ಕಬ್ಯಾಡಿ ಜಯರಾಮಾಚಾರ್ಯರಿಂದ ಸಂಪುಟ ವಿಸ್ತರಣೆ ಮುಹೂರ್ತ ವಿಶ್ಲೇಷಣೆ
Recommended Video
ಜೆಡಿಎಸ್- ಕಾಂಗ್ರೆಸ್ ನ ಮೈತ್ರಿ ಸರಕಾರದಲ್ಲಿ ಮೊದಲ ಕಂತಿನಲ್ಲಿ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದರು. ಆ ದಿನ ಆ ಸಮಯದಲ್ಲಿ ಇದ್ದದ್ದು ತುಲಾ ಲಗ್ನ. ಅದು ಚರ ಲಗ್ನ. ಅಂದರೆ ಹೆಸರೇ ಸೂಚಿಸುವಂತೆ ಸ್ಥಿರವಲ್ಲದ್ದು ಹಾಗೂ ಚಲಿಸುವಂಥದ್ದು. ಇನ್ನು ಸಂಪುಟ ವಿಸ್ತರಣೆಗೆ ಬುಧವಾರ ಆಯ್ದುಕೊಂಡಿರುವ ಮಧ್ಯಾಹ್ನ 2.12ರ ಸಮಯದಲ್ಲಿ ಕನ್ಯಾ ಲಗ್ನ.
ಇದು ದ್ವಿಸ್ವಭಾವ ಲಗ್ನ. ಈ ಲಗ್ನಕ್ಕೆ ಗುರು ಬಲ ಹಾಗೂ ರಾಹು ಅನುಕೂಲಕರ ಸ್ಥಿತಿಯಲ್ಲಿ ಇದೆ ಎಂಬುದನ್ನು ಬಿಟ್ಟರೆ ಹೇಳಿಕೊಳ್ಳುವಂಥ ಯಾವ ಅನುಕೂಲಕರ ಅಂಶಗಳೂ ಇಲ್ಲ. ಇನ್ನು ಲಗ್ನದಿಂದ ನಾಲ್ಕರಲ್ಲಿ ಶನಿ, ಐದರಲ್ಲಿ ಕುಜ- ಕೇತು, ಆರನೇ ಸ್ಥಾನದಲ್ಲಿ ಚಂದ್ರ, ಒಂಬತ್ತನೇ ಸ್ಥಾನದಲ್ಲಿ ಶತ್ರು ಸ್ಥಾನವಾದ ಶುಕ್ರನ ಆಧಿಪತ್ಯದ ವೃಷಭ ರಾಶಿಯಲ್ಲಿ ರವಿ ಹೀಗೆ ಉಳಿದ ಗ್ರಹಗಳು ಯಾವುದೂ ಅನುಕೂಲ ಗ್ರಹ ಸ್ಥಿತಿಗಳಲ್ಲ.
ಸಂಪುಟ ವಿಸ್ತರಣೆ Live : ಪ್ರಮಾಣ ವಚನ ಸಮಾರಂಭ ಆರಂಭ
ಲಗ್ನಾಧಿಪತಿ ಮತ್ತು ಷಷ್ಠಾಧಿಪತಿ ಹಾಗೂ ವ್ಯಯಾಧಿಪತಿಗಳು ಅಂದರೆ ಕನ್ಯಾ ಲಗ್ನಕ್ಕೆ ಅಧಿಪತಿಯಾದ ಬುಧ ಗ್ರಹ ಮತ್ತು ಹನ್ನೆರಡನೇ ಸ್ಥಾನಾಧಿಪತಿ ರವಿ ಹಾಗೂ ಕನ್ಯಾ ಲಗ್ನದಿಂದ ಆರನೇ ಮನೆಗೆ ಅಧಿಪತಿಯಾದ ಶನಿಯು ಪರಸ್ಪರರಿಗೆ ಷಷ್ಟಾಷ್ಟಕಗಳಲ್ಲಿ ಇದ್ದಾರೆ. ಅಂದರೆ ಶನಿ ಗ್ರಹದಿಂದ ರವಿಯು ಆರನೇ ಮನೆಯಲ್ಲೂ ಹಾಗೂ ರವಿ ಗ್ರಹದಿಂದ ಶನಿಯು ಎಂಟನೇ ಮನೆಯಲ್ಲೂ ಇದ್ದು, ಈ ಸ್ಥಿತಿಯನ್ನು ಷಷ್ಟಾಷ್ಟಕ ಎಂದು ಕರೆಯಲಾಗುತ್ತದೆ.
ಪಂಚಮಾರಿಷ್ಟ ಇರುವ ಸರಕಾರವಿದು
ಈ ಸಂಪುಟ ವಿಸ್ತರಣೆ ಕಾಲಕ್ಕೆ ಕನ್ಯಾ ಲಗ್ನದಿಂದ ಐದನೇ ಮನೆಯಾದ ಮಕರ ರಾಶಿಯಲ್ಲಿ ಕುಜ- ಕೇತುಗಳಿದ್ದಾರೆ. ಇದು ಪಾಪ ಗ್ರಹಗಳ ಸಂಯೋಗ. ಯಾವುದೇ ವ್ಯಕ್ತಿಯ ಜನನ ಕಾಲದಲ್ಲಿ ಜಾತಕದಲ್ಲಿ ಇಂಥ ಗ್ರಹ ಸ್ಥಿತಿ ಇದ್ದರೆ ಪಂಚಮಾರಿಷ್ಠ ಎಂದು ಕರೆಯಲಾಗುತ್ತದೆ. ಇದು ಉತ್ತಮ ಸ್ಥಿತಿಯಲ್ಲ. ಈ ಮೈತ್ರಿ ಸರಕಾರದ ಸಚಿವ ಸಂಪುಟದ ಜನನ ಕಾಲದಲ್ಲೂ ಪಂಚಮಾರಿಷ್ಟ ಇದೆ. ಅದರ ಫಲ ಈ ಸರಕಾರದ ಮೇಲೆ ಆಗುತ್ತದೆ.
ಗುರು ಬಲ ಕಳೆದುಕೊಂಡ ಕ್ಷಣದಿಂದ ಅಲುಗಾಡಲು ಆರಂಭ
ಈ ಮೈತ್ರಿ ಸರಕಾರದ ಅಸ್ತಿತ್ವ ಚರ ಲಗ್ನದಲ್ಲಿ, ಸಂಪುಟ ವಿಸ್ತರಣೆ ದ್ವಿಸ್ವಭಾವ ಲಗ್ನದಲ್ಲಿ ಆಗಿದ್ದು, ಗುರು ಬಲವೊಂದೇ ಇದರ ಶ್ರೀರಕ್ಷೆ. ಅಂದರೆ ಈ ವರ್ಷ ಅಕ್ಟೋಬರ್ ತನಕ ಗುರು ಗ್ರಹವು ತುಲಾ ರಾಶಿಯಲ್ಲಿ ಇರುವ ತನಕ ಮೈತ್ರಿ ಸರಕಾರ ಒಂದಿಷ್ಟು ಗಟ್ಟಿಯಾಗಿ ಇರುವಂತೆ ಕಾಣುತ್ತದೆ. ಆ ನಂತರ ಅಲುಗಾಡಲು ಆರಂಭಿಸಿದರೆ ಅದ್ಯಾವ ಕ್ಷಣದಲ್ಲೂ ಉದುರಿಬೀಳುವ ಅಪಾಯ ಕಾಣುತ್ತಿದೆ.
ಸಚಿವ ಸ್ಥಾನ ಗಿಟ್ಟಿಸಿಕೊಂಡವರ ಫೈನಲ್ ಲಿಸ್ಟ್ ಇಲ್ಲಿದೆ ನೋಡಿ
ಭಿನ್ನಮತ, ಕಿತ್ತಾಟ, ಅಸಮಾಧಾನ ತಾರಕಕ್ಕೆ
ಕರ್ನಾಟಕ ರಾಜ್ಯದ ಆಡಳಿತ ದೃಷ್ಟಿಯಿಂದ ಚುನಾವಣೆ ದಿನಾಂಕವೇ ಅಂಥ ಸೂಕ್ತವಾಗಿರಲಿಲ್ಲ. ಇದರ ಜತೆಗೆ ಆಡಳಿತಕ್ಕೆ ನಾಂದಿ ಹಾಡಬೇಕಾದ ಮುಹೂರ್ತವೂ ಅಂಥ ಪ್ರಶಸ್ತವಾಗಿಲ್ಲ ಅನ್ನೋದನ್ನೇ ಸೂಚಿಸುತ್ತಿದೆ. ಮುಖ್ಯವಾಗಿ ಎರಡೂ ಪಕ್ಷಗಳ ಮಧ್ಯೆ ಕಿತ್ತಾಟ- ಭಿನ್ನಮತ, ಅಸಮಾಧಾನ ವಿಪರೀತ ಎನಿಸುವಷ್ಟು ತಾರಕಕ್ಕೇರುತ್ತದೆ ಎಂಬುದನ್ನು ಗ್ರಹ ಸ್ಥಿತಿಗಳು ಸೂಚಿಸುತ್ತಿವೆ.
ಜ್ಯೋತಿಷ್ಯ ರೀತಿ ತಾರ್ಕಿಕ ವಿಶ್ಲೇಷಣೆ
ಇಲ್ಲಿನ ವಿಶ್ಲೇಷಣೆಯು ಲಗ್ನ ಹಾಗೂ ಇತರ ಗ್ರಹ ಸ್ಥಿತಿಗಳ ಆಧಾರದಲ್ಲಿ ಕಾಣಸಿಗುವ ಅಂಶಗಳು. ಈ ರೀತಿಯೇ ಮೈತ್ರಿ ಸರಕಾರದ ಭವಿಷ್ಯ ಇರುತ್ತದೆ ಅಂತ ಯಾರು ಬೇಕಾದರೂ ಹೇಳಬಲ್ಲರು ಎಂದು ಕೆಲವು 'ಮೇಧಾವಿ'ಗಳು ತಮ್ಮ ನಾಲಗೆ ಹರಿಯಬಿಡಬಹುದು. ನಾನು ಜ್ಯೋತಿಷ್ಯ- ಗ್ರಹಗಳನ್ನು ನಂಬುವ ಜ್ಯೋತಿಷಿ. ಅದರ ಹಿನ್ನೆಲೆಯಲ್ಲಿ ತಾರ್ಕಿಕವಾಗಿ ವಿಚಾರ ಮುಂದಿಡುತ್ತಿದ್ದೇನೆ.