ವಿವೇಕಾನಂದರ ಮರು ಜನ್ಮವೇ ನರೇಂದ್ರ ಮೋದಿಯೇ?: ಜಾತಕ ವಿಶ್ಲೇಷಣೆ
Recommended Video
ಜನವರಿ ಹನ್ನೆರಡಕ್ಕೆ ಸ್ವಾಮಿ ವಿವೇಕಾನಂದರ ಜನ್ಮದಿನ. ಈ ತಿಂಗಳಿನ ಹಾಗೂ ಆ ಸಂಭ್ರಮದಲ್ಲಿ ಜ್ಯೋತಿಷ್ಯ ರೀತ್ಯಾ ನನ್ನ ಅರಿವಿಗೆ ಹೊಳೆದ, ದೈವ ಪ್ರೇರಣೆ ಎಂದು ನಾನು ಭಾವಿಸುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿದೆ. ಆ ಸಂಗತಿಯನ್ನು ಹೇಳುವ ಮುನ್ನ ಕೆಲವು ವಿಚಾರ ಸ್ಪಷ್ಟಪಡಿಸಬೇಕಿದೆ.
ಮೊದಲಿಗೆ, ನಾನು ಜ್ಯೋತಿಷ್ಯ ಅಧ್ಯಯನಾಸಕ್ತ. ಯಾವುದೋ ವಿವಾದ ಎಬ್ಬಿಸಬಹುದಾದ ವಿಚಾರ ಹೇಳುವ ಮೂಲಕ ಜನಪ್ರಿಯನಾಗಬೇಕು ಎಂಬ ಯಾವ ಅಡ್ಡ ಮಾರ್ಗಗಳು ಬೇಕಿಲ್ಲ. ಇನ್ನು ಅಧಿಕಾರ, ಹಣ, ಕೀರ್ತಿ ಇಂಥವುಗಳ ಬಗ್ಗೆ ಬೆನ್ನಟ್ಟಿ ಹೋಗುವಂಥ ಹುಚ್ಚು ಖಂಡಿತಾ ನನಗಿಲ್ಲ. ಆದರೆ ಆ ದೈವ ಪ್ರೇರಣೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳದೆ ನನ್ನೊಳಗೆ ಇರಿಸಿಕೊಳ್ಳಲು ಸಾಧ್ಯವಾಗದೆ ಲೇಖನ ರೂಪದಲ್ಲಿ ಹೊರ ಹಾಕಿದ್ದೀನಿ.
ಜ್ಯೋತಿಷ್ಯ: ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ, ಎಚ್ ಡಿಕೆ ಸಿಎಂ
ಪ್ರಧಾನಿ ನರೇಂದ್ರ ಮೋದಿ ಅವರ ಜಾತಕ ಪರಾಮರ್ಶೆ ಮಾಡುವಾಗ ಇವರಲ್ಲಿ ಸ್ವಾಮಿ ವಿವೇಕಾನಂದರ ಗುಣ- ಸ್ವಭಾವ- ಧೋರಣೆಗಳು ಕಂಡುಬಂದವು. ಇನ್ನೂ ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ ಈ ನರೇಂದ್ರರಿಗೂ ಆ ನರೇಂದ್ರರಿಗೂ ಆತ್ಮ ಸಂಬಂಧವಿದೆ. ನರೇಂದ್ರ ಮೋದಿಯವರು ಮತ್ತು ವಿವೇಕಾನಂದರು ಇಬ್ಬರೂ ನರೇಂದ್ರರೆ. ಅಂದರೆ 'ನರಾಣಾಂ ಇಂದ್ರಃ' ಎನ್ನುವ ವಚನ ಪ್ರಕಾರ ಇಬ್ಬರೂ ನರೇಂದ್ರರಾಗುತ್ತಾರೆ.
ಇದು ಕೇವಲ ಜನ್ಮ ಸಿದ್ಧಾಂತದ ಒಂದು ವಿವರಣೆ ಮತ್ತು ವಿಶ್ಲೇಷಣೆಯಾಗಿದೆ. ಅದೇನಿದ್ದರೂ ಇವರ ಜನ್ಮವು ಈ ದೇಶಕ್ಕೆ ವರವಂತೂ ಖಂಡಿತಾ ಹೌದು. ವಿವೇಕಾನಂದರನ್ನು ನಿಂದಿಸಿದ ಪೀಳಿಗೆಯು ಅವರ ನಂತರ ಈಗ ಹೊಗಳಿ ಅಟ್ಟಕ್ಕೇರಿಸುತ್ತಿದೆ. ಹಾಗೆಯೇ ಮೋದಿಯನ್ನು ವಿರೋಧಿಸಿದವರೂ ಮುಂದೊಂದು ದಿನ ಹೊಗಳುವ ಕಾಲವೂ ಇದೆ. ಅಥವಾ ಅವರ ಹೊಗಳಿಕೆ ಬೇಕೆಂದೂ ಈ ಲೇಖನ ಬರೆದುದಲ್ಲ.
ಇಬ್ಬರ ಜಾತಕದ ಹೋಲಿಕೆ
ಮೋದಿಯವರ ಜಾತಕದಲ್ಲಿ ಚಂದ್ರ ವೃಶ್ಚಿಕದಲ್ಲಿದ್ದರೆ, ವಿವೇಕಾನಂದರ ಜಾತಕದಲ್ಲಿ ಚಂದ್ರನು ಕನ್ಯಾ ರಾಶಿಯಲ್ಲಿದ್ದಾನೆ. ಜ್ಯೋತಿಷ್ಯದಲ್ಲಿ ಪೂರ್ವಾಪರ ಜನ್ಮಗಳ ವಿಚಾರವನ್ನು ತಿಳಿಯುವ ಗುಣಾಕಾರಗಳಿವೆ. ಇಲ್ಲಿ ನಾವು ಈ ಇಬ್ಬರು ಮಹಾನ್ ವ್ಯಕ್ತಿಗಳ ಸಂಬಂಧ ನೋಡೋಣ.
ನವಮ ಹಾಗೂ ಪಂಚಮ ಸ್ಥಾನ
ನವಮಾಧಿಪತಿಯಿಂದ ಪೂರ್ವ ಜನ್ಮ ವಿಚಾರವೂ, ಪಂಚಮಾಧಿಪತಿಯಿಂದ ಮುಂದಿನ ವಿಚಾರವನ್ನೂ ತಿಳಿಯಬೇಕು. ಅಲ್ಲದೆ ಪೂರ್ವದ ಅದೇ ವ್ಯಕ್ತಿ ಮತ್ತೆ ಹುಟ್ಟಿದ್ದಾನೆ ಎನ್ನಲು ಅನೇಕ ಜ್ಯೋತಿಷ್ಯ ಮಾನದಂಡಗಳಿವೆ. ಅಂದರೆ ಒಂದೇ ರೀತಿಯ ಯೋಗಗಳು, ನವಮ ಪಂಚಮ ಭಾವಾಧಿಪರು, ಅವರಿರುವ ಸ್ಥಿತಿಗತಿಗಳು ಸಾಮ್ಯತೆಗಳನ್ನು ಹೊಂದಿದ್ದರೆ ಅವನೇ ಇವನು ಎಂದು ಹೇಳಬಹುದು.
ಯೋಗ ಸಾಮ್ಯತೆ ಕಾಣಬೇಕು
ವಿವೇಕಾನಂದರ ಪಂಚಮಾಧಿಪ ಕುಜ (ಪುನರ್ಜನ್ಮದ ಲಗ್ನಾಧಿಪತಿ) ಮೋದಿಯವರ ಜನನ ಕುಂಡಲಿಯಲ್ಲಿ ವೃಶ್ಚಿಕ ಲಗ್ನದಲ್ಲಿದ್ದಾನೆ. ಇಲ್ಲಿ ಮೋದಿಯವರು ವಿವೇಕಾನಂದರ ಪುನರವತಾರ ಎಂಬುದಕ್ಕೆ ಒಂದು ಸಾಕ್ಷಿ ಸಿಕ್ಕಂತಾಯಿತು. ಇದನ್ನೇ ಹಿಡಿದುಕೊಂಡು, ಅವರೇ ಇವರು ಎಂದು ಹೇಳುವುದು ಸರಿಯಾಗದು. ಇಲ್ಲಿ ಹಿಂದಿನವರ ಯೋಗವು ಹೇಗಿರುತ್ತೋ ಹಾಗೆಯೇ ಇಂದಿನವರ ಯೋಗ ಸಾಮ್ಯತೆಯೂ ಬೇಕು. ಈಗ ನಮ್ಮ ದೃಷ್ಟಿಯಲ್ಲೂ ಆ ಗುಣಗಳು ಕಾಣಬೇಕು.
ಅಖಂಡ ಸಾಮ್ರಾಜ್ಯ ಯೋಗ
ವಿವೇಕಾನಂದರ ಜಾತಕದಲ್ಲಿ 'ಅಖಂಡ ಸಾಮ್ರಾಜ್ಯ' ಯೋಗವಿದೆ. ಅಂದರೆ ಲಗ್ನ ದ್ವಿತಿಯಾಧಿಪನು (ಕುಜಾದಿ ಪಂಚ ಗ್ರಹರು) ಚಂದ್ರ ಕೇಂದ್ರದಲ್ಲಿರಬೇಕು. ಗುರುವನ್ನು ಹೊರತುಪಡಿಸಿ ಹೀಗಿದ್ದಾಗ ಗುರುವು ಲಾಭ ಸ್ಥಾನದಲ್ಲಿರಬೇಕಾಗುತ್ತದೆ. ಅದು ಇಲ್ಲದಿದ್ದರೆ ಇದು ಸಾಮ್ರಾಜ್ಯ ಯೋಗವಾಗುವುದಿಲ್ಲ. ವಿವೇಕಾನಂದರ ಜಾತಕದಲ್ಲಿ ಗುರುವು ಲಾಭ ಸ್ಥಾನದಲ್ಲಿದ್ದು, ದ್ವಿತಿಯಾಧಿಪ ಶನಿಯು ಚಂದ್ರ ಕೇಂದ್ರ ದಶಮದಲ್ಲಿದ್ದಾನೆ. ಈ ಯೋಗದ ಫಲವೆಂದರೆ ಇವರನ್ನು ಪ್ರಶ್ನಿಸುವವರಿಲ್ಲ. ಪ್ರಶ್ನಾತೀತ ನಾಯಕರು.
ಪ್ರಧಾನ ಕರ್ಮಕಾರಕ ಶನಿ
ಮೋದಿಯವರ ಜಾತಕದಲ್ಲಿ ಲಗ್ನ ದ್ವಿತಿಯಾಧಿಪನು ಗುರುವೇ ಆಗಿದ್ದು, ಚಂದ್ರ ಕೇಂದ್ರ (ಚಂದ್ರ ಮತ್ತು ಗುರು ಚತುರ್ದಶಮವಾಗಿದ್ದಾರೆ)ದಲ್ಲಿದ್ದಾರೆ. ಇನ್ನು ಇಬ್ಬರ ಜಾತಕದಲ್ಲೂ ಪ್ರಧಾನ ಕರ್ಮಕಾರಕ ಶನಿಯು (ಅಂದರೆ ಕೆಲಸ ಮಾಡುವುದನ್ನು ಕೂಲಿ ಎನ್ನುತ್ತೇವೆ. ಅದು ಶನಿಯಾಗುತ್ತದೆ)ಲಗ್ನದಿಂದ ದಶಮದಲ್ಲಿದ್ದಾನೆ. ಈ ಕರ್ಮಕಾರಕ ಶನಿಯು ಪೂರ್ವ ಜನ್ಮದಲ್ಲಿದ್ದುದಕ್ಕಿಂತ ಅಧಿಕಾಂಶದಲ್ಲಿಯೂ ಇರಬೇಕು. ಅಲ್ಲದೆ ಪೂರ್ವ ಜನ್ಮದ ಜಾತಕನ ನವಮಾಧಿಪತಿಯ ಕ್ಷೇತ್ರದಲ್ಲಿ ಇರಬೇಕು. ಮೋದಿಯವರ ಶನಿಯು ವಿವೇಕಾನಂದರ ನವಮ ಸ್ಥಾನ ಸಿಂಹರಾಶಿಯಲ್ಲಿ 29 ಡಿಗ್ರಿ ಅಂಶದಲ್ಲಿ ಅತ್ಯಂತ ಬಲಿಷ್ಟನಿದ್ದಾನೆ.
ಮರುಜನ್ಮ ಎಂಬುದಕ್ಕೆ ಪುರಾವೆ
ಇಲ್ಲಿಗೆ ನಾನು ತಿಳಿದುಕೊಂಡ ವಿಚಾರಗಳಿಂದ ನರೇಂದ್ರ ಮೋದಿಯವರು ವಿವೇಕಾನಂದರ ಮರು ಜನ್ಮ ಎಂದು ಹೇಳಲು ಪುರಾವೆಗಳಾಯಿತು. ಇಷ್ಟಕ್ಕೇ ನಿರ್ಧಾರಕ್ಕೆ ಬರಲಾಗದು. ಯಾವುದೇ ಮನುಷ್ಯನು ಎಂತಹ ಸಾಧನೆ ಮಾಡಿದರೂ ಕೊನೆಗಾಲಕ್ಕೆ ಕೃತಾರ್ಥತೆಯನ್ನು ಪಡೆಯುವವನಾಗಬೇಕು. ಯಾವುದೇ ಜಾತಕದಲ್ಲಿ ಜನ್ಮವನ್ನು ನಿರ್ಧರಿಸುವ ಮಾಂದಿಯು ತನ್ನ ಭವನಾಧಿಪನಿಗೆ ಇಷ್ಟ ಸ್ಥಿತಿಯಲ್ಲಿ ಇದ್ದಾಗ ಜನ್ಮ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ನಿಷ್ಪ್ರಯೋಜಕರಾಗಿ ಚರಿತ್ರೆ ಸೇರುವುದಿಲ್ಲ. ಮೋದಿ ಮತ್ತು ವಿವೇಕಾನಂದರ ಜಾತಕದಲ್ಲಿ ಮಾಂದಿಯು ತನ್ನ ಭವನೇಶನಿಗೆ ಇಷ್ಟ ಸ್ಥಿತಿ ಅಂದರೆ, ವಿವೇಕಾನಂದರ ಮಾಂದಿಯು ಭವನೇಶ ಬುಧನಿಗೆ ನವಮದಲ್ಲಿಯೂ, ಮೋದಿಯವರ ಮಾಂದಿ ಭವನೇಶ ಶನಿಗೆ ಸಪ್ತಮ ಕೇಂದ್ರದಲ್ಲಿರುವುದು ಸಾರ್ಥಕತೆ ತೋರಿಸಿದೆ.
ಬಾಡಿ ಲಾಂಗ್ವೇಜ್ ಸಾಮ್ಯತೆ
ಇದೂ ಅಲ್ಲದೆ ಷಷ್ಟ್ಯಂಶ, ವೈಶೇಷಿಕಾಂಶಗಳಲ್ಲಿ ಎಲ್ಲ ಗ್ರಹರೂ ಸಾಮ್ಯತೆ ತೋರಿಸಿದ್ದಾರೆ. ಹಾಗಾಗಿ ಮೋದಿಯವರು ವಿವೇಕಾನಂದರ ಪುನರ್ ಜನ್ಮ ಎಂದಾಗುತ್ತದೆ. ಅವರ ಬಾಡಿ ಲಾಂಗ್ವೇಜ್ ಕೂಡಾ ವಿವೇಕಾನಂದರಂತೆ ಆಗಿರುವುದೂ ಸಾಮ್ಯತೆಗೆ ಕಾರಣವಾಗಿರುತ್ತದೆ. ವಿವೇಕಾನಂದರು ಮಹಾ ಜ್ಞಾನಿಗಳಾಗಿದ್ದರು. ನರೇಂದ್ರ ಮೋದಿಯವರಲ್ಲೂ ಅಪಾರ ದೇಶ ಪ್ರೇಮ, ಯೋಗ, ಧ್ಯಾನ ಇತ್ಯಾದಿಗಳನ್ನು ಕಾಣಬಹುದು.
ಅಮೆರಿಕವೇ ಮೋದಿಯವರನ್ನು ಗೌರವಿಸಿತು
ಈ ಹಿಂದೆ ವಿವೇಕಾನಂದರು ಅಮೆರಿಕಕ್ಕೆ ಹೋಗುವಾಗ ಹೀನ ಸ್ಥಿತಿಯಲ್ಲಿ ಹೋದರು. ಬರುವಾಗ ಮಹಾ ಪುರುಷರಾಗಿ ಕಂಡರು. ಮೋದಿಗೆ ಬಹಿಷ್ಕಾರ ಹಾಕಿದ ಅಮೆರಿಕವೇ ನಂತರ ಪೀಠವಿಟ್ಟು ಸನ್ಮಾನಿಸಿದೆ. ಇಡೀ ಪ್ರಪಂಚವೇ ವಿವೇಕಾನಂದರನ್ನು ಹೇಗೆ ಕಂಡಿತ್ತೋ ಅದೇ ರೀತಿಯಲ್ಲಿ ಮೋದಿಯವರನ್ನೂ ಕಾಣುತ್ತಿದೆ.
ಆಗ ಅಪೂರ್ಣವಾಗಿದ್ದು ಈಗ ಪೂರ್ಣ
ವಿವೇಕಾನಂದರು ನರೇಂದ್ರ ವಿಶ್ವನಾಥರಾದರೆ, ಮೋದಿಯವರು ನರೇಂದ್ರ ದಾಮೋದರ. ವಿವೇಕಾನಂದರು ಅಪೂರ್ಣವಾದದ್ದನ್ನು ಮತ್ತೆ ನರೇಂದ್ರ ಮೋದಿಯವರಾಗಿ ಬಂದು ಪೂರ್ಣಗೊಳಿಸುವ ಪ್ರಯತ್ನಗಳು ಕಾಣುತ್ತಿವೆ. ವಿವೇಕಾನಂದರು ಧಾರ್ಮಿಕ ನೇತಾರರಾಗಿ ವಿದೇಶ ಪ್ರವಾಸ ಮಾಡಿದರೆ, ಮೋದಿಯವರು ರಾಜಕೀಯ ನೇತಾರರಾಗಿ ವಿದೇಶದಲ್ಲಿ ಹಿಂದೂ ಧರ್ಮದ ಧ್ವಜ ಹಾರಿಸಬೇಕೆಂಬ ಸಂಕಲ್ಪದಲ್ಲಿರುವುದು ಎಲ್ಲರಿಗೂ ಕಾಣುತ್ತದೆ. ಇಂತಹ ಅಧ್ಯಯನವನ್ನು ತಿಳಿಸುವ ಶಾಸ್ತ್ರವೊಂದಿದ್ದರೆ ಅದು ಜ್ಯೋತಿರ್ವಿಜ್ಞಾನ ಮಾತ್ರ.