ಜ್ಯೋತಿಷ್ಯ: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಫಡ್ನವೀಸ್ ಗೆ ಸಿಎಂ ಯೋಗವಿಲ್ಲ
ಈ ಸಲ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಅಲ್ಲಿನ ರಾಜಕೀಯದಲ್ಲಿ ದೊಡ್ಡ ಬದಲಾವಣೆ ಆಗುವ ಬಗ್ಗೆ ಉಡುಪಿ ಜಿಲ್ಲೆ ಕಾಪು ಮೂಲದ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಯಾವ ಪಕ್ಷ ಅಧಿಕಾರ ಹಿಡಿಯಬಹುದು, ಯಾರು ಮುಖ್ಯಮಂತ್ರಿ ಆಗುತ್ತಾರೆ ಇತ್ಯಾದಿಯಾಗಿ ಒನ್ ಇಂಡಿಯಾ ಕನ್ನಡ ಮುಂದಿಟ್ಟ ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ.
"ಈ ಸಲ ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮತ್ತೆ ಮುಖ್ಯಮಂತ್ರಿ ಆಗುವ ಸಾಧ್ಯತೆ ಕಡಿಮೆ. ಹಾಗೊಂದು ವೇಳೆ ಆದರೂ ಅವಧಿ ಪೂರ್ತಿ ಮಾಡುವುದಿಲ್ಲ. ಹಾಗಂತ ಅವರಿಗೆ ಏನೋ ತೊಂದರೆ ಇದೆ ಅಥವಾ ಸಿಕ್ಕಿ ಹಾಕಿಕೊಳ್ತಾರೆ ಅಂತಲ್ಲ. ಅವರ ಜಾತಕದ ಪ್ರಕಾರ ಪದೋನ್ನತಿ ಕಾಣುತ್ತಿದೆ. ರಾಜ್ಯದ ಮುಖ್ಯಮಂತ್ರಿ ಹುದ್ದೆಗಿಂತ ಮೇಲಿನ ಅಧಿಕಾರ- ಜವಾಬ್ದಾರಿ ಅವರ ಪಾಲಿಗೆ ಬರಲಿದೆ" ಎಂದರು.
ದೀಪಾವಳಿ ಮುನ್ನವೇ ಮಹಾರಾಷ್ಟ್ರ, ಹರ್ಯಾಣ ಚುನಾವಣೆ ಸಾಧ್ಯತೆ
ಹಾಗೆಂದರೆ ಅರ್ಥ ಏನು ಎಂಬ ನಮ್ಮ ಮರು ಪ್ರಶ್ನೆಗೆ, ದೇವೇಂದ್ರ ಫಡ್ನವೀಸ್ ರಾಷ್ಟ್ರ ರಾಜಕಾರಣಕ್ಕೆ ತೆರಳುವ ಸಾಧ್ಯತೆ ನಿಚ್ಚಳವಾಗಿದೆ. ಬಹಳ ಮುಖ್ಯವಾದ ಖಾತೆ- ಜವಾಬ್ದಾರಿಯನ್ನು ಅವರು ಹೊರಲೇಬೇಕಿದೆ. ಇಡೀ ದೇಶದಾದ್ಯಂತ ಅವರ ಹೆಸರು, ಕೆಲಸ ಕೇಳಿಬರುತ್ತದೆ. ಆದ್ದರಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಯಲ್ಲಿ ಇನ್ನೊಬ್ಬರು ಕೂರಲಿದ್ದಾರೆ ಎಂದು ಹೇಳಿದರು.
ಚಂದ್ರಕಾಂತ್ ಪಾಟೀಲ್ ಗೆ ಯೋಗ
ಹಾಗಿದ್ದರೆ ಯಾರಾಗಲಿದ್ದಾರೆ ಮುಖ್ಯಮಂತ್ರಿ ಎಂಬ ಕುತೂಹಲಕ್ಕೂ ಅವರೇ ಉತ್ತರ ನೀಡಿದರು. ಚಂದ್ರಕಾಂತ್ ಪಾಟೀಲ್ (ಈಗ ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ) ಅವರಿಗೆ ಮುಖ್ಯಮಂತ್ರಿ ಆಗುವ ಎಲ್ಲ ಅವಕಾಶ ದೊರೆಯಲಿದೆ. ಫಡ್ನವೀಸ್ ಜಾಗವನ್ನು ಚಂದ್ರಕಾಂತ್ ಪಾಟೀಲ್ ತುಂಬಲಿದ್ದಾರೆ ಎಂದು ಅಮ್ಮಣ್ಣಾಯ ಹೇಳಿದರು.
ಯಾರೂ ಊಹಿಸದ ಎತ್ತರಕ್ಕೆ ಏರಲಿದ್ದಾರೆ ದೇವೇಂದ್ರ ಫಡ್ನವೀಸ್
ಮತ್ತೆ ದೇವೇಂದ್ರ ಫಡ್ನವೀಸ್ ವಿಚಾರವನ್ನು ಪ್ರಸ್ತಾಪಿಸಿದ ಅಮ್ಮಣ್ಣಾಯ, ಯಾರೂ ಊಹಿಸಿರದಂಥ ಬೆಳವಣಿಗೆ ಹಾಗೂ ಎತ್ತರವನ್ನು ದೇವೇಂದ್ರ ಫಡ್ನವೀಸ್ ಕಾಣಲಿದ್ದಾರೆ. ಅವರ ರಾಜಕೀಯ ಭವಿಷ್ಯ ಉಜ್ವಲವಾಗಿದೆ. ಆದರೆ ಅವರು ಯಾವ ಸ್ಥಾನವನ್ನು ತಲುಪಲಿದ್ದಾರೆ ಎಂಬುದನ್ನು ಈಗಲೇ ಹೇಳಿದರೆ ಹಲವರು ನಗುವ ಸಾಧ್ಯತೆ ಇದೆ. ಈ ಹಿಂದೆ ನರೇಂದ್ರ ಮೋದಿ ಅವರು ಪ್ರಧಾನಿ ಆಗುತ್ತಾರೆ ಎಂದು ನಾನು ಹೇಳಿದಾಗ ಅಂಥದ್ದೊಂದು ಅನುಭವ ನನಗೆ ಆಗಿದೆ ಎಂದು ಅವರು ಹೇಳಿದರು.
ಈಗಲೇ ಎಲ್ಲವನ್ನೂ ಹೇಳುವುದು ತಪ್ಪಾಗುತ್ತದೆ
ಓಹ್, ದೇವೇಂದ್ರ ಫಡ್ನವೀಸ್ ಗೆ ಪ್ರಧಾನಿ ಆಗುವ ಯೋಗ ಇದೆಯಾ ಎಂಬ ಪ್ರಶ್ನೆಗೆ, ಇಲ್ಲಿಂದ ಮುಂದಕ್ಕೆ ನಾನು ಉತ್ತರಿಸುವುದಿಲ್ಲ. ನೀವು ಮಹಾರಾಷ್ಟ್ರ ಚುನಾವಣೆ ಬಗ್ಗೆ ಕೇಳಿದ್ದೀರಿ. ಅದಕ್ಕೆ ಉತ್ತರ ನೀಡಿದ್ದೇನೆ. ಆದರೆ ದೇವೇಂದ್ರ ಫಡ್ನವೀಸ್ ಹಾಗೂ ಚಂದ್ರಕಾಂತ್ ಪಾಟೀಲ್ ಭವಿಷ್ಯದ ಬಗ್ಗೆ ಈಗಲೇ ಎಲ್ಲವನ್ನೂ ಹೇಳುವುದು ತಪ್ಪಾಗುತ್ತದೆ ಎಂದರು.
ದೇಶಕ್ಕೆ ದೊಡ್ಡ ಕೊಡುಗೆ ನೀಡಲಿದ್ದಾರೆ
ದೇವೇಂದ್ರ ಫಡ್ನವೀಸ್ ಅವರ ಜಾತಕವನ್ನು ಕೂಲಂಕಷವಾಗಿ ನೋಡಿದ್ದೇನೆ. ತುಂಬ ಒಳ್ಳೆ ಜಾತಕರು ಅವರು. ಅಂಥ ಸಮಚಿತ್ತದ ವ್ಯಕ್ತಿ ಅಪರೂಪ. ಅಷ್ಟೇ ಅಲ್ಲ, ಅವರ ನಾಯಕತ್ವ ಗುಣಗಳು ಕ್ರಮೇಣ ಬೆಳಗುತ್ತಾ ಬರುತ್ತದೆ. ಈ ದೇಶಕ್ಕೆ ದೊಡ್ಡ ಕೊಡುಗೆ ನೀಡಬಲ್ಲ ಶಕ್ತಿ ಆ ವ್ಯಕ್ತಿಗೆ ಇದೆ. ಅದಕ್ಕೆ ಈ ದೇಶದ ಜನತೆ ಸಾಕ್ಷಿ ಆಗಲಿದ್ದಾರೆ ಎಂದು ಮಾತು ಮುಗಿಸಿದರು ಪ್ರಕಾಶ್ ಅಮ್ಮಣ್ಣಾಯ.