ಪ್ರಕಾಶ್ ಅಮ್ಮಣ್ಣಾಯರಿಂದ ಸಿಎಂ ಕುಮಾರಸ್ವಾಮಿ ಜಾತಕ ವಿಶ್ಲೇಷಣೆ
Recommended Video
ಎಲ್ಲರೂ ಅಚ್ಚರಿಪಡುವ ರೀತಿಯಲ್ಲಿ ಮುಖ್ಯಮಂತ್ರಿ ಗಾದಿಯ ಮೇಲೆ ಕೂತಿರುವ ಎಚ್.ಡಿ.ಕುಮಾರಸ್ವಾಮಿ ಅವರ ಜಾತಕ ಫಲ ಏನನ್ನು ಹೇಳುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸುತ್ತೇನೆ. ಮೊದಲ ಸಂಗತಿಯನ್ನು ಮೊದಲಿಗೆ ತಿಳಿಸಿ ಬಿಡುತ್ತೇನೆ. ಕುಮಾರಸ್ವಾಮಿ ಅವರ ಜಾತಕದಲ್ಲಿ ರಾಜಯೋಗಗಳಿಲ್ಲ. ಆದರೆ ಅಧಿಕಾರ ಯೋಗ ಇದೆ.
ಇವರು ಎಂದಿಗೂ ಸ್ವತಂತ್ರವಾಗಿ ಅಧಿಕಾರವನ್ನು ಹಿಡಿಯಲಾರರು. ಮತ್ತೊಬ್ಬರ ಸಹಾಯದಿಂದಲೇ ಅಧಿಕಾರ ಅನುಭವಿಸುವ ಯೋಗ ಇರುವಂಥ ಜಾತಕ ಇವರದು. ಆರಿದ್ರಾ ನಕ್ಷತ್ರ, ಮಿಥುನ ರಾಶಿಯವರು. ಸದ್ಯಕ್ಕೆ ಬುಧ ದಶೆ ಹಾಗೂ ರಾಹು ಭುಕ್ತಿ ನಡೆಯುತ್ತಿದೆ. ಗೋಚಾರದಲ್ಲಿ ಐದನೇ ಸ್ಥಾನದಲ್ಲಿರುವ ಗುರುವು ಹನ್ನೊಂದನೇ ಸ್ಥಾನದ ವೀಕ್ಷಣೆ ಮಾಡುತ್ತಿದ್ದಾನೆ.
ಕುಮಾರಸ್ವಾಮಿ ಪ್ರಮಾಣದ ಮುಹೂರ್ತ ಹೇಗಿತ್ತು? ಭವಿಷ್ಯ ಹೇಗಿದೆ?
ಈಗ ಅವರಿಗೆ ಸಿಕ್ಕಿರುವ ಅಧಿಕಾರ ಗುರುವಿನ ಅನುಗ್ರಹ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಧನು ರಾಶಿಯಲ್ಲಿರುವ ವಕ್ರ ಶನಿಯು ಆರನೇ ಸ್ಥಾನದ ಫಲ ನೀಡುತ್ತಿದ್ದು, ಅದು ಕೂಡ ಶುಭ ಫಲವನ್ನು ಕರುಣಿಸಿರುವುದರಿಂದ ಮುಖ್ಯಮಂತ್ರಿ ಸ್ಥಾನ ಹುಡುಕಿಕೊಂಡು ಬಂದಿದೆ. ಈಗಿನ ಗ್ರಹ ಸ್ಥಿತಿಯು ಈ ವರ್ಷದ ಅಕ್ಟೋಬರ್ ತನಕ ಇರುತ್ತದೆ. ಆ ನಂತರ ಮುಂದೇನು?
ಅನಾರೋಗ್ಯ ಸಮಸ್ಯೆ ಕಾಡುತ್ತದೆ
ಕುಮಾರಸ್ವಾಮಿ ಅವರಿಗೆ ಅನಾರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಗಳಿವೆ. ಮುಖ್ಯವಾಗಿ ನಿಂತಲ್ಲೇ ಕುಸಿದು ಬೀಳುವಂಥ ಸಮಸ್ಯೆ ಆಗಬಹುದು. ಇವರು ಹೆಚ್ಚಿನ ಒತ್ತಡ ಹಾಕಿಕೊಳ್ಳಬಾರದು. ಆಹಾರ ವಿಚಾರದಲ್ಲಿ ಪಥ್ಯವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಜವಾಬ್ದಾರಿಯ ಒತ್ತಡ ಎಂದು ಆರೋಗ್ಯದ ಕಡೆಗೆ ನಿರ್ಲಕ್ಷ್ಯ ಮಾಡುವ ಸಾಧ್ಯತೆ ಇರುವುದರಿಂದ ಅಕ್ಟೋಬರ್ ನಂತರ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಮತ್ತೆ ಕಾಡಬಹುದು.
ವರ್ಚಸ್ಸಿಗೆ ಧಕ್ಕೆ ಸಾಧ್ಯತೆ
ಪಕ್ಷದೊಳಗೆ ಅಸಮಾಧಾನ ಕಾಣಿಸಿಕೊಂಡು, ಅವಮಾನ ಎದುರಿಸುವ ಸನ್ನಿವೇಶ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ ಸರಕಾರಕ್ಕೆ ಸಂಬಂಧಿಸಿದ ವ್ಯವಹಾರವೊಂದರಲ್ಲಿ ಕುಮಾರಸ್ವಾಮಿ ಅವರ ವರ್ಚಸ್ಸಿಗೆ ಧಕ್ಕೆ ಆಗುವಂಥ ಸಾಧ್ಯತೆಗಳು ಗೋಚರಿಸುತ್ತಿವೆ. ಇದೇ ಸಂದರ್ಭದಲ್ಲಿ ದೈವ ಭಕ್ತಿ ಕೂಡ ಕಡಿಮೆ ಆಗುವ ಸಾಧ್ಯತೆಗಳಿರುವುದರಿಂದ ಇತರರು ಹೇಳುವ ಬುದ್ಧಿ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇವರು ಇರುವುದಿಲ್ಲ.
ನಂಬಿದವರಿಂದ ವಿಶ್ವಾಸ ದ್ರೋಹ
ಬಂಧು-ಮಿತ್ರರಲ್ಲಿ ವಿರಸ, ಸಾಮಾಜಿಕವಾಗಿ ಇವರಿಗಿಂತ ಕೆಳ ಸ್ಥಾನದಲ್ಲಿ ಇರುವವರಿಂದ ಅವಮಾನ, ಅನಾರೋಗ್ಯ ಸಮಸ್ಯೆ, ನಂಬಿದವರಿಂದಲೇ ವಿಶ್ವಾಸ ದ್ರೋಹ ಈ ಎಲ್ಲವೂ ಕಾಣುತ್ತಿದೆ. ಅದಕ್ಕೆ ಕಾರಣ ಆರನೇ ಮನೆಗೆ ಪ್ರವೇಶಿಸುವ ಗುರು ಹಾಗೂ ಚಂದ್ರನಿಗೆ ಏಳನೇ ಸ್ಥಾನ ಹಾಗೂ ಲಗ್ನಕ್ಕೆ ಎಂಟನೇ ಸ್ಥಾನದ ಶನಿಯ ಪ್ರಭಾವ. ಜತೆಗೆ ವಿಪತ್ ತಾರೆಯ ನಕ್ಷತ್ರದಲ್ಲಿ ನಡೆಯುತ್ತಿರುವ ಬುಧ ದಶೆ ಹಾಗೂ ರಾಹು ಭುಕ್ತಿಯ ಪ್ರಭಾವದಿಂದ ಇಷ್ಟೆಲ್ಲ ಅನುಭವಿಸಬೇಕಾಗುತ್ತದೆ. ಇನ್ನು ಇವರು ಒತ್ತಡಗಳಿಂದ ಸರಕಾರ ವಿಸರ್ಜಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ತನಗೆ ಲಭಿಸದಿದ್ದರೆ ಇನ್ನೊಬ್ಬರಿಗೂ ಸಿಗಬಾರದು ಎಂಬ ಕಾರಣಕ್ಕೆ ಹಾಗೆ ಮಾಡುವ ಸಾಧ್ಯತೆ ಇದೆ. ಬಾಧಕಾಧಿಪತಿ ಶನಿಯು ರವಿಯ ಜತೆ ಇರುವುದು ಇದಕ್ಕೆ ಕಾರಣ.
ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಪರಿಹಾರ ಇದೆ
ಆದರೆ, ಈ ಎಲ್ಲ ಅಶುಭ ಫಲಗಳಿಂದ ತಪ್ಪಿಸಿಕೊಳ್ಳುವ ಅಥವಾ ರಕ್ಷಣೆ ಪಡೆಯುವ ಅವಕಾಶ ಇದೆ. ಕುಮಾರಸ್ವಾಮಿ ಮತ್ತವರ ಕುಟುಂಬದವರು ನಡೆದುಕೊಳ್ಳುವ ದೈವಕ್ಕೆ ತಪ್ಪದೆ ಪೂಜೆ ಸಲ್ಲಿಸಬೇಕು. ಮುಖ್ಯವಾಗಿ ಕುಮಾರಸ್ವಾಮಿ ಅವರು ಆಹಾರ ಪಥ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ಬಂಧು- ಮಿತ್ರರನ್ನು ಪ್ರೀತಿಯಿಂದ ಕಾಣಬೇಕು. ಹೇಳಿಕೆ ಮಾತುಗಳನ್ನು ಕೇಳಬಾರದು. ಪಕ್ಷದೊಳಗೆ ಒಡಕು ಮೂಡದಂತೆ ಎಚ್ಚರ ವಹಿಸಬೇಕು.