ಜ್ಯೋತಿಷ್ಯ: ಕುಮಾರಸ್ವಾಮಿ ಪಾಲಿನ ಯೋಗದ ದಿನಗಳು ಮುಗಿದು ಹೋದವೆ?
Recommended Video
ಓದುಗರೆಲ್ಲರಿಗೂ ತಡವಾಗಿ ದೀಪಾವಳಿ ಶುಭಾಶಯ ಹೇಳ್ತಿದ್ದೀನಿ. ಒಂದು ಸಣ್ಣ ಬಿಡುವಿನ ನಂತರ ಮತ್ತೆ ನನ್ನ ಲೇಖನ ನೀವು ಓದುತ್ತಿದ್ದೀರಿ. ಈ ದಿನ ಎಚ್.ಡಿ.ಕುಮಾರಸ್ವಾಮಿ ಅವರ ಜಾತಕದ ಬಗ್ಗೆ ಬರೆಯಲೇಬೇಕು ಅನ್ನೋ ತುಡಿತವನ್ನು ಆ ಭಗವಂತನೇ ನೀಡಿದ್ದಾನೆ ಎಂದು ಭಾವಿಸಿ, ನನಗಿರುವ ಮಾಹಿತಿ ಅನುಸಾರವಾಗಿ ಕೆಲವು ಸಂಗತಿಗಳನ್ನು ತಿಳಿಸುತ್ತಿದ್ದೇನೆ.
ಏಕೆಂದರೆ, ಕುಮಾರಸ್ವಾಮಿ ಅವರ ಜಾತಕ ಎಲ್ಲೂ ಲಭ್ಯವಿಲ್ಲ. ತಿಳಿದಿರುವ ಮಾಹಿತಿ ಏನೆಂದರೆ, ಅವರದು ಮಿಥುನ ರಾಶಿ- ಮಿಥುನ ಲಗ್ನ ಹಾಗೂ ಜನ್ಮ ದಿನಾಂಕ, ವರ್ಷ ಮಾತ್ರ. ನಿಖರವಾದ ಸಮಯ ಇದ್ದರೆ ಚೆನ್ನಾಗಿರುತ್ತಿತ್ತು. ಆದರೂ ಅವರು ಹುಟ್ಟಿದ ದಿನದ ಆಧಾರದಲ್ಲಿ ಲಗ್ನದ ಸಮಯ ನೋಡಿಕೊಂಡು, ಈಗಿನ ಗೋಚಾರ ಸ್ಥಿತಿ ಹೇಗಿದೆ ಎಂಬುದನ್ನು ಹೇಳಲಾಗುತ್ತಿದೆ.
ಪ್ರಕಾಶ್ ಅಮ್ಮಣ್ಣಾಯರಿಂದ ಸಿಎಂ ಕುಮಾರಸ್ವಾಮಿ ಜಾತಕ ವಿಶ್ಲೇಷಣೆ
ಈ ಸಮಯದಲ್ಲಿ ಮತ್ತೊಂದು ವಿಚಾರವನ್ನೂ ಹೇಳಬೇಕು. ಕಳೆದ ವಿಧಾನಸಭಾ ಚುನಾವಣೆ ವೇಳೆ ಹಲವು ಜ್ಯೋತಿಷಿಗಳು ಇಂಥವರು ಮುಖ್ಯಮಂತ್ರಿ ಆಗಬಹುದು ಎಂದು ನಾನಾ ಹೆಸರುಗಳನ್ನು ಹೇಳಿದ್ದರು. ಇಲ್ಲ, ಕುಮಾರಸ್ವಾಮಿ ಅವರಿಗೇ ಆ ಯೋಗ ಇದೆ ಎಂದು ಎರಡನೇ ಹೆಸರೇ ತೆಗೆದುಕೊಳ್ಳದಂತೆ ಆ ಭಗವಂತ ನನ್ನ ನಾಲಗೆಯಿಂದ ನುಡಿಸಿದ್ದ.
ಆರೋಗ್ಯ ರಕ್ಷಣೆಗೆ ಹೆಚ್ಚಿನ ನಿಗಾ ವಹಿಸಬೇಕು
ಆದರೆ, ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಕುರ್ಚಿಯನ್ನು ಅನಾಯಾಸವಾಗಿ ತಂದುಕೊಟ್ಟ ಪಂಚಮ ಗುರು ಈಗ ಆರನೇ ಮನೆಗೆ ಹೋಗಿದ್ದಾನೆ. ಮಿಥುನ ರಾಶಿಯವರಿಗೆ ಯಾವ ಗ್ರಹದ ಅನುಗ್ರಹ ಚೆನ್ನಾಗಿದೆ ಎಂದು ಹುಡುಕಬೇಕು ಎಂಬಷ್ಟರ ಮಟ್ಟಿಗೆ ಕಠಿಣವಾದ ಸ್ಥಿತಿ ಇದು. ಆರನೇ ಮನೆಯ ಗುರು, ಅದರ ಜತೆಗೆ ರಾಶ್ಯಾಧಿಪತಿ ಬುಧನೂ ಅಲ್ಲೇ ಇದ್ದಾನೆ. ಏಳನೇ ಮನೆ ಶನಿ, ಎಂಟರಲ್ಲಿ ಕೇತು, ಎರಡನೇ ಮನೆಯಲ್ಲಿ ರಾಹು, ಪಂಚಮದಲ್ಲಿ ನೀಚನಾಗಿರುವ ರವಿ...ಹೀಗೆ ಬಹುತೇಕ ಗ್ರಹಗಳು ಅವರ ಪಾಲಿಗೆ ಪ್ರತಿಕೂಲ ಪರಿಣಾಮ ಬೀರುವಂಥ ಸ್ಥಿತಿಯಲ್ಲಿವೆ. ಅವರ ಜಾತಕ ವಿಶ್ಲೇಷಣೆ ಮಾಡುವಾಗಲೇ ಹಿಂದೊಮ್ಮೆ, ಐದನೇ ಮನೆಯ ಗುರು ಆರಕ್ಕೆ ಪ್ರವೇಶ ಮಾಡುವಾದ ಆರೋಗ್ಯ ವಿಚಾರದಲ್ಲಿ ಅವರು ಬಹಳ ಜಾಗೃತರಾಗಿರಬೇಕು ಅನ್ನೋದನ್ನು ತಿಳಿಸಲಾಗಿತ್ತು. ಇಲ್ಲಿ ನಾನೇನೋ ಹೇಳಿಬಿಟ್ಟೆ. ಆಗಿಹೋಯಿತು ಅನ್ನೋದಲ್ಲ. ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿ. ಅವರ ಆರೋಗ್ಯ ರಕ್ಷಣೆ ಆಗಬೇಕು. ವೈಯಕ್ತಿಕವಾಗಿ- ಸೈದ್ಧಾಂತಿಕವಾಗಿ, ಪಕ್ಷದ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ದ್ವೇಷಿಸುವುದು ಬೇರೆ ವಿಚಾರ. ಆದರೆ ಆ ವ್ಯಕ್ತಿಯ ಆರೋಗ್ಯದ ವಿಚಾರ ಬಂದಾಗ ಮಾನವೀಯತೆಯಿಂದ ಯೋಚನೆ ಮಾಡಬೇಕು.
ಯಾವಾಗ ಬೇಕಾದ್ರು ಸಾಯ್ಬೋದು ಅಂದಿದ್ದ ಎಚ್ಡಿಕೆ 85 ವರ್ಷ ಬದುಕಿರ್ತಾರಂತೆ
ನವೆಂಬರ್ ನಂತರ ಅಧಿಕಾರದಲ್ಲಿ ನಾನಾ ಸವಾಲು
ಕುಮಾರಸ್ವಾಮಿ ಅವರಿಗೆ ಈಗಿನ ಮುಖ್ಯಮಂತ್ರಿ ಅಧಿಕಾರ ನವೆಂಬರ್ ತನಕ ಇರಬಹುದು. ಆ ನಂತರವೂ ಉಳಿಸಿಕೊಂಡು ಹೋಗುವುದು ಅವರ ಕೈಲೇ ಇದೆ. ಇನ್ನು ಪಂಚಮ ಗುರು ಅಕ್ಟೋಬರ್ ನಲ್ಲಿ ಆರನೇ ಮನೆಗೆ ಬಂದಿದೆ. ಇದು ಬಹಳ ಸಮಸ್ಯೆ ನೀಡುತ್ತದೆ. ಈ ತಿಂಗಳಲ್ಲಿ ಅವರ ರಾಶ್ಯಾಧಿಪತಿ ಬುಧನು ಗುರುವಿನ ಜತೆ ಇರುವುದರಿಂದ ಪರಿಣಾಮ ಹೆಚ್ಚು ತೀಕ್ಷ್ಣವಾಗಿರುತ್ತದೆ. ಇನ್ನು ರಾಶಿಗೆ ಎಂಟನೆ ಮನೆಯಾಗುವ, ಆಯುಷ್ಯ ಸ್ಥಾನಾಧಿಪತಿ ಎಂದು ಪರಿಗಣಿಸುವ ಶನಿಯು ಸಪ್ತಮದಲ್ಲಿ ಅಂದರೆ ಧನುಸ್ಸು ರಾಶಿಯಲ್ಲಿದೆ. ಅಷ್ಟಮ ಸ್ಥಾನದಲ್ಲೇ ಕೇತು ಇದೆ. ಇದು ಕೂಡ ಅಂಥ ಒಳ್ಳೆ ಫಲ ಅಲ್ಲ. ಮಿಥುನ ರಾಶಿಗೆ ಲಾಭಾಧಿಪತಿ ಆದ ಕುಜನು ಇಷ್ಟು ಕಾಲ ಎಂಟನೇ ಮನೆ ಅಂದರೆ ಮಕರ ರಾಶಿಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿದ್ದ. ಅವರ ಪಾಲಿಗೆ ಸುಬ್ರಹ್ಮಣ್ಯನ ಅನುಗ್ರಹ ಇತ್ತು. ಆ ಕಾರಣಕ್ಕೆ ಬಹಳ ಸಮಸ್ಯೆಗಳನ್ನು ಅವರು ದಾಟಲು ಸಾಧ್ಯವಾಯಿತು. ಈಗ ಕುಜನು ಸಹ ಕುಂಭ ರಾಶಿ ಅಂದರೆ ಒಂಬತ್ತನೇ ಮನೆಗೆ ಪ್ರವೇಶ ಆಗಿದೆ. ಅದು ಕೆಟ್ಟ ಸ್ಥಾನ ಅಲ್ಲದಿದ್ದರೂ ಪರಮೋಚ್ಚ ಸ್ಥಿತಿಯನ್ನು ಕಳೆದುಕೊಂಡಿದೆ.
ಕುಮಾರಸ್ವಾಮಿ ಪ್ರಮಾಣದ ಮುಹೂರ್ತ ಹೇಗಿತ್ತು? ಭವಿಷ್ಯ ಹೇಗಿದೆ?
ಶತ್ರು ಬಾಧೆ ಹೆಚ್ಚಾಗುತ್ತಾ ಹೋಗುತ್ತದೆ
ರವಿಯು ತುಲಾ ರಾಶಿಯಲ್ಲಿ ನೀಚ ಸ್ಥಿತಿಯಲ್ಲಿ ಸಂಚಾರ ಮಾಡುತ್ತಿದೆ. ಇನ್ನು ನಾಲ್ಕೈದು ದಿನದಲ್ಲಿ ಅಲ್ಲಿಂದ ಮುಂದಿನ ರಾಶಿಗೆ ಹೋಗಬಹುದು. ಆದರೆ ರಾಜಕಾರಣದಲ್ಲಿ ಬಹಳ ಹಾನಿ ಮಾಡುವ ಸಾಧ್ಯತೆ ಇದೆ. ಆದರೆ ಈ ಸನ್ನಿವೇಶದಲ್ಲಿ ದೊಡ್ಡ ಸಮಸ್ಯೆ ಇರುವುದು ಆರನೇ ಮನೆಯಲ್ಲಿ (ಜ್ಯೋತಿಷ್ಯ ರೀತಿಯಲ್ಲಿ ಇದನ್ನು ಶತ್ರು ಸ್ಥಾನ) ಇರುವುದರಿಂದ ಆರೋಗ್ಯ ಹಾಗೂ ಶತ್ರು ಪೀಡೆ ಎರಡೂ ಹೆಚ್ಚಾಗುವ ಸಾಧ್ಯತೆ ಇದೆ. ಈ ರೀತಿಯ ಆರನೇ ಮನೆಯ ಗುರು ಮುಂದಿನ ವರ್ಷದ ನವೆಂಬರ್ ತನಕ ಇರುತ್ತದೆ. ಅಂದರೆ ಒಂದು ವರ್ಷದ ಕಾಲ ಆರೋಗ್ಯ ಸಮಸ್ಯೆ, ಶತ್ರು ಬಾಧೆ ಎದುರಿಸುವ ಸವಾಲು ನಿರಂತರವಾಗಿ ಇರುತ್ತದೆ. ಈಗ ಅವರಿಗೆ ಇರುವ ಅನಾರೋಗ್ಯ ಸತ್ಯ. ಅದನ್ನು ಅವರು ಹೇಳಿಕೊಂಡರೂ ನಂಬದ ಸ್ಥಿತಿ ಸೃಷ್ಟಿ ಆಗುತ್ತದೆ. ನನಗೆ ವಿಶ್ರಾಂತಿ ಅಗತ್ಯವಿದೆ ಎಂಬುದನ್ನು ಅವರು ಹೇಳಿದರೂ ತೊಂದರೆ ಕೊಟ್ಟು, ಈ ಕಾರ್ಯಕ್ರಮಕ್ಕೆ ಬರಲಿಲ್ಲ- ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂದು ಟೀಕಿಸುವುದು ಸರಿಯಲ್ಲ.
ಕಬ್ಯಾಡಿ ಜಯರಾಮಾಚಾರ್ಯರಿಂದ ಸಂಪುಟ ವಿಸ್ತರಣೆ ಮುಹೂರ್ತ ವಿಶ್ಲೇಷಣೆ
ಪರಿಹಾರ-ಮುನ್ನೆಚ್ಚರಿಕೆ ಏನು?
ಪರಿಹಾರ ಏನು ಅಥವಾ ಮುನ್ನೆಚ್ಚರಿಕೆ ಏನು ಎಂಬುದನ್ನು ಸಹ ಹೇಳಬೇಕು. ಈಗಿನ ಸಮಯದಲ್ಲಿ ಯಾವುದೇ ಮಠ ಅಥವಾ ಪೀಠದ ವಿರುದ್ಧ ನಡೆದುಕೊಳ್ಳಬಾರದು. ಯಾವ ಗುರುವಿಗೂ ಸಿಟ್ಟು ಬರುವಂಥ ಕೆಲಸ ಮಾಡಬಾರದು. ಈ ಹಿಂದೆ ಅವರು ಮಾಡುತ್ತಿದ್ದ ಕಾಲಭೈರವೇಶ್ವರ ಅಮಾವಾಸ್ಯೆ ಪೂಜೆ ಮುಂದುವರಿಸಬೇಕು. ರುದ್ರ ಹಾಗೂ ಶನಿ ಆರಾಧನೆ ಮಾಡಿಸಬೇಕು. ಅತಿ ರುದ್ರ ಮಹಾಯಾಗ, ಶನಿ ಮೂಲ ಮಂತ್ರ ಜಪ, ತರ್ಪಣ ಸಹಿತ ಹೋಮ, ಕೇತು ಅಷ್ಟಮದಲ್ಲಿ ಇರುವುದರಿಂದ ಅಷ್ಟದ್ರವ್ಯ ಗಣಪತಿ ಹೋಮ, ಇಡುಗುಂಜಿ ಗಣಪತಿ ದರ್ಶನ ಹಾಗೂ ಅಲ್ಲಿ ಹೋಮ-ಪೂಜೆ ಮಾಡಿಸಿದರೆ ಉತ್ತಮ ಫಲ ನೀಡುತ್ತದೆ. ಅವರದು ಮಿಥುನ ರಾಶಿ. ಅದು ದ್ವಿಸ್ವಭಾವ ರಾಶಿ. ಅವರಿಗೆ ಮಾನಸಿಕ ಒತ್ತಡ ಸಹಜವಾಗಿಯೇ ಜಾಸ್ತಿ ಇರುತ್ತದೆ. ಈಗ ರಾಜ್ಯದ ಜನರೂ ಹೆಚ್ಚಿನ ನಿರೀಕ್ಷೆ ಒತ್ತಡ ಹಾಕದಿದ್ದಲ್ಲಿ ಒಳ್ಳೆಯದು. ಮುಖ್ಯವಾಗಿ- ಅತಿ ಮುಖ್ಯವಾಗಿ ಅವರ ಆರೋಗ್ಯ ಸ್ಥಿತಿಯನ್ನು ನೋಡಿಕೊಳ್ಳಲೇಬೇಕು.