Jupiter Transit 2019: ಧನು- ಮಕರ ಗುರು ಸಂಚಾರ ಫಲಾಫಲ
2019ರ ನವೆಂಬರ್ 5ನೇ ತಾರೀಕಿಗೆ ಧನುಸ್ಸು ರಾಶಿಗೆ ಗುರು ಗ್ರಹದ ಪ್ರವೇಶ ಆಗುತ್ತದೆ. ಅಲ್ಲಿಂದ ಧನು ರಾಶಿಗೆ 30 ಡಿಗ್ರಿ ದೂರದ ಮಕರ ರಾಶಿಯನ್ನು ಕೇವಲ (29. 3. 2020) ನಾಲ್ಕು ತಿಂಗಳಲ್ಲಿ ಪ್ರವೇಶ ಮಾಡುತ್ತದೆ. ಅಲ್ಲಿಂದ ಮತ್ತೆ 30. 6. 2020ಕ್ಕೆ ಧನು ರಾಶಿಗೆ ಗುರು ಪ್ರವೇಶ ಆಗುತ್ತದೆ.
ಮಕರದಲ್ಲಿ ಕೇವಲ 4 ಡಿಗ್ರಿ ಮುಂದೆ ಸಾಗಿ, ಮತ್ತೆ ವಕ್ರ ಗತಿಗೆ ಬಂದು, ಧನು ರಾಶಿಗೆ ಮರಳಿ ಬರುತ್ತಾನೆ ಗುರು. ಸುಮಾರು 5 ಡಿಗ್ರಿಯಷ್ಟು ಧನು ರಾಶಿಗೆ ಬಂದು, ಮತ್ತೆ ಸಮಗತಿಯಲ್ಲಿ 20. 11. 2020ಕ್ಕೆ ಮಕರ ರಾಶಿಗೆ ಬರುತ್ತಾನೆ. ತದನಂತರ ಮಕರ ರಾಶಿಯ 30 ಡಿಗ್ರಿಯನ್ನು ಕ್ರಮಿಸಿ, ಕುಂಭ ರಾಶಿಗೆ 5. 4. 2021ಕ್ಕೆ ಬರುತ್ತಾನೆ. ಇಲ್ಲಿ 5 ತಿಂಗಳಲ್ಲಿ 30 ಡಿಗ್ರಿ ಕ್ರಮಿಸಿದಂತಾಗುತ್ತದೆ.
ಇದು ಗುರು ಗ್ರಹದ 2021ರ ವರೆಗಿನ ಸಂಚಾರ. ಈ ಮಧ್ಯೆ ಧನು ರಾಶಿಯಲ್ಲಿ ಶನಿಯೊಡನೆ ಎರಡು ತಿಂಗಳು, ಮಕರ ರಾಶಿಯಲ್ಲಿ ಶನಿಯೊಡನೆ ಹೆಚ್ಚುಕಡಿಮೆ ಹತ್ತು ತಿಂಗಳು ಗುರು ಸಂಚಾರ ಮಾಡಿದಂತಾಗುತ್ತದೆ. ಸರಿ, ಈಗ ಇದರ ಫಲ ಏನಾದೀತು? ಜ್ಞಾನ ಕಾರಕ ಗುರು ತನ್ನ ಸ್ವಕ್ಷೇತ್ರ, ಮೂಲ ತ್ರಿಕೋಣಕ್ಕೆ ಆಗಮಿಸುವುದರಿಂದ ಏನು ಫಲ ನೀಡಬಹುದು ಎಂಬುದನ್ನು ಗಮನಿಸೋಣ.
ನನೆಗುದಿಗೆ ಬಿದ್ದ ಕಟ್ಲೆಗಳಿಗೆ ಪರಿಹಾರ
ನೈಸರ್ಗಿಕ ಕುಂಡಲಿಯ ಲಗ್ನ, ಚಂದ್ರ ರಾಶಿ ಮೇಷ ಆಗುತ್ತದೆ (ರಾಶಿ ಚಕ್ರದ ಮೊದಲ ರಾಶಿ ಮೇಷ). ಅಲ್ಲಿಂದ ಒಂಬತ್ತನೆಯ ಮನೆಯಾದ ಧನುಸ್ಸು ರಾಶಿಯು ಧರ್ಮ, ನ್ಯಾಯಾಲಯವನ್ನು ಸೂಚಿಸುತ್ತದೆ. ಗುರುವಿನ ಜತೆಗೆ ಸ್ವಲ್ಪ ದಿನ ಶನಿಯೂ ಇರುವುದರಿಂದ ಫಲ ಸ್ವರೂಪವು ಸಾರ್ವಜನಿಕ, ನ್ಯಾಯಾಲಯದ ಮೇಲೆ ಪರಿಣಾಮ ಬೀರಬಹುದು. ಹಳೆಯ- ನನೆಗುದಿಗೆ ಬಿದ್ದಂತಹ ಕಟ್ಲೆಗಳಿಗೆ ಪರಿಹಾರ ಸಿಗುತ್ತದೆ. ಎಲ್ಲರ ದೃಷ್ಟಿ ಇರುವಂತಹ ಅಯೋಧ್ಯಾ ರಾಮ ಮಂದಿರದ ತೀರ್ಮಾನಗಳು ಭಾರತೀಯ ಪರಂಪರೆಯ ಪುನರುತ್ಥಾನದ ಪರವಾಗಿ ಬರಬಹುದು. ಇದು ಒಂದು ರೀತಿಯ ಸರ್ವಾಧಿಕಾರ ಎಂದು ಕಂಡರೂ ಭಾರತೀಯ ನೈಜ ಪರಂಪರೆಯನ್ನು ಎತ್ತಿ ತೋರಿಸುವ ಕೆಲಸವಾಗುತ್ತದೆ. ಹಾಗಾದರೆ ಹನ್ನೆರಡು ವರ್ಷ ಹಿಂದೆಯೂ ಗುರು ಧನುರಾಶಿಗೆ ಬರಲಿಲ್ಲವೇ? ಆಗ ಯಾಕೆ ಇಂತಹ ತೀರ್ಮಾನಗಳು ಬರಲಿಲ್ಲ ಎಂದು ಕೇಳಬಹುದು. ಆದರೆ ಆಗ ಇಂತಹ ಗ್ರಹ ಸಂಯೋಗಗಳು ಇರಲಿಲ್ಲ.
ಎಪ್ಪತ್ತೆರಡು ವರ್ಷಗಳ ಹಿಂದಿನ ಗ್ರಹ ಸಂಯೋಗ
1944- 45ನೇ ಇಸವಿಯಲ್ಲಿ ಮೂಲ ತ್ರಿಕೋಣಕ್ಕೆ ಗುರು ದೃಷ್ಟಿಯೂ, ಕೇತು ಸ್ಥಿತಿಯೂ, ಶನಿ ಮಿಥುನದಿಂದ ಸಪ್ತಮ ದೃಷ್ಟಿಯೂ ಇದ್ದಂತಹ ಸ್ಥಿತಿ ಇತ್ತು. ಸುಮಾರು ಎಪ್ಪತ್ತೆರಡು ವರ್ಷಕ್ಕೊಮ್ಮೆ ಧನು ರಾಶಿಯಲ್ಲಿ ಇಂತಹ ಗ್ರಹ ಸಂಯೋಗವೋ ದೃಷ್ಟಿಯೋ ಬರುತ್ತದೆ. ದೃಷ್ಟಿ ಕೂಡ ಬಲಿಷ್ಟವೇ ಆಗುತ್ತದೆ. ಧನು ರಾಶಿಯು ಶನಿಯ ಮೂಲ ತ್ರಿಕೋಣ ಕುಂಭ ರಾಶಿಗೆ ಲಾಭ ಸ್ಥಾನವೂ, ಗುರುವಿಗೆ ಮೊದಲ ಹತ್ತು ಡಿಗ್ರಿಯು ಮೂಲ ತ್ರಿಕೋಣ ಆಗುತ್ತದೆ. ಇದು ಅಗ್ನಿತತ್ವ ರಾಶಿಯಾಗುತ್ತದೆ. ಈ ಬಾರಿ ಸ್ವಲ್ಪ ದಿನ ಕುಜನ ನಾಲ್ಕನೆಯ ದೃಷ್ಟಿಯೂ ಇದ್ದು, ರವಿಯ ಕಾಲು (ಮೂರನೆಯ ದೃಷ್ಟಿ) ದೃಷ್ಟಿಯೂ ಇರುವುದರಿಂದ ಆ ಭಾವವು ಇನ್ನಷ್ಟು ಉದ್ದೀಪನಗೊಳ್ಳುತ್ತದೆ. ರವಿಯು ಪ್ರದ್ಯುಮ್ನಾನಿರುದ್ಧ ಶಕ್ತಿ ಪ್ರಸಾರಕ (ಸತ್ವ ರಜ ತಮಃ ಶಕ್ತಿ), ಶನಿಯು ಪ್ರದ್ಯುಮ್ನ ( ರಜೋಗುಣ- ಆಡಳಿತ), ಕುಜನು ಸಂಕರ್ಷಣ
(ಆಕ್ರಮಣ, ದಂಡನೆ) ಶಕ್ತಿ, ಗುರುವು ಅನಿರುದ್ಧ (ನ್ಯಾಯ ತೀರ್ಮಾನ, ಭಾವ ವೃದ್ಧಿ, ಜ್ಞಾನ ಪರಿಜ್ಞಾನ) ಶಕ್ತಿ ಸ್ವರೂಪ ಗ್ರಹರು. ರಾಹು- ಕೇತು ಇದರ ಉದ್ದೀಪನ ಮಾಡುವ ಗ್ರಹರು. ಇದು ಅಗ್ನಿ ತತ್ವ ರಾಶಿಯಲ್ಲಿ ಯಾವ ಪರಿಣಾಮ ಬೀರಬಹುದು ಎಂದು ಲೆಕ್ಕ ಹಾಕಬೇಕು.
ರಾಜಕೀಯ ನಿವೃತ್ತಿಯ ಸೂಚನೆ ಇದಾಗಿದೆ
ಅತಿಚಾರ ಗುರುವಿನಿಂದ ವಿಪರೀತ ಬುದ್ಧಿ ಪ್ರಯೋಗ ಆದೀತು. ಅದರ ಪರಿಣಾಮವಾಗಿ ಸರ್ಕಾರಗಳ ಆಡಳಿತದಲ್ಲಿ ಸಮಸ್ಯೆ, ಗೊಂದಲಗಳು ಉಂಟಾದೀತು. ಯಾರ ನೇತೃತ್ವದ ಸರ್ಕಾರ ಇದೆಯೋ, ಆ ವ್ಯಕ್ತಿಯ ಜಾತಕದಲ್ಲಿ ಸಂಯಮ ಇದ್ದರೆ ಅಪಾಯಗಳನ್ನು ಎದುರಿಸುವ ಸಾಮರ್ಥ್ಯ ಇರುತ್ತದೆ. ಪ್ರಜಾ ಕ್ಷೇಮವಾದೀತು. ಕೇಂದ್ರದಲ್ಲಿ ಮೋದಿಯವರಲ್ಲಿ ಇಂತಹ ಸಂಯಮ ಇದೆ. ಒಂದು ವೇಳೆ ಪಾಕಿಸ್ತಾನಕ್ಕೆ ಇರುವಂತಹ ನಾಯಕನಾಗಿದ್ದರೆ ಮುಂದಾಗಿ ಅಣು ಪ್ರಯೋಗದವರೆಗೂ ಹೋಗಬಹುದು. ಆದರೆ ಪಾಕಿಸ್ತಾನದ ಇಮ್ರಾನ್ ಖಾನ್ ಜಾತಕದ ಬಲಿಷ್ಠ ಶನಿಯು ಹಾಗೆ ಮಾಡಲಾರ. ಆದರೆ ಆತನ ಜಾತಕದಲ್ಲಿ ಗುರು ಷಷ್ಟಾಷ್ಟಮ ಇರುವುದರಿಂದ ಪೂರ್ವ ಪರಿಜ್ಞಾನ ಇಲ್ಲದೆ, ಶನಿಯ ಬಲಿಷ್ಠತೆ ದುರುಪಯೋಗ ಆದೀತು ಅಥವಾ ಆತನನ್ನು ಪ್ರಧಾನಿ ಹುದ್ದೆಯಿಂದ ಇಳಿಸಿ, ಮತಾಂಧ ಕೃಪಾಪೋಷಿತ ಮಿಲಿಟರಿ ಆಡಳಿತದಲ್ಲಿ ಅನಾಹುತ ಮಾಡಬಹುದು. ಇನ್ನು ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪನವರ ಸರ್ಕಾರ ಇದೆ. ಇಲ್ಲಿನ ಪರಿಸ್ಥಿತಿಯ ರೂಪ ಬೇರೆ. ನಿಯಂತ್ರಣ ಈಗಾಗಲೇ ಕಳೆದುಕೊಂಡಾಗಿದೆ. ಇದು ಪತನದ ಸೂಚನೆ. ಭಿನ್ನ ಮತ, ಮೇಲಿನವರಿಂದ ಒತ್ತಡ ಇತ್ಯಾದಿಗಳಿವೆ. ಇನ್ನೊಂದಡೆ ಯಡಿಯೂರಪ್ಪನವರಿಗೆ ಪೂರ್ಣ ವಿರಾಮದ ಸಮಯವೂ ಇರಬಹುದು. ದ್ವಿತೀಯ ಗುರು, ಮುಂದೆ ಶನಿಯೂ ಉತ್ತಮ ಸ್ಥಿತಿಗೆ ಬರುವುದು ಇತ್ಯಾದಿ. ವಿರಾಮ ಎಂದರೆ ನಿವೃತ್ತಿಯೂ ಆಗಬಹುದು.
ಪಂಚಗ್ರಹ ಯೋಗದ ಜತೆಗೆ ಸೂರ್ಯ ಗ್ರಹಣ
ಗುರು ಸಂಚಾರದ ಈ ಅವಧಿಯಲ್ಲಿ ಪ್ರಕೃತಿಗೆ ಸಂಬಂಧಿಸಿದಂತೆ ಹೇಳುವುದಾದರೆ ಭೂ ಕಂಪನಾದಿಗಳು, ಅಗ್ನಿ ದುರಂತ, ಯುದ್ಧೋನ್ಮಾದಗಳು, ಅವಸರದ ನಿರ್ಧಾರಗಳು ಆಗುತ್ತವೆ. ಅಲ್ಲದೆ ಇದಕ್ಕೆ ಪೂರಕವಾಗಿ ಧನು ರಾಶಿಯಲ್ಲೇ ಡಿಸೆಂಬರ್ 26ಕ್ಕೆ ಪ್ರಬಲ ಸೂರ್ಯ ಗ್ರಹಣವೂ ಇದ್ದು, ಇದು ಆಪತ್ತುಗಳ ಸೂಚಕವೂ ಆಗಿರುತ್ತದೆ. ಆಗ ಗುರು, ಶನಿ, ಚಂದ್ರ, ಕೇತು, ರವಿ ಗ್ರಹರ ಪಂಚಗ್ರಹ ಯೋಗ ಇದೆ. ಈ ಅಗ್ನಿ ತತ್ವದ ರಾಶಿಯಲ್ಲೇ ಯೋಗ ಬರುವುದರಿಂದ ಇದೊಂದು ಅನಾಹುತ ಸೃಷ್ಟಿಯ ಕಾಲವಾಗುತ್ತದೆ. ಗುರು ಯಾವ ರಾಶಿಯಲ್ಲಿ ಇರುತ್ತಾನೋ ಆಲ್ಲಿ ಉಂಟಾಗುವ ಸನ್ನಿವೇಶಗಳು, ಆ ರಾಶಿ ತತ್ವದ ಫಲಗಳು ವೃದ್ಧಿಯಾಗುತ್ತದೆ. ಆ ಮೂಲಕ ಪ್ರಕಟ ಆಗುತ್ತದೆ. ಇದರಲ್ಲಿ ಉತ್ತಮವೂ ಒಂದು ಕಡೆ, ಇನ್ನೊಂದು ಕಡೆ ಅದಕ್ಕೆ ವಿರುದ್ಧ ಪ್ರತಿಕ್ರಿಯೆಗಳಾದರೆ ಅಧಮವೂ ಆದೀತು. ಯಾವುದೇ ದುಷ್ಫಲ ಆಗಲಿ, ಸತ್ಫಲಗಳಾಗಲೀ ನಾವು ಸ್ವೀಕರಿಸುವ ಸ್ಥಿತಿಗೆ ಹೊಂದಿಕೊಂಡೇ ಇರುತ್ತವೆ. ಒಬ್ಬರು ವಿಷವನ್ನು ದಾನ ನೀಡಿದರೆ ಅದನ್ನು ಕೀಟನಾಶಕ್ಕೂ ಬಳಸಿಕೊಳ್ಳಬಹುದು, ತನಗೆ ಆಗದವರನ್ನು ಮುಗಿಸುವುದಾಕ್ಕೂ ಬಳಸಬಹುದು. ಆತ್ಮಹತ್ಯೆಗೂ ಬಳಸಬಹುದು. ಅದೇ ರೀತಿ ಅಮೃತ ಲಭಿಸಿದರೆ ಹತ್ತು ಹಲವು ಸಜ್ಜನರಿಗೆ ನೀಡಿ, ತಾನೂ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಬಹುದು. ಅಥವಾ ದುಷ್ಟರನ್ನು ಬದುಕಿಸಿ, ಇನ್ನೊಂದಷ್ಟು ದುಷ್ಟ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಬಹುದು.