ಮಕರ ಸಂಕ್ರಾಂತಿಗೆ ನಕ್ಷತ್ರಗಳಿಗನುಗುಣವಾಗಿ ಫಲಾಫಲ
ಹೊಸ ವರ್ಷದ ಮೊದಲ ಹಬ್ಬ ಬಂದಿದೆ. ಎಂದಿನಂತೆ ಎಷ್ಟೇ ಕಷ್ಟ-ನಷ್ಟಗಳಿರಲಿ ಹಬ್ಬದ ಹುರುಪು ಮಾತ್ರ ನಾವೆಲ್ಲರೂ ತಪ್ಪಿಸಿಕೊಳ್ಳುವ ಹಾಗೇನೇ ಇಲ್ಲ. ಇದು ನಮ್ಮ ಹಬ್ಬಗಳ ಮಹಿಮೆಯೆನ್ನಬಹುದು. ಈಗಾಗಲೇ ವರ್ಷ ಭವಿಷ್ಯದ ಬಗ್ಗೆ ತಿಳಿದುಕೊಳ್ಳುತ್ತಿರುವ ನೀವು ಈಗ ಸಂಕ್ರಾಂತಿಯಂದಿನಿಂದ ಆಗುವ ಚಿಕ್ಕಪುಟ್ಟ ಬದಲಾವಣೆಗಳನ್ನು ನಕ್ಷತ್ರ ಮತ್ತು ರಾಶಿಗಳ ಮೂಲಕ ತಿಳಿದುಕೊಂಡು ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಆದರೆ, ಈ ಸಂಕ್ರಾಂತಿಯ ಫಲವು ಕೇವಲ ಆರು ತಿಂಗಳುವರೆಗೆ ಮಾತ್ರ ಇರುತ್ತದೆ ಎಂಬುದು ಮಾತ್ರ ನೆನಪಿನಲ್ಲಿಟ್ಟುಕೊಳ್ಳಬೇಕು ಮರೆಯದೇ.
ಪೂರ್ವಾಭಾದ್ರಪದ ನಕ್ಷತ್ರ ಮೀನ ರಾಶಿಯಲ್ಲಿ ಈ ವರ್ಷದ ಸಂಕ್ರಮಣ ಆಗುತ್ತಿರುವುದರಿಂದ ಈ ರಾಶಿಯವರಿಗೆ ವಿಪರೀತ ತೊಂದರೆಗಳು ಬರಲಾರಂಭಿಸುತ್ತವೆ. ಜೊತೆಗೆ ಜೀವನದ ಜಂಜಾಟಗಳು ಮನೆ ಮಾಡುತ್ತವೆ ಮನದಲ್ಲಿ. ಆದ್ದರಿಂದ ಈ ರಾಶಿಯವರು ತಪ್ಪಿಸದೇ ಸಂಕ್ರಮಣದ ಆಚರಣೆಗಳನ್ನು ಮಾಡಬೇಕು.
ಇನ್ನು ಮೂಲಾ, ಶ್ರವಣಾ, ಪೂರ್ವಾಷಾಢಾ, ಧನಿಷ್ಠಾ, ಉತ್ತರಾಷಾಢಾ ಮತ್ತು ಶತತಾರ ನಕ್ಷತ್ರದವರಿಗೆ ದುಡ್ಡಿನ ವಿಷಯದಲ್ಲಿ ಭಾರಿ ರೀತಿಯ ಶುಭ ಸೂಚನೆಗಳು ಕಂಡು ಬರುತ್ತವೆ. ಆದರೆ, ಬಂದಂತಹ ಅವಕಾಶಗಳನ್ನು ಗುರುತಿಸಿಕೊಂಡು ಯಶಸ್ವಿಯಾಗಿ ಹಣ ಸಂಪಾದಿಸಿಕೊಳ್ಳುವ ಯೋಗ್ಯತೆಯನ್ನು ಗಳಿಸಿಕೊಳ್ಳಬೇಕು ಇವರು. ಏಕೆಂದರೆ ಹಲವಾರು ವರ್ಷಗಳ ನಂತರ ಈ ನಕ್ಷತ್ರದವರಿಗೆ ಈ ಪರಿಯ ಯೋಗ ಬಂದಿರುವುದರಿಂದ ಮರೆಯದೇ ಮುಖ್ಯವಾದ ಯೋಜನೆಗಳನ್ನು ಹಾಕಿಕೊಂಡು ಬಂದ ದುಡ್ಡಿನಿಂದ ಯಶಸ್ಸು ಹೊಂದಬೇಕು. [2016 ವರ್ಷ ಭವಿಷ್ಯ : ನಿಮ್ಮ ರಾಶಿಗೆ ಏನಿದೆ ಗೊತ್ತಾ?]
ಇದೇ ರೀತಿ ಅಶ್ವಿನಿ, ರೋಹಿಣಿ, ಭರಣಿ, ಮೃಗಶಿರಾ, ಕೃತ್ತಿಕಾ ಹಾಗೂ ಆರಿದ್ರಾ ನಕ್ಷತ್ರದವರು ಸಂಕ್ರಾಂತಿಯ ಶುಭಫಲಗಳನ್ನು ಅನುಭವಿಸುತ್ತಾರೆ. ಪ್ರತಿಯೊಂದು ವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿಕೊಂಡು ಹೋದಲ್ಲಿ ಈ ನಕ್ಷತ್ರದವರಿಗೆ ಸಾಕಷ್ಟು ಲಾಭವಾಗಲಿದೆ. ಎಲ್ಲ ರೀತಿಯಿಂದಲೂ ಶುಭಫಲಗಳನ್ನೇ ಅನುಭವಿಸುವ ಇವರು ಆರೋಗ್ಯದ ಬಗ್ಗೆ ಮಾತ್ರ ಹೆಚ್ಚಿನ ಕಾಳಜಿ ವಹಿಸಿಕೊಳ್ಳಬೇಕು. ಸುಖದ ಸುಪ್ಪತ್ತಿಗೆಯಲ್ಲಿದ್ದಾಗ ಸಹಜವಾಗಿ ಕಣ್ಣು ನೆತ್ತಿ ಮೇಲೆ ಬಂದಿರುತ್ತದೆ. ಹೀಗಾಗದಂತೆ ನೋಡಿಕೊಳ್ಳಬೇಕು.
ವಿಶಾಖಾ, ಅನುರಾಧಾ, ಜ್ಯೇಷ್ಠಾ, ಪುನರ್ವಸು, ಪುಷ್ಯ ಮತ್ತು ಆಶ್ಲೇಷ ನಕ್ಷತ್ರದವರಿಗೆ ಪಡಬಾರದ ಪರಿಪಾಟಲು ಅನುಭವಿಸುವ ಸಂದರ್ಭ ಬರುತ್ತದೆ, ಜಾಗೃತೆಯಿಂ ಇರಬೇಕು. ಏಕೆಂದರೆ, ಹಣದ ಹರಿವು ಕಡಿಮೆಯಾಗಿ, ಆರೋಗ್ಯವೂ ಕೂಡ ಕೈಕೊಡಲಾರಂಭಿಸುವುದರಿಂದ ಮೊದಲೇ ತಪ್ಪು ಮಾಡಿದ್ದರ ಫಲಾನುಫಲ ಅನುಭವಿಸುವಂತಾಗುತ್ತದೆ. ಆದ್ದರಿಂದ ಹಣದ ವಿಷಯದಲ್ಲಿ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟಂತೆ ಅತೀ ಹೆಚ್ಚಿನ ಕಾಳಜಿ ವಹಿಸಿಕೊಳ್ಳಲು ಪ್ರಾರಂಭಿಸಬೇಕು. ಇಲ್ಲವಾದರೆ ತೊಂದರೆಗಳ ಮೇಲೆ ತೊಂದರೆಗಳ ಬಂದು ಜೀವನವೇ ಸಾಕಪ್ಪಾ ಎನಿಸಲಾರಂಭಿಸುತ್ತದೆ, ಎಚ್ಚರಿಕೆ ಇರಲಿ. [ನಕ್ಷತ್ರ ಸರಣಿ : ಹಠಮಾರಿ ಸ್ವಭಾವದ ವಿಶಾಖಾ ನಕ್ಷತ್ರದವರು]
ಇದೇ ಮಘಾ, ಹಸ್ತಾ, ಉತ್ತರಾಫಾಲ್ಗುಣಿ, ಪೂರ್ವಾಫಾಲ್ಗುಣಿ, ಚಿತ್ತಾ, ಸ್ವಾತಿ, ಪೂರ್ವಾಭಾದ್ರಪದ, ಉತ್ತರಾಭಾದ್ರಪದ, ರೇವತಿ ನಕ್ಷತ್ರದವರು ಆರಕ್ಕೇರಂಗಿಲ್ಲ ಮೂರಕ್ಕಿಳಿಯಂಗಿಲ್ಲ ಎನ್ನುವಂತೆ ಜೀವನ ಸಾಗಿಸಿಕೊಂಡು ಹೋಗಬೇಕಾಗುತ್ತದೆ. ಆದರೆ ಶ್ರಮ ವಹಿಸಿ ಕೆಲಸ ಮಾಡುತ್ತಲಿದ್ದರೆ, ಪರಸ್ಥಳಕ್ಕೆಂದು ದುಡಿಯಲು ಹೋಗಿದ್ದರೆ ಸಾಕಷ್ಟು ಹಣ ಸಂಪಾದಿಸುವ ಸಮಯವಿದು. ಒಟ್ಟಿನಲ್ಲಿ ಸಂಪಾದಿಸಿರುವ ಹಣವನ್ನು ಸದುಪಯೋಗ ಪಡಿಸಿಕೊಂಡು ಅದನ್ನು ದುಪ್ಪಟ್ಟು ಮಾಡಿಕೊಳ್ಳುವಂತಹ ಯೋಜನೆಗಳಿಗೆ ತೊಡಗಿಸಿಕೊಂಡು ಜಾಣರಾಗಬೇಕು ಈ ನಕ್ಷತ್ರದವರು.
ತೊಂದರೆಗಳಿರುವ ನಕ್ಷತ್ರದವರು ಎಳ್ಳಿನಿಂದ ಸ್ನಾನ ಮಾಡಿ, ಎಳ್ಳು ಮೈಗೆಲ್ಲ ಹಚ್ಚಿಕೊಳ್ಳಿ, ಎಳ್ಳಿನ ಹೋಮದಲ್ಲಿ ಪಾಲ್ಗೊಳ್ಳಿ, ಎಳ್ಳು ಮಿಶ್ರಿತ ನೀರು ಕುಡಿಯಿರಿ, ಎಳ್ಳನ್ನು ತಿನ್ನುವುದು ಮತ್ತು ಎಳ್ಳನ್ನು ದಾನ ಮಾಡುವುದರ ಮೂಲಕ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಸ್ವಲ್ಪ ಮಟ್ಟಿಗೆ. ಅನುಕೂಲವಿದ್ದವರು ಬಡವರಿಗೆ ಅಥವಾ ಅನ್ನದಾಸೋಹ ಸ್ಥಳಗಳಿಗೆ ಎಳ್ಳು, ಬೆಲ್ಲ, ಕುಂಬಳಕಾಯಿ ದಾನವಾಗಿ ನೀಡಬಹುದು ತಮಗಿಷ್ಟವಿದ್ದರೆ. [ಸುಗ್ಗಿ ಹಿಗ್ಗಿನ ಸಂಕೇತ ಮಕರ ಸಂಕ್ರಾಂತಿ]