ಗುರು-ಶನಿ ಗ್ರಹದ ಪ್ರಭಾವದಲ್ಲಿ ಧನು ರಾಶಿಯವರ ಸ್ಥಿತಿ ಏನಾಗಬಹುದು?
Recommended Video
ಧನು ರಾಶಿಯವರಿಗೆ ಹೇಗಿದ್ದೀರಿ ಅಂತ ಕುಶಲ ವಿಚಾರಿಸುತ್ತಲೇ ಈ ಲೇಖನ ಆರಂಭಿಸಬೇಕಿದೆ. ಏಕೆಂದರೆ ಕಳೆದ ಅಕ್ಟೋಬರ್ ಹನ್ನೊಂದನೇ ತಾರೀಕು ಗುರು ಗ್ರಹ ವೃಶ್ಚಿಕ ರಾಶಿಯನ್ನು ಪ್ರವೇಶಿಸಿದೆ. ಅಂದರೆ ನಿಮ್ಮ ರಾಶಿಯಿಂದ ಹನ್ನೆರಡನೇ ಸ್ಥಾನ. ಇನ್ನು ಜನ್ಮ ರಾಶಿಯಲ್ಲೇ ಶನಿ ಗ್ರಹ ಇದೆ. ಸಾಡೇ ಸಾತ್ ಶನಿಯ ಪ್ರಭಾವದಲ್ಲಿ ನೀವಿದ್ದೀರಿ.
ಕಳೆದ ತಿಂಗಳ ತನಕ ನಿಮ್ಮ ರಾಶ್ಯಾಧಿಪತಿ ಗುರುವು ಹನ್ನೊಂದನೇ ಸ್ಥಾನದಲ್ಲಿದ್ದು, ಶನಿ ಗ್ರಹದ ದುಷ್ಪ್ರಭಾವಗಳ ರಕ್ಷಣೆಗೆ ಅಂತ ಇತ್ತು. ಆದರೆ ಈಗ ವ್ಯಯ ಸ್ಥಾನದಲ್ಲಿ ಬಂದಿರುವುದರಿಂದ ದುಷ್ಪ್ರಭಾವ ಇನ್ನಷ್ಟು ಗಾಢವಾಗಿ ಆಗುತ್ತದೆ. ಗಾಢವಾಗಿ ಅಂದರೆ, ಹೇಗೆ ಮತ್ತು ಯಾವ ರೀತಿಯ ಪ್ರಭಾವ ಆಗುತ್ತದೆ ಎಂಬುದರ ವಿವರಣೆ ಇನ್ನು ಮುಂದೆ ಓದುತ್ತೀರಿ.
ಮೇಷ ರಾಶಿಯವರಿಗೆ ಗುರು, ಶನಿಯಿಂದ ಆಗುವ ಪರಿಣಾಮಗಳಿವು
ಧನುಸ್ಸು ರಾಶಿಯವರಿಗೆ ಜನ್ಮ ಸ್ಥಾನ ಹಾಗೂ ನಾಲ್ಕನೇ ಮನೆಯ ಅಂದರೆ ಸುಖ ಸ್ಥಾನಾಧಿಪತಿ ಗುರು. ಇನ್ನು ಧನಾಧಿಪತಿ ಹಾಗೂ ತೃತೀಯ ಸ್ಥಾನಾಧಿಪತಿ ಶನಿ. ಈ ಎರಡೂ ಗ್ರಹಗಳು ನಿಮಗೆ ಈಗ ಅನುಕೂಲಕರವಾದ ಸ್ಥಾನಗಳಿಲ್ಲ ಇಲ್ಲ. ಸರಿ, ಉಳಿದ ಯಾವುದಾದರೂ ಗ್ರಹಗಳು ಮುಖ್ಯವಾಗಿ ಅನುಗ್ರಹ ಮಾಡಬಹುದಾ ಅಂದರೆ ಅದೂ ಕಾಣುತ್ತಿಲ್ಲ.
ಅನಿರೀಕ್ಷಿತ ಖರ್ಚುಗಳು ಎದುರಾಗುತ್ತವೆ
ಜನ್ಮ ಸ್ಥಾನಕ್ಕೆ ಶನಿ ಬಂದ ನಂತರ ನೀವು ಅನುಭವಿಸುತ್ತಿರುವ ಮಾನಸಿಕ ಕ್ಷೋಭೆಗೆ ಗುರು ಗ್ರಹವು ಇಷ್ಟು ಕಾಲ ಔಷಧದಂತೆ ಇತ್ತು. ಈಗ ಅನಿರೀಕ್ಷಿತವಾದ ಖರ್ಚುಗಳು ಎದುರಾಗುತ್ತವೆ. ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈಗಾಗಲೇ ಆಪರೇಷನ್ ಮಾಡಿಸಿಕೊಂಡು ಚೇತರಿಕೆ ಆಗುತ್ತಿದ್ದರೂ ಔಷಧ ತೆಗೆದುಕೊಳ್ಳುವುದರಲ್ಲಿ ಏರುಪೇರಾಗಬಹುದು. ಮಾತ್ರೆ-ಔಷಧಿಗಳಿಂದ ಅಲರ್ಜಿ ಆಗಬಹುದು. ಮತ್ತೊಮ್ಮೆ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಸಂದರ್ಭ ಎದುರಾಗಬಹುದು. ಆದ್ದರಿಂದ ಔಷಧ ತೆಗೆದುಕೊಳ್ಳುವ ವಿಚಾರದಲ್ಲಿ ಹಾಗೂ ವೈದ್ಯರ ಸೂಚನೆ ಪಾಲನೆಯಲ್ಲಿ ಎಚ್ಚರವಾಗಿರಿ. ಸ್ವಯಂ ವೈದ್ಯವಂತೂ ಕಡ್ಡಾಯವಾಗಿ ಮಾಡಿಕೊಳ್ಳಬೇಡಿ. ಇತರರ ಸಲಹೆಯನ್ನು ತೆಗೆದುಕೊಳ್ಳುವಾಗ ಪೂರ್ವಾಪರ ಆಲೋಚನೆ ಮಾಡಿ, ಮುಂದುವರಿಯಿರಿ.
ಸಾಲ ಪಡೆಯಬೇಡಿ- ಸಾಲ ನೀಡಬೇಡಿ
ಈ ವರ್ಷವಂತೂ ಮುಖ್ಯವಾಗಿ ಯಾರಿಗೂ ಸಾಲ ನೀಡಬೇಡಿ ಹಾಗೂ ಪಡೆಯುವುದು ಕೂಡ ಬೇಡ. ಯಾವುದೇ ಕಾಗದ-ಪತ್ರಗಳಿಗೆ ಸಹಿ ಹಾಕುವ ಮುನ್ನ ಓದಿ, ಅರ್ಥ ಮಾಡಿಕೊಂಡು ಆ ನಂತರ ನಿರ್ಧರಿಸಿ. ಅಗತ್ಯ ಕಂಡುಬಂದಲ್ಲಿ ಕಾನೂನು ತಜ್ಞರ ಸಲಹೆಯನ್ನು ಕಡ್ಡಾಯವಾಗಿ ಪಡೆಯಿರಿ. ಅಧಿಕ ಬಡ್ಡಿ ಆಸೆಗೆ ಹಣ ನೀಡಿದರೆ ಹಾಗೂ ಪರಿಚಯ ಇಲ್ಲದ ಕಡೆಗೆ ಚೀಟಿ ಹಾಕಿದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಲ್ಲದ ಆಸೆಗೆ ಬಿದ್ದು, ತೊಂದರೆಗೆ ಸಿಲುಕದಿರಿ. ಇನ್ನು ಹೆಣ್ಣುಮಕ್ಕಳು ನಿಮ್ಮ ಒಡವೆ, ವಸ್ತುಗಳನ್ನು ಗೆಳತಿಯರಿಗೆ ದಿನದ ಮಟ್ಟಿಗೆ ಕೊಟ್ಟೆ, ಕಾರ್ಯಕ್ರಮದ ಸಲುವಾಗಿ ನೀಡಿದೆ ಅಂತ ಈ ಸಮಯದಲ್ಲಿ ನಡೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ.
ಕಾನೂನು ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಬೇಕು
ವಿದ್ಯಾರ್ಥಿಗಳು, ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರಯತ್ನಿಸುತ್ತಿರುವವರು, ಉದ್ಯೋಗ ಅವಕಾಶಕ್ಕಾಗಿ ಯತ್ನಿಸುತ್ತಿರುವವರು ಕಾನೂನಿಗೆ ಸಂಬಂಧಿಸಿದ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು. ವಂಚಕರ ಮಾತು ನಂಬಿ, ಹಣಕಾಸು ನೀಡಿದರೆ ಇನ್ನು ಎರಡು-ಮೂರು ವರ್ಷ ಬಹಳ ಕಷ್ಟಕ್ಕೆ ಸಿಲುಕುತ್ತೀರಿ. ಮನೆಯ ಹಿರಿಯರೊಬ್ಬರ ಆರೋಗ್ಯ ಕೈಕೊಟ್ಟು, ಅವರ ಸಲುವಾಗಿ ಖರ್ಚು ಮಾಡುವುದು ಹೆಚ್ಚಾಗುತ್ತದೆ. ಪಿತೃ ಕಾರ್ಯಗಳು ನಿಂತು ಹೋಗಿದ್ದರೆ (ಶ್ರಾದ್ಧ, ಪುಣ್ಯ ಕಾಲಗಳಲ್ಲಿ ತರ್ಪಣ) ಇದರ ಪ್ರಭಾವ ಮತ್ತೂ ಹೆಚ್ಚಾಗುತ್ತದೆ. ಯಾರದೋ ಮಾತು ಕೇಳಿ ಸಂಗಾತಿಯನ್ನು ಅನುಮಾನಿಸುವುದು ತರವಲ್ಲ. ನಿಶ್ಚಿತಾರ್ಥ-ಮದುವೆಗಳನ್ನು ಮುರಿದುಕೊಳ್ಳುವ ಸಾಧ್ಯತೆ ಇರುತ್ತದೆ. ಆ ಬಗ್ಗೆ ಕೂಡ ಎಚ್ಚರದಿಂದ ಇರಬೇಕು.
ಗ್ರಹ ಶಾಂತಿ ಪರಿಹಾರ ಏನು?
ಗುರು-ಶನಿ ಪ್ರಮುಖ ಗ್ರಹಗಳಾಗಿದ್ದು, ಆ ಎರಡೂ ಗ್ರಹಗಳು ಉತ್ತಮ ಸ್ಥಿತಿಯಲ್ಲಿ ಇಲ್ಲದ ಕಾರಣ ಈ ಮೇಲ್ಕಂಡ ಫಲಗಳು ಘಟಿಸಬಹುದು. ಆದರೆ ಈ ಸಂದರ್ಭದಲ್ಲಿ ಗುರು-ಹಿರಿಯರಿಗೆ ಗೌರವದಿಂದ ನಡೆದುಕೊಳ್ಳುವುದು ಮುಖ್ಯ. ಅವರಿಗೆ ಅಗೌರವ ತೋರುವಂಥ ಕೆಲಸ ಮಾಡಬೇಡಿ. ಇನ್ನೂ ಶನಿ ಶಾಂತಿ ಮಾಡಿಸಿಕೊಂಡಿಲ್ಲ ಅನ್ನೋದಾದರೆ, ಜಪ ಮಾಡಿಸಿ, ತರ್ಪಣ ಸಹಿತ ಶನಿ ಶಾಂತಿ ಹವನ ಮಾಡಿಸಿ. ಗುರು ಗ್ರಹದ ಅನುಗ್ರಹಕ್ಕಾಗಿ ನೀವು ನಡೆದುಕೊಳ್ಳುವ ಗುರು ಸಾನ್ನಿಧ್ಯದಲ್ಲಿ ವಸ್ತ್ರ ಸಮರ್ಪಣೆ ಮಾಡಿ. ಮನೆಗೆ ಗುರುಗಳನ್ನು ಕರೆಸಿ, ನಿಮ್ಮಿಂದ ಸಾಧ್ಯವಾದ ಸೇವೆ ಮಾಡಿ. ಶನಿ ಸಾಡೇ ಸಾತ್ ನಡೆಯುವಾಗ ಹಿಂದೆಂದಿಗಿಂತ ಹೆಚ್ಚು ಪ್ರಾಮಾಣಿಕವಾಗಿ ಇರಬೇಕು. ಜತೆಗೆ ದೇವತಾ ಆರಾಧನಾ ಮಾಡಬೇಕು.