ಧನು ರಾಶಿಯಲ್ಲಿ ಮಂದ-ಮಂಗಳ ಯೋಗ, 12 ರಾಶಿಯ ಮೇಲೆ ಏನು ಪ್ರಭಾವ?
ಜ್ಯೋತಿಷ್ಯ ರೀತಿಯಲ್ಲಿ ಈ ವಿದ್ಯಮಾನ ತುಂಬ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಮಾರ್ಚ್ 8ರ ಗುರುವಾರ ಕುಜ ಗ್ರಹವು ಧನುಸ್ಸು ರಾಶಿಯ ಪ್ರವೇಶ ಆಗುತ್ತದೆ. ಅಷ್ಟೇ ಆಗಿದ್ದರೆ ಈ ಬಗ್ಗೆ ತುಂಬ ತಲೆ ಕೆಡಿಸಿಕೊಳ್ಳುವ ಅಗತ್ಯ ಇರಲಿಲ್ಲ. ಏಕೆಂದರೆ ಕುಜ ಗ್ರಹವು ನಲವತ್ತೈದು ದಿನಕ್ಕೆ ಒಮ್ಮೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುತ್ತದೆ.
ಆದರೆ, ಚಿಂತೆಗೆ ಕಾರಣ ಆಗುವಂತೆ ಮಾಡಿರುವುದು ಶನಿ ಗ್ರಹ. ಧನುಸ್ಸು ರಾಶಿಯಲ್ಲಿ ಈಗಾಗಲೇ ಶನಿ ಗ್ರಹವಿದೆ. ಅದೇ ರಾಶಿಗೆ ಕುಜ ಗ್ರಹದ ಪ್ರವೇಶ ಆಗುತ್ತಿದೆ. ಇದನ್ನು ಮಂದ (ಶನಿ)- ಮಂಗಳ ಯೋಗ ಎನ್ನುತ್ತಾರೆ. ಶನಿಯು ರಾಜ, ಕುಜ ಸೇನಾಧಿಪತಿ ಇಬ್ಬರೂ ಒಂದೇ ರಾಶಿಯಲ್ಲಿ ಇರುವುದರಿಂದ ಇದನ್ನು ಯುದ್ಧ ಸ್ಥಿತಿ ಎಂದು ವಿಶ್ಲೇಷಿಸಲಾಗುತ್ತದೆ. ಬೆಂಕಿ ಸ್ವರೂಪನಾದ ಕುಜನಿಗೆ, ಶನಿ ಎಂಬ ಬಿರುಗಾಳಿ ಜತೆಯಾದರೆ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಊಹಿಸಿಕೊಳ್ಳಿ.
ಮಾರ್ಚ್ 8ರಿಂದ ಧನು ರಾಶಿಯಲ್ಲಿ ಶನಿ-ಕುಜ, 45 ದಿನ ಎಚ್ಚರ!
ಮಾರ್ಚ್ 8ರಿಂದ ನಲವತ್ತೈದು ದಿನಗಳ ಕಾಲ ಮೇಷದಿಂದ ಮೀನದವರೆಗೆ ಹನ್ನೆರಡು ರಾಶಿಯವರ ಮೇಲೆ ಇದು ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸಿಕೊಡುತ್ತದೆ ಇಂದಿನ ಲೇಖನ. ಜತೆಗೆ ಕೈಗೊಳ್ಳಬೇಕಾದ ಪರಿಹಾರ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯನ್ನು ಕೂಡ ತಿಳಿಸಲಾಗುವುದು.
ಮೇಷ
ಭಾಗ್ಯ ಸ್ಥಾನದಲ್ಲಿ ಈ ಯೋಗ ನಡೆಯುತ್ತಿದೆ. ಅದೃಷ್ಟವಶಾತ್ ನಡೆಯಬೇಕಾದ ಕಾರ್ಯಗಳು ನಡೆಯುವುದಿಲ್ಲ. ಆ ಕೆಲಸಗಳು ಮುಂದಕ್ಕೆ ಹೋಗುತ್ತವೆ. ಈ ವರೆಗೆ ಹೇಗೋ ಕಷ್ಟಪಟ್ಟು ಒಂದು ಹಂತದವರೆಗೆ ಕೆಲಸ ಮಾಡಿ ಮುಗಿಸಿದ್ದೀರಿ. ಇನ್ನೇನು ಅದರ ಫಲ ತೆಗೆದುಕೊಳ್ಳಬೇಕು ಅಂದಾಗ ಮುಂದಕ್ಕೆ ಹೋಗುತ್ತದೆ.
ವೃಷಭ
ನೀವು ಈಗಾಗಲೇ ಎಂಟನೇ ಮನೆ ಶನಿಯ ಫಲಗಳನ್ನು ಅನುಭವಿಸುತ್ತಿದ್ದೀರಿ. ಇದೀಗ ಶನಿಯ ಜತೆಗೆ ಕುಜ ಸೇರ್ಪಡೆ ಆಗಿದೆ. ವೈವಾಹಿಕ ಜೀವನದಲ್ಲಿ ಹೆಚ್ಚಿನ ತೊಂದರೆ- ತಾಪತ್ರಯಗಳು ಆಗುತ್ತವೆ. ಮೂರನೇ ವ್ಯಕ್ತಿ ನಿಮ್ಮ ದಾಂಪತ್ಯದಲ್ಲಿ ತಂದಿಟ್ಟು, ಕಲಹಗಳು ಏರ್ಪಡುತ್ತವೆ.
ಮಿಥುನ
ನಿಮ್ಮ ರಾಶಿಯಿಂದ ಏಳನೇ ಸ್ಥಾನ ಧನುಸ್ಸು ಆಗುತ್ತದೆ. ಪಾರ್ಟನರ್ ಷಿಪ್, ಸ್ನೇಹ, ದಾಂಪತ್ಯ ಇವೆಲ್ಲವನ್ನೂ ಸೂಚಿಸುವ ಮನೆಯಿದು. ಆದ್ದರಿಂದ ತುಂಬ ಬೇಕಾದ ಗೆಳೆಯ ಅಥವಾ ಗೆಳತಿ ಮಧ್ಯೆ ಭಿನ್ನಾಭಿಪ್ರಾಯ ಆಗಿ, ಸ್ನೇಹ ನಾಶ ಆಗಬಹುದು. ಒಟ್ಟಿನಲ್ಲಿ ಸ್ನೇಹ ವಲಯದಿಂದ ತೊಂದರೆ ಆಗುತ್ತದೆ. ಇನ್ನು ದೂರ ಪ್ರಯಾಣದಿಂದ ಸಮಸ್ಯೆ ಆಗುತ್ತದೆ. ಆದ್ದರಿಂದ ಪ್ರಯಾಣ ಬಿಲ್ ಕುಲ್ ಬೇಡ.
ಕರ್ಕಾಟಕ
ಕರ್ಕಾಟಕ ರಾಶಿ ಮೇಲೆ ಶನಿಯ ದೃಷ್ಟಿ ಬೀಳುವುದರಿಂದ ಸ್ವಲ್ಪ ಮಟ್ಟಿಗೆ ಸಮಸ್ಯೆ ನಿಶ್ಚಿತ. ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ಶನಿ ಇದ್ದರೂ, ಧನು ರಾಶಿಯಿಂದ ಎಂಟನೇ ಮನೆಯಾದ ಕರ್ಕಾಟಕದ ಮೇಲೆ ಕುಜನೊಟ್ಟಿಗಿರುವ ಶನಿಯ ದೃಷ್ಟಿ ಬೀಳುವುದರಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಒಂದೇ ಕೆಲಸವನ್ನು ಹಲವು ಸಲ ಮಾಡಬೇಕಾಗುತ್ತದೆ. ಮಾಡಿದ ಕೆಲಸಕ್ಕೆ ನಿರೀಕ್ಷಿತ ಫಲಗಳು ಸಿಗುವುದಿಲ್ಲ.
ಸಿಂಹ
ಸಿಂಹ ರಾಶಿಯವರಿಗೆ ಮೊದಲೇ ಪಂಚಮ ಶನಿಯ ಸಮಸ್ಯೆ ಇತ್ತು. ಜತೆಗೆ ಕುಜನ ಸೇರ್ಪಡೆ ಆಗಿದೆ. ನಿಮ್ಮ ರಾಶಿಯಿಂದ ನಾಲ್ಕು ಹಾಗೂ ಭಾಗ್ಯ ಸ್ಥಾನದ ಅಧಿಪತಿ ಕುಜ ಶನಿ ಜತೆ ಸೇರುವುದರಿಂದ ಸೋದರ- ಸೋದರಿಯರ ಮಧ್ಯೆ ಭಿನ್ನಾಭಿಪ್ರಾಯ- ಮನಸ್ತಾಪ ಆಗಬಹುದು. ಸೋದರ ಅಥವಾ ಸೋದರಿ ಮಾಡಿದ ತಪ್ಪಿಗೆ ನೀವು ಅಪರಾಧಿ ಸ್ಥಾನದಲ್ಲಿ ನಿಲ್ಲುತ್ತೀರಿ. ಭೂಮಿ ಖರೀದಿ ವಿಚಾರದಲ್ಲಿ ತೊಂದರೆ ಇದೆ.
ಕನ್ಯಾ
ನಿಮಗೆ ನಾಲ್ಕನೇ ಸ್ಥಾನದಲ್ಲಿ ಶನಿ-ಕುಜ ಸಂಯೋಗ ಆಗಿದೆ. ವೃತ್ತಿಗೆ ಹಾಗೂ ಉದ್ಯೋಗ ಸಂಬಂಧಿ ವಿಚಾರದಲ್ಲಿ ಹುಷಾರಾಗಿರಬೇಕು. ಸುಮ್ಮನೆ ಮಾತು ಬೆಳೆಸಿ ಜಗಳ ಆಡುವ ಸಾಧ್ಯತೆ ಇರುವುದರಿಂದ ನಿರ್ಲಕ್ಷ್ಯ ಮಾಡಬಹುದಾದ ವಿಚಾರವನ್ನು ದೊಡ್ಡದು ಮಾಡಿಕೊಂಡು, ಮನಸ್ಸು ಕಹಿ ಆಗದಂತೆ ಎಚ್ಚರ ವಹಿಸಿ. ಜತೆಗೆ ಆರೋಗ್ಯ ವಿಚಾರದಲ್ಲೂ ಹುಷಾರಾಗಿರಬೇಕು.
ತುಲಾ
ನಿಮಗೆ ಮೂರನೇ ಸ್ಥಾನದಲ್ಲಿ ಮಂದ-ಮಂಗಳ ಯೋಗ ನಡೆಯುವುದರಿಂದ ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಕುಜನು ಶನಿಯ ಜತೆಗೆ ಧನು ರಾಶಿಯಲ್ಲಿ ಇರುವಷ್ಟು ದಿನವೂ ಮಕ್ಕಳ ಬಗ್ಗೆ ಗಮನ ಹರಿಸಿ. ಅವರು ಯಾವುದೇ ಅನಾಹುತ ಮಾಡಿಕೊಳ್ಳದ ಹಾಗೆ ನೀವು ಕಣ್ಣಿಡಬೇಕಾಗುತ್ತದೆ.
ವೃಶ್ಚಿಕ
ರಾಶ್ಯಾಧಿಪತಿಯೇ ಶನಿ ಜತೆಗೆ ಸೇರಿರುವುದರಿಂದ ಆರೋಗ್ಯದಲ್ಲಿ ಏರುಪೇರು ಹಾಗೂ ಕುಟುಂಬದಲ್ಲೇ ಭಿನ್ನಾಭಿಪ್ರಾಯ, ನೀವು ಏನೋ ಹೇಳಿದರೆ ಅದು ಮತ್ತೆ ಹೇಗೋ ಧ್ವನಿಸಿ ತಪ್ಪಾದ ಅಭಿಪ್ರಾಯಗಳು ಮೂಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಹೇಳಬೇಕು ಅಂದುಕೊಂಡ ವಿಚಾರದಲ್ಲಿ ಸ್ಪಷ್ಟತೆ ಇರಲಿ.
ಧನು
ನಿಮಗೆ ಶತ್ರುಗಳ ಕಾಟ ಹೆಚ್ಚಾಗುತ್ತದೆ. ಒಂದು ವೇಳೆ ಸಾಲ ಪಡೆದಿದ್ದರೆ ನಿಮ್ಮ ಕಚೇರಿ- ಮನೆಗೆ ಬಂದು ಹಣಕ್ಕಾಗಿ ಪೀಡಿಸುತ್ತಾರೆ. ಅಷ್ಟೇ ಅಲ್ಲ, ಉದ್ಯೋಗ ಸ್ಥಳದಲ್ಲೂ ಯಾವುದೇ ತಪ್ಪುಗಳಾಗದಂತೆ ಹುಷಾರಾಗಿದೆ. ನಿಮ್ಮಿಂದ ಸಣ್ಣ ತಪ್ಪಾದರೂ ಅವಮಾನ ಮಾಡಬಹುದು ಎಂದು ಕಾದು ಕುಳಿತಿರುವ ಶತ್ರುಗಳಿಗೆ ಅವಕಾಶ ನೀಡಬೇಡಿ.
ಮಕರ
ಮಕರ ರಾಶಿಯವರಿಗೆ ಲಾಭಾಧಿಪತಿ ಕುಜ ವ್ಯಯ ಸ್ಥಾನದಲ್ಲಿ ಬರುವುದರಿಂದ ಉದ್ಯೋಗದಲ್ಲಿ ಬಡ್ತಿ, ಸಂಬಳ ಏರಿಕೆಗೆಲ್ಲ ಹೊಡೆತ ಬೀಳಬಹುದು. ಇನ್ನು ವ್ಯಾಪಾರದಲ್ಲಿ ನಷ್ಟ ಸಾಧ್ಯತೆ ಇದೆ. ಅಸಲಿಗೆ ಅನುಮಾನ ಇರುವಾಗ ಲಾಭವನ್ನು ಹೇಗೆ ನಿರೀಕ್ಷೆ ಮಾಡುವುದಕ್ಕೆ ಸಾಧ್ಯ? ಆದರೆ ನೀವಂತೂ ಈ ಸಮಯದಲ್ಲಿ ದೊಡ್ಡ ಹೂಡಿಕೆ ಮಾಡಬೇಡಿ.
ಕುಂಭ
ಕುಂಭ ರಾಶಿಯವರಿಗೆ ಕುಜ ಕರ್ಮಾಧಿಪತಿ ಆಗುತ್ತದೆ. ಜತೆ ಮೂರನೇ ಸ್ಥಾನಕ್ಕೂ ಅದೇ ಅಧಿಪತಿ. ಮಾನಸಿಕ ತಳಮಳ ಹೆಚ್ಚಾಗುತ್ತದೆ. ಇದು ಸರೀನಾ ಅಥವಾ ತಪ್ಪಾ ಎಂಬ ವಿಚಾರವಾಗಿ ಈ ಸಮಯದಲ್ಲಿ ಅಂತರ್ಯುದ್ಧ ಆಗುತ್ತದೆ. ಇನ್ನು ರಕ್ತದ ಕೊರತೆ ಆಗಿ ತಲೆ ಸುತ್ತು ಇತ್ಯಾದಿ ಆರೋಗ್ಯ ಸಮಸ್ಯೆಗಳಾಗುತ್ತವೆ.
ಮೀನ
ಉದ್ಯೋಗ ಸ್ಥಾನದಲ್ಲಿ ಬಹಳ ಸಮಸ್ಯೆ ಆಗುತ್ತದೆ. ಮೇಲಧಿಕಾರಿಗಳು ಕೆಲಸದ ವಿಚಾರವಾಗಿ ಒತ್ತಡ ಹಾಕುತ್ತಾರೆ. ಇನ್ನು ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಬೆಂಬಲಕ್ಕೆ ನಿಲ್ಲುವುದಿಲ್ಲ. ಇದರಿಂದ ವಿಪರೀತ ಒತ್ತಡ ಹೆಚ್ಚಾಗುತ್ತದೆ. ಯಾವ ಕಾರಣಕ್ಕೂ ಸಾಲ ಕೊಡಲು ಹೋಗಬೇಡಿ.
ಪರಿಹಾರ ಏನು?
ಕುಜನಿಗೆ ತೊಗರಿ ಬೇಳೆ, ಶನಿಗೆ ಎಳ್ಳು ದಾನ ಮಾಡಬೇಕು. ಅದು ಕೆಂಪು ಬಟ್ಟೆಯಲ್ಲಿ ತೊಗರಿ, ನೀಲಿ ಬಟ್ಟೆಯಲ್ಲಿ ಎಳ್ಳು ಕಟ್ಟಿ ಅದನ್ನು ದಾನ ಮಾಡಬೇಕು. ನಿಮ್ಮ ಜನ್ಮ ಜಾತಕದಲ್ಲಿ ಈ ರೀತಿ ಮಂದ-ಮಂಗಳ ಯೋಗವಿದ್ದರೆ ಬಹಳ ಎಚ್ಚರಿಕೆಯಿಂದ ಇರಿ. ಇನ್ನು ಈ ಸಮಯದಲ್ಲಿ ವೃಷಭ, ಸಿಂಹ ಲಗ್ನದಲ್ಲಿ ಹುಟ್ಟಿದ ಮಕ್ಕಳ ಬಗ್ಗೆ ಹುಷಾರಾಗಿರಬೇಕು. ಅದರಲ್ಲೂ ಸಿಂಹ ಲಗ್ನದಲ್ಲಿ ಮಕ್ಕಳು ಜನಿಸಿದರೆ ಕಡ್ಡಾಯವಾಗಿ ಪಂಚಮಾರಿಷ್ಟ ಶಾಂತಿ ಮಾಡಿಸಿಕೊಳ್ಳಬೇಕು.