ಜ್ಯೋತಿಷ್ಯ: ಬಹುಭಾಷಾ ನಟ ಕಮಲ್ ಹಾಸನ್ ರಾಜಕೀಯ ಪಕ್ಷದ ಭವಿಷ್ಯ ಏನು?
Recommended Video
ರಾಜಕೀಯವನ್ನೇ ಉಸಿರಾಡುವ ತಮಿಳುನಾಡಿನಲ್ಲಿ ಮತ್ತೊಂದು ರಾಜಕೀಯ ಪಕ್ಷ. ಬಹುಭಾಷಾ ನಟ- ಚಲನಚಿತ್ರ ರಂಗದ ದೈತ್ಯ ಪ್ರತಿಭೆ ಕಮಲ್ ಹಾಸನ್ ರ ಹೊಸ ಪಕ್ಷವು ಬುಧವಾರ ಅಧಿಕೃತ ಘೋಷಣೆಯಾಯಿತು. ಆ ಪಕ್ಷದ ಭವಿಷ್ಯ ಹೇಗಿರಬಹುದು ಎಂಬುದನ್ನು ತಿಳಿಸುವ ಪ್ರಯತ್ನವಾಗಿಯೇ ಈ ಲೇಖನ.
ಅಂದಹಾಗೆ ಅವರು ಪಕ್ಷ ಘೋಷಣೆ ಮಾಡುವ ವೇಳೆಗೆ ಭರಣಿ ನಕ್ಷತ್ರ ಪ್ರಾರಂಭವಾಗಿತ್ತು. ಅದರ ಆಧಾರದ ಮೇಲೆ ಭವಿಷ್ಯ ಹೇಗಿದೆ ಎಂದು ನೋಡುವುದಾದರೆ ಅನೇಕ ಅಡ್ಡಿ- ಆತಂಕಗಳನ್ನು ಎದುರಿಸಬೇಕು ಎಂಬುದನ್ನು ಸೂಚಿಸುತ್ತಿದೆ. ಇನ್ನು ಲಾಂಛನವು ಕೈಗೆ ಕೈ ಹಿಡಿದ ಮೂರು ಕೈಗಳು. ನಾಲ್ಕು ಕೈಗಳಾಗಿದ್ದರೆ ಬೇರೊಂದು ಕಲ್ಪನೆ ಮಾಡಬಹುದಿತ್ತು. ಮೂರು ಕೈಗಳು ಪರಸ್ಪರ ಬಂಧನದ ಸೂಚಕ.
ರಾಜಕೀಯ ಪಕ್ಷದ ಚಿಹ್ನೆ ಬಗ್ಗೆ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ
ಇದರ ಅರ್ಥ ಏನೆಂದರೆ, ಸ್ವಂತ ನಿರ್ಧಾರಗಳನ್ನು ತೆಗೆದುಕೊಂಡಾಗ ಅಲ್ಲಿ ಭಿನ್ನಮತ ಉಂಟಾಗಿ ಒಂದೋ ಹಿಡಿತ ಗಟ್ಟಿಯಾಗಿ, ಚಲನೆ ಇಲ್ಲದಂತಾಗುತ್ತದೆ. ಅಥವಾ ಹಿಡಿತ ಸಡಿಲವಾಗಿ ನಿಯಂತ್ರಣ ಕಳೆದುಕೊಳ್ಳಬಹುದು. ಇದನ್ನು ನಾಗ ಪಾಶ ಎನ್ನುತ್ತೇವೆ. ಜತೆಗೆ ಕೆಂಪು ವರ್ಣ ಬೇರೆ. ಇದು ಧ್ವಜಕ್ಕೆ ಉತ್ತಮ ವರ್ಣವಾಗಿ ಕಾಣುವುದಿಲ್ಲ.
ಹೊಸ ಪಕ್ಷಕ್ಕೆ ದೀರ್ಘಾಯುಷ್ಯ ಇದ್ದಂತೆ ಕಾಣುತ್ತಿಲ್ಲ
ಇಷ್ಟು ಅಶುಭ ಫಲಗಳು ಕಾಣುತ್ತಿವೆ. ಇದರ ಜತೆಗೆ ದುಃಖ ಸೂಚಕ ಕಪ್ಪು ಬಣ್ಣವೂ ಇದೆ. ಆದ್ದರಿಂದ ಈ ಹೊಸ ಪಕ್ಷವು ದೀರ್ಘಾಯುಷ್ಯ ಇಲ್ಲದ್ದು. ಒಂದೋ ಇತರ ಪಕ್ಷದ ಜತೆಗೆ ಸೇರಿಹೋಗಬಹುದು. ಇಲ್ಲದಿದ್ದರೆ ಬೇಗ ಕಣ್ಣು ಮುಚ್ಚಬಹುದು. ಒಂದು ರಾಜಕೀಯ ಪಕ್ಷದ ಸ್ಥಾಪನೆಗೆ ಬೇಕಾದ ಶುಭ ದಿನದಲ್ಲೂ ಕಮಲ್ ಹಾಸನ್ ರ ಪಕ್ಷ ಆರಂಭವಾಗಿಲ್ಲ. ಅದೇ ವೇಳೆ ಪಕ್ಷದ ಲಾಂಛನ, ಬಣ್ಣವೂ ಶಕ್ತಿ ತುಂಬುವಂತೆ ಕಾಣುತ್ತಿಲ್ಲ.
ತಮ್ಮ ಮನಸಿಗೆ ಬಂದದ್ದೇ ಇತರರು ಪಾಲಿಸಲಿ ಎಂಬ ಧೋರಣೆ
ಆದರೆ, ಕಮಲ್ ಹಾಸನ್ ರ ಜಾತಕದಲ್ಲಿ ಕೆಲವು ಉತ್ತಮ ಯೋಗಗಳಿವೆ. ತುಂಬ ವೇಗವಾಗಿ ತೀರ್ಮಾನ ತೆಗೆದುಕೊಳ್ಳುವ ಇವರಿಂದ ಹಲವು ಅನನುಕೂಲಗಳು ಆಗುವ ಸಾಧ್ಯತೆ ಇದೆ. ಜತೆಗೆ ತಮ್ಮ ಮನಸಿಗೆ ಬಂದಿದ್ದನ್ನೇ ಇತರರು ಪಾಲಿಸಬೇಕು ಎಂಬ ಧೋರಣೆ ಇರುವುದು ಸಮಸ್ಯೆಯಾಗಿ ಪರಿಣಮಿಸಲಿದೆ.
ಮದುರೈನಲ್ಲಿ ಪಕ್ಷ ಘೋಷಣೆ
ನಟ ಕಮಲ್ ಹಾಸನ್ ಬುಧವಾರ ಮಕ್ಕಳ್ ನೀದಿ ಮೈಯ್ಯಂ ಎಂಬ ಹೊಸ ರಾಜಕೀಯ ಪಕ್ಷವನ್ನು ತಮಿಳುನಾಡಿನಲ್ಲಿ ಆರಂಭಿಸಿದ್ದಾರೆ. ಮದುರೈನಲ್ಲಿ ಈ ಬಗ್ಗೆ ಘೋಷಣೆ ಮಾಡಿದ ಸಂದರ್ಭದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಜನ ಸಹ ಸೇರಿದ್ದರು. ಇನ್ನೊಂದು ಮಾತು ಅರವಿಂದ್ ಕೇಜ್ರಿವಾಲ್ ಹಾಗೂ ಕಮಲ್ ಹಾಸನ್ ರ ಗುಣಸ್ವಭಾವದಲ್ಲಿ ಜ್ಯೋತಿಷ್ಯ ರೀತಿಯಲ್ಲಿ ಹಲವು ಸಾಮ್ಯತೆಗಳಿವೆ.
ರಜನೀಕಾಂತ್ ರಾಜಕೀಯ ಭವಿಷ್ಯ ಉತ್ತಮವಿದೆ
ಇನ್ನು ಮತ್ತೊಬ್ಬ ನಟ- ಸೂಪರ್ ಸ್ಟಾರ್ ರಜನೀಕಾಂತ್ ಸಹ ತಮ್ಮ ಹೊಸ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರ ಜಾತಕ ಈಗಾಗಲೇ ಪರಾಮರ್ಶೆ ಮಾಡಿದ್ದು, ಕಮಲ್ ಹಾಸನ್ ಗೆ ಹೋಲಿಸಿದರೆ ರಜನೀಕಾಂತ್ ರ ರಾಜಕೀಯ ಭವಿಷ್ಯ ಉತ್ತಮವಾಗಿರುವಂತೆ ಕಾಣುತ್ತಿದೆ. ಆದರೆ ರಜನಿ ಅಧಿಕಾರ ಸ್ಥಾನದಲ್ಲಿ ಕೂರುವ ಪ್ರಯತ್ನ ಪಡಬಾರದು, ಅಷ್ಟೇ.