ಜ್ಯೋತಿಷ್ಯ: ನವೆಂಬರ್ ನಿಂದ ಏಪ್ರಿಲ್ ಮಧ್ಯೆ ಭಾರತದಲ್ಲಿ ಆಗಬಹುದಾದ ಆ ಬದಲಾವಣೆಗಳೇನು?
"ಈ ವರ್ಷದ ನವೆಂಬರ್ ನಿಂದ ಏಪ್ರಿಲ್ ಮಧ್ಯೆ ರಾಷ್ಟ್ರ- ರಾಜ್ಯ ರಾಜಕಾರಣದಲ್ಲಿ ಮಹತ್ತರವಾದ ಬದಲಾವಣೆ ನಿರೀಕ್ಷೆ ಮಾಡಬಹುದು," -ಎಂದರು ಜ್ಯೋತಿಷಿ ವಿಠ್ಠಲ ಭಟ್. ಈ ನವೆಂಬರ್ ನಲ್ಲಿ ಗುರು ಗ್ರಹ ಮಕರ ರಾಶಿಯನ್ನು ಪ್ರವೇಶ ಮಾಡುತ್ತದೆ. ಅಲ್ಲಿ ಈಗಾಗಲೇ ಶನಿ ಗ್ರಹ ಇದೆ.
ಗುರುವಿಗೆ ಮಕರ ರಾಶಿ ನೀಚ ಸ್ಥಾನ ಆಗಲಿದೆ. ಅದರ ಪ್ರಭಾವ ಏನಾಗಬಹುದು ಎಂಬ ಬಗ್ಗೆ ಈ ಹಿಂದೆ ಕೂಡ ವಿಠ್ಠಲ ಭಟ್ ಸೂಚನೆ ನೀಡಿದ್ದರು. ಆ ಬಗ್ಗೆಯೇ ಮಾತನಾಡಿಸಲು ಒನ್ ಇಂಡಿಯಾ ಕನ್ನಡದಿಂದ ಪ್ರಯತ್ನಿಸಲಾಯಿತು. ಅವರ ಮಾತುಗಳು ರಾಷ್ಟ್ರ- ರಾಜ್ಯ ರಾಜಕಾರಣದ ಕಡೆಗೆ ತಿರುಗಿತು.
ಕಾಲ ಪುರುಷನ ಚಕ್ರದಲ್ಲಿ ಸೆಪ್ಟೆಂಬರ್ ಮೂರನೇ ವಾರದಿಂದ ಎರಡನೇ ಸ್ಥಾನದಲ್ಲಿ ರಾಹು, ಎಂಟನೇ ಮನೆಯಲ್ಲಿ ಕೇತು, ನವೆಂಬರ್ ನಲ್ಲಿ ಮಕರ ರಾಶಿಯಲ್ಲಿ ನೀಚ ಸ್ಥಿತಿಯಲ್ಲಿ ಗುರು, ಅಲ್ಲೇ ಸ್ವ ಕ್ಷೇತ್ರದಲ್ಲಿ ಶನಿ ಸ್ಥಿತವಾಗುವುದರಿಂದ ಸರ್ಕಾರಗಳಿಗೆ ಹಣ ಹೊಂದಿಸಿ, ದೇಶ ನಡೆಸುವುದು ಸಾಕು ಸಾಕಾಗುತ್ತದೆ ಎಂದರು.
ನಾಯಕತ್ವ ಬದಲಾವಣೆ ಕೂಗು
ಎಷ್ಟೇ ಸಾಲ ತಂದರೂ ಕಣ್ಣು ಮುಚ್ಚಿ, ತೆಗೆಯುವುದರೊಳಗೆ ಖಾಲಿ ಆಗುತ್ತದೆ, ಮುಖ್ಯವಾಗಿ ನವೆಂಬರ್ ನಿಂದ ಮುಂದಿನ ವರ್ಷದ ಏಪ್ರಿಲ್ ಮಧ್ಯೆ ಬಿಜೆಪಿಗೆ ಹಿನ್ನಡೆಯ ಸಮಯ. ಧರ್ಮ ಪ್ರಜ್ಞೆ ಕಡಿಮೆ ಆಗುತ್ತದೆ. ಆರ್ಥಿಕ ಸ್ಥಿತಿ ಹದಗೆಡುತ್ತದೆ. ಕೇಂದ್ರ ಸರ್ಕಾರದಲ್ಲಿ ನಾಯಕತ್ವದ ಬಗ್ಗೆ ಅದೇ ಪಕ್ಷದೊಳಗೆ ಅಸಮಾಧಾನ ಕಾಣಿಸಿಕೊಳ್ಳುತ್ತದೆ ಎಂಬ ಸೂಚನೆ ನೀಡಿದರು ಭಟ್. ಸನ್ನಿವೇಶವನ್ನು ನಿಭಾಯಿಸುವುದಕ್ಕೆ ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬೇರೆಯವರಿಗೆ ಅವಕಾಶ ನೀಡಿ ಎಂಬ ಸೂಚನೆ ಬರಬಹುದು ಅಥವಾ ಅದು ಅಸಮಾಧಾನ ಆಗಬಹುದು. ಇದೇ ಸಂಗತಿ ರಾಜ್ಯಕ್ಕೂ ಅನ್ವಯಿಸಿಕೊಂಡು ನೋಡಬಹುದು.
ಆಹಾರ ಪದಾರ್ಥಗಳ ಬೆಲೆ ಹೆಚ್ಚಳ
ಆರ್ಥಿಕ ಸಮಸ್ಯೆ ಎಂಬುದು ಇಡೀ ವಿಶ್ವಕ್ಕೆ ಅನ್ವಯ ಆಗುವ ಸಂಗತಿ. ಆದರೆ ಭಾರತದಲ್ಲಿ ಧರ್ಮಾಚರಣೆಗೆ ಹೆಚ್ಚಿನ ಮಹತ್ವ ಇರುವುದರಿಂದ ಪ್ರಭಾವ ಇನ್ನೂ ಗಂಭೀರವಾಗಿರುತ್ತದೆ. ಪೆಟ್ರೋಲ್- ಡೀಸೆಲ್ ದರದಲ್ಲಿ ಹೆಚ್ಚಳ, ಚಿನ್ನ- ಬೆಳ್ಳಿ ಬೆಲೆಯಲ್ಲಿ ಏರಿಕೆ, ಆಹಾರ ಬೆಲೆಗಳ ಹೆಚ್ಚಳ, ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲ, ಧರ್ಮ ಗುರುಗಳು, ಧಾರ್ಮಿಕ ಮುಖಂಡರ ಬಗ್ಗೆ ಅಸಡ್ಡೆ ಹಾಗೂ ಕೆಟ್ಟ ಭಾವನೆ ಮೂಡುವಂಥ ಸುದ್ದಿ ಬರುತ್ತವೆ. ಎಂಥ ಧರ್ಮಾಚರಣೆ ಮಾಡುವವರಲ್ಲಿಯೂ ನಾಸ್ತಿಕವಾದ ಮೂಡುತ್ತದೆ. ಸರ್ಕಾರಗಳನ್ನು ನಡೆಸುತ್ತಿರುವವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದೇ ಸವಾಲಾಗುತ್ತದೆ.
ಬಿಜೆಪಿಗೆ ಭಾರೀ ಮುಖಭಂಗ
ಈ ಅವಧಿಯಲ್ಲಿ ನಡೆಯುವಂಥ ಚುನಾವಣೆಗಳಲ್ಲಿ ಬಿಜೆಪಿಗೆ ಭಾರೀ ಮುಖಭಂಗ ಎದುರಾಗಲಿದೆ. ನಿರೀಕ್ಷಿತ ಮಟ್ಟದ ಯಶಸ್ಸು ಕಾಣದೆ ನಾಯಕತ್ವ ವಹಿಸಿಕೊಂಡವರು ಜವಾಬ್ದಾರಿ ಹೊರಬೇಕಾಗುತ್ತದೆ, ಇನ್ನೇನು ಯುದ್ಧ ನಡೆದೇ ಹೋಯಿತು ಎಂಬಂಥ ಸನ್ನಿವೇಶ ಪದೇಪದೇ ಎದುರಾಗಲಿದೆ. ಆದರೆ ಇದು ಸುಖಾಸುಮ್ಮನೆ ಆತಂಕ ಸೃಷ್ಟಿಸುವ ಸನ್ನಿವೇಶ ಮಾತ್ರ ಆಗಿರುತ್ತದೆ. ಮಾರ್ಗದರ್ಶಕರ ಸ್ಥಾನದಲ್ಲಿ ಇರುವವರ ಆರೋಗ್ಯ- ಆಯುಷ್ಯಕ್ಕೆ ಬಹಳ ಕಷ್ಟದ ಸಮಯ ಇದು. ಡೈವೋರ್ಸ್ ಗಳ ಪ್ರಮಾಣ ಹೆಚ್ಚಾಗಲಿದೆ. ಕುಟುಂಬಗಳಲ್ಲಿ ಸಾಮರಸ್ಯ ಕಡಿಮೆ ಆಗಿ, ಕಲಹಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಜನ ಸಾಮಾನ್ಯರು ಕೋಪದ ಕೈಗೆ ಬುದ್ಧಿ ಕೊಟ್ಟಲ್ಲಿ ನಂತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯವಾಗಿ ನಾಸ್ತಿಕವಾದಕ್ಕೆ ಮನ್ನಣೆ ಜಾಸ್ತಿ ಆಗುತ್ತದೆ.
ಸುಬ್ರಹ್ಮಣ್ಯ, ಗಣಪತಿ ಆರಾಧನೆ
ಜನ ಸಾಮಾನ್ಯರು ದೈವ ಭಕ್ತಿಯನ್ನು ಕಳೆದುಕೊಳ್ಳಬಾರದು. ಗುರು ಸ್ಥಾನದಲ್ಲಿ ಇರುವವರನ್ನು ಗೌರವಿಸಬೇಕು. ಇನ್ನು ಆರ್ಥಿಕ ಸ್ಥಿತಿ ಉತ್ತಮ ಆಗುವುದಕ್ಕೆ ಸುಬ್ರಹ್ಮಣ್ಯ ಸ್ವಾಮಿ ಹಾಗೂ ಗಣಪತಿ ಆರಾಧನೆ ಬಹಳ ಮುಖ್ಯ, ಕುಟುಂಬಗಳಲ್ಲಿ ಕಲಹ ಏರ್ಪಟ್ಟಲ್ಲಿ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು. ಹ್ಞಾಂ, ಈ ಅವಧಿಯಲ್ಲಿ ಕೋರ್ಟ್ ಗಳಲ್ಲಿ ಕೇಸ್ ಗಳ ಪ್ರಮಾಣವೂ ವಿಪರೀತ ಹೆಚ್ಚಾಗುತ್ತವೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಸಂಯಮ ಕಡಿಮೆ ಆಗುತ್ತದೆ, ಆದ್ದರಿಂದ ಇಲ್ಲಿ ಪ್ರಸ್ತಾವ ಮಾಡಲಾದ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಂಡು, ತೀರ್ಮಾನ ಮಾಡಿ, ಇಲ್ಲದಿದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮಾತು ಮುಗಿಸಿದರು ಪಂಡಿತ್ ವಿಠ್ಠಲ ಭಟ್.