ಹಣ ಉಳಿಯದಿರಲು ಕಾರಣ ಏನು? ಪರಿಹಾರ ಕಾಣೋದು ಹೇಗೆ?
"ಎಷ್ಟು ದುಡಿದರೂ ಹಣ ಕೈ ಹತ್ತುತ್ತಿಲ್ಲ. ಮನೆಯಲ್ಲಿ ಒಂದಲ್ಲ ಒಂದು ಖರ್ಚು. ಜತೆಯಲ್ಲೇ ಕೆಲಸ ಮಾಡುವವರು ಅಥವಾ ವ್ಯಾಪಾರ ಮಾಡುವವರು ನನಗಿಂತ ಹಣಕಾಸು ವಿಚಾರದಲ್ಲಿ ನೆಮ್ಮದಿಯಾಗಿದ್ದಾರೆ" ಅನ್ನೋದು ಬಹಳ ಜನರ ಅಹವಾಲು. ಅದಕ್ಕೆ ಕಾರಣ ಏನು ಗೊತ್ತಾ? ಈ ಸಮಸ್ಯೆಯಿಂದ ಹೊರಬರುವುದಕ್ಕೆ ಏನು ಮಾಡಬೇಕು ಎಂದು ಆಲೋಚನೆ ಮಾಡಿದ್ದೀರಾ?
Recommended Video
ಈ ದಿನದ ಲೇಖನದಲ್ಲಿ ಸಮಸ್ಯೆಗೆ ಪರಿಹಾರವನ್ನು ಸೂಚಿಸಲಾಗುವುದು. ಇನ್ನು ಇದನ್ನು ಪಾಲಿಸುವುದು, ಬಿಡುವುದು ಆಯಾ ವ್ಯಕ್ತಿಯ ನಂಬಿಕೆಗೆ ಬಿಟ್ಟಂಥ ವಿಚಾರ. ಆದರೆ ನಂಬಿಕೆ ಏನು ಹೇಳುತ್ತದೆ ಎಂಬುದನ್ನು ವಿವರಿಸಬೇಕಾದದ್ದು ನನ್ನ ಧರ್ಮ. ಆದ್ದರಿಂದ ಈ ಲೇಖನವನ್ನು ನೀವು ಓದುತ್ತಿದ್ದೀರಿ.
Astrology: ಸಾಲ- ಋಣ ಬಾಧೆಗೆ ಎಷ್ಟೆಲ್ಲ ಕಾರಣ? ನಿಮಗೂ ಹೀಗಾಗುತ್ತಿದೆಯಾ?
ಭಾರತೀಯರ ನಂಬಿಕೆ ಪ್ರಕಾರ ಸಂಪತ್ತಿನ ದೇವತೆ ಲಕ್ಷ್ಮೀ. ಆ ತಾಯಿಯ ಅನುಗ್ರಹ ಇಲ್ಲದೆ ಹಣ ನಿಲ್ಲುವುದು ಅಸಾಧ್ಯ. ಆದ್ದರಿಂದ ಲಕ್ಷೀ ದೇವಿಯ ಆರಾಧನೆ ಮಾಡುವುದು ಹಾಗೂ ಆ ದೇವಿಯ ಸಾನ್ನಿಧ್ಯ ಮನೆಯಲ್ಲಿ ಹಾಗೂ ಉದ್ಯೋಗ- ವ್ಯಾಪಾರ ಸ್ಥಳದಲ್ಲಿ ಇರುವಂತೆ ಮಾಡುವುದು ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ಆಧಾರ ಪಟ್ಟಿದೆ.
ಹೆಣ್ಣುಮಕ್ಕಳನ್ನು ಅವಮಾನಿಸಬೇಡಿ
ಮೊದಲನೆಯ ವಿಷಯ ಮೊದಲಿಗೆ. ಯಾವುದೇ ಹೆಣ್ಣುಮಕ್ಕಳನ್ನು ಅವಮಾನಿಸಬಾರದು. ಮನೆಯಲ್ಲಾಗಲೀ ಉದ್ಯೋಗ ಸ್ಥಳ, ವ್ಯಾಪಾರ ಸ್ಥಳದಲ್ಲಾಗಲೀ ಹೆಣ್ಣುಮಕ್ಕಳು ನೊಂದುಕೊಳ್ಳಬಾರದು. ಒಟ್ಟಾರೆಯಾಗಿ ಎಲ್ಲಿ ಹೆಣ್ಣುಮಕ್ಕಳನ್ನು ಗೌರವಿಸುವುದಿಲ್ಲವೋ ಅಂಥ ಸ್ಥಳದಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಕೆಲವರಿಗೆ ಹೆಣ್ಣುಮಕ್ಕಳು ಅಂದರೆ ತಾತ್ಸಾರ ಮನೋಭಾವ ಬೆಳೆದಿರುತ್ತದೆ. ಹೆಣ್ಣುಮಕ್ಕಳ ಮೇಲೆ ಸಣ್ಣ-ಪುಟ್ಟ ವಿಚಾರಕ್ಕೂ ರೇಗುತ್ತಾರೆ, ಕೈ ಮಾಡುತ್ತಾರೆ. ಇಂಥ ವಾತಾವರಣ ಇರುವ ಕಡೆಯಂತೂ ಲಕ್ಷ್ಮೀ ದೇವಿ ಖಂಡಿತಾ ಅನುಗ್ರಹವನ್ನು ತೋರಿಸುವುದಿಲ್ಲ. ಎಷ್ಟೋ ವಂಶಪಾರಂಪರ್ಯ ಶ್ರೀಮಂತಿಕೆ ಇರುವವರೇ ಹೆಣ್ಣುಮಕ್ಕಳನ್ನು ಅವಮಾನಿಸಿ, ಎಲ್ಲ ಸಂಪತ್ತನ್ನೂ ಕಳೆದುಕೊಂಡಿದ್ದಾರೆ. ನೆನಪಿರಲಿ ಮನೆಗೆ ಬಂದ ಮಗಳು, ಸೊಸೆ ಅಥವಾ ಸಂಬಂಧಿ ಹೆಣ್ಣುಮಕ್ಕಳನ್ನು ಶುಕ್ರವಾರದಂದು ಕಳಿಸಿಕೊಡುವ ಸಂಪ್ರದಾಯ ಇಲ್ಲ. "ಇನ್ನೊಂದು ದಿನ ಇದ್ದು, ಹೋಗಮ್ಮ" ಎನ್ನುವುದು ವಾಡಿಕೆ. ಹೆಣ್ಣುಮಕ್ಕಳು ಲಕ್ಷ್ಮೀ ಸಮಾನ ಎನ್ನುವುದೇ ಅದಕ್ಕೆ ಕಾರಣ.
ಇವುಗಳನ್ನು ಮನೆಯಿಂದ ಹೊರಗೆ ನೀಡಬೇಡಿ
ಸಂಜೆ ಆರಂಭವಾಗುತ್ತಿದ್ದಂತೆ ಹಾಗೂ ನಂತರ ಅರಿಶಿನ- ಕುಂಕುಮ, ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಕನ್ನಡಿ, ಸಕ್ಕರೆ, ಹಣ ಇಂಥದ್ದನ್ನು ಮನೆಯಿಂದ ಬೇರೆಯವರಿಗೆ ಕೊಡುವುದನ್ನು ನಿಲ್ಲಿಸಬೇಕು. ಈ ವಿಚಾರದಲ್ಲಿ ಅನಿವಾರ್ಯ ಪಕ್ಷದಲ್ಲಿಯಾದರೆ ವಿನಾಯಿತಿ ಇದೆ. ಆದರೆ ಪದೇಪದೇ ಹೀಗೆ ಮಾಡುವುದು ಒಳ್ಳೆಯದಲ್ಲ. ಅದರಲ್ಲೂ ಶುಕ್ರವಾರ ಹಾಗೂ ಮಂಗಳವಾರ- ಅಮಾವಾಸ್ಯೆಯಂದು ಇಂಥ ವಸ್ತುಗಳನ್ನು, ಅದರಲ್ಲೂ ಸಂಜೆ ವೇಳೆ ಹಾಗೂ ನಂತರ ಇನ್ನೊಬ್ಬರಿಗೆ ನೀಡುವುದು ಅಷ್ಟು ಶುಭವಲ್ಲ. ಈ ವಿಚಾರದಲ್ಲಿ ಆಯಾ ಪ್ರಾದೇಶಿಕ ಭಾಗದಲ್ಲಿ ಒಂದೊಂದು ಬಗೆಯ ನಂಬಿಕೆ ಕೂಡ ಉಂಟು. ಆ ಭಾಗದಲ್ಲಿ ಪಾಲಿಸಿಕೊಂಡು ಬಂದಿರುವ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಕೆಲವು ಕಡೆಯಂತೂ ಸಂಜೆ ನಂತರ ಮನೆಯಲ್ಲಿ ಗುಡಿಸಿದ ಮೇಲೆ, ಕಸವನ್ನು ಒಂದು ಕಡೆ ಇಟ್ಟು, ಮಾರನೇ ದಿನ ಹೊರಗೆ ಹಾಕುತ್ತಾರೆ. ಮೊದಲೇ ಹೇಳಿದ ಹಾಗೆ ಇದು ಆಯಾ ವ್ಯಕ್ತಿಗಳ ನಂಬಿಕೆಗೆ ಸಂಬಂಧಿಸಿದ್ದು.
ಜ್ಯೋತಿಷ್ಯ: ಈ 6 ರಾಶಿಯವರಿಗೆ ಅದೃಷ್ಟವೋ ಅದೃಷ್ಟ
ಮಂಗಳವಾರ- ಅಮಾವಾಸ್ಯೆ ಬಂದ ದಿನ ಪೂಜೆ
ಮಂಗಳವಾರ- ಅಮಾವಾಸ್ಯೆ ಬಂದ ದಿನ ಲಕ್ಷ್ಮೀ ದೇವಿಯ ಆರಾಧನೆ ಮಾಡಿ. ಅದಕ್ಕಾಗಿ ದೊಡ್ಡ ಮಟ್ಟದ ಖರ್ಚು ಮತ್ತೊಂದು ಏನೂ ಇಲ್ಲ. ಆಕೆಗೆ ಪ್ರಿಯವಾದ ಕಮಲದ ಹೂವನ್ನು ಅರ್ಪಿಸಿ. ಸಕ್ಕರೆಯನ್ನು ನೈವೇದ್ಯ ಮಾಡಿ. ಅಥವಾ ಯಾವುದೇ ಸಿಹಿ ಪದಾರ್ಥವನ್ನು ಆ ದೇವಿಗೆ ನೈವೇದ್ಯ ಅರ್ಪಿಸಬಹುದು. ಐದು ಜನ ಮುತ್ತೈದೆಯರಿಗೆ ಅರಿಶಿನ- ಕುಂಕುಮ, ಪಾನಕ ಹಾಗೂ ಕೋಸಂಬರಿಯನ್ನು ನೀಡಿ. ಅವರಿಂದ ಆಶೀರ್ವಾದ ಪಡೆಯಿರಿ. ಒಂದು ವೇಳೆ ಅನುಕೂಲ ಇದ್ದಲ್ಲಿ ಕುಪ್ಪುಸದ ಕಣ, ಸೀರೆ ನೀಡಬಹುದು. ಆದರೆ ನೆನಪಿಡಿ, ಇದು ಕಡ್ಡಾಯ ಏನಲ್ಲ. ಇಡೀ ಪ್ರಕ್ರಿಯೆಯಲ್ಲಿ ನಿಮ್ಮ ಶ್ರದ್ಧೆ ಬಹಳ ಮುಖ್ಯ. ಜತೆಗೆ ನಂಬಿಕೆ- ಆಸಕ್ತಿಯಿಂದ ಆ ಕಾರ್ಯವನ್ನು ಮಾಡಬೇಕು. ಈ ಪೂಜೆ ವಿಚಾರವಾಗಿ ಮಾರ್ಗದರ್ಶನ ಬೇಕಾದಲ್ಲಿ ಯಾರು ನಿಮ್ಮ ಮನೆಯ ಪುರೋಹಿತರು ಇರುತ್ತಾರೋ ಅಂಥವರಿಂದ ಸಲಹೆ ಪಡೆದುಕೊಳ್ಳಬಹುದು. ಹ್ಞಾಂ, ಇಲ್ಲಿ ಇನ್ನೊಂದು ಮಾತು. ಆ ನಾರಾಯಣನ ಸ್ಮರಣೆ ಇಲ್ಲದೆ ಲಕ್ಷ್ಮಿಯ ಆರಾಧನೆ ಅಪೂರ್ಣ ಎನಿಸುತ್ತದೆ.
ಚಿನ್ನದ ಆಭರಣ ಧರಿಸುವವರ ಗಮನಕ್ಕೆ ಇರಲಿ
ಇನ್ನು ಮನೆಯಲ್ಲಿ ಲಕ್ಷ್ಮೀ ದೇವಿಯದೂ ಸೇರಿದಂತೆ ಯಾವುದೇ ದೇವತೆಗಳ ಫೋಟೋ, ವಿಗ್ರಹ ಭಗ್ನ ಆಗಿದ್ದಲ್ಲಿ ಅವನ್ನು ಇಟ್ಟುಕೊಳ್ಳಬಾರದು. ಒಡೆದ ಕನ್ನಡಿ ಕೂಡ ಮನೆಯಲ್ಲಿ ಇಡಬಾರದು. ಅಂಥದ್ದು ಮನೆಯಲ್ಲಿ ಇದ್ದರೆ ನಾನಾ ಬಗೆಯ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೀಳ್ಯದೆಲೆ ಒಣಗಬಾರದು. ಒಂದೋ ಅದನ್ನು ಬಳಸುವವರಿಗೆ ನೀಡಿ ಅಥವಾ ಒಣಗುವ ಮುನ್ನ ನೀವೇ ಬಳಸಿ. ಅಡಿಕೆ, ನಾಣ್ಯ, ಬೆಳ್ಳಿ- ಚಿನ್ನದ ವಸ್ತುಗಳನ್ನು ಕಾಲಿನಿಂದ ತುಳಿಯಬಾರದು. ಇಲ್ಲಿ ಇನ್ನೊಂದು ವಿಚಾರ ನೆನಪಿನಲ್ಲಿಡಿ, ಕೆಲವರು ಕಾಲಿಗೆ ಬಂಗಾರದ ಚೈನ್ ಹಾಕಿಕೊಳ್ಳಬಹುದಾ ಎಂದು ಕೇಳುತ್ತಾರೆ. ಅದು ಸುತರಾಂ ಬೇಡ. ಚಿನ್ನದ ಯಾವುದೇ ಆಭರಣ ಇದ್ದರೂ ಅದು ಸೊಂಟದಿಂದ ಮೇಲ್ಮಟ್ಟದಲ್ಲಿ ಮಾತ್ರ ಧರಿಸಬೇಕು. ಇವೆಲ್ಲ ಸಲಹೆಯನ್ನು ನೀವು ಪಾಲಿಸಲಿ ಎಂಬ ಕಾರಣಕ್ಕೆ ಹೇಳಿದ್ದೇನೆ. ಆದರೆ ನನ್ನ ಅನುಭವದ ಮಾತೊಂದನ್ನು ದಾಖಲಿಸಬೇಕು: ಹಣ ಇರುವಾಗ ಅದರ ಬಗ್ಗೆ ತಾತ್ಸಾರ, ಉದಾಸೀನ ಸಲ್ಲದು. ಹೇಗೆಂದರೆ ಹಾಗೆ ಖರ್ಚು ಮಾಡಬೇಡಿ. ದಾನ- ಧರ್ಮಕ್ಕೆ ಎಂದು ಸ್ವಲ್ಪ ಭಾಗ ಮೀಸಲಿಡಿ.
ನಿಮ್ಮ ಆರ್ಥಿಕ ಸಂಕಷ್ಟಗಳೆಲ್ಲ ಕರಗಿಹೋಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.