ಮೇಷ : ಪ್ರೀತಿ, ಹಣಕಾಸು, ನೆಮ್ಮದಿಗೆ ತೊಂದರೆಯಿಲ್ಲ
ಪುರುಷರು: ದೈವಾನುಗ್ರಹದಿಂದಾಗಿ ನಿಮಗೆ ಈ ತಿಂಗಳು ಪ್ರೀತಿ, ಹಣ ಕಾಸು ಹಾಗೂ ನೆಮ್ಮದಿಗೆ ಏನೂ ತೊಂದರೆ ಆಗುವುದಿಲ್ಲ. ಸಂಗಾತಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯಲು ಇದು ಸುಸಮಯ. ನಿಮಗೆ ಅರಿವಿಲ್ಲದಂತೆ ಖ್ಯಾತಿ ಹಾಗೂ ಸೌಂದರ್ಯ ಎರಡೂ ವೃದ್ದಿಸುತ್ತದೆ. ಇದರಿಂದಾಗಿ ಆತ್ಮವಿಶ್ವಾಸ ಸಹ ಹೆಚ್ಚುತ್ತದೆ.
ಇನ್ನು ಶಾರೀರಿಕವಾಗಿಯೂ ಸುಖ- ಸಂತೋಷ ಇರುತ್ತದೆ. ಇನ್ನು ಮಾಸದ ಮಧ್ಯ ಭಾಗದ ನಂತರ ಮನಸ್ಸು ಹಾಗೂ ಬುದ್ಧಿ ಚುರುಕುಗೊಳ್ಳುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ- ಕಾರ್ಯಗಳನ್ನು ಸಾಧಿಸುತ್ತೀರಿ. ಈ ಹಿಂದೆ ಮಾಡಲಾಗದೆ ಬಿಟ್ಟಿದ್ದ ಕೆಲಸ- ಕಾರ್ಯಗಳು ಏನಾದರೂ ಇದ್ದಲ್ಲಿ ಅವುಗಳನ್ನು ಮಾಡಿ ಮುಗಿಸಿಕೊಳ್ಳಲು ಇದು ಉತ್ತಮ ಸಮಯ.
ನಿಮ್ಮ ಪ್ರಿಯತಮೆಗೆ ಇನ್ನೂ ನಿಮ್ಮ ಪ್ರೇಮ ನಿವೇದನೆ ಮಾಡಿಲ್ಲ ಎಂದಾದಲ್ಲಿ ಈಗ ಮಾಡಲು ಉತ್ತಮ ಸಮಯ. ಇನ್ನು ಮಾಸಾಂತ್ಯಕ್ಕೆ ಸರಿದಂತೆ ಕೆಲ ಅನಿರೀಕ್ಷಿತ ಘಟನೆಗಳು ಸ್ವಲ್ಪ ಅಲುಗಾಡಿಸುವ ಸಾಧ್ಯತೆಗಳಿವೆ. ಕೆಲ ಹಳೆಯ ಕಷ್ಟಕಾಲದ ನೆನಪುಗಳು ಮರುಕಳಿಸುತ್ತವೆ. ಆದರೆ ಕೆಲ ಸಾಧನೆಗಳನ್ನು ಮಾಡಲು ಹಲವು ಪರೀಕ್ಷೆಗಳು ಅನಿವಾರ್ಯ ಆಗಿಬಿಡುತ್ತದೆ ಎಂಬುದು ನೆನಪಿನಲ್ಲಿ ಇಟ್ಟುಕೊಂಡರೆ ಸಾಕು.
ಸ್ತ್ರೀಯರು: ಸ್ಪರ್ಧಾತ್ಮಕ ಗುಣ ಹೆಚ್ಚುತ್ತದೆ. ಆದರೆ ಅದೇ ಸಮಯದಲ್ಲಿ ಅರಿವಿಲ್ಲದಂತೆ ನಿಮ್ಮಲ್ಲಿ ಅಹಂ ಸಹ ಹೆಚ್ಚುತ್ತದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳು ನಿಮ್ಮ ಅಭಿಪ್ರಾಯಕ್ಕೆ ಮನ್ನಣೆ ಕೊಡುತ್ತಿಲ್ಲ, ದರ್ಪ ತೋರುತ್ತಾ ಇದ್ದಾರೆ ಅನಿಸುತ್ತದೆ. ಕೆಲ ಸನ್ನಿವೇಶಗಳನ್ನು ಎದುರಿಸಲು ಕೆಲ ಬದಲಾವಣೆಗಳನ್ನು ತಂದುಕೊಳ್ಳಲೇ ಬೇಕು. ನಿಮ್ಮ ಆಯ್ಕೆ ಸರಿ ಇದೆಯೇ ಎಂದು ಪುನಃ ಪರಿಶೀಲಿಸಲು ಇದು ಸುಸಮಯ.
ವೈದ್ಯರಾಗಿದ್ದಲ್ಲಿ ಸ್ವಲ್ಪ ಹಿನ್ನಡೆ ಅನಿಸಬಹುದು. ಸರಕಾರದಿಂದ ಏನಾದರೂ ಸವಲತ್ತು ಅಥವಾ ಹಣ ಮಂಜೂರಾಗಬೇಕಿದ್ದಲ್ಲಿ ಈ ತಿಂಗಳ ಮಧ್ಯ ಭಾಗದ ನಂತರ ಪ್ರಯತ್ನಿಸಿ. ಆದರೆ ಕಷ್ಟ ಸಾಧ್ಯ. ಇನ್ನು ಈ ತಿಂಗಳು ನೀವು ಮಾಡುವ ಉತ್ತಮ ಕೆಲಸ ಅಂದರೆ ಯಾರನ್ನು ಹತ್ತಿರ ಬಿಟ್ಟುಕೊಳ್ಳ ಬೇಕು ಹಾಗೂ ಯಾರನ್ನು ದೂರ ಇಡಬೇಕು ಎಂದು ತಿಳಿದು ಆ ಕೆಲಸವನ್ನು ಮಾಡುತ್ತೀರಿ.
ಮೊದಲ ಬಾರಿ ಕಾನೂನು ಹೋರಾಟ ಮಾಡುವುದಾದಲ್ಲಿ ಈ ತಿಂಗಳಿನಲ್ಲಿ ಬೇಡ, ಸ್ವಲ್ಪ ತಡೆಯಿರಿ. ಇನ್ನೂ ಕಾಲಾವಕಾಶದ ಅವಶ್ಯಕತೆ ಇದೆ.
ವಿದ್ಯಾರ್ಥಿಗಳು: ವಿದ್ಯಾರ್ಜನೆಗಾಗಿ ವಿದೇಶ ಅಥವಾ ದೂರ ಪ್ರಯಾಣ ಮಾಡುವ ಅವಕಾಶ ಹುಡುಕುತ್ತ ಇರುವವರಿಗೆ ಮಾಸಾಂತ್ಯದ ನಂತರ ಹೆಚ್ಚಿನ ಅವಕಾಶಗಳು ಲಭಿಸುತ್ತವೆ. ಶುಲ್ಕ ಪಾವತಿಸಲು ಈ ಹಿಂದೆ ಇದ್ದ ಆರ್ಥಿಕ ಸಮಸ್ಯೆಗಳು ಪರಿಹಾರವಾಗಿ ಹಣ ಲಭಿಸುತ್ತದೆ.
ಪರಿಹಾರ: ಈ ತಿಂಗಳು ಸಾಧ್ಯವಾದಲ್ಲಿ ಒಮ್ಮೆ ಧರ್ಮಸ್ಥಳಕ್ಕೆ ಹೋಗಿ, ಅಲ್ಲಿ ನೇತ್ರಾವತಿ ನದಿ ಸ್ನಾನ ಮಾಡಿ. ಆ ನಂತರ ಸ್ವಾಮಿಯ ಗರ್ಭ ಗುಡಿಯ ಬಳಿ ತೀರ್ಥ ಸ್ನಾನ ಮಾಡಿ, ದೇವರ ದರ್ಶನ ಪಡೆಯಿರಿ.