ಜಾತಕ ವಿಮರ್ಶೆ: ಎಚ್.ಡಿ.ರೇವಣ್ಣ ರಾಜಕೀಯ ಔನ್ನತ್ಯಕ್ಕೆ ಕಾಲ ಸನ್ನಿಹಿತ
Recommended Video
ಮೂವತ್ತೇಳು ಸ್ಥಾನಗಳಲ್ಲಿ ಗೆದ್ದಿರುವ ಜೆಡಿಎಸ್ ನಿಂದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬಹುದು ಎಂಬ ಅಂದಾಜು ಈ ಬಾರಿ ಸ್ವತಃ ಕುಮಾರಸ್ವಾಮಿ ಅವರಿಗೂ ಇರಲಿಕ್ಕಿಲ್ಲ. ಆದರೆ ಗ್ರಹ ಬಲ- ದೈವ ಬಲ ಕೂಡಿ ಬಂದು ಅವರು ಮುಖ್ಯಮಂತ್ರಿ ಆಗಿಬಿಟ್ಟರು. ಇದೀಗ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮತ್ತೊಬ್ಬ ವ್ಯಕ್ತಿ ಎಚ್.ಡಿ.ರೇವಣ್ಣ ಅವರ ಜಾತಕ ವಿಶ್ಲೇಷಣೆ ಮಾಡಲಾಗುತ್ತಿದೆ.
ರೇವಣ್ಣ ಅವರ ಜನ್ಮ ದಿನಾಂಕ 17ನೇ ಡಿಸೆಂಬರ್, 1957. ಸ್ವಾತಿ ನಕ್ಷತ್ರ, ತುಲಾ ರಾಶಿ. ಇವರ ಜಾತಕದಲ್ಲಿ ಹಲವು ಮುಖ್ಯ ಯೋಗಗಳಿವೆ. ಅದರಲ್ಲಿ ಉಲ್ಲೇಖಾರ್ಹವಾದದ್ದು ಗಜಕೇಸರಿ ಯೋಗ. ಈ ಯೋಗವು ರಾಜಕಾರಣದಲ್ಲಿ ಹಿನ್ನಡೆ ಆಗದಂತೆ ನೋಡಿಕೊಳ್ಳುತ್ತದೆ. ಜತೆಗೆ ಅದೃಷ್ಟ ತರುತ್ತದೆ.
ಶುಕ್ರ ಗ್ರಹ ಅನುಗ್ರಹಕ್ಕಾಗಿ 7 ಅದ್ಭುತ ಸಲಹೆಗಳು
ಆದರೆ, ಇವರ ಜಾತಕದಲ್ಲಿ ಅದೃಷ್ಟ ತರದಂಥ ಎರಡು ಯೋಗಗಳಿವೆ. ಅದರಲ್ಲಿ ಒಂದು, ಗುರು ಚಾಂಡಾಲ ಯೋಗ. ಮತ್ತೊಂದು ಮಂದ ಮಂಗಳ ಯೋಗ. ಗುರು ಚಾಂಡಾಲ ಯೋಗದ ದೋಷದಿಂದ ಇವರ ವ್ಯಕ್ತಿತ್ವದ ಬಗ್ಗೆ ಬಹಳ ತಪ್ಪು ಭಾವನೆಗಳು ಇರುತ್ತವೆ. ಇವರು ದುರಹಂಕಾರಿ ಅಂತಲೋ ಕೋಪಿಷ್ಠರು ಅಂತಲೋ ತಪ್ಪು ತಿಳಿವಳಿಕೆ ಇರುತ್ತದೆ.
ಇನ್ನು ಶನಿ ಹಾಗೂ ಮಂಗಳ ಸಂಯೋಗದಿಂದಾಗಿ ಇವರ ಜತೆಗಿನ ವ್ಯವಹಾರ ಬಿಸಿ ತುಪ್ಪದಂತಾಗುತ್ತದೆ. ಈ ಎರಡು ಯೋಗಗಳು ಎಚ್.ಡಿ.ರೇವಣ್ಣ ಅವರ ಗುಣ- ನಡತೆ ಮೇಲೆ ಪ್ರಭಾವ ಬೀರುತ್ತಿದೆ. ಇನ್ನು ಸದ್ಯದ ಸ್ಥಿತಿಯನ್ನು ಗಮನಿಸಿದರೆ, ರೇವಣ್ಣ ಅವರದು ತುಲಾ ರಾಶಿ. ಜನ್ಮದಲ್ಲಿ ಗುರು ಇದ್ದಾನೆ. ಅಕ್ಟೋಬರ್ ನಂತರ ಎರಡನೇ ಮನೆಗೆ ಪ್ರವೇಶ ಆಗುತ್ತದೆ.
ರೇವಣ್ಣ ಅವರಿಗೆ ಅಕ್ಟೋಬರ್ ನಂತರ ಗುರು ಬಲ
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವುದು ಐದನೇ ಮನೆಯಲ್ಲಿ ಗುರು ಇರುವಾಗಲೇ. ಅಕ್ಟೋಬರ್ ನಂತರ ಕುಮಾರಸ್ವಾಮಿ ಅವರಿಗೆ ಗುರು ಆರನೇ ಮನೆಗೆ ಹೋಗುತ್ತದೆ. ಆಗ ಅವರಿಗೆ ಆರೋಗ್ಯ ಬಾಧೆ ಹಾಗೂ ಅಧಿಕಾರ ನಾಶದ ಸನ್ನಿವೇಶಗಳು ಕಾಣಿಸಿಕೊಳ್ಳುತ್ತದೆ. ಅಂಥ ಸ್ಥಿತಿಯಲ್ಲಿ ರೇವಣ್ಣ ಅವರಿಗೆ ಗುರು ಬಲ ಬರುವುದರಿಂದ ಹೆಚ್ಚಿನ ಅಧಿಕಾರ ಪ್ರಾಪ್ತಿ ಯೋಗ ಇದೆ. ಸದ್ಯಕ್ಕೆ ಗುರು ಬಲ ಇಲ್ಲದಿರುವುದರಿಂದ ತಮಗೆ ಬೇಕಾದ ಸ್ಥಾನಮಾನಕ್ಕಾಗಿ ಹೋರಾಟ ಮಾಡಿಕೊಂಡೇ ಪಡೆಯಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ.
ಹಳೇ ಘಟನೆಯು ಮರುಕಳಿಸಬಹುದು
ಗುರು ಬಲ ಬಂದಾಗ ರೇವಣ್ಣ ಅವರಿಗೆ ಹೇಗೆ ಅಧಿಕಾರ ಸಿಗಬಹುದು ಎಂಬ ವಿಶ್ಲೇಷಣೆ ಮಾಡಿದಾಗ, ಈ ಹಿಂದೆ ಕುಮಾರಸ್ವಾಮಿ ಅವರು ಹೇಗೆ ಕಾಂಗ್ರೆಸ್ ನಿಂದ ಹೊರಬಂದು ಬಿಜೆಪಿ ಜತೆ ಸಖ್ಯ ಬೆಳೆಸಿ, ಹೇಗೆ ಮುಖ್ಯಮಂತ್ರಿ ಆದರೋ ಅದೇ ಮಾದರಿಯಲ್ಲಿ ರೇವಣ್ಣ ಅವರು ಬಿಜೆಪಿ ಜತೆಗೆ ಕೈ ಜೋಡಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಈ ಸಾಧ್ಯತೆ ಫಿಫ್ಟಿ-ಫಿಫ್ಟಿ. ಏಕೆಂದರೆ, ತುಲಾ ರಾಶಿಯವರು ಇಂಥ ಧಾರ್ಷ್ಟ್ಯದ ತೀರ್ಮಾನ ಕೈಗೊಳ್ಳುವವರಲ್ಲ. ಇನ್ನು ಪಕ್ಷದ ವಿಚಾರದಲ್ಲಿ ವಿಪರೀತ ಧೈರ್ಯದ ನಿರ್ಧಾರ ಕೈಗೊಳ್ಳುವವರಲ್ಲ. ಆದರೆ ಸದ್ಯಕ್ಕೆ ಇರುವ ಶನಿ- ಮಂಗಳ ಸಂಯೋಗ ಹಾಗೂ ರೇವಣ್ಣ ಅವರ ಗೋಚಾರ ಸ್ಥಿತಿಯು ಅಂಥ ನಿರ್ಧಾರ ಕೈಗೊಳ್ಳುವುದಕ್ಕೆ ಪ್ರೇರಣೆ ನೀಡುವ ಸಾಧ್ಯತೆ ಇದೆ.
ತಾತ್ಕಾಲಿಕವಾಗಿಯಾದರೂ ಅಧಿಕಾರ ಪ್ರಾಪ್ತಿ ಯೋಗ
ಎಚ್.ಡಿ.ರೇವಣ್ಣ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇಲ್ಲ. ಏಕೆಂದರೆ ಇವರಿಗೆ ಎರಡನೇ ಮನೆ ಗುರು, ಕುಮಾರಸ್ವಾಮಿ ಅವರಂತೆ ಐದನೇ ಮನೆ ಗುರುವಲ್ಲ. ಇನ್ನು ಕುಮಾರಸ್ವಾಮಿ ಅವರಿಗೆ ಗುರು ಬಲ ಹೋಗುತ್ತದೆ. ಆ ನಂತರ ಆರೋಗ್ಯ ಸಮಸ್ಯೆಯೋ ಅಥವಾ ವಿಪರೀತಕ್ಕೆ ಹೋಗಿ ಅಧಿಕಾರ ನಾಶವೋ ಆದಲ್ಲಿ ಅಂಥ ಸನ್ನಿವೇಶದಲ್ಲಿ ದೇವೇಗೌಡರ ಕುಟುಂಬದಿಂದ ತಾತ್ಕಾಲಿಕವಾಗಿಯಾದರೂ ಎಚ್.ಡಿ.ರೇವಣ್ಣ ಅವರಿಗೆ ಅಧಿಕಾರ ಪ್ರಾಪ್ತಿ ಯೋಗ ಇದೆ. ಅದು ಕೂಡ ಮುಂದಿನ ಮಾರ್ಚ್- ಏಪ್ರಿಲ್ ನವರೆಗೆ ಮಾತ್ರ. ಆಗ ಕುಮಾರಸ್ವಾಮಿ ಅವರಿಗೆ ಮತ್ತೆ ಗುರು ಬಲ ಬರುತ್ತದೆ. ಆದ್ದರಿಂದ ಅದಕ್ಕೂ ಮುನ್ನ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಕುಮಾರಸ್ವಾಮಿ ಅವರಿಗೆ ಆರೋಗ್ಯ ಹದಗೆಟ್ಟಲ್ಲಿ ಅಲ್ಪಾವಧಿಗೆ ದೊಡ್ಡ ಹುದ್ದೆಯೊಂದನ್ನು ರೇವಣ್ಣ ಅವರು ವಹಿಸಿಕೊಳ್ಳುವ ಸಾಧ್ಯತೆ ಇದೆ. ಅದು ಜೆಡಿಎಸ್ ಹಾಗೂ ಕಾಂಗ್ರೆಸ್ ನ ದೋಸ್ತಿ ಸರಕಾರದಲ್ಲಿಯಾದರೂ ರೇವಣ್ಣ ಪ್ರಮುಖ ಹುದ್ದೆಗೆ ಏರಬಹುದು.
ಮಂಡಲ ಪರ್ಯಂತ ನಾಗನ ಆರಾಧನೆ ಮಾಡಬೇಕು
ರೇವಣ್ಣ ಅವರು ದೈವ ಭಕ್ತರು. ಎಷ್ಟೋ ಪೂಜೆ-ಪುನಸ್ಕಾರಗಳನ್ನು ಮಾಡಿರುತ್ತಾರೆ, ಮಾಡುತ್ತಿರುತ್ತಾರೆ. ಸದ್ಯದ ಸನ್ನಿವೇಶದಲ್ಲಿ ಅಧಿಕಾರ ಪ್ರಾಪ್ತಿ ಆಗಬೇಕು ಅಂದರೆ, ಶನಿ- ಮಂಗಳ ಸಂಯೋಗ ಪರಿಹಾರ ಹವನ, ಗುರು- ಚಾಂಡಾಲ ಯೋಗ ಪರಿಹಾರ, ತುಂಬ ದೊಡ್ಡ ಮಟ್ಟದಲ್ಲಿ ನಾಗನ ಆರಾಧನೆ ಮತ್ತು ಗುರು ಶಾಂತಿ ಮಾಡಿಸಿದಲ್ಲಿ ಈಗ ಎದುರಾಗುತ್ತಿರುವ ಅಡೆತಡೆಗಳ ನಿವಾರಣೆ ಆಗುತ್ತದೆ. ಮುಂದೆ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಅನುಕೂಲ ಆಗುತ್ತದೆ. ದೇವೇಗೌಡರು ಹೇಗೆ ಈ ಹಿಂದೆ ಅತಿ ರುದ್ರ ಮಹಾ ಯಾಗ ಮಾಡಿ, ಅನುಗ್ರಹ ಪಡೆದರೋ ಅದೇ ರೀತಿ ಮಂಡಲ ಪರ್ಯಂತ ನಾಗನ ಆರಾಧನೆ ಮಾಡಿದರೆ ರೇವಣ್ಣ ಅವರಿಗೆ ಅಧಿಕಾರ ಪ್ರಾಪ್ತಿ ಹಾಗೂ ಅದನ್ನು ಉಳಿಸಿಕೊಳ್ಳುವ ಅವಕಾಶ ಇದೆ.