ಚುನಾವಣೆ ದಿನಾಂಕ ಕರ್ನಾಟಕದ ಭವಿಷ್ಯ ಸೂಚಿಸಿದೆ: ಜ್ಯೋತಿಷಿ ಅಮ್ಮಣ್ಣಾಯ
Recommended Video
ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕದ ಬಗ್ಗೆ ಒಂದು ಭರವಸೆ ಇತ್ತು. ಅಂದರೆ ಚುನಾವಣೆ ದಿನಾಂಕ ಉತ್ತಮ ಆದರೆ ಫಲಿತಾಂಶದಲ್ಲಿ ವ್ಯತ್ಯಾಸ ಆಗಿ, ಅದರ ಲಾಭ ಆಗಬಹುದೇನೋ ಅಂತ. ಆದರೆ ಆ ವಿಧಿಯ ಬರಹ ಹಾಗೇ ಇದೆಯೇನೋ, ಅದನ್ನು ತಪ್ಪಿಸಲು ಯಾರಿಂದಲೂ ಆಗಲ್ಲ ಎನ್ನುವಂತೆ ಮಂಗಳವಾರ ಘೋಷಿಸಿದ ಚುನಾವಣೆ ದಿನಾಂಕವು 'ಅದನ್ನೇ' ಸೂಚಿಸುತ್ತಿದೆ.
ಏನದು 'ಅದನ್ನೇ' ಸೂಚಿಸುತ್ತಿದೆ ಅನ್ನುತ್ತಿದ್ದೀರಲ್ಲಾ ಎಂದು ನೀವು ಕೇಳಬಹುದು. ರಾಜ್ಯದಲ್ಲಿ ಅತಂತ್ರ ಸರಕಾರವನ್ನೇ ಈ ಚುನಾವಣೆ ದಿನಾಂಕಗಳು ಸೂಚಿಸುತ್ತಿವೆ. ಈ ಮಾತನ್ನು ಯಾರು ಬೇಕಾದರೂ ಹೇಳಬಹುದು ಅನ್ನೋ ಮಂದಿ ಈಚೆಗೆ ಹೆಚ್ಚಾಗುತ್ತಿದ್ದಾರೆ. ಅವರು ಜ್ಯೋತಿಷಿಗಳಲ್ಲ. ಇನ್ನು ಅವರ 'ಜ್ಞಾನ'ದ ಬಗ್ಗೆ ನೋ ಕಾಮೆಂಟ್ಸ್.
ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು
ನನ್ನ ಅಧ್ಯಯನಾಸಕ್ತಿ ಹಾಗೂ ಜ್ಯೋತಿಷದ ಆಧಾರದಲ್ಲಿ ಕರ್ನಾಟಕ ಚುನಾವಣೆಯ ಫಲಿತಾಂಶದ ಬಗ್ಗೆ ಸಂಕ್ಷಿಪ್ತವಾದ ಭವಿಷ್ಯವೊಂದನ್ನು ನಿಮ್ಮ ಮುಂದಿಡುತ್ತಿದ್ದೇನೆ. ಮುಂದಿನ ಹಾದಿ ನಿಮ್ಮ ಕಣ್ಣೆದುರು ತೆರೆದುಕೊಳ್ಳುತ್ತದೆ. ಇರಲಿ, ಪೀಠಿಕೆ ದೊಡ್ಡದಾಯಿತೇನೋ, ಬೇಸರ ಮಾಡಿಕೊಳ್ಳಬೇಡಿ, ಲೇಖನದ ಮುಂದಿನ ಭಾಗವನ್ನು ಓದಿ.
ರಾಜಕೀಯ ಪಕ್ಷದ ಚಿಹ್ನೆ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ
ಚುನಾವಣೆ ದಿನದ ಗ್ರಹ ಸ್ಥಿತಿ ಹೇಗಿದೆ
ಚುನಾವಣೆ ದಿನ ಘೋಷಣೆ ಆದ ಮೇ 15ಕ್ಕೆ ಚಂದ್ರನು ಉತ್ತರಾಭಾದ್ರ ನಕ್ಷತ್ರ, ಮೀನ ರಾಶಿಯಲ್ಲಿ ಇರುತ್ತದೆ. ಇನ್ನು ಮೀನ ರಾಶಿಯ ಅಧಿಪತಿಯಾದ ಗುರು ಗ್ರಹವು ಷಷ್ಟಾಷ್ಟಮ ಆಗುತ್ತದೆ. ಅಂದರೆ ಮೀನ ರಾಶಿಯಿಂದ ಲೆಕ್ಕ ಹಾಕಿದರೆ ಗುರು ಎಂಟನೆ ಸ್ಥಾನದಲ್ಲಿ, ಇನ್ನು ಗುರು ಗ್ರಹ ಇರುವ ತುಲಾ ರಾಶಿಯಿಂದ ಲೆಕ್ಕ ಹಾಕಿದರೆ ಆರನೇ ಸ್ಥಾನದಲ್ಲಿ ಮೀನ ರಾಶಿ ಆಗುತ್ತದೆ ಇದನ್ನು ಷಷ್ಟಾಷ್ಟಮ ಎನ್ನಲಾಗುತ್ತದೆ.
ಮತ ಎಣಿಕೆಯ ಆರಂಭದ ಕ್ಷಣದ ಮುಹೂರ್ತ ಮಿಥುನ ಲಗ್ನ
ರವಿ, ಚಂದ್ರ ದ್ವಿರ್ದ್ವಾದಶ. ರವಿಯು ಉಚ್ಚ ಅವರೋಹಿ. ಇದು ಚುನಾವಣಾ ದಿನದ 8 ಗಂಟೆಯ ವೃಷಭ ಲಗ್ನದ ಗ್ರಹಸ್ಥಿತಿ. ಕಿರೀಟಾಧಿಪತಿ ಗುರು ಷಷ್ಟಾಷ್ಟಮ. ಮತ ಎಣಿಕೆಯ ಆರಂಭದ ಕ್ಷಣದ ಮುಹೂರ್ತ ಮಿಥುನ ಲಗ್ನ. ದ್ವಿಸ್ವಭಾವ ರಾಶಿ ಆಗುತ್ತದೆ ಮಿಥುನ. ಆ ದಿನದ ಆರಂಭದಲ್ಲಿ ಭರಣಿ. ಆ ನಂತರ ಕೃತ್ತಿಕಾ ನಕ್ಷತ್ರವಿದೆ.
ನಕ್ಷತ್ರಾಧಿಪನೇ ಕಲಹದಲ್ಲಿದ್ದಾಗ ಇದು ಅತಂತ್ರದ ಸೂಚನೆ
ಚುನಾವಣಾ ಮುಹೂರ್ತ ಕಾಲವೇ ವೃಷಭ ಲಗ್ನ. ಲಾಭಾದಿಪತಿ ಷಷ್ಟಾಷ್ಟಮ. ಲಗ್ನಾಧಿಪತಿ ದ್ವಿರ್ದ್ವಾದಶ. ದಿನ ನಕ್ಷತ್ರ ಪುಷ್ಯ. ಲಾಭ ಸ್ಥಾನಕ್ಕೆ ಗುರು ಅನಿಷ್ಟ ಸ್ಥಿತಿಯೂ ಷಷ್ಟಾಧಿಪತಿಯೂ ಆಗಿರುವಂತಹ ಮುಹೂರ್ತ ಕಾಲ. ಆದರೆ ಇವತ್ತು (ಮಾರ್ಚ್ 27) ರವಿಯು ತನ್ನ ಉಚ್ಚ ಸ್ಥಿತಿಗೆ ಆರೋಹಿ ಗ್ರಹ. ಅಂದರೆ ಬಿಜೆಪಿಗೆ ಸಂಖ್ಯೆ ಜಾಸ್ತಿ ಸಿಗುತ್ತದೆ. ಇದೂ ಅಲ್ಲದೆ ಗುರು- ಶನಿಗಳು ವಕ್ರರೂ, ಶನಿ ಗ್ರಹ ಯುದ್ಧ ಸ್ಥಿತಿಯಲ್ಲೂ ಇದ್ದಾನೆ. ಇವತ್ತಿನ ನಕ್ಷತ್ರಾಧಿಪನೇ ಕಲಹದಲ್ಲಿದ್ದಾಗ ಇದು ಅತಂತ್ರದ ಸೂಚನೆ.
ಕಾಂಗ್ರೆಸ್ ಸ್ಥಾನಗಳು ಇಳಿಕೆ, ಬಿಜೆಪಿಯದು ಏರಿಕೆ
ಈ ಚುನಾವಣೆಯು ಪಕ್ಷ- ಪಕ್ಷಗಳ ಒಳಿತು ಕೆಡುಕುಗಳಿಗಿಂತ, ಕರ್ನಾಟಕದ ಆಡಳಿತದ ವಿಚಾರ ಮುಖ್ಯ. ಇಲ್ಲಿ ಅತಂತ್ರ ಸ್ಥಿತಿಯೇ ಆಗುತ್ತದೆ. ಕಾಂಗ್ರೆಸ್ ಸ್ಥಾನಗಳು ಗಣನೀಯವಾಗಿ ಇಳಿಕೆಯಾಗುತ್ತದೆ. ಬಿಜೆಪಿಯದ್ದು ಗಣನೀಯವಾಗಿ ಏರಿಕೆ. ಜೆಡಿಎಸ್ ಕಳೆದ ಬಾರಿಗೆ ಹೋಲಿಸಿದರೆ ಹೆಚ್ಚು ಸ್ಥಾನ ಪಡೆದು ಮಧ್ಯವರ್ತಿಯಾಗಿ ಲಾಭ ಪಡೆಯುತ್ತದೆ. ಈಗಿನ ಕಲಹ, ಹೋರಾಟ, ಬೈದಾಟಗಳ ವಿಚಾರದ ಬಗ್ಗೆ ಮರೆತುಬಿಡಿ. ಅಧಿಕಾರ ದಾಹಕ್ಕಾಗಿ ಏನೂ ಆಗಬಹುದು. ಹಾಗಾಗಿ ಜೆಡಿಎಸ್- ಬಿಜೆಪಿ ಜತೆಯೂ ಬರಬಹುದು ಅಥವಾ ಕಾಂಗ್ರೆಸ್ ಜತೆಯೂ ಬರಬಹುದು. ಆದರೆ ಬಿಜೆಪಿಯು ಸಖ್ಯವನ್ನು ದೂರವಿರಿಸಿದರೆ ಮುಂದಕ್ಕೆ ಉತ್ತಮ. ಯಾಕೆಂದರೆ ಒಂದು ವರ್ಷದೊಳಗೆ ಮತ್ತೆ ಕರ್ನಾಟಕ ವಿಧಾನಸಭೆ ಚುನಾವಣೆ ಆಗುವುದು ಖಚಿತ.
ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ಮುಂದೆ ಕಾಂಗ್ರೆಸ್ ಗೆ ಅನುಕೂಲ
ಒಟ್ಟಿನಲ್ಲಿ ಬಿಜೆಪಿಯ ಕೊನೆ ನಿರ್ಧಾರವು ಬಹಳ ಮಹತ್ವ ಪಡೆಯುತ್ತದೆ. ಜೆಢಿಎಸ್- ಬಿಜೆಪಿ ಸಖ್ಯದಲ್ಲಿ ಪತನವೋ, ಕಾಂಗ್ರೆಸ್- ಜೆಡಿಎಸ್ ನಲ್ಲಿ ಪತನವೋ ಇದನ್ನು ಬಿಜೆಪಿ ನಿರ್ಧರಿಸಬೇಕು. ಒಂದು ವೇಳೆ ಬಿಜೆಪಿ- ಜೆಡಿಎಸ್ ಸಖ್ಯದಲ್ಲಿ ಸರಕಾರ ರಚನೆಯಾಗಿ, ಆ ನಂತರ ಪತನವಾದರೆ ಮುಂದೆ ಕಾಂಗ್ರೆಸ್ಸಿಗೆ ಲಾಭವಾಗುತ್ತದೆ. ಇಲ್ಲಿ ಚುನಾವಣೆಯ ದಿನ, ಮತ ಎಣಿಕೆ ದಿನಗಳಲ್ಲಿ ರವಿಯು ಉಚ್ಚ ಅವರೋಹಿಯಾಗುವುದೇ ಕೇಂದ್ರದ ಆಡಳಿತಕ್ಕೆ ಅಧಿಕಾರ ಹಿಡಿಯಲು ಕಷ್ಟ ಎನ್ನಬಹುದು. ಅಂತೂ ಈ ಎರಡೂ ದಿನಗಳು ರಾಜ್ಯದ ಯಾವುದೇ ಆಡಳಿತಕ್ಕೆ ಹಿತವೆಂದು ಹೇಳಲಾಗದು. ಒಟ್ಟಿನಲ್ಲಿ ಚುನಾವಣೆಯ ದಿನ ನಿಗದಿಯು ಅತಂತ್ರ ಸೂಚಕ.