'ಸೂತ್ರಧಾರಿ ಪಟ್ಟ ಅಳಿಯುತ್ತದೆ': ಶಿವಮೊಗ್ಗದಲ್ಲಿ ಮತ್ತೆ ಕೋಡಿಶ್ರೀಗಳ ಭವಿಷ್ಯ
ಕಳೆದ ಒಂದೂವರೆ ತಿಂಗಳಲ್ಲಿ ಕೋಡಿಮಠದ ಶ್ರೀಗಳು ಮತ್ತೊಮ್ಮೆ ಭವಿಷ್ಯವನ್ನು ನುಡಿದಿದ್ದಾರೆ. ಸಾಮಾನ್ಯವಾಗಿ, ಹಿಂದೂಗಳ ಹಬ್ಬದ ಸಂದರ್ಭಗಳಲ್ಲಿ ಭವಿಷ್ಯ ನುಡಿಯುವ ಶ್ರೀಗಳು, ಈಗ ತಾವು ಭಾಗವಹಿಸುವ ಧಾರ್ಮಿಕ ಕಾರ್ಯಕ್ರಮದ ನಂತರ ಕೂಡಾ ಭವಿಷ್ಯವನ್ನು ನುಡಿಯಲಾರಂಭಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಕಾರದ ಬಗ್ಗೆ ಭವಿಷ್ಯ ನುಡಿದಿರುವ ಕೋಡಿಶ್ರೀಗಳು, 'ಸೂತ್ರಧಾರಿ ಪಟ್ಟ ಅಳಿಯುತ್ತದೆ' ಎಂದು ಹೇಳಿದ್ದು, ಒಂದು ತಿಂಗಳ ಹಿಂದೆ ಅವರು ಹೇಳಿದ ಭವಿಷ್ಯಕ್ಕೂ ಈಗ ಹೇಳುತ್ತಿರುವ ಭವಿಷ್ಯಕ್ಕೂ ತಾಳೆಯಾಗುತ್ತಿಲ್ಲ ಎನ್ನುವುದು ಗಮನಿಸಬೇಕಾದ ವಿಚಾರ.
ಆತ್ಮ ಅತೃಪ್ತಿಗೊಂಡು ಭಂಗ, ಸಾವು ಹೆಚ್ಚು: ಕೋಡಿ ಶ್ರೀಗಳ ಭವಿಷ್ಯ
ಕೋಡಿಶ್ರೀಗಳು ಹೋದಲೆಲ್ಲಾ ಮಾಧ್ಯಮದವರು ಅವರನ್ನು ಭವಿಷ್ಯದ ಬಗ್ಗೆ ಕೇಳಲಾರಂಭಿಸಿದ ನಂತರ, ಕೋಡಿಶ್ರೀಗಳ ತಾಳೆಗರಿ ಆಧಾರಿತ ನುಡಿಗಟ್ಟು ಹೆಚ್ಚುಹೆಚ್ಚು ಹೊರ ಬರಲಾರಂಭಿಸಿದೆ. ಶನಿವಾರದಂದು (ಸೆ 11) ಶ್ರೀಗಳು ಮಾಧ್ಯಮಗಳ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸಿದ್ದಾರೆ.
ಅಫ್ಘಾನಿಸ್ತಾನ ತಾಲಿಬಾನ್ ವಶ, ಕೋಡಿಮಠಶ್ರೀಗಳ ಭವಿಷ್ಯ ನಿಜವಾಯ್ತು
ಬಸವರಾಜ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದ ಕೋಡಿಶ್ರೀಗಳು, ಈಗತಾನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಹಾಗಾಗಿ, ಅಪಶಕುನವನ್ನು ನುಡಿಯಲಾರೆ ಎಂದು ಹೇಳಿದ್ದರು. ಆದರೆ, ಈಗ ಬೊಮ್ಮಾಯಿ ಸರಕಾರಕ್ಕೆ ತೊಂದರೆಯಿಲ್ಲ ಎಂದು ಹೇಳಿದ್ದಾರೆ.
ಸೂತ್ರಧಾರಿ ಪಟ್ಟ ಅಳಿಯುತ್ತದೆ, ಸೂತ್ರಧಾರಿ ಸರಕಾರವನ್ನು ನಡೆಸುತ್ತಾನೆ
"ಒಂದು ವರ್ಷದಿಂದ ನಾನು ಹೇಳುತ್ತಾ ಬರುತ್ತಿದ್ದೇನೆ, ನಿಮಗೆ ಗೊತ್ತಿರಬಹುದು. 'ಸೂತ್ರಧಾರಿ ಪಟ್ಟ ಅಳಿಯುತ್ತದೆ, ಸೂತ್ರಧಾರಿ ಸರಕಾರವನ್ನು ನಡೆಸುತ್ತಾನೆ' ಎಂದು ಹೇಳಿದ್ದೆ. ಅದರಂತೇ, ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಹೋಯಿತು. ಈಗ ಬೊಮ್ಮಾಯಿಯವರು ಅಧಿಕಾರದಲ್ಲಿದ್ದಾರೆ, ಅವರು ಜಾಣ ವ್ಯಕ್ತಿ, ವಿವೇಕವಿದೆ. ಆದರೆ, ಇಲ್ಲಿರುವ ಸೂತ್ರಧಾರಿ ಸರಕಾರವನ್ನು ನಡೆಸುತ್ತಾರೆ"ಎಂದು ಕೋಡಿಶ್ರೀಗಳು ಸೆಪ್ಟಂಬರ್ ಹನ್ನೊಂದರಂದು ಭವಿಷ್ಯ ನುಡಿದಿದ್ದಾರೆ.
ಈಗತಾನೇ ಮುಖ್ಯಮಂತ್ರಿಯಾಗಿದ್ದಾರೆ, ಹಾಗಾಗಿ ಈಗಲೇ ಅಶುಭವನ್ನು ನುಡಿಯಲಾರೆ
"ಸದ್ಯಕ್ಕೆ ಬೊಮ್ಮಾಯಿ ಸರಕಾರಕ್ಕೆ ತೊಂದರೆಯಿಲ್ಲ, ಮುಂದಕ್ಕೆ ಕಾಲ ಬಂದಾಗ ಈ ಬಗ್ಗೆ ಹೇಳುತ್ತೇನೆ" ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳುವ ಮೂಲಕ ಯಡಿಯೂರಪ್ಪನವರೇ ಸರಕಾರದ ಸೂತ್ರಧಾರಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. "ರಾಜ್ಯ ರಾಜಕೀಯದ ಬಗ್ಗೆ ಪೂರ್ಣ ಮಂತ್ರಿ ಮಂಡಲ ರಚನೆಯಾದ ನಂತರ ಹೇಳುತ್ತೇನೆ. ದೈವಕೃಪೆ ಇದ್ದರೆ ಬೊಮ್ಮಾಯಿಯವರಿಗೆ ಒಳ್ಳೆಯದಾಗುತ್ತದೆ. ಈಗತಾನೇ ಅವರು ಮುಖ್ಯಮಂತ್ರಿಯಾಗಿದ್ದಾರೆ, ಹಾಗಾಗಿ ಈಗಲೇ ಅಶುಭವನ್ನು ನುಡಿಯಲಾರೆ"ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಯುದ್ದಗಳು ಇನ್ನು ಶುರುವಾಗುತ್ತದೆ. ತಾಲಿಬಾಲ್ ವಿದ್ಯಮಾನಗಳು ಇದಕ್ಕೆ ಸಾಕ್ಷಿ
"ಲೋಕ ಕಲ್ಯಾಣವಾಗಲು ಇನ್ನೂ ಸ್ವಲ್ಪದಿನ ಕಳೆಯಬೇಕು, ಜಗಳಗಳು, ಕಾಯಿಲೆಗಳು, ಯುದ್ದಗಳು ಇನ್ನು ಶುರುವಾಗುತ್ತದೆ. ತಾಲಿಬಾಲ್ ವಿದ್ಯಮಾನಗಳು ಇದಕ್ಕೆ ಸಾಕ್ಷಿ. ಆದರೆ, ಕಾಲಾಂತರದಲ್ಲಿ ಸ್ವರಾಜ್ಯ ಬರುವುದರಲ್ಲಿ ಅನುಮಾನವಿಲ್ಲ"ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದಾರೆ. ''ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿಹೋಗಲಿದೆ ಎಂದು 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಇಂದು ಅಫ್ಘಾನಿಸ್ತಾನ, ತಾಲಿಬಾನ್ ವಶವಾಗುತ್ತಿದೆ" ಎಂದು ಕೋಡಿಶ್ರೀಗಳು ನುಡಿದಿದ್ದರು.
ಅರಸೀಕೆರೆಯ ಮೂಡಾಳು ಗೌರಮ್ಮ ಕ್ಷೇತ್ರದಲ್ಲಿ ಮಾತನಾಡುತ್ತಿದ್ದ ಕೋಡಿಶ್ರೀಗಳು
ಗಣೇಶ ಹಬ್ಬದ ಮುನ್ನಾದಿನ ಅರಸೀಕೆರೆಯ ಮೂಡಾಳು ಗೌರಮ್ಮ ಕ್ಷೇತ್ರದಲ್ಲಿ ಮಾತನಾಡುತ್ತಿದ್ದ ಕೋಡಿಶ್ರೀಗಳು, "ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತಿದೆ. ಹೀಗಾಗಿ, ಸಾವು ಹೆಚ್ಚಾಗಲಿದೆ. ಕೊರೊನಾ ರೂಪಾಂತರಗೊಂಡು ಇನ್ನೂ ಮೂರ್ನಾಲ್ಕು ವರ್ಷ ಮನುಕುಲವನ್ನು ಕಾಡಲಿದೆ. ಅಫ್ಘಾನಿಸ್ತಾನ ಭೂಪಟದಿಂದ ಕಾಣೆಯಾಗುತ್ತದೆ ಎಂದು ಹೇಳಿದ್ದೆ. ಭಯ ಎನ್ನುವುದು ವಿಶ್ವದಲ್ಲಿ ದಿನ ಹೋದಂತೆ ಹೆಚ್ಚಾಗಲಿದೆ"ಎಂದು ಕೋಡಿ ಶ್ರೀಗಳು ಹೇಳಿದ್ದರು.
ಕೊರೊನಾ ವ್ಯಾಧಿಯಿಂದ ಭಾರತಕ್ಕೆ ಯಾವುದೇ ಧಕ್ಕೆ ಇಲ್ಲ
ಶಿವಮೊಗ್ಗ ಜಿಲ್ಲೆಯ ಜಡೆ ಸಂಸ್ಥಾನದ ಮಠದ ಜಗದ್ಗುರು ಕೆಂಪಿನ ಸಿದ್ದವೃಷಭೇಂದ್ರ ಸ್ವಾಮೀಜಿ ಕರ್ತೃ ಗದ್ದುಗೆಗೆ ಭೇಟಿ ನೀಡಿದ ನಂತರ, ''ಜಗತ್ತಿನಲ್ಲಿ ಒಂದು ದೇಶ ಭೂಪಟದಿಂದ ಅಳಿಸಿಹೋಗಲಿದೆ ಎಂದು 2 ವರ್ಷಗಳ ಹಿಂದೆ ಭವಿಷ್ಯ ನುಡಿದಿದ್ದೆ. ಅದರಂತೆ ಇಂದು ಅಫ್ಘಾನಿಸ್ತಾನ, ತಾಲಿಬಾನ್ ವಶವಾಗುತ್ತಿದೆ. ಮುಂದಿನ 5 ವರ್ಷಗಳವರೆಗೂ ಕೊರೊನಾ ಸಂಪೂರ್ಣ ನಾಶವಾಗುವುದಿಲ್ಲ, ಆದರೆ, ಜಗತ್ತನ್ನು ತೀವ್ರವಾಗಿ ಕಾಡುತ್ತಿರುವ ಕೊರೊನಾ ವ್ಯಾಧಿಯಿಂದ ಭಾರತಕ್ಕೆ ಯಾವುದೇ ಧಕ್ಕೆ ಇಲ್ಲ" ಎಂದು ಹೇಳಿದ್ದರು.