ಬಿಎಸ್ವೈ ಬಹುಮತ ಸಾಬೀತು ಮಾಡ್ತಾರಾ? ಜ್ಯೋತಿಷಿ ಏನಂತಾರೆ?
ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಬಿಜೆಪಿಯ ಜನಪ್ರಿಯ ನಾಯಕ, 75 ವರ್ಷದ ಹಿರಿಯ ರಾಜಕಾರಣಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪನವರು ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾರಾ?
ಮೊದಲು ಯಡಿಯೂರಪ್ಪನವರು ಗುರುವಾರ 12.20ಕ್ಕೆ ಪ್ರಮಾಣ ಸ್ವೀಕರಿಸುತ್ತಾರೆ ಎಂದು ನಿಗದಿಯಾಗಿತ್ತು. ಆದರೆ, ಕೆಲವೇ ಗಂಟೆಗಳ ಅವಧಿಯಲ್ಲಿ ಅದು ಸರಿಯಾಗಿ 9 ಗಂಟೆಗೆ ಎಂದು ಬದಲಾಯಿತು. ಸುಪ್ರೀಂ ಕೋರ್ಟಿನಲ್ಲಿ ರಾಜ್ಯಪಾಲರ ತೀರ್ಮಾನದ ವಿರುದ್ಧ ಅರ್ಜಿ ಸಲ್ಲಿಸಿದ್ದರಿಂದ ತರಾತುರಿಯಲ್ಲಿ ಮುಹೂರ್ತ ನಿಗದಿಯಾಯಿತು.
ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ
ಈ ದಿನ ಅಂದ್ರೆ ಗುರುವಾರ ಅವರು ಅಧಿಕಾರ ಸ್ವೀಕರಿಸಿದ ಮುಹೂರ್ತ ಏನನ್ನು ಸೂಚಿಸುತ್ತದೆ? ಇದರಿಂದ ಅವರು ಯಶಸ್ವಿಯಾಗಿ ಬಹುಮತ ಸಾಬೀತುಪಡಿಸುತ್ತಾರಾ? ಪೂರ್ಣಾವಧಿ ಅಧಿಕಾರ ಚಲಾಯಿಸುತ್ತಾರಾ? ಈ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಒನ್ಇಂಡಿಯಾ ಕನ್ನಡದ ಜೊತೆಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರ ಲೆಕ್ಕಾಚಾರ ಹೇಗಿದೆ ಮುಂದೆ ಓದಿ.
"ಯಡಿಯೂರಪ್ಪ ಅವರು ಮಿಥುನ ಲಗ್ನದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಆ ಲಗ್ನಕ್ಕೆ ಸಪ್ತಮದಲ್ಲಿ ಶನಿ, ಅಷ್ಟಮದಲ್ಲಿ ಕುಜ ಹಾಗೂ ಪಂಚಮದಲ್ಲಿ ಗುರು ಇದೆ. ಈ ಗ್ರಹ ಸ್ಥಿತಿಯ ಆಧಾರದಲ್ಲಿ ಹೇಳಬೇಕೆಂದರೆ ಈ ಸರ್ಕಾರಕ್ಕೆ ಆಯುಷ್ಯ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳಿವೆ. ಅಧಿಕಾರ ಸ್ವೀಕರಿಸಿದ ಸಂದರ್ಭ ಬಿಜೆಪಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಅವಕಾಶಗಳಿವೆ" ಎಂದು ಅವರು ವಿಶ್ಲೇಷಿಸಿದ್ದಾರೆ.
24ನೇ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿರುವ ಸವಾಲುಗಳು
"ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಮುಗಿಸುತ್ತಾರೋ, ಇಲ್ಲವೋ ಅದು ದೈವ ಸಂಕಲ್ಪ. ಆದರೆ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಲಗ್ನಕ್ಕೆ ದೈವಬಲ ಇದೆ. ಆದ್ದರಿಂದ ಯಾರು ಊಹಿಸದ ರೀತಿಯಲ್ಲಿ ಈ ಸರ್ಕಾರ ಬಾಳಿಕೆ ಬರುವ ಲಕ್ಷಣಗಳು ಗೋಚರಿಸುತ್ತಿವೆ" ಎಂದು ಪ್ರಕಾಶ್ ಅಮ್ಮಣ್ಣಾಯ ತಿಳಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರಾ: ಜ್ಯೋತಿಷಿ ಏನಂತಾರೆ?
"ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಇದು ಸರಿ, ಇದು ತಪ್ಪು ಎಂಬ ಕಟ್ಟಳೆಗಳಿವೆ. ಆದರೆ ಈಗಿನ ಸನ್ನಿವೇಶ ಸರಿ-ತಪ್ಪುಗಳ ಮಧ್ಯದ ಗೆರೆಯನ್ನು ಅಳಿಸಿ ಹಾಕಿದೆ. ಇಲ್ಲಿ ಇನ್ನೊಂದು ವಿಚಾರ ಸ್ಪಷ್ಟಪಡಿಸುತ್ತೇನೆ. ನಾನೊಬ್ಬ ಜ್ಯೋತಿಷಿ. ನನಗೆ ಎಲ್ಲಾ ಪಕ್ಷಗಳು ಒಂದೇ. ಗ್ರಹಸ್ಥಿತಿಯ ಆಧಾರದಲ್ಲಿ ನನ್ನ ತಿಳಿವಳಿಕೆಯ ಮಿತಿಯಲ್ಲಿ, ಆ ದೇವರು ನುಡಿಸಿದ್ದನ್ನು ಹೇಳಿದ್ದೇನೆ. ಮತ್ತೇ ನನ್ನ ವಿರುದ್ಧ ಬೇಜಾರು ಮಾಡ್ಕೊಳ್ಬೇಡಿ."