ಕೇಂದ್ರ ಸರಕಾರ ರಚನೆಯಲ್ಲಿ ನಾನಾ ಬಿಕ್ಕಟ್ಟು ಅಂತಾರೆ ವಾರಾಣಸಿ ಜ್ಯೋತಿಷಿಗಳು
Recommended Video
ವಾರಾಣಸಿ (ಉತ್ತರಪ್ರದೇಶ), ಮೇ 22: ಪ್ರಧಾನಿ ನರೇಂದ್ರ ಮೋದಿ ಸ್ಪರ್ಧೆ ಮಾಡಿರುವ ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಜ್ಯೋತಿಷಿಗಳೇ ಬಿಜೆಪಿ ನೇತೃತ್ವದ ಎನ್ ಡಿಎಗೆ ಕಹಿ ಎನಿಸುವ ಭವಿಷ್ಯ ನುಡಿದಿದ್ದಾರೆ. ಗುರು, ರಾಹು ಹಾಗೂ ಶನಿಯ ಗ್ರಹ ಸ್ಥಿತಿಯ ಕಾರಣಕ್ಕೆ ಕೇಂದ್ರದಲ್ಲಿ ಹೊಸ ಸರಕಾರ ರಚನೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ವಾರಾಣಸಿಯಲ್ಲಿನ ಜ್ಯೋತಿಷಿಗಳ ಪ್ರಕಾರ: ಈಗಿನ ಗ್ರಹ ಸ್ಥಿತಿಯ ಸಹಾಯದಿಂದ ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಬಹುದೇ ವಿನಾ ಬಹುಮತ ಗಳಿಸುವುದು ಕಷ್ಟ. ಈ ಬಗ್ಗೆ ಪಂಡಿತ್ ರಿಷಿ ದ್ವಿವೇದಿ ಎಂಬುವವರು ಮಾತನಾಡಿದ್ದು, ಈಗಿನ ಗ್ರಹ ಸ್ಥಿತಿಗಳು ಸೂಚಿಸುವ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಅತಂತ್ರ ಸ್ಥಿತಿ ಏರ್ಪಡುತ್ತದೆ. ಅದೇ ಚುನಾವಣೆಯ ಫಲಿತಾಂಶದಲ್ಲಿ ಕಂಡುಬರುತ್ತದೆ.
"ಈಗಿರುವ ಗ್ರಹ ಸ್ಥಿತಿಯಲ್ಲಿ ಯಾವುದೇ ಸರಕಾರ ರಚನೆಯಾದರೂ ಪೂರ್ಣಾವಧಿಯನ್ನು ಪೂರೈಸುವುದಿಲ್ಲ. ಎನ್ ಡಿಎಗೆ 220ರಿಂದ 240 ಸ್ಥಾನಗಳು ಬರಬಹುದು. ಅದರಲ್ಲಿ ಬಿಜೆಪಿಗೆ 140ರಿಂದ 160 ಸ್ಥಾನಗಳು ಬರಲಿವೆ. ಇನ್ನು ಯುಪಿಎಗೆ 110ರಿಂದ 140 ಸ್ಥಾನಗಳು ದೊರೆಯುವ ಅವಕಾಶ ಇದೆ" ಎಂದು ದ್ವಿವೇದಿ ಹೇಳಿದ್ದಾರೆ.
ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜವಾದಿ ಪಕ್ಷ ಈ ಬಾರಿ ಸರಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ನರೇಂದ್ರ ಮೋದಿ ಅವರ ವೈಯಕ್ತಿಕ ಜಾತಕ ಸೂಚಿಸುವ ಪ್ರಕಾರ, ಸರಕಾರದ ರಚನೆಗಾಗಿ ಅವರು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಮತ್ತೊಬ್ಬ ಜ್ಯೋತಿಷಿ ಪಂಡಿತ್ ದೀಪಕ್ ಮಾಳವೀಯ ಪ್ರಕಾರ, ಸರಕಾರ ರಚನೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಪಶ್ಚಿಮ ಬಂಗಾಲ, ತಮಿಳುನಾಡು, ಮೇಘಾಲಯ, ಮಿಜೋರಾಂ, ಆಂಧ್ರಪ್ರದೇಶ ಮತ್ತು ಕೇರಳದ ಪಕ್ಷಗಳು ಈ ಬಾರಿಯ ಸರಕಾರದ್ ರಚನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇನ್ನು ಕಾಂಗ್ರೆಸ್ ವಿಚಾರಕ್ಕೆ ಬಂದರೆ, ಹೆಚ್ಚಿನ ಸ್ಥಾನಗಳನ್ನು ಗಳಿಸಬಹುದೇ ವಿನಾ ಸರಕಾರ ರಚನೆ ಮಾಡುವುದರಿಂದ ತುಂಬ ದೂರ ಉಳಿಯುತ್ತದೆ.
ಜ್ಯೋತಿಷಿ ಗಣೇಶ್ ಪ್ರಸಾದ್ ಮಿಶ್ರಾ ಕೂಡ ಇತರ ಇಬ್ಬರು ಜ್ಯೋತಿಷಿಗಳ ಮಾತನ್ನು ಒಪ್ಪಿಕೊಳ್ಳುತ್ತಾರೆ. ಇದರ ಜತೆಗೆ, ಹದಿನಾರನೇ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಹಲವರು ಹದಿನೇಳನೇ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಾರೆ ಎನ್ನುತ್ತಾರೆ.