ಮದುವೆ ವಿಳಂಬ ದೋಷ ಪರಿಹಾರದ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ವಿಚಾರಗಳು
ವಿವಾಹ ವಿಳಂಬ ಎಂಬುದು ಬಹು ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಈ ಸಮಸ್ಯೆಯಲ್ಲಿ ಇರುವಂಥವರು ಯಾರು- ಯಾವ ಪರಿಹಾರ ಸೂಚಿಸಿದರೂ ಮಾಡಿಬಿಡುತ್ತಾರೆ. ಜ್ಯೋತಿಷ್ಯದಲ್ಲಿ ಸೆಕೆಂಡ್ ಒಪಿನಿಯನ್ ಎಂಬುದು ಅಷ್ಟಾಗಿ ರೂಢಿಯಲ್ಲಿ ಇಲ್ಲದ ವಿಚಾರ ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಕಾರಣಕ್ಕೆ ಅಂತಲೇ ಬರೆಯಬೇಕೆಂದು ನಿರ್ಧರಿಸಿದ ಲೇಖನ ಇದು.
ಸ್ವಾಮಿ, ನಾವು ಆ ಶಾಂತಿ, ಈ ಹವನ, ಇಂಥ ಪೂಜೆ ಮಾಡಿಸಿದೆವು. ಆದರೂ ಸಮಸ್ಯೆ ಪರಿಹಾರ ಆಗಿಲ್ಲ ಅನ್ನೋದು ನನ್ನ ಬಳಿ ಬರುವವರ ಪ್ರಶ್ನೆಯಾಗಿರುತ್ತದೆ. ಇಂಥವರಿಗೆ ಜ್ಯೋತಿಷ್ಯ ಹೇಳುವುದೇ ನಿಜವಾದ ನಮ್ಮ ಸಮಸ್ಯೆ. ಏಕೆಂದರೆ, ನೀವು ಮಾಡಿಸಬೇಕಿದ್ದ ಪೂಜೆ ಅಥವಾ ಶಾಂತಿ ಇದು. ಅದರ ಕ್ರಮ ಇದು. ಹೊಟ್ಟೆ ನೋವಿಗೆ ತಲೆ ನೋವಿನ ಮಾತ್ರೆ ತೆಗೆದುಕೊಂಡಿದ್ದೀರಿ. ಅದರ ಅಡ್ಡಪರಿಣಾಮ ಅನುಭವಿಸುತ್ತಿದ್ದೀರಿ ಅಂತ ನಾವು ಹೇಳಬೇಕಿರುತ್ತದೆ.
ವಿವಾಹ ವಿಳಂಬದಿಂದ ವಿಘ್ನ ನಿವಾರಣೆವರೆಗೆ ಕ್ಷೇತ್ರದರ್ಶನ ಪರಿಹಾರ
ಆದರೆ, ಹಾಗೆ ಹೇಳಿದಾಕ್ಷಣ ಎದುರಿನವರಿಗೆ ನಾವೇನೋ ಹೊಸ ದಾಳ ಉರುಳಿಸುತ್ತಿದ್ದೇವೆ ಎಂಬ ಅನುಮಾನ ಆರಂಭ ಆಗುತ್ತದೆ. ಉದಾಹರಣೆಗೆ, ವಿವಾಹ ವಿಳಂಬ ಅಂದಾಕ್ಷಣ, ಜಾತಕವನ್ನೇ ಪರಿಶೀಲನೆ ಮಾಡದೆ ಅರ್ಕ ವಿವಾಹ ಅಥವಾ ಕುಂಭ ವಿವಾಹ ಮಾಡಿಸಿ ಎಂದು ಪರಿಹಾರ ಸೂಚಿಸಿ ಬಿಡುತ್ತಾರೆ.
ದ್ವಿ ಕಳತ್ರ ಯೋಗ ಇದ್ದಲ್ಲಿ ಮಾತ್ರ ಅರ್ಕ-ಕುಂಭ ವಿವಾಹ
ನಿಮಗೆ ಗೊತ್ತಿರಲಿ, ಯಾರ ಜಾತಕದಲ್ಲಿ ದ್ವಿ ಕಳತ್ರ ಯೋಗ ಇರುತ್ತದೋ, ಅಂದರೆ ಒಂದಕ್ಕಿಂತ ಹೆಚ್ಚು ಮದುವೆ ಆಗುವ ಸಾಧ್ಯತೆಯನ್ನು ಜಾತಕ ತೋರಿಸುತ್ತಿದ್ದಲ್ಲಿ, ವಿಚ್ಛೇದನ, ವೈಧವ್ಯ ಅಥವಾ ವಿಧುರ ಆಗುವ ಯೋಗ ಕಂಡುಬರುತ್ತಿದ್ದಾಗ ಮಾತ್ರ ಈ ಅರ್ಕ ಅಥವಾ ಕುಂಭ ವಿವಾಹ ಮಾಡಿಸಿದರೆ ಎರಡೆರಡು ಬಾರಿ ವಿವಾಹ ಆಗುವ ದೋಷ ನಿವಾರಣೆ ಆಗುತ್ತದೆ. ಎಷ್ಟೋ ಸಂದರ್ಭದಲ್ಲಿ ಒಂದೇ ಮದುವೆ ಆಗುವ ಯೋಗ ಇರುವ ಜಾತಕರಿಗೂ ಅರ್ಕ ವಿವಾಹವೋ ಅಥವಾ ಕುಂಭ ವಿವಾಹವೋ ಮಾಡಿ ಮುಗಿಸಿಬಿಟ್ಟರೆ, ಮುಂದೆ ವಿವಾಹಕ್ಕೆ ಅಡೆ- ತಡೆಗಳಾಗುತ್ತವೆ. ಆದ್ದರಿಂದ ಎರಡು ಮದುವೆ ಆಗುವ ಯೋಗ ಜಾತಕದಲ್ಲಿ ಕಂಡುಬಂದರೆ, ಹುಡುಗ ಅಥವಾ ಹುಡುಗಿಗೆ ಮದುವೆ ನಿಶ್ಚಯ ಆದ ನಂತರ, ಸಂಬಂಧ ಗಟ್ಟಿಯಾದ ಮೇಲೆ ಅರ್ಕ ಅಥವಾ ಕುಂಭ ವಿವಾಹ ಮಾಡಿಸಿ, ದೋಷ ನಿವಾರಣೆ ಮಾಡಿಕೊಳ್ಳುವುದು ಒಳಿತು.
ಸಾಮೂಹಿಕವಾದ ಪರಿಹಾರ ಎಲ್ಲರಿಗೂ ಫಲಿಸಲ್ಲ
ಇನ್ನು ವಿವಾಹ ವಿಳಂಬಕ್ಕೆ ನಾಗ ದೋಷ ಇರುವಂಥವರು ಸಾಮೂಹಿಕವಾಗಿ ಪರಿಹಾರ ಮಾಡಿಸಿಕೊಂಡಿರುತ್ತಾರೆ. ನೂರರಿಂದ ಇನ್ನೂರು ಜನ ಸೇರಿರುವಂಥ ಸ್ಥಳದಲ್ಲಿ ದೋಷ ಪರಿಹಾರ ಮಾಡಿಸಲು ಮುಂದಾಗುತ್ತಾರೆ. ಕೆಲವರಿಗೆ ಅಲ್ಪ ಪ್ರಮಾಣದ ದೋಷ ಇದ್ದಲ್ಲಿ ಇಂಥ ಕಡೆ ಮಾಡಿಸಿದರೆ ಸಾಕು, ದೋಷ ನಿವಾರಣೆ ಆಗುತ್ತದೆ. ಆದರೆ ಶೇಕಡಾ ಎಂಬತ್ತರಷ್ಟು ಮಂದಿಗೆ ಆ ಪ್ರಮಾಣದ ಪೂಜೆ- ಹವನ ಸಾಕಾಗುವುದಿಲ್ಲ. ಆ ಕಾರಣಕ್ಕೆ ನಾಲ್ಕೈದು ಬಾರಿ ಪರಿಹಾರ ಮಾಡಿಸಬೇಕಾಗುತ್ತದೆ. ಇನ್ನು ಸರ್ಪ ಸಂಸ್ಕಾರವನ್ನು ಯಾರು ಮಾಡಬೇಕು ಅಂದರೆ, ತಾವೇ ಸ್ವತಃ ಸರ್ಪದ ಹತ್ಯೆ ಮಾಡಿದವರು ಅಥವಾ ಸರ್ಪ ಹತ್ಯೆ ನೋಡಿದವರು ಅಥವಾ ಹತ್ಯೆಗೆ ಕಾರಣರಾದವರು ಮಾತ್ರ ಸರ್ಪ ಸಂಸ್ಕಾರ ಮಾಡಬೇಕಾಗುತ್ತದೆ. ಇನ್ನು ತಂದೆ- ತಾಯಿ ಬದುಕಿದ್ದವರು ಸರ್ಪ ಸಂಸ್ಕಾರವನ್ನು ಮಾಡಬಾರದು. ಅದು ಶ್ರೇಯಸ್ಕರವಲ್ಲ.
ರತ್ನ ಧಾರಣೆ ವಿಚಾರದಲ್ಲಿ ಕೈಗೊಳ್ಳಬೇಕಾದ ಎಚ್ಚರ
ರತ್ನ ಧಾರಣೆ ವಿಚಾರದಲ್ಲಿ ಕೆಲವು ಎಡವಟ್ಟುಗಳನ್ನು ಮಾಡುತ್ತಾರೆ. ಲಗ್ನದಿಂದ ಏಳನೇ ಸ್ಥಾನ ಯಾವ ರಾಶಿ ಬರುತ್ತದೆ ಅಂತ ನೋಡಬೇಕು. ಆ ರಾಶಿಯ ಅಧಿಪತಿಯ ರತ್ನವನ್ನು ಧರಿಸಬಾರದು. ಇನ್ನು ರಾಶಿಯಿಂದ ಕೂಡ ಏಳನೇ ಸ್ಥಾನ ಯಾವುದು ಎಂಬುದು ಗಮನಿಸಿ, ಆ ರಾಶಿಯ ಅಧಿಪತಿಯ ರತ್ನವನ್ನು ಕೂಡ ಧರಿಸಬಾರದು. ಬಹಳ ಮಂದಿ ಸಪ್ತಮ ಸ್ಥಾನಾಧಿಪತಿಯ ರತ್ನ ಧಾರಣೆ ಮಾಡುವಂತೆ ಹೇಳಿಬಿಡುತ್ತಾರೆ. ಇದು ಮಾರಕವಾಗುತ್ತದೆ ಎಂಬುದು ಕಡ್ಡಾಯವಾಗಿ ಗೊತ್ತಿರಬೇಕು. ಅದರ ಬದಲಿಗೆ ಇರುವ ವಿವಾಹದ ಅವಕಾಶವನ್ನು ಕೈಯಾರೆ ಹಾಳು ಮಾಡಿಕೊಳ್ಳಬಾರದು.
ಪ್ರಾಥಮಿಕ ವಿಚಾರಗಳ ಬಗ್ಗೆ ಜ್ಞಾನವಿರಲಿ
ಅರೆಬರೆ ತಿಳಿವಳಿಕೆ ಯಾವಾಗಲೂ ಅಪಾಯಕಾರಿ. ಅದರಲ್ಲೂ ಇನ್ನೊಬ್ಬರ ಜೀವನದ ವಿಚಾರ ಅಂದಾಗ ಮಾಮೂಲಿಗಿಂತ ಹೆಚ್ಚೇ ಎಚ್ಚರಿಕೆಯಿಂದ ಇರಬೇಕು. ವಿವಾಹ ವಿಳಂಬ, ಪ್ರತಿಬಂಧಕ ದೋಷಗಳಿಗೆ ಜ್ಯೋತಿಷ್ಯದಲ್ಲಿ ಖಂಡಿತಾ ಪರಿಹಾರ ಇದೆ. ಆದರೆ ದೋಷ ಏನು ಎಂಬುದನ್ನು ಅರಿಯದೆ ಅಥವಾ ಸರಿಯಾದ ಪರಿಹಾರ ಮಾರ್ಗ ತಿಳಿಯದೆ ಮಾರ್ಗದರ್ಶನ ಮಾಡಲು ಹೊರಡುವುದು ಅಕ್ಷಮ್ಯ. ವಿವಾಹ ವಿಚಾರವಾಗಿ ಇತ್ತೀಚೆಗೆ ನನ್ನ ಬಳಿ ಜ್ಯೋತಿಷ್ಯ ಕೇಳಲು ಬರುವ ಹಲವರು ಅದೆಷ್ಟು ಬಗೆಯ ಪೂಜೆ ಮಾಡಿಸಿರುತ್ತಾರೆ ಅಂದರೆ, ಅವುಗಳ ಅಡ್ಡಪರಿಣಾಮ ಕಡಿಮೆ ಮಾಡುವುದಕ್ಕೆ ಹೀಗೆ ಮಾಡಿ ಎಂದು ಹೇಳುವ ಧೈರ್ಯ- ಮನಸು ಕೂಡ ಬರೋದಿಲ್ಲ. ಆದ್ದರಿಂದ ವಿವಾಹ ವಿಳಂಬ ಆಗಿರುವಂಥವರು ಜ್ಯೋತಿಷ್ಯ ಕೇಳಿದ ನಂತರ ಅಥವಾ ಕೇಳುವಾಗ ಈ ಪ್ರಾಥಮಿಕ ವಿಚಾರಗಳನ್ನು ತಿಳಿದುಕೊಂಡಿರಿ.