ತುಲಾ ರಾಶಿಯವರಿಗೆ ಏನೆಲ್ಲ ಶುಭ ಫಲ ನೀಡಲಿದ್ದಾರೆ ಗುರು-ಶನಿ?
ಸಾಡೇಸಾಥ್ ಶನಿಯ ಪ್ರಭಾವದಿಂದ ಹೊರಬಂದು ಜೀವನದಲ್ಲಿ ಸಂತೋಷದ- ಸಮಾಧಾನದ ದಿನಗಳನ್ನು ನಿಧಾನಕ್ಕೆ ಕಾಣುತ್ತಿದ್ದಾರೆ ತುಲಾ ರಾಶಿಯವರು. ಅಕ್ಟೋಬರ್ ಹನ್ನೊಂದರಂದು ಅದೇ ತುಲಾ ರಾಶಿಯಿಂದ ವೃಶ್ಚಿಕಕ್ಕೆ ಪ್ರವೇಶ ಮಾಡಿರುವ ಗುರು ಗ್ರಹ ಏನೆಲ್ಲ ಫಲ ನೀಡಬಹುದು ಎಂದು ತಿಳಿಸಿಕೊಡುತ್ತದೆ ಇಂದಿನ ಲೇಖನ.
ಎರಡನೇ ಮನೆಯಲ್ಲಿ ಗುರು ಸಂಚಾರ ಮುಂದಿನ ವರ್ಷದ ನವೆಂಬರ್ ತನಕ ಇದ್ದರೆ, ಮೂರನೇ ಮನೆಯಲ್ಲಿ ಶನಿ ಸಂಚಾರವು 2020ನೇ ಇಸವಿಯ ಜನವರಿ ತನಕ ಇರುತ್ತದೆ. ಇದು ಬಹಳ ಒಳ್ಳೆ ಕಾಲ. ಅದರಲ್ಲೂ ಹಣಕಾಸು ವಿಚಾರದಲ್ಲಿ ತುಂಬಾ ಒಳ್ಳೆ ಕಾಲ. ಏಳರಾಟ ಶನಿಯ ಕಾರಣಕ್ಕೆ ವಿವಿಧ ಸಂಕಷ್ಟಗಳನ್ನು ಅನುಭವಿಸಿದವರು ನೀವು.
ಯಾವ ಸಮಯದಲ್ಲಿ ಹುಟ್ಟಿದವರ ಗುಣ ಹೇಗೆ? ಯಾವ ಉದ್ಯೋಗ-ವೃತ್ತಿ ಸೂಕ್ತ?
ಅದರಲ್ಲೂ ಕೈಗೆ ಸಿಕ್ಕಿಬಿಟ್ಟಿತು ಎಂದುಕೊಳ್ಳುವ ಹೊತ್ತಿಗೆ ಕೈ ತಪ್ಪಿ ಹೋಗುತ್ತಿದ್ದವು ಅವಕಾಶಗಳು. ಗುರುತಿಸಲು ಸಾಧ್ಯವಿಲ್ಲದಂತಹ ವಿಚಿತ್ರ ಆರೋಗ್ಯ ಸಮಸ್ಯೆಗಳು ಎದುರಿಸಿದ್ದೀರಿ. ಇನ್ನು ವೈವಾಹಿಕ ಜೀವನದಲ್ಲೂ ನಾನಾ ಸವಾಲುಗಳನ್ನು ಎದುರಿಸಿ, ಆರೋಪಗಳನ್ನು ದಾಟಿ ಈಗ ಒಂದು ಹಂತದ ಸಮಾಧಾನಕರ ಸನ್ನಿವೇಶದ ಎದುರು ನಿಂತಿದ್ದೀರಿ.
ಬಾಕಿ ಹಣ ವಾಪಸಾಗಬಹುದು
ದ್ವಿತೀಯ ಸ್ಥಾನದಲ್ಲಿರುವ ಗುರುವಿನ ಕಾರಣಕ್ಕೆ ಎಂಥ ಸವಾಲಿನ ಸನ್ನಿವೇಶವನ್ನಾದರೂ ಎದುರಿಸುವ ಆತ್ಮಸ್ಥೈರ್ಯ ಬರುತ್ತದೆ. ಬಹಳ ಕಾಲದಿಂದ ಬಾರದೆ ಬಾಕಿ ಉಳಿದುಹೋಗಿದ್ದ ಮೊತ್ತವೊಂದು ಬರುವ ದಾರಿ ಗೋಚರ ಆಗುತ್ತದೆ. ಮಧ್ಯಸ್ಥಿಕೆ ವಹಿಸುವ ವ್ಯಕ್ತಿಯೊಬ್ಬರ ಮಾರ್ಗದರ್ಶನದಿಂದ ಆ ಮೊತ್ತ ಹಿಂತಿರುಗಬಹುದು ಎಂಬ ಆಶಾಭಾವ ಇರಿಸಿಕೊಳ್ಳಬಹುದು. ಆದರೆ ನಿಮ್ಮ ಪ್ರಯತ್ನ ಬಹಳ ಮುಖ್ಯ. ಈ ಸಂದರ್ಭದಲ್ಲಿ ನೀವು ಆಡುವ ಮಾತಿನ ಬಗ್ಗೆ ಗಮನ ಇರಲಿ. ಯಾರ ಬಗ್ಗೆಯೂ ಎಲ್ಲಿಯೂ ಲಘುವಾದ ಮಾತನಾಡಬೇಡಿ. ಮಕ್ಕಳ ವಿಚಾರದಲ್ಲಿ ಸಿಟ್ಟು ಮಾಡಿಕೊಳ್ಳಬೇಡಿ. ಅವರು ಹೇಳಬೇಕು ಅಂದುಕೊಂಡಿರುವ ವಿಷಯವನ್ನು ಸರಿಯಾಗಿ ಕೇಳಿಸಿಕೊಂಡು, ಆ ನಂತರ ನಿರ್ಧಾರ ಕೈಗೊಳ್ಳಿ. ದೊಡ್ಡ ಮೊತ್ತದ ಲಾಭಕ್ಕೆ ಅವಕಾಶ ಸಿಗುತ್ತದೆ. ಅಂಥ ಸನ್ನಿವೇಶದಲ್ಲಿ ಎಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎಂಬ ಬಗ್ಗೆ ಪೂರ್ವಾಪರ ಯೋಚಿಸಿ, ನಿರ್ಧರಿಸಿ. ಯಾವುದೇ ಕಾರಣಕ್ಕೂ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ.
ಆದಾಯ ಹೆಚ್ಚಿಸಿಕೊಳ್ಳಲು ಹೊಸ ಅವಕಾಶಗಳು
ಆದಾಯ ಹೆಚ್ಚಿಸಿಕೊಳ್ಳಲು ಹೊಸ ಅವಕಾಶಗಳು ಸಿಗುತ್ತವೆ. ಈ ಹಿಂದೆ ಬೆಳೆಸಿಕೊಂಡ ವರ್ಚಸ್ಸು ಈಗ ಪ್ರಯೋಜನಕ್ಕೆ ಬರುತ್ತದೆ. ಹೊಸದಾಗಿ ವ್ಯಾಪಾರ ಶುರು ಮಾಡಲು ಯೋಚನೆ ಮಾಡುತ್ತಿದ್ದರೆ ಒಮ್ಮೆ ಜಾತಕವನ್ನು ಜ್ಯೋತಿಷಿಗಳಲ್ಲಿ ತೋರಿಸಿ, ಆ ನಂತರ ಮುಂದುವರಿಯಬಹುದು. ಸದ್ಯಕ್ಕೆ ನೀವು ಬದಲಾವಣೆಯ ಘಟ್ಟವೊಂದರಲ್ಲಿ ನಿಂತಿದ್ದೀರಿ. ಸಾಕಷ್ಟು ಅವಕಾಶಗಳು ಸಿಗುತ್ತವೆ. ಆದರೆ ಆಯ್ಕೆ ವಿಷಯದಲ್ಲಿ ಎಡವಿದರೆ ಮುಂದೆ ಸಮಸ್ಯೆ ಆಗುತ್ತದೆ. ಉದ್ಯೋಗ ಬದಲಾವಣೆ ಹಾಗೂ ಬಡ್ತಿ-ವರ್ಗಾವಣೆಗೆ ಇದು ಸೂಕ್ತ ಸಮಯ. ಶಿಕ್ಷಣ ಕ್ಷೇತ್ರದಲ್ಲಿ ಇರುವವರು, ಪುರೋಹಿತರು, ಜ್ಯೋತಿಷಿಗಳು, ಚಾರ್ಟರ್ಡ್ ಅಕೌಂಟೆಂಟ್ ಗಳು, ಅಡುಗೆ ಕಾಂಟ್ರ್ಯಾಕ್ಟರ್ ಗಳಿಗೆ ಸಮಾಜದಲ್ಲಿ ಗೌರವ-ಸನ್ಮಾನ ಸಿಗುವ ಅವಕಾಶಗಳಿವೆ. ಯಾವುದೇ ಕಾರಣಕ್ಕೂ ಜೂಜಾಟ, ಸಟ್ಟಾ ವ್ಯವಹಾರಗಳ ತಂಟೆಗೆ ಹೋಗಬೇಡಿ. ಇದರಿಂದ ನಿಮ್ಮ ಹೆಸರು ಹಾಳಾಗುವ ಸಾಧ್ಯತೆ ಇರುತ್ತದೆ.
ಭೂಮಿ, ಆಸ್ತಿ ಲಾಭದಂಥ ಶುಭ ಫಲಗಳಿವೆ
ವಿದೇಶ ವ್ಯಾಸಂಗಕ್ಕೆ ಪ್ರಯತ್ನಿಸುತ್ತಿರುವವರು ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಯತ್ನಿಸುತ್ತಿದ್ದರೆ ಕಾರ್ಯ ಸಿದ್ಧಿ ಇದೆ. ವಿವಾಹಿತೆಯರಿಗೆ ತವರು ಮನೆಯಿಂದ ಆಸ್ತಿಯಲ್ಲಿ ಪಾಲು ಅಥವಾ ಹಣಕಾಸು ದೊರೆಯುತ್ತದೆ. ಸಂತಾನ ಅಪೇಕ್ಷಿತರಿದ್ದಲ್ಲಿ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿ ಮಾಡಿಕೊಂಡು, ಆ ನಂತರ ಪ್ರಯತ್ನಿಸಿ. ರಕ್ತದೊತ್ತಡದಂಥ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತೀರಿ. ತೀರ್ಥ ಕ್ಷೇತ್ರಗಳ ದರ್ಶನ ಮಾಡುವ ಯೋಗವಿದೆ. ಸಾಧ್ಯವಾದಷ್ಟು ರಾತ್ರಿ ಪ್ರಯಾಣ ಮಾಡಬೇಡಿ. ವಿದೇಶದಿಂದ ಉದ್ಯೋಗಾವಕಾಶಗಳು ಬಂದರೆ ಕಾನೂನು ನಿಯಮಗಳ ಬಗ್ಗೆ ತಿಳಿದುಕೊಂಡು, ಆ ನಂತರ ನಿರ್ಧಾರ ಕೈಗೊಳ್ಳಿ. ಭೂ ಲಾಭ, ಆಸ್ತಿ ಲಾಭದಂಥ ಶುಭ ಫಲಗಳು ಸಹ ಇವೆ. ಇಂತಹ ಸಂದರ್ಭದಲ್ಲಿ ಆಲಸಿಗಳಾಗಬಾರದು. ಯಾರನ್ನೂ ನಿರ್ಲಕ್ಷ್ಯ ಮಾಡಬಾರದು.
ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಸೇವೆ ಮಾಡಿಸಿ
ಮಾರ್ಚ್ ಕೊನೆಗೆ ಅಲ್ಲಿಂದ ಒಂದು ತಿಂಗಳ ಕಾಲ ಹಣಕಾಸಿನ ವಿಷಯದಲ್ಲಿ ಜಾಗ್ರತೆ ಅಗತ್ಯ. ಅದರಲ್ಲೂ ಸೋದರ ಸಂಬಂಧಿಗಳು ಹಣಕಾಸಿನ ನೆರವು ಕೇಳಿದರೆ ಸದ್ಯದ ಅವರ ಪರಿಸ್ಥಿತಿಯನ್ನು ಸರಿಯಾಗಿ ತಿಳಿದು, ಆ ನಂತರ ನಿರ್ಧಾರ ಕೈಗೊಳ್ಳಿ. ಇಲ್ಲದಿದ್ದರೆ ಈ ವೇಳೆ ನೀಡಿದ ಹಣ ಅಥವಾ ನೆರವು ರೂಪದ ಯಾವುದಾದರೂ ಸರಿ ವಾಪಸಾಗುವ ಸಾಧ್ಯತೆ ಇಲ್ಲ. ಜತೆಗೆ ಮನಸ್ತಾಪ ಮಾಡಿಕೊಳ್ಳಬೇಕಾಗುತ್ತದೆ. ಅಧಿಕ ಬಡ್ಡಿಯ ಆಸೆಗೆ ಹಣ ನೀಡಲು ಹೋಗಬೇಡಿ. ವಂಚಕರ ಪರಿಚಯ ಆಗುವ ಸಾಧ್ಯತೆ ಇದ್ದು, ದಿಢೀರ್ ಹಣ ಮಾಡುವ ದಾರಿಯೊಂದರ ಕಡೆ ಈ ಸಮಯದಲ್ಲಿ ಮನಸು ಹೋಗುತ್ತದೆ. ಎಷ್ಟು ಎಚ್ಚರಿಕೆಯಿಂದ ಇರಲು ಸಾಧ್ಯವೋ ಅಷ್ಟು ಹುಷಾರಾಗಿರಿ. ನಿಮಗೆ ಯಾವಾಗ ಸಾಧ್ಯವೋ ಆಗ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿಬನ್ನಿ. ನಿಮ್ಮಿಂದ ಆದ ಸೇವೆಯೊಂದನ್ನು ಮಾಡಿಸಿ. ಬ್ರಹ್ಮಚಾರಿಗಳಿಗೆ- ವೇದಾಧ್ಯಯನ ಮಾಡುವವರಿಗೆ ಹಳದಿ ಬಣ್ಣದ ವಸ್ತ್ರ ದಾನ ಮಾಡಿ.