ಶುಭಕೃತ ಸಂವತ್ಸರದಲ್ಲಿ ಎಲ್ಲಾ ಅಶುಭ: ಕೋಡಿಶ್ರೀಗಳ ಭೀಕರ ಭವಿಷ್ಯ
ಹಾಸನ, ಆಗಸ್ಟ್ 2: ಕಳೆದ ಜೂನ್ ತಿಂಗಳಿನಲ್ಲಿ ಬಳ್ಲಾರಿಯಲ್ಲಿ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಮತ್ತೆ ಹಾಸನದಲ್ಲಿ ತಾವು ನುಡಿದ ಭವಿಷ್ಯವನ್ನು ಪುನರುಚ್ಚಿಸಿದ್ದಾರೆ. ಮತೀಯ ಗಲಭೆ ಮತ್ತು ನೈಸರ್ಗಿಕ ಪ್ರಕೋಪದ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ.
ದೇಶದಲ್ಲಿ ಮತೀಯ ಗಲಭೆ ಸಂಭವಿಸಲಿದೆ ಎಂದು ಕೋಡಿಶ್ರೀಗಳು ನುಡಿದಿದ್ದರು. ಅದರಂತೆಯೇ, ಬಿಜೆಪಿ ನಾಯಕಿ ನೂಪರ್ ಶರ್ಮಾ ಹೇಳಿಕೆಯಿಂದ ದೇಶದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
Budh Gochar 2022: ಸಿಂಹ ರಾಶಿಯಲ್ಲಿ ಬುಧ ಸಂಚಾರ: ಯಾವ ರಾಶಿಗೆ ಶುಭ, ಅಶುಭ?
ಪೈಗಂಬರ್ ಬಗೆಗಿನ ಹೇಳಿಕೆಯ ನಂತದ ಕೆಲವು ದಿನಗಳಲ್ಲಿ ಒಂದು ಸಮುದಾಯದ ಆಕ್ರೋಶ ಹಂತಕ್ಕೆ ಕಮ್ಮಿಯಾಗಿತ್ತು. ಈಗ, ಭವಿಷ್ಯ ನುಡಿದಿರುವ ಕೋಡಿಶ್ರೀಗಳು, ಮತೀಯ ಗಲಭೆ ಶುಭಕೃತ ನಾಮ ಸಂವತ್ಸರದಲ್ಲಿ ಮತ್ತೆ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕೋಡಿಶ್ರೀಗಳು, "ಈ ಹಿಂದೆನೂ ನಾನು ಹೇಳಿದ್ದೆ, ಈ ಸಂವತ್ಸರದಲ್ಲಿ ಅಶುಭಗಳೇ ಹೆಚ್ಚಾಗುತ್ತದೆ ಎಂದು, ಅದನ್ನು ಮತ್ತೆ ಪುನರುಚ್ಚಿಸುತ್ತಿದ್ದೇನೆ"ಎಂದು ಶ್ರೀಗಳು ಹೇಳಿದರು.
ಗಾಳಿ ಮಳೆ ಹೆಚ್ಚಾಗಲಿದೆ, ವಿಪರೀತ ಮಿಂಚು ಬರಲಿದೆ, ಸಾವುನೋವು ಹೆಚ್ಚು
"ಗಾಳಿ ಮಳೆ ಹೆಚ್ಚಾಗಲಿದೆ, ವಿಪರೀತ ಮಿಂಚು ಬರಲಿದೆ, ಸಾವುನೋವು ಹೆಚ್ಚಾಗಲಿದೆ, ಜಲಾಶಯಗಳು ತುಂಬಿ ಹರಿಯುತ್ತವೆ. ಮಲೆನಾಡು ಬಯಲು ಸೀಮೆಯಾದೀತು. ಮಲೆನಾಡಿನವರಿಗೆ ಮಳೆ ಕಮ್ಮಿಯಾದರೆ ಸಾಕು ಎನ್ನುವ ಮನೋಭಾವನೆಯಿದೆ. ಪ್ರಕೃತಿ ಅಲ್ಲೋಲಕಲ್ಲೋಲವಾಗಲಿದೆ"ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಭವಿಷ್ಯ ನುಡಿದರು.
ಮಲೆನಾಡು ಬಯಲುಸೀಮೆಯನ್ನು ಬಯಸುತ್ತದೆ
"ಮಲೆನಾಡು ಬಯಲುಸೀಮೆಯನ್ನು ಬಯಸುತ್ತದೆ, ಈ ಸಂವತ್ಸರದಲ್ಲಿ ಇದು ಮುಂದುವರಿಯಲಿದೆ. ಮೇಘ ಘರ್ಜಿಸೀತು, ಭೂಮಿ ತಲ್ಲಣಗೊಂಡೀತು. ಕೆರೆಕಟ್ಟೆಗಳು ಒಡೆದು ಹೋಗಲಿವೆ. ಈ ಸನ್ನಿವೇಶ ಈ ಸಂವತ್ಸರದ ಕೊನೆಯ ವರೆಗೂ ಇರಲಿದೆ. ಮುಂಗಾರು ಮಳೆ ಕಮ್ಮಿಯಾದ ಮೇಲೆ, ಹಿಂಗಾರು ಮಳೆಯೂ ಕಮ್ಮಿಯಾಗಲಿದೆ. ಆದರೆ, ಅಕಾಲ ಮಳೆಯಿಂದ ಸಾವುನೋವುಗಳು ಹೆಚ್ಚಾಗಲಿದೆ"ಎಂದು ಕೋಡಿಶ್ರೀಗಳು ಭವಿಷ್ಯ ನುಡಿದರು.
ಅಶ್ವೀಜ ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ
"ಅಶ್ವೀಜ ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ, ಭಂಗ, ನೋವಿದೆ. ರೋಗರುಜಿನ, ಕಳ್ಳಕಾಕರರ ಕಾಟ ಹೆಚ್ಚಾಗಲಿದೆ. ಅಪಮೃತ್ಯು, ಕೊಲೆಗಳು, ಮತೀಯ ಗಲಭೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಕೋಪಕ್ಕೆ ತುತ್ತಾಗಲಿದೆ. ರಾಜಕೀಯದಲ್ಲಿ ತಲ್ಲಣ, ಗುಂಪುಗಳು ಆಗಲಿವೆ. ಮಳೆ ಬಂದರೆ ಬೆಳೆ ಸಿಗುವುದಿಲ್ಲ, ಈ ಸಂವತ್ಸರದ ಫಲ ಅಶುಭ"ಎಂದು ಕೋಡಿಶ್ರೀಗಳು ತಮ್ಮ ಭವಿಷ್ಯದ ಮೂಲಕ ಅಭಿಪ್ರಾಯ ಪಟ್ಟರು.
ಈ ಸಂವತ್ಸರದಲ್ಲಿ ಭೂಕಂಪ ಹೆಚ್ಚಾಗಲಿದೆ
"ಈ ಸಂವತ್ಸರದಲ್ಲಿ ಭೂಕಂಪ ಹೆಚ್ಚಾಗಲಿದೆ, ದೊಡ್ಡದೊಡ್ಡ ಪಟ್ಟಣಗಳಿಗೆ ಭಂಗವಾಗಲಿದೆ. ಮತೀಯ ಗಲಭೆಯಿಂದ ಸಾವುನೋವು ಇನ್ನೂ ಹೆಚ್ಚಾಗಲಿದೆ. ರಾಷ್ಟ್ರ ಮಟ್ಟದಲ್ಲಿ ದೊಡ್ದಮಟ್ಟದ ಸಾವುನೋವುಗಳಾಗಲಿವೆ"ಎಂದು ಕೋಡಿಮಠದ ಶ್ರೀಗಳು ಹಾಸನದಲ್ಲಿ ಭವಿಷ್ಯ ನುಡಿದರು.