ಸದ್ಯ ಭವಿಷ್ಯದಲ್ಲೇ ಕರ್ನಾಟಕಕ್ಕೆ ದಲಿತ ಸಿಎಂ: ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ
Recommended Video
ಕರ್ನಾಟಕದ ಮುಖ್ಯಮಂತ್ರಿಯಾಗಿ ದಲಿತರೊಬ್ಬರು ಅಧಿಕಾರದ ಚುಕ್ಕಾಣಿ ಹಿಡಿಯುವ ಕಾಲ ಸನ್ನಿಹಿತವಾಗಿದೆ. ಗುರು ಗ್ರಹವು ಮಕರ ರಾಶಿಯನ್ನು ಪ್ರವೇಶ ಮಾಡುವುದರೊಳಗೆ ಕರ್ನಾಟಕದ ಮೂರು ಪಕ್ಷಗಳ ಪೈಕಿ ಯಾವುದರಿಂದ ಬೇಕಾದರೂ ದಲಿತ ವ್ಯಕ್ತಿಗಳು ಮುಖ್ಯಮಂತ್ರಿ ಹುದ್ದೆಗೆ ಏರಬಹುದು. ಕರ್ನಾಟಕದ ಅಭಿವೃದ್ಧಿಗೆ ಆ ಸಮಯದಲ್ಲಿ ಬಹಳ ಒಳ್ಳೆ ಕೆಲಸಗಳು ಆಗಲಿವೆ ಎನ್ನುತ್ತಾರೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ.
ಕರ್ನಾಟಕ ಮೈತ್ರಿ ಸರಕಾರದ ಭವಿಷ್ಯದ ಬಗ್ಗೆ ಒನ್ ಇಂಡಿಯಾ ಕನ್ನಡದಿಂದ ಉಡುಪಿಯ ಕಾಪು ಮೂಲದ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಅವರನ್ನು ಕೇಳಿದಾಗ, ದಲಿತರು ಮುಖ್ಯಮಂತ್ರಿ ಆಗಬೇಕು ಎಂಬ ಬೇಡಿಕೆ ಏನಿತ್ತು, ಅದು ಈಡೇರುವ ಸಮಯ ಬಂದಿದೆ. ಈ ಮಧ್ಯೆ ಮೈತ್ರಿ ಸರಕಾರದ ಆಯುಷ್ಯ ಮುಗಿಯುತ್ತಾ ಬಂದಿದ್ದು, ಮಧ್ಯಂತರ ಚುನಾವಣೆಯನ್ನು ಕಾಣುವುದು ಬಹುತೇಕ ಖಾತ್ರಿ ಆಗಿದೆ. ನವೆಂಬರ್ ನೊಳಗೆ ರಾಜ್ಯ ಸರಕಾರದ ಪತನ ಆಗುವುದು ಕಣ್ಣೆದುರು ಇದೆ ಎಂದರು.
ಎಚ್ಡಿ ಕುಮಾರಸ್ವಾಮಿ ಸರ್ಕಾರ ಬಗ್ಗೆ ಟಾರೋ ಕಾರ್ಡ್ ಭವಿಷ್ಯವೇನು?
ಅದಕ್ಕೆ ಈ ಬಾರಿ ಜುಲೈನಲ್ಲಿ ನಡೆಯಲಿರುವ ಖಂಡಗ್ರಾಸ ಚಂದ್ರ ಗ್ರಹಣವೇ ನಾಂದಿ ಆದರೂ ಅಚ್ಚರಿ ಇಲ್ಲ. ಅಲ್ಲಿಂದ ನೂರಾ ಎಂಟು ದಿನಗಳ ಒಳಗೆ ಮೈತ್ರಿ ಸರಕಾರದ ಪಾಲಿಗೆ ದಿನದಿನಕ್ಕೆ ಅಗ್ನಿ ಪರೀಕ್ಷೆಗಳು ಎದುರಾಗಲಿವೆ. ಆ ಸವಾಲುಗಳ ಭಾರಕ್ಕೆ ಮೈತ್ರಿ ಮುರಿದು ಬೀಳುವ ಎಲ್ಲ ಸಾಧ್ಯತೆಯೂ ಇದೆ ಎಂದು ಹೇಳಿದರು.
ಸಿದ್ದರಾಮಯ್ಯರಿಂದ ಮತ್ತೆ ಸಿಎಂ ಆಗಲು ಯತ್ನ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತಕಕ್ಕೆ ಬಲ ಬರಲಿದ್ದು, ಈ ಸರಕಾರದ ಅಳಿವು- ಉಳಿವು ಅವರ ಕೈಲಿ ಇರುತ್ತದೆ. ಆದರೆ ಈ ಸರಕಾರವು ಮುಂದುವರಿಸುವ ಉದ್ದೇಶ ಅವರಿಗೆ ಇಲ್ಲ. ಜತೆಗೆ ತಾವೇ ಇನ್ನೊಮ್ಮೆ ಮುಖ್ಯಮಂತ್ರಿ ಆಗುವ ಪ್ರಯತ್ನವನ್ನು ಅವರು ಮಾಡಿಯೇ ಮಾಡುತ್ತಾರೆ. ಆದರೆ ಆ ಹುದ್ದೆಗೆ ಏರುವಷ್ಟು ಗ್ರಹ ಬಲ ಅವರಿಗಿಲ್ಲ. ಜತೆಗೆ ಸದ್ಯದ ರಾಜ್ಯ ರಾಜಕೀಯ ಪ್ರಕಾರ ದಲಿತ ಮುಖ್ಯಮಂತ್ರಿ ರಾಜ್ಯಕ್ಕೆ ದೊರೆಯುವ ಅವಕಾಶಗಳು ನಿಚ್ಚಳವಾಗಿ ಕಾಣುತ್ತಿದೆ ಎಂಬ ಭವಿಷ್ಯ ನುಡಿದರು.
ಪ್ರಮುಖ ಪಕ್ಷಗಳ ನಾಯಕರ ತೀರ್ಮಾನ
ಮುಂದಿನ ವರ್ಷದ ಜನವರಿಗೆ ಮಕರ ರಾಶಿಗೆ ಶನೈಶ್ಚರನ ಪ್ರವೇಶ ಆಗುತ್ತದೆ. ಅದೇ ವರ್ಷದಲ್ಲಿ ಗುರು ಗ್ರಹ ಕೂಡ ಮಕರಕ್ಕೆ ಪ್ರವೇಶ ಆಗುತ್ತದೆ. ಆ ಗ್ರಹ ಸ್ಥಿತಿಯು ರಾಜ್ಯಕ್ಕೆ ದಲಿತ ಮುಖ್ಯಮಂತ್ರಿ ಆಗುವುದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಪ್ರಮುಖ ಪಕ್ಷಗಳ ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು ಪ್ರಕಾಶ್ ಅಮ್ಮಣ್ಣಾಯ.
ಜ್ಯೋತಿಷ್ಯ: ಮೈತ್ರಿ ಸರಕಾರಕ್ಕೆ ನವೆಂಬರ್ ತನಕವೇ ಆಯುಷ್ಯ; ಆಮೇಲೆ ಮತ್ತೊಮ್ಮೆ ಚುನಾವಣೆ!
ರಾಜಕಾರಣದಲ್ಲಿ ನಿರೀಕ್ಷೆಯೇ ಮಾಡದಂಥ ಬದಲಾವಣೆ
ಮುಂದಿನ ವರ್ಷದ ಮಾರ್ಚ್ ನೊಳಗೆ ಕರ್ನಾಟಕದ ರಾಜಕಾರಣದಲ್ಲಿ ನಿರೀಕ್ಷೆಯ ಮಾಡದಂಥ ಬದಲಾವಣೆ ಆಗಲಿದ್ದು, ಕುಂಭ - ಮೀನ ರಾಶಿ ಅಥವಾ ಲಗ್ನ, ಅಂದರೆ ಈ ಎರಡು ರಾಶಿಯವರು ಅಥವಾ ಲಗ್ನದವರು ರಾಜಕಾರಣದಲ್ಲಿ ಅಚ್ಚರಿಯ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಾರೆ. ಇವರು ಆಡಳಿತ ನಡೆಸುವಾಗ ರಾಜ್ಯದ ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ ಎಂಬ ಸೂಚನೆ ನೀಡಿದರು.
ಒಂದು ತಲೆಮಾರಿನ ರಾಜಕಾರಣವೇ ಕೊನೆ
ರಾಜ್ಯದಲ್ಲಿ ಒಂದು ತಲೆಮಾರಿನ ರಾಜಕಾರಣ ಸಂಪೂರ್ಣ ಕೊನೆಗೊಂಡು, ಹೊಸ ತಲೆಮಾರಿನ ಅಥವಾ ಎರಡನೇ ಹಂತದ ನಾಯಕರು ರಾಜಕಾರಣದಲ್ಲಿ ಏಳ್ಗೆಗೆ ಬರುತ್ತಾರೆ. ಆರಂಭದಲ್ಲಿ ಸವಾಲುಗಳನ್ನು ಎದುರಿಸಬೇಕಾದರೂ ಆ ನಂತರದಲ್ಲಿ ಜನರ ಮಧ್ಯೆ ಒಳ್ಳೆ ಹೆಸರು ಪಡೆದು, ಅತ್ಯುತ್ತಮ ಮುಖ್ಯಮಂತ್ರಿ ಎಂದು ಕರೆಸಿಕೊಳ್ಳುವ ಯೋಗ ಆ ವ್ಯಕ್ತಿಗೆ ಇರುತ್ತದೆ ಎಂದು ಜ್ಯೋತಿಷಿಗಳಾದ ಅಮ್ಮಣ್ಣಾಯ ಹೇಳಿದರು.