ಜ್ಯೋತಿಷ್ಯ ಬುರುಡೆಯೋ ವೈಜ್ಞಾನಿಕವೋ?: ಕಬ್ಯಾಡಿ ಜಯರಾಮಾಚಾರ್ಯ ಸಂದರ್ಶನ
Recommended Video
"ಶತಮಾನಗಳಿಂದಲೂ ಪಂಚಾಂಗದಲ್ಲಿ ಇಂಥದ್ದೇ ಸಮಯಕ್ಕೆ ಗ್ರಹಣ ಸಂಭವಿಸುತ್ತದೆ. ಇಂಥದ್ದೇ ನಕ್ಷತ್ರ ಇತ್ಯಾದಿ ಗಣಿತ ಲೆಕ್ಕಾಚಾರದ ಭಾಗಗಳನ್ನು ನಿಖರವಾಗಿ ತಿಳಿಸಲಾಗುತ್ತಿದೆ. ಇದನ್ನು ನಿಖರವಾಗಿ ಹೇಳುವವರು ಫಲ ಜ್ಯೋತಿಷ್ಯ ಹಾಗೂ ಇತರ ವಿಭಾಗಗಳಲ್ಲಿ ಮೂರ್ಖರಾಗಿರಲು ಸಾಧ್ಯವೇ?"
- ಕೇಳಿದ ಪ್ರಶ್ನೆಗೊಂದು ಕ್ವೆಶ್ಚನ್ ಮಾರ್ಕ್ ಇಟ್ಟರು ಜ್ಯೋತಿಷಿಗಳು ಹಾಗೂ ಅಪಾರ ಅಧ್ಯಯನ ಮಾಡಿದ ವಿದ್ವಾಂಸರೂ ಆದ ಕಬ್ಯಾಡಿ ಜಯರಾಮಾಚಾರ್ಯರು. ಜ್ಯೋತಿಷ್ಯ ಸುಳ್ಳೋ- ನಿಜವೋ, ಈ ಮೂಲಕ ಮುಂದಿನ ಚುನಾವಣೆಯಲ್ಲಿ ಯಾರು ಗೆಲ್ತಾರೆ ಅಂತ ಹೇಳುವುದಕ್ಕೆ ಸಾಧ್ಯವಾ ಇತ್ಯಾದಿ ಪ್ರಶ್ನೆಗಳನ್ನು ಅವರಿಗೆ ಕೇಳಲಾಯಿತು.
ಎಂಥ ಪ್ರಶ್ನೆಗೂ ಅವರದೂ ನಿರುದ್ವಿಗ್ನ ಧ್ವನಿಯ ಉತ್ತರ. ಜ್ಯೋತಿಷಿಗಳ ಬಳಿ ಹೋಗಿ, ಜ್ಯೋತಿಷ್ಯದ ಬಗ್ಗೆ ಕೇಳಿದರೆ ಅವರಿನ್ನೆಂಥ ಉತ್ತರ ಕೊಟ್ಟಾರು ಎಂಬ ಉಪೇಕ್ಷೆ ಬೇಡ. ಏಕೆಂದರೆ, ಜಯರಾಮಾಚಾರ್ಯರು ಯಾವ ರೀತಿಯಲ್ಲಿ ಭಿನ್ನ ಎಂಬುದು ಈ ಪ್ರಶ್ನೋತ್ತರವನ್ನು ಓದಿ ಮುಗಿಸುವುದರೊಳಗಾಗಿ ನಿಮಗೆ ತಿಳಿಯುತ್ತದೆ.
ಮೀನ ವರ್ಷ ಭವಿಷ್ಯ : ನಿರೀಕ್ಷೆ ಇಲ್ಲದಿದ್ದರೆ ನಿರಾಶೆಯೂ ಇಲ್ಲ
ಇದು ಸಂದರ್ಶನದ ಮೊದಲ ಭಾಗ. ಇದರಲ್ಲಿ ಜ್ಯೋತಿಷ್ಯದ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮುಂದಿನ ಕಂತಿನಲ್ಲಿ ಅವರು ತಿಳಿಸಿದ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಮುಖ್ಯ ಭವಿಷ್ಯವನ್ನು ತಿಳಿಸಲಾಗುವುದು. ಇನ್ನು ನೇರವಾಗಿ ಪ್ರಶ್ನೋತ್ತರಕ್ಕೆ ಹೋಗೋಣ.
ಪ್ರಶ್ನೆ: ನಿತ್ಯ ಭವಿಷ್ಯ, ಮಾಸ ಭವಿಷ್ಯ, ವರ್ಷ ಭವಿಷ್ಯವೆಲ್ಲ ಹೇಳೋದು ತಪ್ಪು ಎಂಬ ಮಾತಿದೆಯಲ್ಲಾ?
ಜಯರಾಮಾಚಾರ್ಯ: ಇವೆಲ್ಲ ಹೇಳುವುದು ತಪ್ಪಲ್ಲ. ಆದರೆ ಅದಕ್ಕೆ ಎಷ್ಟು ಪ್ರಾಮುಖ್ಯ ನೀಡ್ತೀರಿ ಎಂಬುದು ಮುಖ್ಯ. ಜ್ವರ ಬಂದಿರುವ ಎಲ್ಲರಿಗೂ ಒಂದೇ ಮಾತ್ರೆ ಕೊಡೋಕೆ ಸಾಧ್ಯವಾ? ಜ್ಯೋತಿಷ್ಯ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಬೇರೆ ಆಗುತ್ತದೆ. ನೀವು ಹೇಳಿದ ಭವಿಷ್ಯವನ್ನು ಮೇಲ್ನೋಟಕ್ಕೆ ಹೇಳಬಹುದು. ಅವುಗಳಲ್ಲಿ ಐದು ನಿಜವಾದರೆ, ಐದು ಸುಳ್ಳಾಗುತ್ತದೆ.
ಯಾವುದೇ ವ್ಯಕ್ತಿಗೆ ಸದ್ಯಕ್ಕೆ ನಡೆಯುತ್ತಿರುವ ದಶಾ-ಭುಕ್ತಿ ಯಾವುದು, ಯೋಗಗಳು ಯಾವುವು ಅಂತ ತಿಳಿದುಕೊಳ್ಳಬೇಕು. ವೃಶ್ಚಿಕ ರಾಶಿಯವರಿಗೆಲ್ಲ ಹೀಗೇ ಆಗಿಬಿಡುತ್ತದೆ ಎಂಬುದು ಖಂಡಿತಾ ಸರಿಯಲ್ಲ. ಹಾಗಂತ ನಿತ್ಯ-ವಾರ ಹಾಗೂ ಮಾಸ ಭವಿಷ್ಯ ಹೇಳಲೇಬಾರದಾ ಅಂದರೆ, ಇವತ್ತಿನ ಕಾಲಮಾನದಲ್ಲಿ ಇಲ್ಲ ಎಂದು ತೆಗೆದುಹಾಕುವುದೂ ಸಾಧ್ಯವಿಲ್ಲ.
ಪ್ರಶ್ನೆ: ಯಾವುದೋ ಋಷಿ- ಮುನಿಗಳ ಕಾಲದ ಜ್ಯೋತಿಷ್ಯ ಗ್ರಂಥಗಳು ಇಂದಿಗೂ ಹೇಗೆ ಪ್ರಸ್ತುತ?
ಜಯರಾಮಾಚಾರ್ಯ: ಗ್ರಂಥಗಳಲ್ಲಿ ಗ್ರಹ ಸ್ಥಿತಿಯ ಆಧಾರದಲ್ಲಿ ಫಲಿತವನ್ನು ತಿಳಿಸಲಾಗಿರುತ್ತದೆ. ಅದನ್ನು ಇಂದಿನ ದಿನಮಾನಕ್ಕೆ ಸಮೀಕರಿಸಿ ಜ್ಯೋತಿಷಿಯಾದವರು ಹೇಳಬೇಕು. ಅದಕ್ಕೆ ಊಹಾಶಕ್ತಿ ಇರಬೇಕು. ಲೋಕಜ್ಞಾನ ಬೇಕು. ಆಕಾಶಕ್ಕೆ ಸಂಬಂಧಪಟ್ಟ ಜ್ಞಾನ ಲಭಿಸುತ್ತದೆ ಎಂದರೆ ಸ್ಪೇಸ್ ಸೈನ್ಸ್, ರಾಕೆಟ್ ಸೈನ್ಸ್, ಸ್ಟಾರ್ ಗೇಜಿಂಗ್ ಇಂಥವುಗಳೆಲ್ಲ ಇವೆ ಮತ್ತು ಆ ಜಾತಕಕ್ಕೆ ಅವು ಹೇಗೆ ಕೆಲಸ ಮಾಡುತ್ತವೆ ಎಂಬುದು ತಿಳಿದಿರಬೇಕು.
ಪ್ರಶ್ನೆ: ಹಿಂದೂಗಳಿಗೆ ಮುಖ್ಯವಾದ ರಾಮಾಯಣ- ಮಹಾಭಾರತದಂಥ ಗ್ರಂಥಗಳಲ್ಲಿ ನವಗ್ರಹಗಳ ದೇವಸ್ಥಾನದ ಬಗ್ಗೆ ಪ್ರಸ್ತಾವವೇ ಇಲ್ಲವಲ್ಲ?
ಜಯರಾಮಾಚಾರ್ಯ: ರವಿಯ ಹೊರತಾಗಿ ಉಳಿದ ಗ್ರಹಗಳಿಗೆ ದೇವಾಲಯ ಕಟ್ಟುವ ಪರಿಪಾಠ ಇರಲಿಲ್ಲ. ಅದಕ್ಕೆ ಯಾವ ವಾಸ್ತುವೂ ಇಲ್ಲ, ಅವು ದೇವರೂ ಅಲ್ಲ. ದೇವರು ಹಾಗೂ ದೇವತೆಗಳು ಎರಡೂ ಬೇರೆ ಬೇರೆ. ಇನ್ನೊಂದು ವಿಚಾರ ಏನೆಂದರೆ, ಯಾವುದೇ ಪ್ರಾಚೀನ ಫಲ ಜ್ಯೋತಿಷ್ಯ ಗ್ರಂಥದಲ್ಲೂ ಇಂಥ ಗ್ರಹಕ್ಕೆ ಹೀಗೆ ಶಾಂತಿ, ಹೋಮ ಮಾಡಬೇಕು ಅಂತ ಇಲ್ಲ. ಆದರೆ ಜ್ಯೋತಿಷಿಗಳ ಊಹಾ ಪಟುತ್ವ, ಭವಿಷ್ಯ ಕೇಳಲು ಬರುವವರ ಆತ್ಮವಿಶ್ವಾಸ ಹೆಚ್ಚಿಸುವುದಕ್ಕೆ ಶಾಂತಿ-ಪೂಜೆ-ಹೋಮ ಮಾಡಲಾಗುತ್ತದೆ.
ಪ್ರಶ್ನೆ: ಹಾಗಿದ್ದರೆ ಪರಿಹಾರ ಅಂತ ಏನಿದೆ?
ಜಯರಾಮಾಚಾರ್ಯ: ನನ್ನ ಬಳಿ ಜ್ಯೋತಿಷ್ಯ ಕೇಳಲು ಬರುವವರೆಗೆ ಕೌನ್ಸೆಲಿಂಗ್ ಮಾಡ್ತೀನಿ. ಕೋಪ ಮಾಡಬೇಡಿ. ಬೇರೆ ಕೆಲಸ ಸಿಗುವವರೆಗೆ ಇರುವ ಕೆಲಸ ಬಿಡಬೇಡಿ. ಅತಿಯಾದ ವಿಶ್ವಾಸದಿಂದ ಬಹಳ ಹಣ ಹೂಡಿ ವ್ಯಾಪಾರ ಮಾಡಬೇಡಿ. ಇಷ್ಟೆಲ್ಲ ಸಲಹೆ ಅನುಸರಿಸಿದರೂ ಹತ್ತು ರುಪಾಯಿ ನಷ್ಟ ಆಗುವ ಕಡೆಗೆ ಒಂದು ರುಪಾಯಿಯಾದರೂ ನಷ್ಟ ಆಗುತ್ತದೆ. ಆದರೆ ಆ ಸಲಹೆಗಳನ್ನು ಅನುಸರಿಸಿದರೆ ದೊಡ್ಡ ಮಟ್ಟದ ಸಮಸ್ಯೆಗಳನ್ನು ತಡೆಯಬಹುದು.
ಪ್ರಶ್ನೆ: ಜ್ಯೋತಿಷ್ಯವೇ ಬುರುಡೆ. ಅದರಲ್ಲಿ ವೈಜ್ಞಾನಿಕ ಅಂಶಗಳೇ ಇಲ್ಲ ಎಂಬ ವಾದವಿದೆಯಲ್ಲಾ?
ಜಯರಾಮಾಚಾರ್ಯ: ಜ್ಯೋತಿಷ್ಯ ಅಂದರೆ ಪಂಚಾಂಗಗಳಲ್ಲಿ ಅದ್ಯಾವುದೋ ಕಾಲದಿಂದಲೂ ಇಂಥ ಸಮಯದಲ್ಲೇ ಗ್ರಹಣ. ಈ ಗ್ರಹ ಇಲ್ಲಿಗೇ ಚಲಿಸುತ್ತದೆ. ಇಂಥದ್ದೇ ನಕ್ಷತ್ರ ಎಂದು ಬರೆದಿಡಲಾಗಿದೆ. ಹಾಗಿದ್ದರೆ ಅವೆಲ್ಲ ಸುಳ್ಳೆ? ಆ ಲೆಕ್ಕಾಚಾರ ಸರಿಯಿದೆ ಅನ್ನುವುದಾದರೆ ಫಲ ಜ್ಯೋತಿಷ್ಯವೂ ಸರಿಯಾಗಿ ಇರುತ್ತದೆ. ಜ್ಞಾನ ಇಲ್ಲದ ಯಾರೋ ಒಬ್ಬ ಜ್ಯೋತಿಷಿಯನ್ನು ನೋಡಿ, ಜ್ಯೋತಿಷ್ಯದ ತಾಕತ್ತು ಹೇಗೆ ನಿರ್ಧಾರ ಮಾಡುತ್ತೀರಿ?
ಸರಿಯಾಗಿ ಸುದ್ದಿ ಬರೆಯಲು ಬಾರದು ಪತ್ರಕರ್ತನೊಬ್ಬನನ್ನು ನೋಡಿ, ಪತ್ರಕರ್ತರಿಗೆ ನೆಟ್ಟಗೆ ಬರೆಯುವುದಿಕ್ಕೆ ಬರಲ್ಲ ಅಂದರೆ ಹೇಗೆ ಹೇಳಿ?
ಪ್ರಶ್ನೆ: ಹಾಗಿದ್ದರೆ ನಾನು ಏಕೆ ಬಂದೆ ಅಂತ ಕೂಡ ತಿಳಿಸದೆ ಜ್ಯೋತಿಷ್ಯ ಹೇಳಲು ಸಾಧ್ಯವಾ?
ಜಯರಾಮಾಚಾರ್ಯ: ಖಂಡಿತಾ ಹೇಳಬಹುದು. ಅಲ್ಲ ಹೇಳಬೇಕು. ನನ್ನ ಹತ್ತಿರ ಭವಿಷ್ಯ ಕೇಳಲು ಬರುವವರ ಬಳಿ ಏತಕ್ಕಾಗಿ ಬಂದರು ಅಂತ ಪ್ರಶ್ನೆ ಮಾಡುವುದಿಲ್ಲ್. ಅವರ ಸಮಸ್ಯೆ ಹಾಗೂ ಪರಿಹಾರ ಎರಡೂ ಹೇಳುತ್ತೇನೆ. ಆದರೆ ವೈದ್ಯರ ಬಳಿ ಹೋದಾಗ ನಡೆಯುವಾಗ ಹೆಬ್ಬೆರಳು ನೋವಾಗುತ್ತದಾ ಎಂಬ ಪ್ರಶ್ನೆ ಕೇಳುತ್ತಾರಲ್ಲಾ, ಅಂಥ ಕೆಲವೇ ಕೆಲ ಪ್ರಶ್ನೆಗಳನ್ನು ಆರಂಭದಲ್ಲಿ ಕೇಳುತ್ತೇನೆ ಅಷ್ಟೇ.
ಪ್ರಶ್ನೆ: ಹಾಗಿದ್ದರೆ ಈ ಸಲ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾರು ಗೆಲ್ತಾರೆ ಹೇಳಿ?
ಜಯರಾಮಾಚಾರ್ಯ: ಯಾವ ಪಕ್ಷಕ್ಕೆ ಯಾರು ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ಗಮನಿಸಿ ಜ್ಯೋತಿಷ್ಯದ ಪ್ರಕಾರ ಸ್ಥೂಲವಾದ ಚಿತ್ರಣ ಕೊಡಬಹುದು. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಜಾತಕ ನೋಡಿ, ಆ ಪಕ್ಷದ ಭವಿಷ್ಯ ಹೇಳಿ ಅನ್ನೋದು ವಿವೇಕಯುತ ಪ್ರಶ್ನೆಯೇ ಅಲ್ಲ. ಏಕೆಂದರೆ ಇನ್ನೂರಾ ಇಪ್ಪತ್ನಾಲ್ಕು ಮಂದಿಯ ಹಾಗೆ ಮೂರ್ನಾಲ್ಕು ಪಕ್ಷದಿಂದ ಕಣದಲ್ಲಿರುತ್ತಾರೆ. ಎಲ್ಲರ ಪ್ರಭಾವವೂ ಲೆಕ್ಕ ಹಾಕಬೇಕು.
ಹಾಗಂತ ಏನೂ ಹೇಳುವುದಕ್ಕೆ ಸಾಧ್ಯವೇ ಇಲ್ಲವಾ ಅಂದರೆ ಅದೂ ಅಲ್ಲ. ಮುಂಚೂಣಿಯಲ್ಲಿರುವ ವ್ಯಕ್ತಿಗಳ ಜಾತಕದ ಪ್ರಭಾವ ಮಹತ್ತರವಾಗಿ ಇದ್ದೇ ಇರುತ್ತದೆ. ಆದರೆ ಪೂರ್ಣ ಪ್ರಮಾಣದಲ್ಲಿ ಅಲ್ಲ.