ಮಿಥುನ ರಾಶಿಯವರಿಗೆ ಅದೃಷ್ಟ ಕೈ ಜಾರಿದ ಸಮಯ, ಎಚ್ಚರ ಎಚ್ಚರ!
ಅಕ್ಟೋಬರ್ ಹನ್ನೊಂದನೇ ತಾರೀಕು ಮಿಥುನ ರಾಶಿಯವರ ಪಾಲಿಗೆ ಸವಾಲುಗಳ ಆರಂಭವಾದ ದಿನ. ಐದನೇ ಮನೆಯಲ್ಲಿ, ತುಲಾ ರಾಶಿಯಲ್ಲಿ ಇದ್ದ ಗುರು ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡಿದೆ. ಗೋಚಾರದ ರೀತಿಯಲ್ಲಿ ಹೇಳಬೇಕು ಅಂದರೆ ಇದ್ದ ಏಕೈಕ ಅನುಕೂಲಕರ ಗ್ರಹ ಸ್ಥಿತಿ ಕೂಡ ಕೈ ತಪ್ಪಿದಂತಾಗಿದೆ.
ಈಗಿನ ಸ್ಥಿತಿಯಲ್ಲಿ ಅಂದರೆ ಇನ್ನು ಒಂದು ವರ್ಷ ಗುರು ಅಥವಾ ಶನಿಯ ಬಲ ನಿಮ್ಮ ಪಾಲಿಗೆ ಇರುವುದಿಲ್ಲ. ಝಗಮಗದ ಬೆಳಕು ಕಾಣುತ್ತಿದ್ದ ರಂಗ ಸ್ಥಳದಲ್ಲಿ ದಿಢೀರನೇ ಕತ್ತಲು ಕಾಣಿಸಿಕೊಂಡಂಥ ಅನುಭವ ಆಗುತ್ತದೆ. ಆರೋಗ್ಯ ಕೈ ಕೊಡುತ್ತಿದೆಯೇನೋ ಎಂಬ ಸಂಗತಿ ಬಹುವಾಗಿ ಕಾಡುತ್ತದೆ.
ವೃಷಭ ರಾಶಿಯವರಿಗೆ ಗುರು ಗ್ರಹದ ಅನುಗ್ರಹ ಹೇಗಿದೆ ಗೊತ್ತಾ?
ಮಾಡುವ ಕೆಲಸದಲ್ಲಿ ಆಲಸ್ಯ ಎದ್ದು ಕಾಣುತ್ತದೆ. ಇದು ಎಷ್ಟು ಮಾಡಿದರೂ ಇಷ್ಟೇ ಎಂಬ ತಿರಸ್ಕಾರ ಅಥವಾ ನಿರ್ಲಕ್ಷ್ಯ ಮನೋಭಾವ ಮೂಡುತ್ತದೆ. ಅದಕ್ಕೆ ಪೂರಕವಾಗಿಯೇ ಕೆಲವು ಘಟನೆಗಳು ನಡೆಯುವುದರಿಂದ ದೈವ ಕಾರ್ಯದಲ್ಲೂ ಅಂಥ ಆಸಕ್ತಿ ಇರುವುದಿಲ್ಲ. ಏನಿದು ಬರೀ ನಕಾರಾತ್ಮಕ ಫಲ ಅಂದುಕೊಳ್ಳಬೇಡಿ. ಎಲ್ಲರ ಜೀವನದಲ್ಲೂ ಒಮ್ಮೆ ಇಂಥ ಸವಾಲು ಎದುರಿಸಲೇ ಬೇಕಾಗುತ್ತದೆ.
ಅನಾರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ
ಮಿಥುನ ರಾಶಿಯವರಿಗೆ ಒಂದು ವರ್ಷದಿಂದ ಗುರು ಬಲ ಇತ್ತು. ಐದನೇ ಮನೆಯಲ್ಲಿ ತುಲಾ ರಾಶಿಯಲ್ಲಿದ್ದ ಬಲಿಷ್ಠ ಗುರು ಆರನೇ ಮನೆಗೆ ಹೋಗಿದೆ. ಇನ್ನು ಒಂದು ವರ್ಷ ಗುರು ಬಲ ಇರಲ್ಲ. ಆರರಲ್ಲಿ ಗುರು, ಏಳನೇ ಮನೆಯಲ್ಲಿ ಶನಿಯಿದೆ. ಆರೋಗ್ಯದ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಊಟ-ತಿಂಡಿ, ನೀರಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ಇನ್ನು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಇದ್ದರೆ ಆ ಬಗ್ಗೆ ಕೂಡ ಹುಷಾರು. ಎದೆನೋವು ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ರಕ್ತದೊತ್ತಡ-ಮಧುಮೇಹ ಇರುವವರಲ್ಲಿ ಉಲ್ಬಣಗೊಳ್ಳುವ ಸಾಧ್ಯತೆ ಇದ್ದು, ಸ್ವಯಂ ವೈದ್ಯವಂತೂ ಯಾವುದೇ ಕಾರಣಕ್ಕೂ ಬೇಡ.
ಅನಿವಾರ್ಯ ಅಲ್ಲದಿದ್ದರೆ ದೂರ ಪ್ರಯಾಣ ನಿಲ್ಲಿಸಿ
ಸಪ್ತಮದಲ್ಲಿ ಶನಿ ಇರುವುದರಿಂದ ಸ್ನೇಹಿತರು- ಭಾಗೀದಾರರ ಜತೆ ಮನಸ್ತಾಪ ಇದೆ. ಬಾಳ ಸಂಗಾತಿ ಜತೆಗೂ ಜಗಳ-ಮುನಿಸು ಏರ್ಪಡಬಹುದು. ದೂರ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಅನಿವಾರ್ಯ ಅಲ್ಲದಿದ್ದರೆ ದೂರ ಪ್ರಯಾಣವೇ ಬೇಡ. ನೀವೇ ಚಾಲನೆ ಮಾಡುವುದಾದರೆ ಅಪಾಯ ಮೈ ಮೇಲೆ ಎಳೆದುಕೊಳ್ಳಬೇಡಿ. ಸವಿಯಾದ ಮಾತುಗಳನ್ನು ಆಡಿದರು ಎಂಬ ಕಾರಣಕ್ಕೆ ಮನಸ್ಸು ಕರಗಿ, ಪಾಲುದಾರಿಕೆ ವ್ಯವಹಾರ ಮಾಡಿ, ಷೇರು ವ್ಯವಹಾರದಲ್ಲಿ ಹೂಡಿಕೆ ಮಾಡುವುದು ಬೇಡ. ಹಾಗೆ ಮಾಡಿದರೆ ನಷ್ಟ ಅನುಭವಿಸಬೇಕಾಗುತ್ತದೆ.
ಶತ್ರುಗಳ ಹುನ್ನಾರದಿಂದ ಮದುವೆ ಮುರಿದು ಬೀಳುವ ಸಾಧ್ಯತೆ
ವೃತ್ತಿಯಲ್ಲಿ ಚಾಲಕರು ಇದ್ದರೆ ರಾತ್ರಿ ವೇಳೆ ಚಾಲನೆಯನ್ನು ಸಾಧ್ಯವಾದಷ್ಟೂ ಮಾಡಬೇಡಿ. ಹಗಲು ಹೊತ್ತಿನಲ್ಲಿ ಎಚ್ಚರಿಕೆಯಿಂದ ಇರು. ಇನ್ನು ಮಹಿಳೆಯರು ಗರ್ಭ ಧರಿಸಿದ್ದರೆ ಸೂಕ್ತ ವೈದ್ಯರಲ್ಲಿ ತೋರಿಸಿಕೊಳ್ಳಿ. ಮನೆಯಲ್ಲಿ ಓಡಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಮಾಮೂಲಿಗಿಂತ ಹೆಚ್ಚಿನ ಲಕ್ಷ್ಯ ವಹಿಸಬೇಕು. ಇನ್ನು ಮದುವೆ ನಿಗದಿ ಅಥವಾ ನಿಶ್ಚಿತಾರ್ಥ ಆದವರಿಗೆ ಶತ್ರುಗಳ ಹುನ್ನಾರದಿಂದ ಮದುವೆ ಮುರಿದು ಬೀಳುವ ಸಾಧ್ಯತೆ ಇದೆ. ನೀವು ಸಹ ಇನ್ಯಾರದೋ ಮಾತು ಕೇಳಿ, ಮದುವೆ ರದ್ದು ಮಾಡಿಕೊಳ್ಳಬೇಡಿ. ಅದರಿಂದ ಮುಂದೆ ಬಾಧೆ ಪಡುವಂತೆ ಆಗುತ್ತದೆ.
ಗುರು ಗ್ರಹದ ದುಷ್ಪರಿಣಾಮಕ್ಕೆ ಪರಿಹಾರಗಳು
ಉದ್ಯೋಗ ಸ್ಥಾನದಲ್ಲಿ ಏಕಾಗ್ರತೆ ಕಳೆದುಕೊಂಡು, ತಪ್ಪುಗಳು ಆಗಬಹುದು. ಆ ತಪ್ಪುಗಳು ವಿಕೋಪಕ್ಕೆ ಹೋಗಿ, ಮೇಲಧಿಕಾರಿಗಳು ಸಿಟ್ಟಾಗಿ, ಕೆಲಸವನ್ನೇ ಕಳೆದುಕೊಳ್ಳುವ ಸಾಧ್ಯತೆಗಳಿವೆ, ಎಚ್ಚರ. ಇಂಥ ಸನ್ನಿವೇಶದಲ್ಲಿ ದೇವತಾರಾಧನೆ ಬಹಳ ಮುಖ್ಯ. ಯಾವುದೇ ವಿಚಾರದಲ್ಲಿ ಆಸಕ್ತಿ ಕಳೆದುಕೊಳ್ಳಬಾರದು. ಸಣ್ಣ ಕೆಲಸವೇ ವಹಿಸಿಕೊಂಡಿದ್ದರೂ ಶ್ರದ್ಧೆಯಿಂದ ಮಾಡಬೇಕು. ಕಡ್ಡಾಯವಾಗಿ ಗುರು ಗ್ರಹ ಶಾಂತಿ ಮಾಡಿಸಿಕೊಳ್ಳಲೇಬೇಕು. ಹೀಗೆ ಗ್ರಹ ಶಾಂತಿ ಅಲ್ಲದಿದ್ದರೆ ಗುರುಗಳ ಸಾನ್ನಿಧ್ಯ ಎಂದು ನೀವು ಭಾವಿಸುವ ಮಂತ್ರಾಲಯ, ಶೃಂಗೇರಿ, ಶಿರಡಿ, ಆದಿ ಚುಂಚನಗಿರಿ ಹೀಗೆ ಯಾವುದೇ ಗುರು ಸಾನ್ನಿಧ್ಯದ ಸ್ಥಳಗಳಿಗೆ ತೆರಳಿ, ಗುರುಗಳ ಪಾದಪೂಜೆ, ವಸ್ತ್ರ ಸಮರ್ಪಣೆ ಮಾಡಿದರೆ ನಿಮಗಿರುವ ತೊಂದರೆ ತಾಪತ್ರಯಗಳು ಕಡಿಮೆ ಆಗುತ್ತವೆ.