ಗುರು- ಶನಿಯ ಪ್ರಭಾವ ಕುಂಭ ರಾಶಿಯವರಿಗೆ ಹೇಗಿರುತ್ತದೆ?
ಕುಂಭ ರಾಶಿಯವರಿಗೆ ಪ್ರಮುಖ ಗ್ರಹಗಳಾದ ಗುರು-ಶನಿಯ ಅನುಗ್ರಹ ಹೇಗಿದೆ ಎಂದು ತಿಳಿಸಿಕೊಡುವ ಲೇಖನ ಇದು. ಇಷ್ಟು ಸಮಯ ಅಂದರೆ ಅಕ್ಟೋಬರ್ ಹನ್ನೊಂದನೇ ತಾರೀಕಿನ ತನಕ ಒಂಬತ್ತನೇ ಸ್ಥಾನದಲ್ಲಿದ್ದ ಗುರು ಗ್ರಹವು ಹತ್ತನೇ ಮನೆಗೆ ಪ್ರವೇಶ ಆಗಿದೆ. ಮುಂದಿನ ವರ್ಷದ ಅಂದರೆ 2019ರ ನವೆಂಬರ್ ತನಕ ಅಲ್ಲೇ ಇರುತ್ತದೆ. ಹತ್ತನೇ ಸ್ಥಾನವು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದ ವಿಚಾರವನ್ನು ತಿಳಿಸುತ್ತದೆ.
ಇಷ್ಟು ಸಮಯ ಗುರುವಿನ ಅನುಗ್ರಹ ಸಂಪೂರ್ಣವಾಗಿತ್ತು. ಅಂದರೆ ಅದೃಷ್ಟ ಸ್ಥಾನದಲ್ಲಿ ಇದ್ದ ಗುರು ಗ್ರಹವು ಅಲ್ಲಲ್ಲಿ ತಡವಾದರೂ ಉತ್ತಮ ಫಲಗಳನ್ನೇ ನೀಡುತ್ತಿದ್ದ. ಅದರಲ್ಲೂ ಸಂತಾನ ಅಪೇಕ್ಷಿತರಿಗೆ, ವಿವಾಹಕ್ಕೆ ಪ್ರಯತ್ನಿಸುತ್ತಿದ್ದವರಿಗೆ, ವಿದೇಶ ವ್ಯಾಸಂಗ ಸೇರಿದಂತೆ ಹಲವು ಉತ್ತಮ ಫಲಗಳನ್ನೇ ನೀಡಿದೆ.
ಜನ್ಮ ದಿನಕ್ಕೂ ಹೆಸರಿಗೂ ಎಂಥ ನಂಟು? ಸಂಖ್ಯಾಶಾಸ್ತ್ರ ಏನು ಹೇಳುತ್ತದೆ ಗೊತ್ತಾ?
ಆದರೆ, ಸ್ವಲ್ಪ ತಡವಾಗಿ ಫಲಗಳು ದೊರೆತಿವೆ. ಅದರಲ್ಲೂ ವ್ಯಾಪಾರಸ್ಥರು, ಉದ್ಯಮಿಗಳಿಗೆ ಉತ್ತಮ ಫಲ ದೊರೆತಿರುತ್ತದೆ. ಕನಿಷ್ಠ ಪಕ್ಷ ನಷ್ಟ ಆಗದಿರುವಂತೆ ಅಥವಾ ಸಮಯಕ್ಕೆ ಸರಿಯಾಗಿ ಕಷ್ಟದಿಂದ ಪಾರಾಗುವಂಥ ಅವಕಾಶವನ್ನು ಗುರು ಗ್ರಹ ಒದಗಿಸಿರುತ್ತದೆ. ಇನ್ನು ಈಗಿನ ಹತ್ತನೇ ಮನೆಯ ಪ್ರಭಾವವನ್ನು ಉದ್ಯೋಗಸ್ಥರಿಗೆ ಹೆಚ್ಚಿನ ಪ್ರಮಾಣದಲ್ಲಿ ಹೇಳಬೇಕಾಗುತ್ತದೆ.
ಜನನ ಕಾಲದಲ್ಲಿ ಗುರು ಯಾವ ಸ್ಥಾನದಲ್ಲಿ ಇತ್ತು ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಯಾವುದಕ್ಕೂ ಒಮ್ಮೆ ಜಾತಕವನ್ನು ಜ್ಯೋತಿಷಿಗಳಲ್ಲಿ ವಿಚಾರಿಸಿ.
ಜನ್ಮ ಜಾತಕದಲ್ಲಿನ ಗುರು ಸ್ಥಿತಿಯ ಮೇಲೆ ಅವಲಂಬನೆ
ಜನ್ಮ ಜಾತಕದಲ್ಲಿ ಗುರು ಗ್ರಹ ಉತ್ತಮ ಸ್ಥಿತಿಯಲ್ಲಿ ಇದ್ದರೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ನಿರೀಕ್ಷೆ ಮಾಡಬಹುದು. ಅದೇ ರೀತಿ ಉದ್ಯೋಗ ಬದಲಾವಣೆಗೆ ಅವಕಾಶ ಇರುತ್ತದೆ. ಪದೋನ್ನತಿ, ಅಂದುಕೊಂಡ ಸ್ಥಳಕ್ಕೆ ವರ್ಗಾವಣೆ ಹಾಗೂ ಕೆಲಸದ ಬಗ್ಗೆ ಮೇಲಧಿಕಾರಿಗಳಿಂದ ಪ್ರಶಂಸೆ, ವಿದೇಶದಿಂದ ಉತ್ತಮ ಉದ್ಯೋಗಾವಕಾಶ, ಉಪಯುಕ್ತ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ಇತ್ಯಾದಿ ಶುಭ ಫಲಗಳನ್ನು ಪಡೆಯುತ್ತೀರಿ. ಆದರೆ ಗುರು ಗ್ರಹವು ದುರ್ಬಲ ಅಥವಾ ನೀಚ ಸ್ಥಿತಿಯಲ್ಲಿ ಇದ್ದರೆ ಮೇಲಧಿಕಾರಿಗಳಿಂದ ಕಿರಿಕಿರಿ, ಉದ್ಯೋಗ ಬಿಡಲು ನಿಮ್ಮೊಳಗೇ ಒತ್ತಡ, ಬೇಡದ ಸ್ಥಳಕ್ಕೆ ವರ್ಗಾವಣೆ, ಶ್ರಮ ಹೆಚ್ಚಾದರೂ ಅದಕ್ಕೆ ತಕ್ಕಂತೆ ಪ್ರತಿಫಲ ದೊರೆಯದೆ ಹೋಗುವುದು ಇತ್ಯಾದಿ ಅಶುಭ ಫಲಗಳನ್ನು ಅನುಭವಿಸಬೇಕಾಗುತ್ತದೆ.
ಶತ್ರು ಬಾಧೆಯಿಂದ ಎಚ್ಚರವಾಗಿರಿ
ಗರ್ಭಿಣಿಯರು 2019ರ ಮಾರ್ಚ್ ನಂತರ ಬಹಳ ಎಚ್ಚರದಿಂದ ಇರಬೇಕು. ನಿಯಮಿತವಾದ ವೈದ್ಯಕೀಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿರುವವರು ಸಹ ಜಾಗ್ರತೆಯಿಂದ ಇರಬೇಕಾಗುತ್ತದೆ. ಮುಖ್ಯವಾಗಿ ಹಿರಿಯರ ಜತೆಗೆ ಮಾತುಕತೆ ನಡೆಸುವ ವೇಳೆಯಲ್ಲಿ ನಾಲಗೆ ಮೇಲೆ ಹಿಡಿತ ಇರಬೇಕು. ಹಿಂದೆಂದೋ ಆದ ಮನಸ್ತಾಪವನ್ನು ಮುಂದೆ ಮಾಡಿಕೊಂಡು, ಕೆಲವು ಶತ್ರುಗಳು ಹಿಂಸೆ ನೀಡಲು ಪ್ರಯತ್ನಿಸಬಹುದು. ಅಂಥ ಸನ್ನಿವೇಶದಲ್ಲಿ ಉದ್ವಿಗ್ನತೆಗೆ ಒಳಗಾಗದೆ ಬುದ್ಧಿವಂತಿಕೆಯಿಂದ ನಡೆದುಕೊಳ್ಳಿ. ಇನ್ನು ವಿದ್ಯಾರ್ಥಿಗಳು ದುರ್ಜನರಿಂದ ದೂರ ಇರಲೇಬೇಕು. ಅಂಥವರ ಒಡನಾಟದಲ್ಲಿ ಸಿಗುವ ಸಂತೋಷ ಕ್ಷಣಿಕವಾದದ್ದು. ಆದರೆ ಶಾಶ್ವತವಾಗಿ ಕೆಟ್ಟ ಹೆಸರು ನಿಮ್ಮ ಪಾಲಿಗೆ ಉಳಿದು ಹೋಗುತ್ತದೆ.
ಹನ್ನೊಂದನೇ ಮನೆ ಶನಿಯ ಅನುಕೂಲಗಳು
ಆದರೆ, ಹನ್ನೊಂದನೇ ಸ್ಥಾನದಲ್ಲಿರುವ ಶನೈಶ್ಚರನ ಅನುಗ್ರಹ ನಿಮ್ಮ ಮೇಲಿದೆ. ನಾನಾ ಮೂಲಗಳಿಂದ ಧನಾಗಮ ಆಗುತ್ತದೆ. ಬೇರೆ ಯಾರೋ ಪಟ್ಟ ಶ್ರಮದ ಫಲ ಕೂಡ ನಿಮಗೇ ತಿಳಿಯದಂತೆ ಬರುತ್ತದೆ. ಮುಖ್ಯವಾಗಿ ಅದೃಷ್ಟ ನಿಮ್ಮ ಪಾಲಿಗೆ ಇರಲಿದೆ. ಎಷ್ಟೋ ದೊಡ್ಡ ಕಷ್ಟಗಳು ಸಣ್ಣದರಲ್ಲೇ ಪರಿಹಾರ ಆಗಿಬಿಡುತ್ತದೆ. ವ್ಯಾಪಾರಸ್ಥರು ವಿಸ್ತರಣೆಗೆ ಮುಂದಾದಲ್ಲಿ ಅದಕ್ಕೆ ಅಗತ್ಯ ಇರುವ ನೆರವು-ಸಹಕಾರ ದೊರೆಯುತ್ತದೆ. ಹೊಸದಾಗಿ ವ್ಯವಹಾರ-ವ್ಯಾಪಾರ ಶುರು ಮಾಡಬೇಕು ಅಂದುಕೊಂಡವರಿಗೆ ಸುಲಭವಾಗಿ ಹಣಕಾಸಿನ ಸಹಾಯ ದೊರಕುತ್ತದೆ. ಆದರೆ ನಿಮ್ಮ ಜನ್ಮ ಜಾತಕದ ಪ್ರಕಾರ ಸ್ವಂತ ವ್ಯಾಪಾರ ಮಾಡಬಹುದೇ ಎಂಬುದನ್ನು ಪರಿಶೀಲನೆ ಮಾಡಿಸಿ, ಆ ನಂತರ ಮುಂದುವರಿಯಿರಿ.
ಗುರುಗಳ ಆರಾಧನೆ ಮಾಡುವುದು ಮುಖ್ಯ
ಇನ್ನು ಈ ಸನ್ನಿವೇಶಕ್ಕೆ ತಾಳ್ಮೆ-ಸಂಯಮ ಬಹಳ ಮುಖ್ಯ. ಏಕಾಗ್ರತೆ ಕೂಡ ಇರಬೇಕಾಗುತ್ತದೆ. ನೀವು ನಡೆದುಕೊಳ್ಳುವ ಗುರುಗಳ ಸಾನ್ನಿಧ್ಯಕ್ಕೆ ಭೇಟಿ ನೀಡಿ. ಶಿರಡಿ ಸಾಯಿ ಬಾಬಾ, ಮಂತ್ರಾಲಯ ರಾಘವೇಂದ್ರ, ಶೃಂಗೇರಿ, ಶ್ರೀ ಪೆರಂಬದೂರು ಹೀಗೆ ಯಾವುದೇ ಗುರುಗಳ ಕ್ಷೇತ್ರಕ್ಕೆ ತೆರಳಿ, ಒಂದೆರಡು ದಿನ ಅಲ್ಲೇ ಇದ್ದು, ಸೇವೆ ಮಾಡಿ. ಅಥವಾ ನಿಮ್ಮ ಧಾರ್ಮಿಕ ಗುರುಗಳನ್ನು ಮನೆಗೆ ಕರೆಸಿ ಅವರ ಸೇವೆ ಕೈಗೊಳ್ಳಿ. ಗುರು-ಹಿರಿಯರನ್ನು ನೋಯಿಸದಂತೆ ಎಚ್ಚರ ವಹಿಸಿ. ಯಾವುದಾದರೂ ಗುರುವಾರಗಳಂದು ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ, ಪುಸ್ತಕ, ವಸ್ತ್ರ... ಹೀಗೆ ಏನು ಅಗತ್ಯವೋ ಅದನ್ನು ನೀಡಿ. ಸುಬ್ರಹ್ಮಣ್ಯ ದೇಗುಲಕ್ಕೆ, ಸಾಧ್ಯವಾದರೆ ಘಾಟಿ ಅಥವಾ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ.