ಮಾರ್ಚ್ 8ರಿಂದ ಧನು ರಾಶಿಯಲ್ಲಿ ಶನಿ-ಕುಜ, 45 ದಿನ ಎಚ್ಚರ!
Recommended Video
ಮಾರ್ಚ್ 8ರ ಗುರುವಾರದಂದು ಕುಜ ಗ್ರಹವು ಧನುಸ್ಸು ರಾಶಿಯನ್ನು ಪ್ರವೇಶಿಸುತ್ತದೆ. ಅಲ್ಲಿ ಈಗಾಗಲೇ ಶನಿ ಗ್ರಹವಿದೆ. ಕುಜ ಗ್ರಹವು ಒಂದು ರಾಶಿಯಲ್ಲಿ 45 ದಿನ ಇರುತ್ತದೆ. ಶನಿ ರಾಜ, ಕುಜ ಸೇನಾಧಿಪತಿ ಇಬ್ಬರೂ ಒಂದೇ ರಾಶಿಯಲ್ಲಿ ಇರುವುದರಿಂದ ಇದನ್ನು ಯುದ್ಧ ಸ್ಥಿತಿ ಎಂದು ವಿಶ್ಲೇಷಿಸಲಾಗುತ್ತದೆ. ಬೆಂಕಿ ಕುಜನಿಗೆ, ಶನಿ ಎಂಬ ಬಿರುಗಾಳಿ ಜತೆಯಾದರೆ ಅವಘಡಗಳು ತುಂಬ ವೇಗವಾಗಿ ಹಬ್ಬುತ್ತವೆ.
ನಾಳೆಯಿಂದ ನಲವತ್ತೈದು ದಿನಗಳ ಕಾಲ ಸೈದ್ಧಾಂತಿಕ ಸಂಘರ್ಷಗಳು ವಿಪರೀತಕ್ಕೆ ಹೋಗುತ್ತವೆ. ದೇಶದ ಪರಿಸ್ಥಿತಿಯ ಬಗ್ಗೆ ಹೇಳುವುದಾದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇದರ ಫಲಿತವನ್ನು ಗಮನಿಸಬಹುದು. ಭಾರೀ ಅಗ್ನಿ ಅವಘಡ, ವೈಚಾರ- ಸಿದ್ಧಾಂತ ಸಂಘರ್ಷ, ಪ್ರತಿಭಟನೆಗಳು ಕಾಣಬಹುದು. ಆದರೆ ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಆಯಾ ರಾಜ್ಯದ ಮುಖ್ಯಮಂತ್ರಿಗಳಿಗೆ ಸಾಧ್ಯ ಆಗುವುದಿಲ್ಲ.
ರಾಜಕೀಯ ಪಕ್ಷದ ಚಿಹ್ನೆ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ
ಇದನ್ನು ಅಸಹಾಯಕತೆ ಅಂತಲಾದರೂ ಅಂದುಕೊಳ್ಳಬಹುದು ಅಥವಾ ರಾಜಕೀಯ ಲೆಕ್ಕಾಚಾರದ ಕಾರಣಕ್ಕೆ ಸುಮ್ಮನಾಗಬಹುದು. ಒಟ್ಟಿನಲ್ಲಿ ಸೈದ್ಧಾಂತಿಕ- ಕೋಮು ಸಂಘರ್ಷಗಳು ತಲೆ ಎತ್ತುವ ಸಾಧ್ಯತೆಗಳಿವೆ. ಈಗ ಶ್ರೀಲಂಕಾದಲ್ಲಿ ಭುಗಿಲೆದ್ದಿರುವ ಕೋಮು ಸಂಘರ್ಷ ಕೂಡ ಶನಿ- ಕುಜ ಸಂಯೋಗದ ಫಲಿತಾಂಶವನ್ನು ಮುಂಚಿತವಾಗಿಯೇ ತೋರಿಸಿದ್ದರ ಫಲ.
ಒಂದೊಂದು ಡಿಗ್ರಿಯಲ್ಲಿ ಒಂದೊಂದು ಸ್ವರೂಪ
ಧನು ರಾಶಿಯನ್ನು ಪ್ರವೇಶಿಸುವ ಕುಜ ಒಂದೊಂದು ಡಿಗ್ರಿಯಲ್ಲಿ ಒಂದೊಂದು ಸ್ವರೂಪದಲ್ಲಿ ಇರುತ್ತಾನೆ. ಆಯಾ ಡಿಗ್ರಿಗೆ ಬಂದಾಗ ಅಗ್ನಿ ಅವಘಡ, ದೊಡ್ಡ ಮಟ್ಟದ ಪ್ರತಿಭಟನೆಗಳು, ವ್ಯವಸ್ಥೆ ಅಥವಾ ಸರ್ವಾಧಿಕಾರದ ವಿರುದ್ಧ ಜನರು ಪ್ರತಿಭಟನೆ ನಡೆಸುವುದು ಇಂಥವೆಲ್ಲ ಸಂಭವಿಸುತ್ತವೆ.
ಸಂಘರ್ಷಕ್ಕೆ ಕಾರಣ ಆಗುತ್ತದೆ
ತ್ರಿಪುರಾದಲ್ಲಿ ಲೆನಿನ್ ಪುತ್ಥಳಿ ಕೆಡವಿದ್ದು, ತಮಿಳುನಾಡಿನಲ್ಲಿ ಪೆರಿಯಾರ್ ಹಾಗೂ ಪಶ್ಚಿಮ ಬಂಗಾಲದಲ್ಲಿ ಶ್ಯಾಂ ಪ್ರಸಾದ್ ಮುಖರ್ಜಿ ವಿಗ್ರಹ ಕೆಡವಿದ್ದು ಇವೆಲ್ಲ ಶನಿ-ಕುಜ ಯುತಿಯ ಮುನ್ಸೂಚನೆ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ರಾಜಕೀಯ ಸ್ವರೂಪ ಪಡೆದು ದೊಡ್ಡ ಮಟ್ಟದ ಸಂಘರ್ಷಕ್ಕೆ ಕಾರಣ ಆಗುತ್ತದೆ.
ಭಾರತದ ದಕ್ಷಿಣ ರಾಜ್ಯಗಳಲ್ಲಿ ಅನಾಹುತ
ಭಾರತದ ದಕ್ಷಿಣ ರಾಜ್ಯಗಳು, ಶ್ರೀಲಂಕಾ, ಆಫ್ರಿಕಾ ಹಾಗೂ ಅಮೆರಿಕ ದೇಶಗಳಲ್ಲಿ ಉದ್ವಿಗ್ನ ವಾತಾವರಣ ಏರ್ಪಡುತ್ತದೆ. ಮುಖ್ಯವಾಗಿ ಜನರು ದಂಗೆ ಏಳುವ ಸಾಧ್ಯತೆ ಹೆಚ್ಚಿರುತ್ತದೆ. ವ್ಯವಸ್ಥೆ ಹಾಗೂ ನೀತಿ ನಿರೂಪಣೆಯ ವಿಚಾರವಾಗಿ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತದೆ. ಅಗ್ನಿ- ವಿದ್ಯುತ್ ಅವಘಡ, ಭೂಮಿಯ ಕಂಪನ ಸಂಭವಿಸುತ್ತವೆ.
ಯಾವ ರಾಶಿಯವರಿಗೆ ಏನು ಫಲ
ವಿಶೇಷವಾಗಿ ವೃಷಭ ರಾಶಿಯವರು ಆಯುಷ್ಯ- ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಸಿಂಹ ರಾಶಿಯವರು ಬಂಧು- ಸ್ನೇಹ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಕನ್ಯಾ ರಾಶಿಯವರಿಗೆ ಮನೆಯಲ್ಲಿ ಕಲಹ ಏರ್ಪಡುವ ಸಾಧ್ಯತೆ ಇದೆ. ವೃಶ್ಚಿಕ ರಾಶಿಯವರಿಗೆ ಮಾನಸಿಕ ಕ್ಲೇಷ ಉಂಟಾಗಬಹುದು. ಧನು ರಾಶಿಯವರು ಆರೋಗ್ಯದ ವಿಚಾರದಲ್ಲಿ ಎಚ್ಚರ ಇರಬೇಕು. ಮಕರ ರಾಶಿಯವರು ಹೂಡಿಕೆ ಹಾಗೂ ಹಣಕಾಸಿನ ಖರ್ಚಿನ ವಿಚಾರವಾಗಿ ಎಚ್ಚರವಾಗಬೇಕು. ಮೇಷ ರಾಶಿಯವರು ಧರ್ಮಬಾಹಿರ ಚಟುವಟಿಕೆಗಳಿಗೆ ಮನಸ್ಸು ಪ್ರೇರೇಪಿಸಿದರೂ ಪ್ರಯತ್ನಿಸಬಾರದು. ಮೀನ ರಾಶಿಯವರು ತಮ್ಮ ಅಧಿಕಾರ ಚಲಾಯಿಸುವಾಗ ಎಚ್ಚರ ಇರಬೇಕು. ಕರ್ಕಾಟಕ- ತುಲಾ ಹಾಗೂ ಕುಂಭ ಇವರಿಗೆ ಶನಿ ಒಳ್ಳೆ ಸ್ಥಿತಿಯಲ್ಲಿದ್ದಾನೆ. ಕುಜನು ಒಳ್ಳೆ ಸ್ಥಿತಿ. ಅತಿಯಾದ ಆತ್ಮವಿಶ್ವಾಸ ಬೇಡ. ನಿಯಂತ್ರಣದಲ್ಲಿರಬೇಕು. ಮಿಥುನ ರಾಶಿಯವರು ಬಾಳಸಂಗಾತಿ ಜತೆ ಕಲಹ ಆಗದಂತೆ ಎಚ್ಚರ ವಹಿಸಬೇಕು.
ಸರ್ವಾಧಿಕಾರದ ವಿರುದ್ಧ ಜನರ ಹೋರಾಟ
ಯಾವ ರಾಷ್ತ್ರದಲ್ಲಿ ಸರ್ವಾಧಿಕಾರ ಇದೆಯೋ ಅಲ್ಲೆಲ್ಲ ಜನರು ಸಿಟ್ಟಾಗಿ, ಹೋರಾಟ ನಡೆಸುವ ಸಾಧ್ಯತೆ ಇದೆ. ಆ ವ್ಯವಸ್ಥೆ ಬದಲಿಸಲು ಸಾಧ್ಯ ಆಗದಿದ್ದರೂ ದೊಡ್ಡ ಮಟ್ಟದ ಹೋರಾಟ ಅಂತೂ ನಿಶ್ಚಿತವಾಗಿ ಆಗುತ್ತದೆ. ಈ ವೇಳೆ ಕೆಲವು ಅನಾಹುತಗಳು ಸಂಭವಿಸುತ್ತವೆ. ಈ ಬಗ್ಗೆ ಎಚ್ಚರ ತೆಗೆದುಕೊಳ್ಳುವುದಾಗಲೀ ಮುಂಜಾಗ್ರತೆಯಾಗಲೀ ಕಷ್ಟಸಾಧ್ಯ.