ಮನಸ್ಸು ಉದ್ವಿಗ್ನಗೊಳಿಸುವ ಜುಲೈ 27ರ ಚಂದ್ರಗ್ರಹಣದ ಪರಿಣಾಮ ಏನಾಗಲಿದೆ?
Recommended Video
ಜುಲೈ ಇಪ್ಪತೇಳನೇ ತಾರೀಕು ರಾತ್ರಿ 11.55ರಿಂದ 28ರ ಮಧ್ಯರಾತ್ರಿ 3.50ರ ತನಕ ಮಕರ ರಾಶಿಯಲ್ಲಿ ಕೇತುಗ್ರಸ್ತ ಚಂದ್ರ ಗ್ರಹಣ ಸಂಭವಿಸುತ್ತದೆ. ಈ ಅವಧಿಯಲ್ಲಿ ರವಿ ಹಾಗೂ ಚಂದ್ರನ ಮಧ್ಯೆ ಸಂಬಂಧ ಕಳೆದುಕೊಳ್ಳುತ್ತದೆ.
ಅಂದಹಾಗೆ ಗ್ರಹಣವು ಮಕರ ರಾಶಿಯಲ್ಲಿ ಸಂಭವಿಸಲಿದ್ದು, ಇದರ ಪರಿಣಾಮವು ಉತ್ತರಾಷಾಢ, ಶ್ರವಣ, ಧನಿಷ್ಠ, ಪೂರ್ವಾಷಾಢ, ರೋಹಿಣಿ, ಹಸ್ತ, ಕೃತ್ತಿಕಾ, ಉತ್ತರಾ ನಕ್ಷತ್ರದವರಿಗೆ ಆಗುತ್ತದೆ. ಇನ್ನು ರಾಶಿ ಪ್ರಕಾರ ಹೇಳಬೇಕು ಅಂದರೆ ಮಕರ, ವೃಷಭ, ಸಿಂಹ, ಧನು ರಾಶಿಯವರಿಗೆ ಈ ದೋಷದ ಫಲ ಹೆಚ್ಚಾಗಿ ಆಗುತ್ತದೆ.
ಜುಲೈ 27ಕ್ಕೆ ಮಕರದಲ್ಲಿ ಕೇತುಗ್ರಸ್ತ ಚಂದ್ರಗ್ರಹಣ, ಆಚರಣೆ ವಿಚಾರ
ಈ ಭೂಮಿಯ ಮೇಲೆ ಪ್ರತಿ ಕ್ಷಣವೂ ಎಲ್ಲ ಗ್ರಹಗಳ ಬೆಳಕು ಬೀಳುತ್ತಲೇ ಇರುತ್ತದೆ. ಅದರ ಪರಿಣಾಮ ಎಲ್ಲ ಜೀವರಾಶಿಗಳ ಮೇಲೂ ಇರುತ್ತದೆ. ಇನ್ನು ಕೇತುಗ್ರಸ್ತ ಚಂದ್ರ ಗ್ರಹಣ ಇರುವುದರಿಂದ ಚಂದ್ರನ ಮೇಲೆ ರವಿಯ ಬೆಳಕು ಇರುವುದಿಲ್ಲ. ಆಗ ಚಂದ್ರ ದುರ್ಬಲ ಆಗುತ್ತದೆ. ಅಂಥ ಸಂದರ್ಭದಲ್ಲಿ ಮನೋಕಾರಕ ಚಂದ್ರನಿಂದ ಮನಸ್ಸಿನ ಮೇಲೆ ಪರಿಣಾಮ ಆಗುತ್ತದೆ.
ದ್ವಾದಶಿ ರಾಶಿಯವರಿಗೂ ಕೇಡು ಉಂಟಾಗುವ ಸಮಯ
ಇನ್ನು ದೋಷದ ವಿಚಾರಕ್ಕೆ ಬಂದರೆ ದ್ವಾದಶ ರಾಶಿಯವರಿಗೂ ಇದು ಕೇಡು ಉಂಟು ಮಾಡುವ ಸಮಯ. ಏಕೆಂದರೆ ಒಂದು ಮನೆ ಅಂದರೆ ಒಬ್ಬನೇ ವ್ಯಕ್ತಿಯಲ್ಲ. ಮಕರ ರಾಶಿಯವರು ಒಬ್ಬರಿರಬಹುದು. ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಬೇರೆ ರಾಶಿಯವರಿದ್ದರೆ, ಅವರ ಮೇಲೆ ಬೀರುವ ಪರಿಣಾಮದಿಂದ ದುಃಖ ಪಡುವ ಯೋಗವಿದ್ದರೆ ಅದನ್ನು ಅನುಭವಿಸಿಯೇ ತೀರಬೇಕು. ಪ್ರಾಕೃತಿಕವಾಗಿ ಚಂದ್ರ ಗ್ರಹಣದ ಪ್ರಭಾವ ಇದ್ದು, ಒಂದೋ ವಿಪರೀತವಾದ ಮಳೆ, ಸಮುದ್ರದ ಅಲೆಗಳ ಹೆಚ್ಚಳವಾಗಿ ಆತಂಕಕ್ಕೆ ಕಾರಣವಾಗಬಹುದು. ಇಲ್ಲದಿದ್ದರೆ ನಿರೀಕ್ಷೆಗಿಂತ ದಿಢೀರನೇ ಮಳೆ ಕಡಿಮೆ ಆಗಿ ಮುಂದೆ ಹೇಗೆ ಎಂಬ ಚಿಂತೆ ಉಂಟಾಗುತ್ತದೆ.
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೊನೆಗೊಳಿಸಲಿದೆಯೇ ಜುಲೈ ಚಂದ್ರ ಗ್ರಹಣ?
ಚಂದ್ರ ದುರ್ಬಲ ಜಾತಕರ ಸ್ಥಿತಿ ಕಷ್ಟ
ಚಂದ್ರ ಗ್ರಹಣದಿಂದ ಮನೋವಿಕಲ್ಪ ಆಗುತ್ತದೆ. ಜನ್ಮ ಜಾತಕದಲ್ಲಿ ಚಂದ್ರ ಎಲ್ಲಿ ಸ್ಥಿತವಾಗಿದೆ ಎಂಬುದರ ಆಧಾರದಲ್ಲಿ ಫಲವನ್ನು ನಿರ್ಧರಿಸಬೇಕಾಗುತ್ತದೆ. ಮುಖ್ಯವಾಗಿ ಮನಸ್ಸು- ಮೆದುಳಿನ ಮೇಲೆ ಈ ಗ್ರಹಣದ ಪ್ರಭಾವ ಬೀರುತ್ತದೆ. ಸಮುದ್ರದ ಮೇಲೂ ಇದರ ಪರಿಣಾಮ ಬೀರುತ್ತದೆ. ಯಾರ ಜಾತಕದಲ್ಲಿ ಚಂದ್ರನು ದುರ್ಬಲವಾಗಿರುತ್ತದೋ ಅಂಥವರ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಇನ್ನು ನಮ್ಮ ರಾಜ್ಯ ಸರಕಾರದ ಸ್ಥಿತಿಯೇ ತೆಗೆದುಕೊಳ್ಳೋಣ. ಇಲ್ಲಿನ ಸ್ಥಿತಿಯನ್ನು ವಿಕಲ್ಪ ಅಂತಲೇ ಪರಿಗಣಿಸಬಹುದು. ಆದ್ದರಿಂದ ಈ ಸರಕಾರ ಉಳಿಯಲ್ಲ ಎನ್ನಬಹುದು. ಇನ್ನು ಶಾಸ್ತ್ರದ ಪ್ರಕಾರ ನೋಡಿದರೂ ಗ್ರಹಣ ಆದ ಮೇಲೆ ಸರಕಾರ ಬೀಳುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಪರಿಹಾರ ಇಲ್ಲವೆ ಅಂದರೆ, ಇದೆ. ತಾಳ್ಮೆಯೇ ಮೊದಲ ಪರಿಹಾರ. ಬೇಕು ಎಂಬ ಆಸೆಯಿಂದ ಇರುವ ಅಸಮಾಧಾನದಿಂದ ಆಚೆಬಂದು ಉಳಿಸಿಕೊಳ್ಳುವ ಅವಕಾಶ ಇರುತ್ತದೆ.
ಉಗ್ರರ ದಾಳಿ, ಹಿಂಸಾಚಾರದಲ್ಲಿ ಹೆಚ್ಚಳ
ಇನ್ನು ಕಾಶ್ಮೀರ ಹಾಗೂ ದೇಶದ ಮತ್ತಿತರ ಭಾಗದಲ್ಲಿ ಉಗ್ರರ ಹಾಗೂ ಸೈನಿಕರ ಮಧ್ಯದ ಚಕಮಕಿ ವಿಪರೀತ ಆಗುತ್ತದೆ. ಧರ್ಮದ ಬಗ್ಗೆ ಅಫೀಮಿನಂತೆ ತಲೆಗೆ ಹತ್ತಿಸಿಕೊಂಡವರು ಅದರ ಉಳಿವಿಗಾಗಿ ಹಿಂಸಾಚಾರಕ್ಕೆ ಇಳಿಯುತ್ತಾರೆ. ಅವರನ್ನು ತಡೆಯಬೇಕಾದದ್ದು ಸೈನಿಕರ ಕರ್ತವ್ಯ. ಆದ್ದರಿಂದ ರಕ್ತಪಾತಗಳು, ಸಾವು- ನೋವುಗಳು ಸಂಭವಿಸುವುದನ್ನು ಸೂಚಿಸುತ್ತದೆ. ಕೇತುಗ್ರಸ್ತ ಚಂದ್ರ ಗ್ರಹಣದ ವೇಳೆಯಲ್ಲಿ ಉಗ್ರರ ದಾಳಿ ಹಾಗೂ ಅವರನ್ನು ಸದೆಬಡಿಯಲು ನಮ್ಮ ಸೈನಿಕರ ಕಾರ್ಯಾಚರಣೆ ಅನಿವಾರ್ಯ ಆಗುತ್ತದೆ. ಚಂದ್ರ ತರುವ ಮನೋವಿಕಲ್ಪದಿಂದಾಗಿ ಉಂಟಾಗುವ ಹಿಂಸಾಚಾರವನ್ನು ತಡೆಯಲು ಅಸಾಧ್ಯವಾಗುತ್ತದೆ.
ವಿಕೃತಿಗಳಿಗೆ ಓಗೊಡಬೇಡಿ
ಗ್ರಹಣಕ್ಕೆ ಮುಂಚೆ ಇಷ್ಟು ಸಮಯಕ್ಕೆ ಮುಂಚೆ, ಇನ್ನು ಗ್ರಹಣ ಸಮಯದಲ್ಲಿ ಆಹಾರ ಸೇವನೆ ಮಾಡಬಾರದು ಎಂದು ಹೇಳಿರುವ ಉದ್ದೇಶ ಏನೆಂದರೆ, ಮನಸ್ಸು-ದೇಹ-ಬುದ್ಧಿಗೂ ನಾವು ಸೇವಿಸುವ ಆಹಾರಕ್ಕೂ ನೇರ ಸಂಬಂಧ ಇರುವುದರಿಂದ ಉಪವಾಸದ ಬಗ್ಗೆ ತಿಳಿಸಲಾಗಿದೆ. ಇನ್ನು ಅಧ್ಯಯನಾಸಕ್ತರಿಗೆ ಇದು ಬಹಳ ಸೂಕ್ತ ಕಾಲ. ಯಾವುದೇ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಏಕಾಗ್ರಗೊಳಿಸಿ, ವ್ಯಾಸಂಗ ಮಾಡಲು ಮುಂದಾದರೆ ಒಳಿತು. ಗ್ರಹಣ ಕಾಲದಲ್ಲಿನ ಆಚರಣೆಗಳ ಬಗ್ಗೆ ಶಾಸ್ತ್ರ ಸಮ್ಮತವಾದ ಉಲ್ಲೇಖವೇ ಇದೆ. ಅಂದರೆ ಹೇಗಿರಬೇಕು, ಏನು ಮಾಡಬೇಕು ಇತ್ಯಾದಿ, ಇತ್ಯಾದಿ. ಈ ಗ್ರಹಣವು ಮುಖ್ಯವಾಗಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ತತ್ ಕ್ಷಣದಿಂದಲೇ ಎಲ್ಲ ರಾಶಿಯವರು ಮನಸ್ಸಿನ ವಿಕೃತಿಗಳಿಗೆ ಓಗೊಡಬೇಡಿ. ಪ್ರಶಾಂತವಾಗಿರಿ. ತಾಳ್ಮೆಯಿಂದ ಇರಿ.