ್ಲ, ನಿಮಗೆ ಕಾಲಕ್ಕೆ ಸರಿಯಾಗಿ ಸಹಾಯ ಮಾಡುವವರು ಹಾಗೂ ಮಾರ್ಗದರ್ಶನ ಮಾಡುವವರಿಗೆ ಕೊರತೆ ಆಗುವುದಿಲ್ಲ. ಶತ್ರುಗಳು ಎಂದು ನೀವು ಭಾವಿಸಿದವರೂ ಈ ತಿಂಗಳು ಮಿತ್ರರಾಗುತ್ತಾರೆ.
ಸ್ತ್ರೀಯರು: ನಿಮ್ಮ ಪ್ರತಿಭೆ ಉತ್ತಮ ಕೀರ್ತಿಯನ್ನು ತಂದುಕೊಡಲಿದೆ. ವಹಿಸಿದ ಕೆಲಸವನ್ನು ತೋರಿಕೆಯ ಶ್ರದ್ಧೆಯಿಂದ ಮಾಡಿ ಮುಗಿಸಲು ಹೋಗಿ ಎಡವಟ್ಟು ಮಾಡಿಕೊಳ್ಳುತ್ತೀರಿ, ಎಚ್ಚರ. ಅತಿಯಾದ ಮಾತುಗಳು ಹಾನಿಕಾರಕ ಆಗುತ್ತವೆ. ಸರಕಾರಿ ಕೆಲಸಗಳನ್ನು ಅಥವಾ ಹಣದ ವ್ಯವಹಾರಗಳನ್ನು ಮಾಡಿಕೊಡುವುದಾಗಿ ಮಾತು ಕೊಡಲು ಹೋಗದಿರಿ.
ನಿಮ್ಮ ವಿಚಾರದಲ್ಲಿ ಕೆಲ ಮಟ್ಟಿಗಿನ ಅಪಪ್ರಚಾರಗಳು ಆಗುತ್ತವೆ. ಆ ವಿಚಾರವನ್ನು ಹೆಚ್ಚು ಆಲೋಚಿಸುತ್ತಾ ಕೂರುವುದು ಬೇಡ. ನಿಮಗೆ ಬೇಕು ಅನಿಸಿದ್ದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಲಭಿಸಿದರೂ ದ್ವಂದ್ವದಲ್ಲಿ ಸಿಲುಕಿ ಆಯ್ಕೆ ಅಸಾಧ್ಯ ಅನಿಸುತ್ತದೆ. ನಿಮ್ಮ ಸದಸ್ಯತ್ವ ಇರುವ ಗುಂಪಿನ ಅಧ್ಯಕ್ಷ ಪಟ್ಟ ಹೆಚ್ಚು ಆಕರ್ಶಿಸುತ್ತದೆ.
ಆದರೆ, ಎಷ್ಟು ಪ್ರಯತ್ನಿಸಿದರೂ ಸಹ ಲಭಿಸುವ ಸಾಧ್ಯತೆಗಳು ಕಡಿಮೆ. ವಿವಾಹಿತರು ಬಾಳಸಂಗಾತಿಗೆ ವಿಚಾರ ತಿಳಿಸದೆ ಯಾರೊಂದಿಗೂ ಹಣದ ವ್ಯವಹಾರ ಮಾಡಬೇಡಿ.
ವಿದ್ಯಾರ್ಥಿಗಳು: ಹೊಸದನ್ನು ಹುಡುಕುತ್ತ ಸಾಗಿದರೆ ಯಶಸ್ಸನ್ನು ಕಾಣುವ ಸಾಧ್ಯತೆಗಳಿವೆ. ಆದರೆ ಕೆಲ ವಿಚಿತ್ರ ಹಠಮಾರಿ ಬುದ್ಧಿಯನ್ನು ಅವಶ್ಯವಾಗಿ ಬಿಡಲೇಬೇಕು.
ಪರಿಹಾರ: ಈ ತಿಂಗಳು ಸಾಧ್ಯ ಆದಲ್ಲಿ ಹೊರನಾಡು ಅನ್ನಪೂರ್ಣೇಶ್ವರೀ ದೇಗುಲಕ್ಕೆ ಹೋಗಿ ಅಲ್ಲಿ ಅನ್ನ ದಾನಕ್ಕೆ ಯಥಾ ಶಕ್ತಿ ದೇಣಿಗೆ ಕೊಡಿ.