ಯಡಿಯೂರಪ್ಪ ಪ್ರಮಾಣ ವಚನ : ಲಾಭವೂ ಇದೆ, ದೋಷವೂ ಇದೆ
ಕರ್ನಾಟಕದಲ್ಲಿ ಇದು ಏನಾಗುತ್ತದೆ ಎಂದು ಎಲ್ಲರೂ ಕುತೂಹಲದಲ್ಲಿ ನೋಡುತ್ತಾ ಇದ್ದಂತೆಯೇ ಬಿಜೆಪಿಯ ನಾಯಕ ಬಿ ಎಸ್ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿಯೇ ಬಿಟ್ಟರು.
ಹೋಗಲಿ ಕುತೂಹಲ ಮುಗಿಯಿತು ಎಂದು ಯಾರೂ ಸುಮ್ಮನೆ ಕುಳಿತುಕೊಳ್ಳುವಂತೆ ಇಲ್ಲ. ಕಾರಣ ಎಲ್ಲರಿಗೂ ತಿಳಿದಿದೆ ಬಹುಮತ ತೋರಿಸಬೇಕು. ಇದು ಸಾಧ್ಯ ಇದೆಯಾ? ಸದ್ಯ ಮುಖ್ಯಮಂತ್ರಿ ಆಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಅವರು ಅವರಿಗೆ ಗವರ್ನರ್ ವಜುಭಾಯಿ ವಾಲಾ ನೀಡಿರುವ ಸಮಯದ ಒಳಗೆ ಬಹುಮತ ತೋರಿಸಲು ಸಾಧ್ಯ ಇದೆಯೇ? ಎನ್ನುವುದು ಸದ್ಯದ ಅತೀ ದೊಡ್ಡ ಪ್ರಶ್ನೆ!
ಬಿಎಸ್ವೈ ಬಹುಮತ ಸಾಬೀತು ಮಾಡ್ತಾರಾ? ಜ್ಯೋತಿಷಿ ಏನಂತಾರೆ?
ಸಾಧ್ಯ ಆಗದು ಎನ್ನುವುದು ಕೆಲವರ ವಾದ, ಆದರೆ ಸಾಧ್ಯ ಇದೆ, ಬಹುಮತ ತೋರಿಸುತ್ತಾರೆ ಎನ್ನುವುದು ಹಲವರ ವಾದ! ಇಂಥ ಸಂದರ್ಭಗಳು ಬಂದಾಗ ಜ್ಯೋತಿಷ್ಯ ಏನು ಹೇಳುತ್ತದೆ? ಎಂದು ನೋಡುವುದಾದಲ್ಲಿ...
ಶುಕ್ಲ ಪಕ್ಷ ಬಿದಿಗೆ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಭ ಕಾರ್ಯಗಳನ್ನು ಮಾಸದ ಆದಿ, ಅಂದರೆ ಶುಕ್ಲ ಪಕ್ಷದಲ್ಲಿ, ಅಂದರೆ ವೃದ್ಧಿ ಚಂದ್ರ ಇದ್ದಾಗ ಮಾಡಲು ಸೂಚಿಸುತ್ತಾರೆ. ಹಾಗೆಯೇ ಶುಕ್ಲ ಪಕ್ಷದಲ್ಲಿ ಪ್ರಮಾಣ ವಚನ ಸ್ವೀಕಾರ ಆಗಿದೆ. ಇನ್ನು ತಿಥಿಗಳ ವಿಚಾರ ಬಂದಾಗ, ಬಿದಿಗೆ ತದಿಗೆ ಪಂಚಮಿ ಸಪ್ತಮಿ ದಶಮಿ... ಈ ತಿಥಿಗಳನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ಅದೇ ವಿಧಾನದಲ್ಲಿ ಪ್ರಮಾಣವಚನ ಸ್ವೀಕಾರ ಸಮಯದಲ್ಲಿ ಬಿದಿಗೆ ಸಹ ಇದೆ.
17/05/2018
:
09-00
am
ಶುಕ್ಲ
ಪಕ್ಷ
ಬಿದಿಗೆ
ಉತ್ತಮ ನಕ್ಷತ್ರಗಳಲ್ಲಿ ಒಂದು ಮೃಗಶಿರಾ ನಕ್ಷತ್ರ
ಇನ್ನು ಪ್ರಮಾಣವಚನ ಸ್ವೀಕಾರ ಮೃಗಶಿರಾ ನಕ್ಷತ್ರದಲ್ಲಿ ಆಗಿದೆ. ಮೃಗಶಿರಾ ನಕ್ಷತ್ರ ಅತ್ಯಂತ ಉತ್ತಮ ನಕ್ಷತ್ರಗಳಲ್ಲಿ ಒಂದು. ಇನ್ನು ಯಡಿಯೂರಪ್ಪ ಅವರದ್ದು ವಿಶಾಖಾ ನಕ್ಷತ್ರ, ವೃಶ್ಚಿಕ ರಾಶಿ. ಮೃಗಶಿರಾ ನಕ್ಷತ್ರ ವಿಶಾಖಾ ನಕ್ಷತ್ರಕ್ಕೆ ಮಿತ್ರ ತಾರೆ ಆಗುತ್ತದೆ. ಆದುದರಿಂದ ತಾರಾನುಕೂಲ ಸಹ ನಾವು ಕಾಣಬಹುದು. ಮೃಗಶಿರಾ ನಕ್ಷತ್ರ ಆರೋಹಣಕ್ಕೆ ಉತ್ತಮ ನಕ್ಷತ್ರ ಹಿಂದೆ ರಾಜರ ಕಾಲದಲ್ಲಿ ಅಶ್ವ {ಕುದುರೆ} ಏರುವಾಗ ಇದೇ ಮೃಗಶಿರಾ ನಕ್ಷತ್ರವನ್ನು ಆಯ್ಕೆ ಮಾಡುತ್ತಿದ್ದರು. ಆದುದರಿಂದ ಅಧಿಕಾರದ ಗದ್ದುಗೆ ಏರಲು ಮೃಗಶಿರಾ ನಕ್ಷತ್ರ ಉತ್ತಮ ನಕ್ಷತ್ರ ಎಂದೇ ಹೇಳಬಹುದು.
24ನೇ ಮುಖ್ಯಮಂತ್ರಿ ಯಡಿಯೂರಪ್ಪ ಮುಂದಿರುವ ಸವಾಲುಗಳು
ಪ್ರಮಾಣ ವಚನದ ಮುಹೂರ್ತ ಹೇಗಿತ್ತು?
ಇದು ಬಹಳ ಪ್ರಧಾನವಾದ ವಿಚಾರ. ಇಲ್ಲಿ ನಮಗೆ ಭವಿಷ್ಯದ ಬಹಳ ವಿಚಾರಗಳು ಅರಿತುಕೊಳ್ಳಲು ಸಿಗುತ್ತದೆ. ಪ್ರಮಾಣ ವಚನ ಸ್ವೀಕಾರ ಮಿಥುನ ಲಗ್ನದಲ್ಲಿ ನಡೆದಿದೆ. ಪ್ರಸಕ್ತ ಆ ಲಗ್ನದ ಅಧಿಪತಿ ಬುಧ, ಲಾಭ ಸ್ಥಾನದಲ್ಲಿ ಇರುವುದು ಶುಭ ಸೂಚಕ. ಲಗ್ನ ಪಂಚಮಾಧಿಪತಿ ಶುಕ್ರ ಸಹ ಲಗ್ನದಲ್ಲಿ ಇರುವುದು ಅತ್ಯಂತ ಶುಭಪ್ರದ ಎಂದೇ ಹೇಳಬೇಕು. ಅಷ್ಟೇ ಅಲ್ಲ, ಪ್ರಸಕ್ತ ಮಿಥುನ ಲಗ್ನದಿಂದ ಪಂಚಮದಲ್ಲಿ ಇರುವ ಗುರು ಗ್ರಹ ತನ್ನ ಸ್ಥಾನದಿಂದ ನವಮ ರಾಶಿ ಆದ ಮಿಥುನ ರಾಶಿಯನ್ನು ಪೂರ್ಣ ದೃಷ್ಟಿಯಿಂದ ನೋಡುತ್ತಾನೆ. ದೋಷಾನ್ ಲಕ್ಷಾನ್ ಪ್ರಹರಂತಿ ಎನ್ನುವ ಶಾಸ್ತ್ರ ವಾಕ್ಯದಂತೆ, ಲಕ್ಷ ದೋಷಗಳು ಇದ್ದರೂ ಸಹ ಒಂದು ಗುರು ದೃಷ್ಟಿ ಅದನ್ನು ಸರಿ ಮಾಡುವುದರಲ್ಲಿ ಸಂಶಯ ಇಲ್ಲ! ಇನ್ನು ಮಿಥುನ ಲಗ್ನಕ್ಕೆ ರವಿ ಕ್ರೂರ ಆಗುತ್ತಾನೆ. ಅಂಥ ರವಿ 12ನೇ ಮನೆ, ಅಂದರೆ ವ್ಯಯದಲ್ಲಿ ಇರುವುದು ಸಹ ಒಂದು ದೃಷ್ಟಿಯಲ್ಲಿ ಉತ್ತಮ. ಒಟ್ಟಿನಲ್ಲಿ ಮೇಲ್ನೋಟಕ್ಕೆ ನೋಡುವಾಗ ಇದು ಅತುಂತ ಶುಭಪ್ರದ ದಿನ ಹಾಗೂ ಸಮಯದಲ್ಲಿ ಪ್ರಮಾಣ ವಚನ ಸ್ವೀಕಾರ ಆಗಿದೆ ಎಂದು ಹೇಳಿಬಿಡಬಹುದಾ? ಎಂದು ಕೇಳಿದರೆ ಇಲ್ಲ! ಸ್ವಲ್ಪ ತಾಳಿ ಮುಂದೆ ಓದಿ.
ಅಧಿಕ ಮಾಸದಲ್ಲಿ ಪ್ರಮಾಣ ಎಷ್ಟು ಸರಿ?
ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದ ಕಾಲದಲ್ಲಿ ಬಹಳ ದೋಷಗಳೂ ಸಹ ಅಷ್ಟೇ ಪ್ರಮಾಣದಲ್ಲಿ ಇದೆ. ಉದಾಹರಣೆಗೆ ಇದು ಶುಕ್ಲ ಪಕ್ಷ ಆದರೂ ಸಹ ನಡೆಯುತ್ತಾ ಇರುವುದು ಅಧಿಕ ಮಾಸ. ಇಂಥ ಕಾರ್ಯಗಳಿಗೆ ಅಧಿಕ ಮಾಸ ಎಷ್ಟು ಸೂಕ್ತ ಎನ್ನುವುದು ಚರ್ಚಾರ್ಹ ವಿಚಾರ. ಆದರೆ ಇಲ್ಲಿ ಅಧಿಕ ಮಾಸ ಮುಗಿಯುವ ತನಕ ಕಾಯುವ ಸ್ಥಿತಿ ಇರಲಿಲ್ಲ. ತಕ್ಷಣವೇ ಯಡಿಯೂರಪ್ಪನವರು ಪ್ರಮಾಣ ಸ್ವೀಕರಿಸುವುದು ಅನಿವಾರ್ಯ ಆಗಿತ್ತು. ಅಲ್ಲದೆ, ಜ್ಯೋತಿಷ್ಯವನ್ನು ಅತಿಯಾಗಿ ನಂಬುವ ಯಡಿಯೂರಪ್ಪನವರು ಇದನ್ನೆಲ್ಲ ನಿರ್ಲಕ್ಷಿಸಿ ಪ್ರಮಾಣ ಸ್ವೀಕರಿಸಿರುತ್ತಾರಾ?
ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರಾ: ಜ್ಯೋತಿಷಿ ಏನಂತಾರೆ?
ಸಪ್ತಮದ ಶನಿ ಶುಭಪ್ರದ ಅಲ್ಲ
ಇನ್ನು ಪ್ರಮಾಣ ವಚನ ಸ್ವೀಕರಿಸಿದ ಮಿಥುನ ಲಗ್ನ ಮುಹೂರ್ತ ನೋಡಿದಾಗ, ನಮಗೆ ಸಪ್ತಮದಲ್ಲಿ ಶನೈಶ್ಚರ ಸ್ವಾಮಿ ಇರುವುದು ಗೋಚರಿಸುತ್ತದೆ. ಶನಿ ಕೆಟ್ಟ ಗ್ರಹ ಎಂದು ಹೇಳುತ್ತಾ ಇಲ್ಲ. ಆದರೆ ಸಪ್ತಮದ ಶನಿ ಶುಭಪ್ರದ ಅಲ್ಲ ಎನ್ನುವುದು ಗಮನಿಸಬೇಕು. ಸಪ್ತಮದ ಶನಿ ವಿಭೇದ ಹಾಗೂ ಕೆಲ ಮನಸ್ತಾಪಗಳನ್ನು ತೋರಿಸುತ್ತಾನೆ. ದೀರ್ಘಾವಧಿಯ ಅಧಿಕಾರ ನಡೆಸಲು ಸಪ್ತಮದ ಶನಿ ಉತ್ತಮ ಅಲ್ಲ.
ಎಲ್ಲರೂ ಜೊತೆಗಿದ್ದು ಒಟ್ಟಿಗೆ ಮುಂದೆ ನಡೆಯಲು ಸಪ್ತಮದ ಶನಿ ಮಾರಕ. ಅಷ್ಟೇ ಅಲ್ಲ ರವಿ ಗ್ರಹ ಸರಕಾರಿ ಅಧಿಕಾರ ಕೊಡುವ ಗ್ರಹ. ಅಂಥ ರವಿ ವ್ಯಯದಲ್ಲಿ ಇರುವುದು ಸಹ ಅಧಿಕಾರ ಕಿತ್ತುಕೊಳ್ಳುತ್ತದೆ. ಇನ್ನು ಪಂಚಮಾಧಿಪತಿ ಶುಕ್ರ ಲಗ್ನದಲ್ಲಿ ಇರುವುದು ಉತ್ತಮ ಎಂದು ತಿಳಿಸಿದ್ದೆ. ಆದರೆ ಅದೇ ಶುಕ್ರ ಮಿಥುನ ಲಗ್ನಕ್ಕೆ ವ್ಯಯಾಧಿಪತಿ ಸಹ ಆಗುತ್ತಾನೆ. ಅಂದರೆ ಕೊಟ್ಟವರೇ ಕೊಟ್ಟದ್ದನ್ನು ಕಿತ್ತುಕೊಳ್ಳುವ ಸಾಧ್ಯತೆ ಕಾಣುತ್ತಿದೆ.
ಕೆಲವು ಉತ್ತಮ ಹಾಗೂ ಹಲವು ದೋಷ
ಒಟ್ಟಿನಲ್ಲಿ ಸಮೂಹವಾಗಿ ನೋಡಿದಾಗ, ಈ ಪ್ರಮಾಣ ವಚನ ಸ್ವೀಕಾರ ಮುಹೂರ್ತ ಕೆಲವು ಉತ್ತಮ ಹಾಗೂ ಹಲವು ದೋಷಗಳನ್ನು ಕೂಡಿಕೊಂಡಿದೆ. ಆದರೆ ಇಲ್ಲಿ ನಾವು ಗಮನಿಸ ಬೇಕಾದ ವಿಚಾರ ಎಂದರೆ, ಈ ಮುಹೂರ್ತ ಬಿಜೆಪಿ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರಿಗೂ ಒಂದು ವಿಧದಲ್ಲಿ ಅನಿವಾರ್ಯ ಆಗಿತ್ತು ಅನಿಸುತ್ತದೆ. ಕಾರಣ ಪ್ರತೀ ದಿನ ಅಷ್ಟೇ ಏಕೆ ಪ್ರತೀ ಕ್ಷಣ ಅವರಿಗೆ ಅತ್ಯಂತ ಅಮೂಲ್ಯ ಹಾಗೂ ಮುಂದಿನ ರಾಜಕೀಯ ನಡೆ ತೆಗೆದುಕೊಳ್ಳಲು ಅನಿವಾರ್ಯ ಆಗಿತ್ತು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಬೇಕು.
ದಾಳ ಹೇಗೆ ಬೇಕಾದರೂ ಉರುಳಬಹುದು
ಕೇವಲ ಪ್ರಮಾಣ ವಚನದ ಮುಹೂರ್ತ ನೋಡಿ ಭವಿಷ್ಯ ಹೇಳುವುದು ಸೂಕ್ತ ಅಲ್ಲ. ಆದರೂ ಅನಿವಾರ್ಯ ಹೇಳಲೇಬೇಕು ಎಂದಾದಲ್ಲಿ ಮಿಥುನ ಲಗ್ನ ಚರ ಅಥವಾ ಸ್ಥಿರ ಈ ಎರಡೂ ಅಲ್ಲದ ಒಂದು ದ್ವಿ ಸ್ವಭಾವ ಲಗ್ನ. ಆದುದರಿಂದ ಇಲ್ಲಿ ದಾಳ ಹೇಗೆ ಬೇಕಾದರೂ ಉರುಳಬಹುದು. ಅಲ್ಲಿ ಸಂಕಟ ನೀಡಿ ಸರಕಾರ ಉರುಳಿಸಲು ದ್ವಿತೀಯದಲ್ಲಿ ರಾಹು, ಸಪ್ತಮದಲ್ಲಿ ಶನಿ ಹಾಗೂ ಅಷ್ಟಮದಲ್ಲಿ ಮಿತ್ರ ಪಾಪ ಗ್ರಹ ಆದ ಕೇತು ಜೊತೆ ಪರಮೋಚ್ಚ ಸ್ಥಿತಿಯಲ್ಲಿ ಕುಜ ಗ್ರಹ. ಹೀಗೆ ವಿರೋಧಿಗಳ ಗುಂಪು ಇದೆ.
ಇನ್ನು ಯಡಿಯೂರಪ್ಪ ಅವರ ಪದವಿ ಕಾಯಲು ಪಂಚಮಾಧಿಪತಿ ಶುಕ್ರ, ಲಾಭದಲ್ಲಿ ಬುಧ ಹಾಗೂ ಬಹಳ ಪ್ರಮುಖವಾಗಿ "ಗುರು" ಗ್ರಹ ಪೂರ್ಣ ದೃಷ್ಟಿ ಇದೆ. ಗುರು ಗ್ರಹ ಹಿರಿಯರನ್ನು ಮೇಲಿನ ಅಧಿಕಾರಿಗಳನ್ನು ಸೂಚಿಸಿದರೆ, ಯಾವಾಗ ಸರಕಾರ ಅಭದ್ರ ಆಗಲು ಶುರು ಆಗುತ್ತದೆಯೋ ಆಗ ಅಂಥ ಸಂದರ್ಭಗಳಲ್ಲಿ ಕೇಂದ್ರದಿಂದ ಅತ್ಯುತ್ತಮ ಸಹಾಯ ಪಡೆದು ಸರಕಾರ ಉಳಿಸಿಕೊಳ್ಳಬಹುದು.