ಶಂಖ ಮುತ್ತು ಎಂಬ ವಿಶಿಷ್ಟ ರತ್ನ, ಅದರ ಧಾರಣೆಯ ಅನುಕೂಲಗಳು
ಇಂದಿನ ಈ ಲೇಖನ ಸ್ವಲ್ಪ ಭಿನ್ನವಾದದ್ದು. ಮತ್ತು ನಿಮ್ಮ ನಂಬಿಕೆ ಹಾಗೂ ಆಸಕ್ತಿಯ ಮೇಲೆ ಕೂಡ ಜೀವನದ ಯಶಸ್ಸು ಅವಲಂಬನೆ ಆಗಿರುತ್ತದೆ ಎಂದು ತಿಳಿಸುವ ಪ್ರಯತ್ನ. ನೀವು ಶಂಖ ಮುತ್ತಿನ ಬಗ್ಗೆ ಕೇಳಿದ್ದೀರಾ?! ಈ ಮುತ್ತಿನ ಮೂಲವೇ ಶಂಖ.
ಇಂದಿನ ದಿನಮಾನದಲ್ಲಿ ಜಗತ್ತಿನ ನಾನಾ ಭಾಗದಲ್ಲಿ ಮುತ್ತನ್ನು ಮಾರುತ್ತಾರೆ. ಆದರೆ ಶಂಖ ಮುತ್ತು ಇತರ ಮುತ್ತುಗಳಂತೆ ಅಲ್ಲ. ಅದು ತುಂಬ ಸಹಜವಾಗಿ ದೊರೆಯುವಂಥದ್ದು. ಅದು ಸಮುದ್ರದ ಶಂಖದಲ್ಲಿ ಮಾತ್ರ ಸಿಗುತ್ತದೆ. ಅದನ್ನು ಶ್ರೀ ಮುತ್ತು ಅಂತಲೂ ಕರೆಯುತ್ತಾರೆ.
ಮಂಗಳಸೂತ್ರದ ಮಹತ್ವ, ಹವಳ ದೋಷಕ್ಕೆ ಪರಿಹಾರ
ಅದರರ್ಥ 'ಲಕ್ಷ್ಮಿ ಮುತ್ತು' ಎಂದಾಗುತ್ತದೆ. ಶಂಖವು ಲಕ್ಷ್ಮಿಯ ಆವಾಸ ಸ್ಥಾನ ಎಂದು ಪರಿಗಣಿಸುವುದರಿಂದ ಈ ಶ್ರೀ ಮುತ್ತಿಗೆ ವರ್ತಕರು ಹಾಗೂ ವ್ಯಾಪಾರಿಗಳು ಅತಿ ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತಾರೆ. ಆ ಪೈಕಿ ಗುಂಡಾದ ಆಕಾರದಲ್ಲಿರುವ ಶಂಖ ಮುತ್ತು ತೀರಾ ಅಪರೂಪ.
ಸಂಹಿತೆಗಳಲ್ಲಿ ಆಗಿರುವ ಉಲ್ಲೇಖದ ಪ್ರಕಾರ: ಬಿಳಿ ಬಣ್ಣದ ಗುಂಡಾದ ಶಂಖ ಮುತ್ತು ಬ್ರಾಹ್ಮಣರು ಧರಿಸಿ, ಸಿದ್ಧಿ ಪಡೆಯಬಹುದು. ಧರಿಸಿದವರು ಶ್ರೀಮಂತರಾಗುತ್ತಾರೆ. ಅದನ್ನು ಎಡಗೈ ಕಿರು ಬೆರಳಿನಲ್ಲಿ, ಬೆಳ್ಳಿ ಉಂಗುರದಲ್ಲಿ ಧರಿಸಬೇಕು.
ಇನ್ನು ಕೆಂಪು ಬಣ್ಣದ್ದನ್ನು ರಾಜರು ಹಾಗೂ ನಾಯಕರು ಧರಿಸಬೇಕು. ಇದರಿಂದ ಶಕ್ತಿ ಹಾಗೂ ಸಾಮರ್ಥ್ಯ ವೃದ್ಧಿಯಾಗುತ್ತದೆ. ಇದನ್ನು ಧರಿಸುವುದರಿಂದ ಶ್ರೀಮಂತಿಕೆ, ಸೌಖ್ಯ ಸಿಗುತ್ತದೆ.
ಜ್ಯೋತಿಷ್ಯ: ಯಾವ ರಾಶಿಯವರಿಗೆ ಯಾವುದು ಅದೃಷ್ಟ ರತ್ನ?
ವೈಶ್ಯರು ಹಳದಿ ಶಂಖ ಮುತ್ತು ಧರಿಸಬೇಕು. ಇದನ್ನು ಧರಿಸಿದರೆ ವ್ಯಾಪಾರದಲ್ಲಿ ಸ್ಥಿರತೆ ಹಾಗೂ ಅಭಿವೃದ್ಧಿ ಆಗುತ್ತದೆ. ಆಗರ್ಭ ಶ್ರೀಮಂತಿಕೆ ದೊರೆಯುತ್ತದೆ.
ಇನ್ನು ಸೇವಾ ವಲಯದಲ್ಲಿ ಇರುವವರು ಬೂದು ಬಣ್ಣದ ಶಂಖ ಮುತ್ತು ಧರಿಸಿದರೆ ಅವರ ಕರ್ತವ್ಯವನ್ನು ಇನ್ನೂ ಚೆನ್ನಾಗಿ ಮಾಡಬಹುದು ಮತ್ತು ಕೀರ್ತಿ, ಶ್ರೀಮಂತಿಕೆ ಲಭಿಸುತ್ತದೆ.
ಪೂಜಾ ವಿಧಾನ
ಶ್ರೀಲಕ್ಷ್ಮಿಯ ಪ್ರಾಣ ಪ್ರತಿಷ್ಠೆ ಮಾಡಬೇಕು
ಎಡಗೈನ ಕಿರು ಬೆರಳಿಗೆ ಬೆಳ್ಳಿಯಲ್ಲಿ ಧರಿಸಬೇಕು
ಪ್ರತಿ ಶುಕ್ರವಾರ ಸಂಜೆ ಧೂಪ ಸಹಿತ ಪೂಜೆ ಮಾಡಬೇಕು
ಮುಖ್ಯವಾದ ದಿನ-ಸಂದರ್ಭಗಳಲ್ಲಿ ಮಾತ್ರ ಧರಿಸಬೇಕು
ಉಂಗುರ ಬಳಸದಿದ್ದಾಗ ಬೆಳ್ಳಿಯ ಬಾಕ್ಸ್ ವೊಂದರಲ್ಲಿ ಇಟ್ಟು ಅದರ ಜತೆಗೆ ಕೇಸರ್ ಮತ್ತು ಲವಂಗ ಇಡಬೇಕು. ಆ ಬೆಳ್ಳಿ ಬಾಕ್ಸ್ ಅನ್ನು ಹಣದ ಪೆಟ್ಟಿಗೆಯಲ್ಲಿ ಇಡಬೇಕು
ಕೊನೆ ಮಾತು: ಈ ಲೇಖನದಲ್ಲಿ ಹೇಳಿರುವ ಶಂಖ ಮುತ್ತಿನ ಪೈಕಿ ಕೆಲವನ್ನು ಯಾರೂ ನೋಡಿಲ್ಲ. ಇನ್ನೂ ಕೆಲವು ತುಂಬಾ ದುಬಾರಿ. ಏಕೆಂದರೆ ಅದು ಸಿಗುವುದೇ ಅಪರೂಪದಲ್ಲಿ ಅಪರೂಪ. ಇಂಥವನ್ನು ಖರೀದಿ ಮಾಡಬೇಕು ಅಂದುಕೊಂಡರೆ ತೀರಾ ಎಚ್ಚರದಿಂದ ವ್ಯವಹರಿಸಬೇಕು. ತಜ್ಞರ ಮಾರ್ಗದರ್ಶನ ಪಡೆಯಿರಿ. ಯಾರನ್ನೋ ನಂಬಿ, ಮೋಸ ಹೋಗಬೇಡಿ.