ಸಾಡೇಸಾತಿ ಹಿಡಿದಿರುವವರಿಗೆ ಶನಿ ಏನು ಮಾಡ್ತಾನೆ?
ಸಾಡೇಸಾತಿಯಲ್ಲಿ ಶನಿಯು ಅನಾರೋಗ್ಯಕ್ಕೀಡು ಮಾಡಿ ಆಸ್ಪತ್ರೆಯ ದಾರಿ ತೋರಿಸುತ್ತಾನೆ. ಸುಖಾಸುಮ್ಮನೇ ಹೊಟ್ಟೆನೋವು, ಕಾಲಿನ ನೋವು, ಮತ್ತು ಕಣ್ಣಿನ ಬೇನೆ ಬಂದಿರುತ್ತದೆ. ಅಲ್ಲದೇ ಯಾವುದೂ ಏನೂ ತಪ್ಪು ಮಾಡದೇ ಸುಮ್ ಸುಮ್ನೆ ಅಪವಾದ ಬರುತ್ತವೆ. ಇನ್ನು ಕೆಲವರಿಗಂತೂ ಕೃಷ್ಣನ ಜನ್ಮಸ್ಥಾನದಲ್ಲಿ ಕಾಲ ಕಳೆಯಬೇಕಾಗುತ್ತದೆ.
ಇನ್ನು ಉದ್ಯೋಗಿಗಳಿಗೆ ಕೆಲಸ ಹೋಗಬಹುದು, ಹಠಾತ್ತನೇ ವರ್ಗಾವಣೆ ಅಥವಾ ಬೇರೆ ಕೆಲಸಕ್ಕೆ ಹೋಗಬಹುದು. ಅಥವಾ ಇದ್ದ ಉದ್ಯೋಗದಲ್ಲಿ ಎಷ್ಟೇ ಕೆಲಸ ಮಾಡಿದರೂ ಏನೂ ಫಲ ಸಿಗುವುದಿಲ್ಲ. ಹೊಸ ಕೆಲಸ ಹುಡುಕುತ್ತ ಹೋದರೆ ಹೊಸ ಕೆಲಸ ಸಿಗದೇ, ಕೈಯಲ್ಲಿ ಹಣವೂ ಇಲ್ಲದಂತಾಗಿ ಚಿಂತೆಗೀಡಾಗುವಂತೆ ಮಾಡುತ್ತಾನೆ ಶನಿ ಮಹಾರಾಜ!
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಅನಾಸಕ್ತಿ ಮೂಡಿಸಿ ವಿದ್ಯೆಯನ್ನು ತಲೆಗೆ ಹತ್ತಲು ಬಿಡದೇ ಕಾಡುತ್ತಾನೆ. ರಾತ್ರಿಯ ಸಮಯದಲ್ಲಿ ನಿದ್ದೆ ಬಾರದೆ, ಹಗಲಿನಲ್ಲಿ ಉತ್ಸಾಹವಿಲ್ಲದೆ ಯಾವಾಗಲೂ ಸಾಡೇಸಾತಿ ಪ್ರಭಾವಿತರು ಮಂದವಾಗಿಯೇ ಇರುತ್ತಾರೆ. ವಿದ್ಯೆಗಿಂತ ಬುದ್ದಿ ಮೇಲು ಎಂಬ ಮಾತಿನಂತೆ ನಾವೆಷ್ಟೇ ವಿದ್ಯಾವಂತರಾಗಿದ್ದರೂ ಬುದ್ಧಿವಂತಿಕೆಯಿಂದ ಶನಿ ಕಾಟವಿದು ಎಂದು ಅರಿತಲ್ಲಿ ಒಳಿತು. ಇಲ್ಲವಾದಲ್ಲಿ ಕಲಿತ ವಿದ್ಯೆಯು ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಎಂಬುದು ನೆನಪಿರಲಿ.
ಕಳೆದ ವರ್ಷದ ನವೆಂಬರ್ ಗೆ ತುಲಾ ರಾಶಿ ಪ್ರವೇಶಿಸಿರುವ ಶನಿಯು ಕೇವಲ ಕೆಲವೇ ಡಿಗ್ರಿಗಳಷ್ಟು ತಿರುಗಿದ್ದಾನೆ. ಇನ್ನೆರಡು ವರ್ಷದಲ್ಲಿ 30 ಡಿಗ್ರಿಗಳಷ್ಟು ತಿರುಗಬೇಕು. ಈಗಲೇ ಸಾಡೇಸಾತಿ ನಡೆಯುತ್ತಿರುವ ರಾಶಿಗಳವರಿಗೆ ಇಷ್ಟು ಕಷ್ಟ ಕೊಡಲಾರಂಭಿಸಿದ್ದಾನೆ. ಇನ್ನು ಮುಂದೆ ಎಷ್ಟು ಕಷ್ಟ ಕೊಡಬಹುದು ಎಂಬುದನ್ನು ಯೋಚಿಸಿದರೆ ಅವನ ಪ್ರಭಾವ ಮನವರಿಕೆಯಾಗುತ್ತದೆ. ಈ ಸಾಡೇಸಾತಿ ಸಮಯದಲ್ಲಿ ತಾಳ್ಮೆಯಿಂದ ಇರಲು ಮೊದಲು ಕಲಿಯಬೇಕು. ಯಾಕೆಂದರೆ ಜೀವನದ ಎಲ್ಲ ಪಾಠವನ್ನು ಕಲಿಸಲು ಶನಿಯು ಸಾಡೇಸಾತಿಯಾಗಿ ಬಂದಿರುತ್ತಾನೆ ಎಂಬುದು ಮೊದಲು ತಿಳಿದುಕೊಳ್ಳಬೇಕು.
ಶನಿ ಮಹಾರಾಜನು ಸದ್ಯ ಕರ್ಕ ರಾಶಿಯವರಿಗೆ ಅರ್ಧಾಷ್ಟಮ ಶನಿಯಾಗಿ ಕೊಂಚ ಕಿರುಕುಳ ನೀಡುತ್ತಿದ್ದಾನೆ. ಶನಿಯ ಪ್ರಭಾವದಿಂದ ಪಾರಾಗಲಂತೂ ಸಾಧ್ಯವಿಲ್ಲ. ಆದರೆ ಅವನ ಪ್ರಭಾವವನ್ನು ತಡೆದುಕೊಳ್ಳುವ ಶಕ್ತಿಯನ್ನು ಪಡೆಯುವ ಬಗೆ ಹೇಗೆ ಎಂಬುದನ್ನು ಮುಂದಿನ ಲೇಖನದಲ್ಲಿ ವಿವರಿಸಲಾಗುವುದು. ದಯವಿಟ್ಟು ಸಾಡೇಸಾತಿ ನಡೆಯುತ್ತಿರುವ ರಾಶಿಗಳವರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡು ತಮ್ಮ ನೋವನ್ನು ಕೊಂಚ ಕಮ್ಮಿ ಮಾಡಿಕೊಳ್ಳಬಹುದು.
ಶನಿ ಕೃಪೆಗೆ : ಸಾಡೇಸಾತಿಯಲ್ಲಿ ನಡೆಯುತ್ತಿರುವವರು ಎಷ್ಟೇ ಕಷ್ಟ ಬಂದರೂ ಸತ್ಯ, ನ್ಯಾಯ, ನೀತಿ, ಧರ್ಮದಿಂದ ನಡೆದುಕೊಳ್ಳಲೇಬೇಕು.
ವಾಸ್ತು ಟಿಪ್ಸ್ : ಮನೆಯ ಈಶಾನ್ಯ ದಿಕ್ಕನ್ನು ಯಾವಾಗಲೂ ಖಾಲಿ ಬಿಡಬೇಕು. ಯಾವುದೇ ಭಾರದ ವಸ್ತು, ಮತ್ತಿತರ ಅನವಶ್ಯಕ ವಸ್ತುಗಳನ್ನು ಇಡಲೇಬೇಡಿ. ಈಶಾನ್ಯ ದಿಕ್ಕು ದೇವರಿರುವ ಸ್ಥಳ. ಅವನಿಗೆ ನಿಮ್ಮನೆಯಲ್ಲಿ ಜಾಗ ಕೊಡದಿದ್ದರೆ ಅವನೇನು ನಿಮಗೆ ಕೊಡಬಲ್ಲನು? [ಲೇಖಕರ ಮೊಬೈಲ್ : 9481522011]